ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, August 2, 2013

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

ತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
“ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.”
ಸೆಪ್ಟೆಂಬರ್ ೨೦೦೮ರಲ್ಲಿ ಘಟಿಸಿದ ದೆಹಲಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಪೂರ್ವ ದೆಹಲಿಯ ಜಾಮಿಯಾ ನಗರದ ಬಟ್ಲಾ ಹೌಸ್ ಮೇಲೆ ದೆಹಲಿ ಪೋಲೀಸರು ನಡೆಸಿದ ಧಾಳಿಯನ್ನು ಖಂಡಿಸಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಆಪಾದಿತರ ನೆರವಿಗೆಂದು ಹತ್ತು ಲಕ್ಷ ರೂ.ಗಳ ಸಹಾಯಧನ ಘೋಷಿಸಿದರು.  ದೆಹಲಿ ಸ್ಫೋಟಗಳಿಗೆ ಬಹಿಷ್ಕೃತ ಸಿಮಿ ಮತ್ತದರ ಹೊಸ ಅವತಾರ ಇಂಡಿಯನ್ ಮುಜಾಹಿದೀನ್ (ಐಎಂ) ಕಾರಣವೆಂಬ ಸಾಕ್ಷಾಧಾರಗಳು ದೊರೆತಿದ್ದರೂ, ಬಟ್ಲಾ ಹೌಸ್‌ನಲ್ಲಿ ಅಡಗಿದ್ದವರು ಐಎಂ ಕಾರ್ಯಕರ್ತರೆಂಬ ಹಾಗೂ ಅವರು ಇನ್ಸ್‌ಪೆಕ್ಟರ್ ಎಂ ಸಿ ಶರ್ಮಾ ಅವರನ್ನು ಹತ್ಯೆಗೈದರೆಂಬುದರ ಬಗ್ಗೆ ನಿರಾಕರಿಸಲಾಗದ ಆಧಾರಗಳಿದ್ದರೂ ಮುಲಾಯಂ ಸಿಂಗ್ ಈ ಬಗೆಯಾಗಿ ಅವರ ಬೆಂಬಲಕ್ಕೆ ನಿಂತದ್ದನ್ನು ವಿವರಿಸುವುದು ಹೇಗೆ?  ಈ ಮುಲಾಯಂ ಸಿಂಗ್ ಒಂದು ಕಾಲದಲ್ಲಿ ನಮ್ಮ ರಕ್ಷಣಾ ಮಂತ್ರಿಯಾಗಿದ್ದರು ಮತ್ತು ಕಳೆದ ವರ್ಷದ ರಾಷ್ಟ್ರಪತಿ ಸ್ಥಾನದ ಚುನಾವಣಾ ಪ್ರಕ್ರಿಯೆಯ ಪ್ರಾರಂಭಿಕ ಸಮಯದಲ್ಲಿ ಆ ಮಹೋನ್ನತ ಸ್ಥಾನದ ಆಕಾಂಕ್ಷಿಯಾಗಿದ್ದರು ಎಂದು ನೆನಸಿಕೊಂಡರೆ ದೇಶ ನಾಯಕತ್ವದ ವಿಚಾರದಲ್ಲಿ ಅದೆಷ್ಟು ದುರಾದೃಷ್ಟಶಾಲಿ ಎನಿಸುತ್ತದೆ.  ಅಮೆರಿಕಾದ ರಾಜಕೀಯ ಪಕ್ಷವೊಂದು ಅಲ್ ಖಯೀದಾ ಅಥವಾ ತಾಲಿಬಾನ್ ಪರವಾಗಿರುವುದನ್ನು ಊಹಿಸಿಕೊಳ್ಳಲು ಸಾಧ್ಯವೇ?  ಬಟ್ಲಾ ಹೌಸ್ ಪ್ರಕರಣದಲ್ಲಿ ಸೆರೆಸಿಕ್ಕ ಏಕೈಕ ಆಪಾದಿತನನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಇತ್ತೀಚಿಗೆ ನೀಡಿದ ತೀರ್ಪು, ಅದರ ಪರ-ವಿರೋಧ ಚರ್ಚೆಗಳು ಭಯೋತ್ಪಾದಕರಿಗಷ್ಟೇ ಸಹಕಾರಿ, ದೇಶಕ್ಕಲ್ಲ.  ಇದರ ಜತೆ, ೨೦೦೨ರ ಗುಜರಾತ್ ದಂಗೆಗಳೇ ಐಎಂನ ಉಗಮಕ್ಕೆ ಕಾರಣ ಎಂದು ಕಾಂಗ್ರೆಸ್ ನೇತಾರರೊಬ್ಬರು ಹೇಳಿಕೆ ನೀಡಿರುವುದು ಭಯೋತ್ಪಾದನೆಯ ನಿಗ್ರಹದಲ್ಲಿ ಒಂದು ತೀವ್ರ ಹಿನ್ನಡೆಯೇ ಸರಿ.
ಸಂಸತ್ ಧಾಳಿಯ ನಂತರ ಎನ್‌ಡಿಏ ಸರಕಾರ ಜಾರಿಗೆ ತಂದ "ಪೋಟಾ" ಇಸ್ಲಾಂ ವಿರೋಧಿ ಎಂದು ಕೆಲವು ರಾಜಕೀಯ ಪಕ್ಷಗಳೂ, ಬುದ್ಧಿಜೀವಿಗಳೂ ಹುಯಿಲೆಬ್ಬಿಸಿದರು.  ತಮ್ಮ ಆಪಾದನೆಯ ಸಮರ್ಥನೆಗಾಗಿ ಅವರು ಪೋಟಾ ಕಾಯಿದೆಯಡಿಯಲ್ಲಿ ಬಂಧಿತರಾದವರಲ್ಲಿ ಬೇರೆಲ್ಲಾ ಧರ್ಮದವರಿಗಿಂತಲೂ ಮುಸ್ಲಿಮರು ಅಧಿಕವಾಗಿದ್ದಾರೆ ಎಂಬ ಅಂಕಿಅಂಶವನ್ನು ಎತ್ತಿ ಹಿಡಿದರು.  ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.  ಹೀಗಿರುವಾಗ ಬಂಧಿತರಾದವರಲ್ಲೂ ಅವರೇ ಅಧಿಕವಾಗಿರುವುದು ಸಹಜವೇ ಆಗಿದೆ.  ಈ ವಿಷಯದಲ್ಲಿ ವಿವಿಧ ಧರ್ಮಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿಯ ನಿಯಮವನ್ನು ಪಾಲಿಸಲು ಸಾಧ್ಯವಿಲ್ಲ.  ಈ ವಾಸ್ತವವನ್ನು ಕಡೆಗಣಿಸಿದ ಯುಪಿಏ ಸರಕಾರ ಫೋಟಾ ಇಲ್ಲದೆಯೂ ನಾವು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದು ಘೋಷಿಸಿತು.  ಈ ನಿರ್ಧಾರ ಅದೆಷ್ಟು ಟೊಳ್ಳಿನದು ಎನ್ನುವುದನ್ನು ದೇಶ ನೋಡುತ್ತಲೇ ಇದೆ.
ಇನ್ನು ಮಾಧ್ಯಮಗಳ ಬಗ್ಗೆ ಹೇಳುವ ಮೊದಲು ಅದಕ್ಕೆ ಪೀಠಿಕೆಯಾಗಿ ೨೬/೧೧ರ ಮುಂಬೈ ಧಾಳಿಯ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ ಉಪದೇಶ ವನ್ನು ಉಲ್ಲೇಖಿಸಬೇಕು.  ಅದು ಹೀಗಿದೆ: ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ.  ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ.  ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.  ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ಧೀರ್ಘವಾಗಲು ಕಾರಣವಾಯಿತು ಎಂಬ ವಾಸ್ತವದ ಹಿನ್ನೆಲೆಯಲ್ಲಿ ಆ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ವೇದ್ಯವಾಗುತ್ತದೆ.
ಮಾಧ್ಯಮಗಳ ಬಗ್ಗೆ ನನಗೆ ಮೊಟ್ಟಮೊದಲಿಗೆ ನೆನಪಾಗುವುದು ೧೯೯೦ರ ಆದಿಯಲ್ಲಿ ಮುಂಬೈನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಕಾಶ್ಮೀರದ ಅಂದಿನ ಗವರ್ನರ್ ಜಗ್‌ಮೋಹನ್‌ರ ಸಂದರ್ಶನ.  ಮುಸ್ಲಿಮರ ಬಗ್ಗೆ, ಕಾಶ್ಮೀರಿಗಳ ಬಗ್ಗೆ ಜಗ್‌ಮೋಹನ್‌ರ ಲಘು ಹಾಗೂ ಆಕ್ಷೇಪಾರ್ಹ ಹೇಳಿಕೆಗಳು ಆ ಸಂದರ್ಶನದಲ್ಲಿದ್ದವು.  ಕಣಿವೆಯಲ್ಲಿ ಆಗಷ್ಟೇ ತಲೆಯೆತ್ತಿದ್ದ ಭಯೋತ್ಪಾದನೆಯ ನಿಗ್ರಹದ ಬಗ್ಗೆ ಸರಕಾರ ಮತ್ತು ಸೇನೆ ಕೈಗೊಂಡಿದ್ದ ಕಾರ್ಯಕ್ರಮಗಳ ಬಗ್ಗೆ ಹಲವಾರು ಅನುಮಾನಗಳನ್ನು ಈ ಸಂದರ್ಶನ ಸೃಷ್ಟಿಸಿತು.  ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಇದೊಂದು ಪ್ರಬಲ ಅಸ್ತ್ರವಾಯಿತು.  ಜಗ್ ಜಗ್ ಮೋಹನ್ ಕೊ ಭಾಗ್ ಭಾಗ್ ಮೋಹನ್ ಕರ್ ದೇಂಗೆ ಎಂದು ಪಾಕ್ ಪ್ರಧಾನಿ ಬೆನಜೀರ್ ಭುಟ್ಟೋ ಕೂಗು ಹಾಕಿದರು.  ಜಗ್‌ಮೋಹನ್‌ರ ವಿರುದ್ಧ ದೇಶದಲ್ಲೇ ಅಸಮಾಧಾನ ಭುಗಿಲೆದ್ದಿತು.  ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರ ಅವರನ್ನು ಗವರ್ನರ್ ಸ್ಥಾನದಿಂದ ತೆಗೆದುಹಾಕಿತು.
ಆದರೆ ಕೆಲವೇ ದಿನಗಳಲ್ಲಿ ಹೊರಬಿದ್ದ ಸತ್ಯವೆಂದರೆ ಜಗ್‌ಮೋಹನ್ ಆ ಪತ್ರಿಕೆಗೆ ಅಥವಾ ಇನ್ನಾವುದೇ ಪತ್ರಿಕೆಗೆ ಯಾವ ಸಂದರ್ಶನವನ್ನೂ ನೀಡಿರಲಿಲ್ಲ.  ಆ ಪತ್ರಿಕೆ ಪ್ರಕಟಿಸಿದ್ದ ಇಡೀ ಸಂದರ್ಶನ ಕಪೋಲಕಲ್ಪಿತ.  ಸತ್ಯ ಹೊರಬರುವ ಹೊತ್ತಿಗೆ ಅನಾಹುತ ಘಟಿಸಿಹೋಗಿತ್ತು.  ಸರಕಾರ ಮತ್ತು ಭದ್ರತಾ ಪಡೆಗಳು ವಿನಾಕಾರಣ ಕಳಂಕ ಹೊತ್ತಿದ್ದವು, ಆಗಷ್ಟೇ ಮೊಳಕೆಯೊಡೆದಿದ್ದ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ದೇಶಕ್ಕೆ ನಿರ್ಣಾಯಕ ಹಿನ್ನಡೆಯಾಗಿತ್ತು.
            ಕಾಶ್ಮೀರದ ಬಗ್ಗೆ ನಮ್ಮ ಮಾಧ್ಯಮಗಳ ಬೇಜವಾಬ್ದಾರಿ ವರ್ತನೆ ಬಗ್ಗೆ ಇನ್ನೊಂದೆರಡು ಉದಾಹರಣೆಗಳಿವೆ. ಪಾಕಿಸ್ತಾನ ನಾರ್ದರ್ನ್ ಟೆರಿಟರೀಸ್ ಎಂಬ ಹೆಸರಿನಲ್ಲಿ ತನ್ನ ಅಧಿಕೃತ ಪ್ರದೇಶವೆಂದು ಕರೆದುಕೊಳ್ಳುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಕಳೆದ ಅರವತ್ತು ವರ್ಷಗಳಿಂದಲೂ ಚಾಲ್ತಿಯಲ್ಲಿರುವುದು ಅಘೋಷಿತ ಮಿಲಿಟರಿ ಆಡಳಿತ.  ಅಲ್ಲಿನ ಜನ ಶಿಯಾ ಮುಸ್ಲಿಮರು.  ಪಾಕಿಸ್ತಾನದ ಸುನ್ನಿ ಮುಸ್ಲಿಮರ ಆಡಳಿತವನ್ನು ಕಳೆದ ಆರು ದಶಕಗಳಿಂದಲೂ ಒಪ್ಪಿಕೊಳ್ಳದ ಇವರ ವಿರುದ್ಧ ಪಾಕಿಸ್ತಾನೀ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.  ಜನರಲ್ ಜಿಯಾ ಕಾಲದಲ್ಲಿ ಈ ಪ್ರದೇಶಗಳಲ್ಲಿನ ಪಾಕ್ ವಿರೋಧೀ ದಂಗೆಗಳು ಅತ್ಯುಗ್ರ ಮಟ್ಟ ತಲುಪಿದಾಗ ಅದನ್ನು ಕ್ರೂರವಾಗಿ ದಮನಗೈದದ್ದು ಪರ್ವೆಜ್ ಮುಷರ್ರಫ್.  ಆತ ಪ್ರಸಿದ್ಧಿಗೆ ಬಂದದ್ದೇ ಈ ಘಟನೆಗಳಿಂದ.  ಆ ನಂತರ ಆ ಪ್ರದೇಶಗಳ ಮೇಲೆ ಇಸ್ಲಾಮಾಬಾದಿನ ಹಿಡಿತ ಮತ್ತಷ್ಟು ಬಿಗಿಯಾಯಿತು.  ಅಲ್ಲಿ ಪಾಕಿಸ್ತಾನೀ ಸೇನೆಯ ಕರ್ಮಕಾಂಡಗಳ ಬಗ್ಗೆ ನಮ್ಮ ಸುದ್ಧಿ ಮಾಧ್ಯಮಗಳಲ್ಲಿ ಚರ್ಚೆಗಳು ಕಾಣಬರುವುದಿಲ್ಲ.  ಆದರೆ ಭಾರತದ ವಶದಲ್ಲಿರುವ ಕಾಶ್ಮೀರದಲ್ಲಿನ ಘಟನೆಗಳ ಬಗ್ಗೆ ಮಾತ್ರ ಈ ಮಾಧ್ಯಮಗಳು ತುಂಬಾ ಉತ್ಸಾಹ ತೋರುತ್ತವೆ.
            ಈ ಮಾಧ್ಯಮಗಳ ವರದಿಗಳು ಅದೆಷ್ಟು ದೋಷಪೂರಿತ ಎಂದು ನನಗೆ ಮೊದಲು ಅರಿವಾದದ್ದು ೧೯೯೫ರಲ್ಲಿ, ಚರಾರ್ ಎ ಶರೀಫ್ ಮಸೀದಿಗೆ ಬೆಂಕಿ ಬಿದ್ದಾಗ.  ಈ ಘಟನೆಯ ಬಗ್ಗೆ ನಾನು ಮೊಟ್ಟಮೊದಲು ಕೇಳಿದ್ದು ರೇಡಿಯೋ ಪಾಕಿಸ್ತಾನ್ ವಾರ್ತೆಗಳಲ್ಲಿ.  ಭಾರತೀಯ ಸೇನೆ ಆ ಪವಿತ್ರ ಸ್ಥಳಕ್ಕೆ ಬೆಂಕಿ ಹಚ್ಚಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಹಾನಿಯುಂಟುಮಾಡಿದೆಯೆಂದು ಆ ವಾರ್ತೆಗಳಲ್ಲಿ ಬಿತ್ತರಿಸಲಾಯಿತು.  ನಮ್ಮ ಕೆಲವು ಇಂಗ್ಲಿಷ್ ಸುದ್ಧಿ ಮಾಧ್ಯಮಗಳು ಇದನ್ನೇ ಮತ್ತಷ್ಟು ದೊಡ್ಡದಾಗಿ ಹೇಳಿದವು.  ಆನಂತರ ಹೊರಬಂದ ಸತ್ಯವೆಂದರೆ ಕಳೆಗುಂದುತ್ತಿದ್ದ ಉಗ್ರವಾದವನ್ನು ಮತ್ತೆ ಚಿಗುರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಲ್ಲೆಬ್ಬಿಸಲೆಂದು ಪಾಕ್ ಪ್ರಚೋದಿತ ಉಗ್ರಗಾಮಿಗಳು ಮಸೀದಿಗೆ ಬೆಂಕಿ ಹಚ್ಚಿ ಅದನ್ನು ಸೇನೆಯ ತಲೆಗೆ ಕಟ್ಟಿದ್ದರು!  ಒಳಸಂಚಿನಂತೆ ಪಾಕಿಸ್ತಾನೀ ಸುದ್ಧಿಮಾಧ್ಯಮಗಳು ಭಾರತೀಯ ಸೇನೆಯ ವಿರುದ್ದ ಅಪಪ್ರಚಾರ ಆರಂಭಿಸಿದವು.  ಇಡೀ ಘಟನೆಯಲ್ಲಿ ಪಾಕಿಸ್ತಾನೀ ಸರಕಾರ, ಸೇನೆ, ಐಎಸ್‌ಐ, ಕಾಶ್ಮೀರೀ ಉಗ್ರಗಾಮಿಗಳು ಮತ್ತು ಪಾಕಿಸ್ತಾನದ ಸರಕಾರೀ ಸುದ್ಧಿ ಮಾಧ್ಯಮಗಳು ಶಾಮೀಲಾಗಿದ್ದವು.  ಈ ಒಳಸಂಚಿಗೆ ನಮ್ಮ ಸುದ್ಧಿಮಾಧ್ಯಮಗಳೂ ಸೇರಿಕೊಂಡದ್ದು ಹೇಗೆ? ಯಾಕೆ?
            ತೀರಾ ಇತ್ತೀಚಿನ ಘಟನೆಗಳನ್ನೇ ಗಮನಿಸುವುದಾದರೆ ಅಮರನಾಥ್ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಭುಗಿಲೆದ್ದ ಆಂದೋಲನವನ್ನು ಪರಿಶೀಲಿಸಬಹುದು.  ಆಗ ಪ್ರತ್ಯೇಕತಾವಾದೀ ನಾಯಕನೊಬ್ಬ ಸೇನೆಯ ಗುಂಡಿಗೆ ಬಲಿಯಾದ ಎಂಬ ಸುದ್ಧಿ ಕಾಳ್ಗಿಚಿನಂತೆ ಹಬ್ಬಿ ಮತ್ತುಷ್ಟು ದೊಂಬಿ, ಬಂದ್, ಕರ್ಫ್ಯೂಗಳಿಗೆ ಕಾರಣವಾಯಿತು. ಆನಂತರ ಹೊರಬಂದ ವಿಷಯವೆಂದರೆ ಆತ ಸತ್ತದ್ದು ಸೇನೆಯ ಗುಂಡಿನಿಂದಲ್ಲ, ಬದಲಾಗಿ ಅವನದೇ ಸಹಚರರು ಹಿಂದಿನಿಂದ ಹಾರಿಸಿದ ಗುಂಡಿನಿಂದ!  ಆಮೇಲೆ ಎಲ್ಲರೂ ಗಪ್‌ಚಿಪ್!  ಶೋಪಿಯನ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಅತ್ತಿಗೆ-ನಾದಿನಿಯರನ್ನು ಮಾನಭಂಗಗೊಳಿಸಿ ಕೊಂದ ಆಪಾದನೆ ೨೦೦೯ರಲ್ಲಿ ಬಂದಾಗ ಆ ದೌರ್ಜನ್ಯವನ್ನು ಖಂಡಿಸಿ ಇಡೀ ಕಾಶ್ಮೀರ ಕಣಿವೆ ಭುಗಿಲೆದ್ದದ್ದೂ, ನಮ್ಮ ಸುದ್ಧಿಮಾಧ್ಯಮಗಳು ಇದನ್ನು ಚಪ್ಪರಿಸಿ ಚಪ್ಪರಿಸಿ ಸವಿದದ್ದೂ ನಿಮಗೆ ನೆನಪಿರಬಹುದು.  ಆ ಇಡೀ ಘಟನೆ ಕಟ್ಟುಕತೆ ಎಂಬ ಸುದ್ದಿ ಆನಂತರ ಹೊರಬಂತು.  ಆ ಮಹಿಳೆಯರು ಜೀವ ಕಳೆದುಕೊಂಡದ್ದು ಅಕಸ್ಮಾತ್ ನೀರಿಗೆ ಬಿದ್ದುದರಿಂದ, ಅದನ್ನು ಮಾನಭಂಗ ಮತ್ತು ಕೊಲೆ ಎಂದು ಹೇಳಿ ‘ಅಪರಾಧವನ್ನು ಭದ್ರತಾಪಡೆಗಳ ತಲೆಗೆ ಕಟ್ಟಿ, ಇಡೀ ಪ್ರಕರಣವನ್ನು ಭಾರತವಿರೋಧೀ ದಂಗೆಯಾಗಿ ಪರಿವರ್ತಿಸಲು ಶೋಪಿಯನ್‌ನ ವೈದ್ಯಾಧಿಕಾರಿಗಳು ಮತ್ತು ವಕೀಲರುಗಳು ಸಾಕ್ಷಾಧಾರಗಳನ್ನು ತಿರುಚಿದ್ದಾರೆ ಎಂದು ತನಿಖಾ ಆಯೋಗ ಹೇಳಿತು.  ಆ ಇಬ್ಬರಿಗೂ ಸಂಬಂಧಿಸಿದ ಪುರುಷ ಏಕಾಏಕಿ ಶ್ರೀಮಂತಿಕೆ ಪ್ರದರ್ಶಿಸತೊಡಗಿದ ರಹಸ್ಯದ ಹಿನ್ನೆಲೆಯೂ ಹೊರಬಂತು.
            ಭದ್ರತಾಪಡೆಗಳ ಬಗ್ಗೆ ಸುಳ್ಳುಸುದ್ಧಿ ಹಬ್ಬಿಸಿ ಅಶಾಂತಿ ಉಂಟುಮಾಡುವುದರಿಂದ ಪ್ರತ್ಯೇಕತಾವಾದಿಗಳಿಗೆ, ಪಾಕಿಸ್ತಾನಕ್ಕೆ ಲಾಭವಿದೆ, ನಿಜ.  ಆದರೆ ಇದರಲ್ಲಿ ನಮ್ಮ ಸುದ್ಧಿಮಾಧ್ಯಮಗಳಿಗೆ ಯಾವ ಲಾಭವಿದೆ?  ಅವುಗಳ ಹಿಂದೆ ನಿಜವಾಗಿ ಇರುವವರು ಯಾರು?
            ಈ ಹಿನ್ನೆಲೆಯಲ್ಲಿ, ೨೦೦೨ರ ಗುಜರಾತ್ ಗಲಭೆಗಳ ಒಂದು ಮುಖವನ್ನು ಮಾತ್ರ ವರದಿ ಮಾಡುವಂತೆ ಪಶ್ಚಿಮ ಏಶಿಯಾದ ತೈಲಸಂಪನ್ನ ಶ್ರೀಮಂತ ದೇಶವೊಂದು ಭಾರತದ ಪತ್ರಕರ್ತೆಯೊಬ್ಬರಿಗೆ ಅರ್ಧ ಮಿಲಿಯನ್ ಡಾಲರ್ ನೀಡಿತೆನ್ನಲಾದ ವದಂತಿಯ ಸತ್ಯಾಸತ್ಯತೆಯ ಪರಿಶೀಲನೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

No comments:

Post a Comment