ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, August 7, 2016

ಕಮ್ಯೂನಿಸ್ಟರು ಕಮ್ಯೂನಿಸಂ ಅನ್ನು ಕೊಂದದ್ದು ಹೀಗೆ




ಭಾಗ - ೧

ಸುಳ್ಳು ಸೌಧದ ನಿವಾಸಿಗಳು

ನಮ್ಮ ವಿಚಾರವಂತರು, ಸಾಂಸ್ಕೃತಿಕ ನಾಯಕರು ಶಕ್ತಿಮೀರಿ ಪ್ರಶಂಸಿಸಿದ್ದು, ಪ್ರಚುರ ಪಡಿಸಲು ಹೆಣಗಿದ್ದು ಕಮ್ಯೂನಿಸಂ ಮತ್ತು ಸೆಕ್ಯೂಲರಿಸಂಗಳನ್ನು.  ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ಕಮ್ಯೂನಿಸಂ ನಮ್ಮ ಸಮಾಜೋ-ರಾಜಕೀಯ ವಲಯದಲ್ಲಿ ಮುಂಚೂಣಿಗೆ ಬರಲೇ ಇಲ್ಲ.  ಜತೆಗೆ, ತಾವು ಬಯಸಿದಂಥ ಸೆಕ್ಯೂಲರಿಸಂ ಇಲ್ಲಿ ನೆಲೆಯೂರಿಲ್ಲವೆಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ.  ಕರ್ನಾಟಕದ ಸಂದರ್ಭದಲ್ಲಿ ಇಂಥಾ ಗೋಳಾಟವನ್ನು ರಂಜನೀಯವಾಗಿ ಪ್ರದರ್ಶಿಸಿದ್ದು ಪತ್ರಕರ್ತ ಲಂಕೇಶ್, ಅವರಿಗೆ ಆಗಾಗ ‘ಅವಶ್ಯಕತೆ’ಗನುಗುಣವಾಗಿ ಸಾಥ್ ನೀಡಿದ್ದು ಜ್ಞಾನಪೀಠಿ ಯು. ಆರ್. ಅನಂತಮೂರ್ತಿ.  ಇವರ ಇಷ್ಟೆಲ್ಲಾ ಪ್ರಯತ್ನಗಳು 'ಯಶಸ್ವಿ'ಯಾಗದಿರಲು ಕಾರಣವೇನು?  ಸಾಮಾನ್ಯ ಜನತೆ ಇವರ ವಿಚಾರಗಳಿಗೆ ಇವರು ಬಯಸಿದಷ್ಟು ಸಹಮತಿ ತೋರದಿರಲು ಇರುವ ಕಾರಣವಾದರೂ ಏನು?  ಜನ ದಡ್ಡರೇ?  ಅಥವಾ ಈ ಬುದ್ದಿಜೀವಿಗಳಿಗಿಂತಲೂ ಹೆಚ್ಚಿನ ಬುದ್ಧಿವಂತರೇ?  ಅಥವಾ ಈ ಬುದ್ಧಿಜೀವಿಗಳ ಪ್ರಚಾರ/ಪ್ರಲಾಪದಲ್ಲೇ ದೋಷವಿದೆಯೇ?  ಈ ಪ್ರಶ್ನೆಗಳನ್ನು ಎರಡು ಭಾಗಗಳ ಈ ಲೇಖನದಲ್ಲಿ ಚರ್ಚೆಗೆತ್ತಿಕೊಳ್ಳುತ್ತಿದ್ದೇನೆ.

ಮಾರ್ಕ್ಸ್ ಮತ್ತು ಏಂಗೆಲ್ಸ್‌ರ ಕಮ್ಯೂನಿಸ್ಟ್ ಸಿದ್ಧಾಂತ ಮೊದಲು ಪ್ರಯೋಗಕ್ಕೊಳಗಾದದ್ದು ಅವರ ಜೀವಿತಾವಧಿಯಲ್ಲೇ.  ೧೮೭೦-೭೧ರ ಫ್ರಾಂಕೋ-ಪ್ರಶಿಯನ್ ಯುದ್ಧದಲ್ಲಿ ಸೋತ ಫ್ರಾನ್ಸ್‌ನಲ್ಲಿ ಅಸ್ತಿತ್ವಕ್ಕೆ ಬಂದ ಪ್ಯಾರಿಸ್ ಕಮ್ಯೂನ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿತು.  ಆದರೆ ಹೀನಾಯ ಸೋಲಿನಿಂದ ಜರ್ಝರಿತಗೊಂಡು ರಾಜಕೀಯವಾಗಿ ಡೋಲಾಯಮಾನವಾಗಿದ್ದ ಫ್ರಾನ್ಸ್ ಅಂದು ಕ್ರಾಂತಿಕಾರಕ ಬದಲಾವಣೆಗೆ ತಕ್ಕ ನೆಲವಾಗಿರಲಿಲ್ಲ.  ಹೀಗಾಗಿ ಪ್ಯಾರಿಸ್ ಕಮ್ಯೂನ್ ಮೂರೇ ತಿಂಗಳಲ್ಲಿ ಅವಸಾನ ಹೊಂದಿತು.  ನಂತರ ಸುಮಾರು ನಾಲ್ಕು ದಶಕಗಳ ನಂತರ ೧೯೧೭-೨೨ರ ಆವಧಿಯಲ್ಲಿ ಎರಡು ಕ್ರಾಂತಿಗಳು, ನಾಲ್ಕು ವರ್ಷಗಳ ಅಂತರ್ಯುದ್ಧದ ನಂತರ ರಶಿಯಾದಲ್ಲಿ ಕಮ್ಯೂನಿಸಂ ಭದ್ರ ನೆಲೆ ಕಂಡುಕೊಂಡಿತು.   ಇದಾದದ್ದು ಅಮೆರಿಕಾದ ಉಗ್ರ ವಿರೋಧದ ನಡುವೆ ಎನ್ನುವುದನ್ನು ನಾವು ಗಮನಿಸಬೇಕು.

ಅಮೆರಿಕಾ ಅದುವರೆಗೆ ನಿಷ್ಟೆಯಿಂದ ಪಾಲಿಸಿಕೊಂಡು ಬಂದದ್ದು laissez-faire ಅಂದರೆ ಉತ್ಪಾದನಾ ಕ್ಷೇತ್ರದಲ್ಲಿ ಸರ್ಕಾರ/ರಾಜ್ಯ ಭಾಗಿಯಾಗದ, ಉತ್ಪಾದನಾ ಸಾಧನಗಳು ಖಾಸಗೀ ಒಡೆತನಲ್ಲದಲ್ಲೇ ಇರುವಂತಹ ನೀತಿಯನ್ನು.  ಈ ವ್ಯವಸ್ಥೆಗೆ ಕಮ್ಯೂನಿಸಂನಿಂದ ಮಾರಣಾಂಗಿಕ ಪೆಟ್ಟು ಬೀಳುವ ದುಃಸ್ವಪ್ನವನ್ನು ಅಮೆರಿಕಾ ಕಂಡಿತು.  ಯಾಕೆಂದರೆ ಮಾರ್ಕ್ಸ್ ಮತ್ತು ಏಂಗೆಲ್ಸ್‌ರ ಸಿದ್ಧಾಂತ ಖಾಸಗಿ ಒಡೆತನವನ್ನು ಸಾರಾಸಗಟಾಗಿ ತಿರಸ್ಕರಿಸುವ, ಸಾಮೂಹಿಕ ಒಡೆತನವನ್ನು ಪ್ರತಿಪಾದಿಸುವಂಥದಾಗಿತ್ತು.  ಹೀಗಾಗಿಯೇ ರಶಿಯನ್ ಅಂತರ್ಯುದ್ಧದಲ್ಲಿ ಅಮೆರಿಕಾ ಲೆನಿನ್‌ನ ವಿರೋಧಿಗಳ ಬೆಂಬಲಕ್ಕೆ ನಿಂತದ್ದು.  ಅಂದು ಅಮೆರಿಕಾದ ವಿರೋಧದ ನಡುವೆಯೂ ರಶಿಯಾದಲ್ಲಿ ಕಮ್ಯೂನಿಸಂ ಅಸ್ತಿತ್ವಕ್ಕೆ ಬಂದದ್ದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿತ್ತು.  ಯಾಕೆಂದರೆ ಕಮ್ಯೂನಿಸಂ ಸಾರುವ ಶೋಷಣೆರಹಿತ ಹಾಗೂ ವರ್ಗರಹಿತ ಸಮಾಜದ ಪರಿಕಲ್ಪನೆ ಮಾನವಜನಾಂಗ ತನ್ನ ಶತಶತಮಾನಗಳ ಹುಡುಕಾಟದ ಹಾದಿಯಲ್ಲಿ ಕಂಡುಕೊಂಡ ಒಂದು ಉದಾತ್ತ ಚಿಂತನೆ.  ಆಧುನಿಕ ಜಗತ್ತಿನ ಮಹಾನ್ ಮಾನವತಾವಾದಿ ಕಾರ್ಲ್ ಮಾರ್ಕ್ಸ್ ಕಂಡ, ಅಗತ್ಯವಾಗಿ ನನಸಾಗಲೇಬೇಕಾದ ಸುಂದರ ಕನಸು ಅದು.  ಈ ಕಾರಣದಿಂದಾಗಿಯೇ ತನ್ನ ಪ್ರಯೋಗದ ಆರಂಭದ ವರ್ಷಗಳಲ್ಲಿ ಕಮ್ಯೂನಿಸಂ ಅಂದರೆ ಸಮತಾವಾದ ಇಡೀ ವಿಶ್ವದ ಗಮನ ಸೆಳೆಯಿತು.

ಆದರೆ, ಆರಂಭದ ಯಶಸ್ಸು ತಾತ್ಕಾಲಿಕವಾಗಿತ್ತು.  ಈ ಸದಾಶಯ, ಸತ್‌ನೀತಿ ಸೈದ್ಧಾಂತಿಕವಾಗಿ ಅದೆಷ್ಟೇ ಉದಾತ್ತವಾಗಿದ್ದರೂ ಆಚರಣೆಯಲ್ಲಿ ಸೋತುಹೋಗುವಂಥವೆಂಬುದು ನಂತರದ ಬೆಳವಣಿಗೆಗಳು ಸಾರಿದ ದಾರುಣ ಸತ್ಯ.  ೧೯೨೪ರಲ್ಲಿ ಲೆನಿನ್‌ನ ಮರಣಾನಂತರ ಅಧಿಕಾರಕ್ಕಾಗಿ ಹಣಾಹಣಿ ಶುರುವಾದದ್ದು ರೆಡ್ ಆರ್ಮಿಯ ಸೃಷ್ಟಿಕರ್ತ ಮತ್ತು ಅಂತರ್ಯುದ್ಧದ ವಿಜಯಿ ಲಿಯಾನ್ ಟ್ರಾಟ್ಸ್‌ಕಿ ಮತ್ತು ಜೋಸೆಫ್ ಸ್ಟ್ಯಾಲಿನ್ ಮಧ್ಯೆ.  ಎಲ್ಲ ದೇಶಗಳಲ್ಲೂ ಏಕಕಾಲದಲ್ಲಿ ಕಮ್ಯೂನಿಸ್ಟ್ ಕ್ರಾಂತಿಗಳನ್ನು ಆಯೋಜಿಸಬೇಕೆಂದು ಟ್ರಾಟ್ಸ್‌‍ಕಿ ವಾದಿಸಿದರೆ ಸ್ಟ್ಯಾಲಿನ್ ಹೇಳಿದ್ದು ಕಮ್ಯೂನಿಸಂ ಮೊದಲು ಸೋವಿಯತ್ ರಶಿಯಾದಲ್ಲಿ ಭದ್ರವಾಗಿ ಬೇರೂರಲಿ, ಅನಂತರ ಇತರ ದೇಶಗಳ ಉಸಾಬರಿ.  ಅಂತಿಮವಾಗಿ ಸ್ಟ್ಯಾಲಿನ್‌‍ನ ಮಾತಿಗೆ ಬೆಂಬಲ ದೊರೆತು ಆತ ಸೋವಿಯೆತ್ ನಾಯಕನಾದ.  ಟ್ರಾಟ್ಸ್‌‍ಕಿ ದೇಶವನ್ನೇ ತೊರೆದು ಓಡಿಹೋದ.

ಆ ದಿನಗಳಲ್ಲಿ ರಶಿಯನ್ನರ ಸ್ಥಿತಿ ದಾರುಣ.  ಮಹಾಯುದ್ಧ, ಕ್ರಾಂತಿ, ಅಂತರ್ಯುದ್ಧ ಎಲ್ಲದರಿಂದ ಜನರಿಗೆ ಶಾಂತಿಯಿರಲಿ ಹೊಟ್ಟೆಗೆ ಊಟವೂ ಸಿಗದಂಥ ಪರಿಸ್ಥಿತಿ.  ಕಾಕಸಸ್ ಪ್ರದೇಶದಲ್ಲಿ ಹಸಿವಿನಿಂದ ಕಂಗೆಟ್ಟ ಜನರು ನರಮಾಂಸವನ್ನೂ ತಿಂದ ವರದಿಗಳು ಬರುತ್ತಿದ್ದವು.  ಇದೆಲ್ಲವನ್ನೂ ಸರಿಪಡಿಸಲು ಸ್ಟ್ಯಾಲಿನ್ ರೂಪಿಸಿದ ದಶವಾರ್ಷಿಕ ಆರ್ಥಿಕ ಅಭ್ಯುದಯ ಯೋಜನೆಗಳು ತಕ್ಷಣ ಫಲ ನೀಡಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು ವಿಶ್ವರಂಗದಲ್ಲಿ ಮುಂಚೂಣಿಗೆ ತಂದವು.  ಮೂವತ್ತರ ದಶಕದಲ್ಲಿ ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಸೋತು ಸುಣ್ಣವಾಗಿ ನೆಲಕಚ್ಚಿದರೆ ರಶಿಯಾ ಸುಭಿಕ್ಷವಾಗಿ ಮುಂದುವರೆಯುತ್ತಿತ್ತು.  ಅದಕ್ಕೆ ಕಾರಣ ಬೇಡಿಕೆಗೂ ಮೀರಿ ಉತ್ಪಾದನೆಯಲ್ಲಿ ತೊಡಗಿ ಹೇರಳ ದಾಸ್ತಾನು ಅಂದರೆ ಅರ್ಥಶಾಸ್ತ್ರೀಯ ಪರಿಭಾಷೆಯಲ್ಲಿ “glut in the market” ಸೃಷ್ಟಿಸಿಕೊಂಡಿದ್ದ ಅವಿವೇಕಿ ಅಮೆರಿಕಾಗೆ ವಿರುದ್ಧವಾಗಿ ಬೇಕಾದ್ದನ್ನು ಮಾತ್ರ ಬೇಕಾದಷ್ಟೇ ಉತ್ಪಾದಿಸುವ ವಿವೇಕಯುತ ನೀತಿಯನ್ನು ಸ್ಟಾಲಿನ್ ಅನುಸರಿಸಿದ್ದು.  ಆನಂತರ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅಮೆರಿಕಾ, ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್‌‍ನ ಸಲಹೆಯಂತೆ, ಒಂದು ಮಿತಿಯಲ್ಲಿ ಸಮಾಜವಾದವನ್ನು ಅಪ್ಪಿಕೊಂಡದ್ದು ಮಾರ್ಕ್ಸ್‌‍ನ ಚಿಂತನೆಯ ಮಹತ್ವವನ್ನು ಎತ್ತಿತೋರಿಸುತ್ತದೆ.  ಆದರೆ ಅದೆಲ್ಲವನ್ನೂ ಹಾಳುಗೆಡವಿದ್ದು ಎರಡನೆಯ ಮಹಾಯುದ್ಧದ ನಂತರ ಸ್ಟ್ಯಾಲಿನ್ ತಳೆದ ಬೇಜವಾಬ್ದಾರೀ ನಿಲುವು.  ಮಹಾಯುದ್ಧದಲ್ಲಿ ಸೋವಿಯೆತ್ ರಶಿಯಾ ಅನುಭವಿಸಿದ ಹಾನಿ ಸೋತ ಜರ್ಮನಿಗಿಂತಲೂ ಹಲವು ಪಟ್ಟು ಅಧಿಕ.  ಇಂಥ ಪರಿಸ್ಥಿತಿಯಲ್ಲಿ ಸೋವಿಯೆತ್ ಅರ್ಥವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರುವುದು ಸ್ಟ್ಯಾಲಿನ್‌‍ನ ಆದ್ಯ ಕರ್ತವ್ಯವಾಗಿತ್ತು.  ಆದರೆ ಆತ ಹದಿನೈದು ವರ್ಷಗಳ ಹಿಂದೆ ತೋರಿದ್ದ ವಿವೇಕವನ್ನು ಕಳೆದುಕೊಂಡು ಪೂರ್ವ ಯೂರೋಪ್ ಮತ್ತು ಮೆಡಿಟರೇನಿಯನ್ ವಲಯಗಳಲ್ಲಿ ಕಮ್ಯೂನಿಸಂ ಹರಡುವ ಭಾರಿ ಯೋಜನೆ ರೂಪಿಸಿದ.  ಸ್ಟ್ಯಾಲಿನ್‌‍ನ ಕಾರ್ಯಕ್ರಮಗಳಿಗೆ ತೀವ್ರ ಪ್ರತಿರೋಧ ಒಡ್ಡಿದ ಅಮೆರಿಕಾದ ಕ್ರಮದಿಂದಾಗಿ ಶೀತಲಸಮರ ಆರಂಭವಾಯಿತು.  ಪರಿಣಾಮವಾಗಿ ಆರ್ಥಿಕಪ್ರಗತಿಗೆ ಮೀಸಲಾಗಿಡಬೇಕಾಗಿದ್ದ ಸಂಪನ್ಮೂಲಗಳನ್ನು ಶಸ್ತ್ರಾಸ್ತ್ರ ಪೈಪೋಟಿಗೆ ವಿನಿಯೋಗಿಸಬೇಕಾದ ಒತ್ತಡಕ್ಕೆ ಸೋವಿಯೆತ್ ಯೂನಿಯನ್ ಸಿಲುಕಿಕೊಂಡಿತು.  ಇದೇ ಆ ಕಮ್ಯೂನಿಸ್ಟ್ ಪ್ರಯೋಗಶಾಲೆಯ ಮುಂದಿನ ಎಲ್ಲಾ ಆರ್ಥಿಕ-ರಾಜಕೀಯ ದುರಂತಗಳಿಗೆ ಮೂಲವಾಯಿತು.  ಶಸ್ತ್ರಾಸ್ತ್ರ ಪೈಪೋಟಿಯಿಂದಾಗಿ ಸೀಮಿತಗೊಂಡ ಆಹಾರಧಾನ್ಯ ಮತ್ತಿತರ ಗ್ರಾಹಕ ಸಾಮಗ್ರಿಗಳ ದೊಡ್ಡಭಾಗ ಕಮ್ಯೂನಿಸ್ಟ್ ಪಕ್ಷದ ಸದಸ್ಯರಿಗೆ ಮೀಸಲಾದ ಪರಿಣಾಮವಾಗಿ ದೇಶದಲ್ಲಿ ಸಾರ್ವತ್ರಿಕ ಬಡತನ ತಾಂಡವವಾಡತೊಡಗಿತು.  ಆದರೆ ಕಮ್ಯೂನಿಸ್ಟ್ ಸರ್ಕಾರ ಹೊರಜಗತ್ತಿಗೆ ಸುಳ್ಳು ಸುದ್ಧಿಗಳನ್ನು ನೀಡುತ್ತಾ ಸತ್ಯ ಹೊರಬೀಳದಂತೆ ನೋಡಿಕೊಂಡಿತು.  ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲಾಗುವುದಿಲ್ಲ.  ಇದನ್ನು ನಾನು ಕಂಡಂತೆಯೇ ನಿಮ್ಮ ಮುಂದಿಡುತ್ತೇನೆ, ನನ್ನನ್ನು ವಾರವಾರವೂ ಸಂಪರ್ಕಿಸುವ ನನ್ನ ವಿದ್ಯಾರ್ಥಿ-ಓದುಗರ ಅನುಕೂಲಕ್ಕಾಗಿ.

ಎಪ್ಪತ್ತರ ದಶಕದ ಉತ್ತರಾರ್ಧ ಅದು.  ನಾನು ಪಿಯುಸಿಯಲ್ಲಿದ್ದೆ.  ಬಾಲ್ಯದಿಂದಲೂ ವಾರವಾರವೂ ಮನೆಗೆ ಬರುತ್ತಿದ್ದ “ಸೋವಿಯೆತ್ ಲ್ಯಾಂಡ್” ಪತ್ರಿಕೆಯಲ್ಲಿ ಸೋವಿಯೆತ್ ಸ್ವರ್ಗದ ಬಗೆಗಿನ ಲೇಖನಗಳನ್ನು ಅಸಕ್ತಿಯಿಂದ ಓದುತ್ತಿದ್ದ ನಾನು  ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅರಿತೊಡನೆ ಅದಕ್ಕೂ ಅಂಟಿಕೊಂಡೆ.  ಸಂಜೆ ನಾಲ್ಕೂವರೆಯಿಂದ ಐದು ಹಾಗೂ ಆರೂವರೆಯಿಂದ ಏಳುಗಂಟೆಯವರೆಗೆ ದೂರದ ಮಾಸ್ಕೋದಿಂದ ತೇಲಿಬರುತ್ತಿದ್ದ ಇರೀನಾ ತ್ಯೂರಿನಾಳ ಮುದ್ದುಮುದ್ದಾದ ಕನ್ನಡ ಮಾತುಗಳು ಮತ್ತು ನಮ್ಮ ಕೊಳ್ಳೇಗಾಲದ ಹತ್ತಿರದ ಮುಳ್ಳೂರಿನವರಾದ ಶ್ರೀ ಮಹದೇವಯ್ಯನವರ ಆಕರ್ಷಕ ದನಿಯನ್ನು ಅವಕಾಶವಾದಾಗಲೆಲ್ಲಾ ಕೇಳುತ್ತಿದ್ದೆ.  ಅವರು ಬಿಂಬಿಸುತ್ತಿದ್ದ ಭೂಲೋಕದ ಸ್ವರ್ಗ ಸೋವಿಯೆತ್ ಯೂನಿಯನ್‌‍ನ ಚಿತ್ರಗಳನ್ನು ಮನದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ.  ನಮ್ಮ ದೇಶದ ಬಗ್ಗೆ ಸೋವಿಯೆತ್ ಆಳರಸರಿಗಿದ್ದ ಅಪರಿಮಿತ ಪ್ರೀತಿಗೆ ನನ್ನ ಕಣ್ಣುಗಳು ತೇವವಾಗುತ್ತಿದ್ದವು.  ಆ ಮಹಾನ್ ಸಮತಾವಾದಿ ನಾಡಿನ ಅದ್ಭುತ ಆರ್ಥಿಕ ಪ್ರಗತಿ, ನಿರುದ್ಯೋಗವೇ ಇಲ್ಲದ, ಎಲ್ಲರಿಗೂ ಎಲ್ಲವೂ ಸಿಗುತ್ತಿದ್ದ ಕನಸಿನ ರಾಜ್ಯದ ಬಗ್ಗೆ ದಿನವೂ ಕೇಳುತ್ತಾ ನಮ್ಮ ದೇಶದಲ್ಲಿ ಅಂತಹ ದಿನಗಳು ಯಾವಾಗ ಬರುತ್ತವೆ ಎಂದು ಕನಸು ಕಾಣುತ್ತಾ... ಕಾಣುತ್ತಾ... ಕಮ್ಯೂನಿಸ್ಟನೇ ಆಗಿಬಿಟ್ಟೆ...

ರೇಡಿಯೋ ಮಾಸ್ಕೋಗೆ ಪತ್ರ ಬರೆದೆ.  ಅಲ್ಲಿಂದ ಅತ್ಯಾಕರ್ಷಕ ಅಂಚೆಚೀಟಿ ಅಂಟಿಸಿದ್ದ ಲಕೋಟೆಯಲ್ಲಿ ಉತ್ತರ ಬಂದಾಗ ನಾನು ಅಕ್ಷರಶಃ ಕುಣಿದಾಡಿಬಿಟ್ಟೆ.  ಪತ್ರಸರಣಿ ಆರಂಭವಾಯಿತು.  ಸುಂದರ ವ್ಯೂ ಕಾರ್ಡ್‌ಗಳು, ಪುಸ್ತಕಗಳು, ಕ್ಯಾಲೆಂಡರ್‌ಗಳು, ಹೊಚ್ಚಹೊಸ ಅಂಚೆಚೀಟಿಗಳು ಒಂದಾದ ಮೇಲೊಂದು ಬರತೊಡಗಿ ನನ್ನನ್ನು ಸಮೃದ್ದಗೊಳಿಸತೊಡಗಿದವು...

೧೯೭೯ರ ಒಂದು ಸಂಜೆ.  ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್‌ನಿಂದ ಪ್ರಕಟವಾಗುತ್ತಿದ್ದ “ಪ್ರಜಾಪ್ರಭುತ್ವ” ವಾರಪತ್ರಿಕೆಯಲ್ಲಿದ್ದ ಒಂದು ಲೇಖನ ನನ್ನನ್ನು ಕಂಗೆಡಿಸಿಬಿಟ್ಟಿತು.  ಮಾಸ್ಕೋದಲ್ಲಿ ವಿದ್ಯಾರ್ಥಿಯಾಗಿದ್ದ ಬಾಬು ಕೊಪ್ಲೆ ಎಂಬ ಭಾರತೀಯ ಯುವಕನನ್ನು ಸೋವಿಯೆತ್ ಗುಪ್ತಚರ ಸಂಸ್ಥೆ “ಕೆಜಿಬಿ” (ಕೊಮಿತೆತ್ ಗೋಸುದರ್ಸ್ತ್ ವೆನ್ನೋನಿ ಬಿಝೋಪಾಸ್ನೋಸ್ತಿ) ಅಪಹರಿಸಿ ಕೊಂದ ಸುದ್ದಿ ಅದಾಗಿತ್ತು.  ನನ್ನ ಭಾರತವನ್ನು ಅಪರಿಮಿತವಾಗಿ ಪ್ರೀತಿಸುವ ರಶಿಯನ್ನರು ಹೀಗೇಕೆ ಮಾಡಿದರು ಎಂದು ಚಿಂತಿಸಿದೆ.  ಈ ಸುದ್ದಿ ನಿಜವೇ ಎಂದು ನನ್ನ ರೇಡಿಯೋ ಮಾಸ್ಕೋದ ಗೆಳೆಯರಿಗೆ ಪತ್ರ ಬರೆದೆ.  ದಿನಗಳು, ವಾರಗಳು, ತಿಂಗಳುಗಳು ಗತಿಸಿದವು.  ಉತ್ತರ ಬರಲಿಲ್ಲ.  ಹಿಂದೆಲ್ಲಾ ಸೋವಿಯೆತ್ ಸ್ವರ್ಗದ ಬಗ್ಗೆ ನನ್ನೆಲ್ಲಾ ಪ್ರಶ್ನೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಗಳಲ್ಲಿ ತಪ್ಪದೇ ಉತ್ತರಿಸುತ್ತಿದ್ದ ನನ್ನ ರೇಡಿಯೋ ಮಾಸ್ಕೋ ಗೆಳೆಯರು ಈಗ ಮೌನವಾಗಿದ್ದರು.  ಅದೇ ಸಮಯದಲ್ಲಿ “ಪ್ರಜಾವಾಣಿ”ಯ ಸಾಪ್ತಾಹಿಕ ಪುರವಣಿಯಲ್ಲಿ ಕೆಜಿಬಿಯ ತರಬೇತಿ ಸಂಸ್ಥೆ “ಗೈಜಾಯಿನಾ” ಬಗ್ಗೆ ಓದಿ ಅದರ ಬಗ್ಗೆ ನನ್ನ ಮಾಸ್ಕೋ ಗೆಳೆಯರಿಗೆ ಮತ್ತೊಂದು ಪತ್ರ ಬರೆದೆ.  ಉತ್ತರ ಬರಲಿಲ್ಲ.

ಅದೆಷ್ಟೋ ಕಾಲದ ನಂತರ ಪತ್ರ ಬಂದಾಗ ಅದರಲ್ಲಿದ್ದದ್ದು ಯಾವ ವಿಶೇಷವೂ ಇಲ್ಲದ ಮೂರುನಾಲ್ಕು ಸಾಲುಗಳು, ಜತೆಗೆ ನನ್ನನ್ನು 'ಮೋಹಗೊಳಿಸುವಂಥ' ಅಂಚೆಚೀಟಿಗಳು, ವ್ಯೂ ಕಾರ್ಡ್‌ಗಳು.  ನನ್ನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ...

ನನಗೆ ಬೇಕಾದ ಉತ್ತರಗಳಿಗಾಗಿ ನಾನು ಬೇರೆಡೆ ಹುಡುಕಾಡತೊಡಗಿದೆ.  ಆಗ ಸಿಕ್ಕಿದ ಉತ್ತರಗಳು ನನ್ನನ್ನು ದಿಗ್ಘ್ರಮೆಗೊಳಿಸಿದವು...

ಅದಾದ ಕೆಲವೇ ವರ್ಷಗಳಲ್ಲಿ ರಶಿಯನ್ನನೇ ಅದ ಅರ್ಥಶಾಸ್ತ್ರಜ್ಞ ಅನತೋಲಿ ಶತಾಲಿನ್ ತನ್ನ ಮಾಧ್ಯಮಗಳ ಮೂಲಕ ಮಾಸ್ಕೋ ಹೊರಜಗತ್ತಿಗೆ ನೀಡುತ್ತಿರುವ ಸುದ್ದಿಗಳೆಲ್ಲಾ ಬೊಗಳೆ, ತನ್ನ ಆರ್ಥಿಕ ಪ್ರಗತಿಯ ಬಗ್ಗೆ ನೀಡುತ್ತಿರುವ ಅಂಕಿಅಂಶಗಳೆಲ್ಲಾ ಸುಳ್ಳಿನ ಕಂತೆ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಆಹಾರದ ಕೊರತೆ ದಿಕ್ಕೆಡಿಸುವ ಮಟ್ಟದಲ್ಲಿದೆ ಎಂದು ಆಧಾರಸಮೇತ ಸಾರಿದ.  ಅವನ ಲೇಖನಗಳನ್ನು ಯೂರಿ ಆಂದ್ರೊಪೋವ್‌‍ರ ಕ್ರೆಮ್ಲಿನ್ ನಿರಾಕರಿಸಲಿಲ್ಲ.  ನಂತರ “ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ನೋವುಗಳೇನೂ ನಿವಾರಣೆಯಾಗುವುದಿಲ್ಲ.  ನಮ್ಮ ಬದುಕು ಸುಧಾರಿಸಬೇಕಾದರೆ ನಾವು ವಾಸ್ತವಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದೊಂದೇ ಮಾರ್ಗ.  ಅದಕ್ಕನುಗುಣವಾಗಿ ನಾವು ಕಮ್ಯೂನಿಸಂ ಅನ್ನು ಬದಿಗಿರಿಸಿ ಮಾರುಕಟ್ಟೆ ಅರ್ಥವ್ಯವಸ್ಥೆಗೆ ಮೊರಹೋಗಬೇಕಾದ ಕಾಲ ಬಂದಿದೆ ಎಂದು ಮಹಾನ್ ನಾಯಕ ಮಿಖಾಯಿಲ್ ಗೋರ್ಬಚೆವ್ ಘೋಷಿಸಿದಾಗ ನನ್ನ ಅರಿವು ವಿಶಾಲವಾಯಿತು.

ನನ್ನ ಟ್ರ್ಯಾನ್ಸಿಸ್ಟರ್‍‌ನ ಶಾರ್ಟ್ ವೇವ್‌‍ನ ಎಲ್ಲ ಮೀಟರ್ ಬ್ಯಾಂಡ್‌‍ಗಳಲ್ಲಿ ಕಿವಿ ಕಿತ್ತುಹೋಗುವಂತೆ ಅರಚುತ್ತಿದ್ದ ರೇಡಿಯೋ ಮಾಸ್ಕೋ, ರೇಡಿಯೋ ತಾಷ್ಕೆಂಟ್‌‍ಗಳು ನಂತರದ ದಿನಗಳಲ್ಲಿ ಗಪ್ಪನೆ ಬಾಯಿ ಮುಚ್ಚಿಕೊಂಡವು.  ಸುಳ್ಳಿನ ಮೇಲೆ ಕಟ್ಟಿದ್ದ ಸೋವಿಯೆತ್ ಗೋಪುರ ಕೆಲವೇ ವರ್ಷಗಳಲ್ಲಿ ಕುಸಿದು ಬಿತ್ತು.

ಆಗ ನನ್ನಲ್ಲಿ ಮೂಡಿದ ಪ್ರಶ್ನೆ- ಲಂಕೇಶ್, ಅನಂತಮೂರ್ತಿ ನನಗಿಂತಲೂ ಹಿರಿಯರು, ಜ್ಞಾನಿಗಳು, ವಿವೇಕಿಗಳು, ನನಗೆ ದಕ್ಕಿದ್ದಕ್ಕಿಂತಲೂ ಹೆಚ್ಚಿನ, ನಿಖರ ಮಾಹಿತಿ ಪಡೆದುಕೊಳ್ಳಬಲ್ಲಂಥವರು.  ಅವರಿಗೆ ಸತ್ಯ ಗೊತ್ತಿರಲಿಲ್ಲವೇ?

ಭಾಗ - ೨
ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ...

ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ 'ಬಲವೇ ಹಕ್ಕು' ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ.   ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ.  ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ.  ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ.  ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ.  ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ.

ಕಳೆದ ಶತಮಾನದ ಇಪ್ಪತ್ತು-ಮೂವತ್ತರ ದಶಕಗಳಲ್ಲಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಸೋವಿಯೆತ್ ವಿದೇಶನೀತಿ ಹಾಗೂ ಯಶಸ್ವೀ ಅರ್ಥವ್ಯವಸ್ಥೆ ಕೋಟ್ಯಂತರ ಭಾರತೀಯರ ಮನಸ್ಸನ್ನು ಗೆದ್ದು ಬೌದ್ಧಿಕವರ್ಗದ ಜತೆಗೆ ಸಮಾಜದ ಕೆಳಸ್ತರದ ಜನಸಮುದಾಯದಲ್ಲೂ ಮನ್ನಣೆ ಗಳಿಸಿತು.  ಆದರೆ ನಲವತ್ತರ ದಶಕದಲ್ಲಿ ಪ್ರತಿಕೂಲ ಬೆಳವಣಿಗೆಗೆಗಳು ಕಾಣಿಸಿಕೊಂಡವು.  ೧೯೪೨ರಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ವಿರುದ್ಧ ಗಾಂಧೀಜಿಯವರು ಆರಂಭಿಸಿದ “ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ದೇಶದಾದ್ಯಂತ ವ್ಯಾಪಕ ಸಮರ್ಥನೆ ದೊರೆಯಿತು.  ಆದರೆ ಈ ಆಂದೋಲನದಿಂದ ದೂರ ಉಳಿದು ಬ್ರಿಟಿಷ್ ಸರ್ಕಾರಕ್ಕೇ ಸಹಾನುಭೂತಿ ತೋರಿಸಿದ್ದು ಮುಸ್ಲಿಂ ಲೀಗ್ ಮತ್ತು ಭಾರತೀಯ ಕಮ್ಯೂನಿಸ್ಟ್ ಪಕ್ಷ.  ತನ್ನ ಗುರಿಯಾದ ದೇಶವಿಭಜನೆ ಮತ್ತು ಪಾಕಿಸ್ತಾನ ರಚನೆಯಲ್ಲಿ ಬ್ರಿಟಿಷರ ಸಹಕಾರವನ್ನು ಬಯಸಿದ್ದ, ಆ ಬಗ್ಗೆ ಬ್ರಿಟಿಷರ ಜತೆ ರಹಸ್ಯ ಒಪ್ಪಂದಗಳ ಕಟ್ಟುಪಾಡಿಗೆ ಒಳಗಾಗಿದ್ದ ಮುಸ್ಲಿಂ ಲೀಗ್‌‍ನ ವರ್ತನೆಯನ್ನು ಅರ್ಥಮಾಡಿಕೊಳ್ಳಬಹುದು.  ಆದರೆ ಬ್ರಿಟಿಷರೊಡನೆ ಸಹಕರಿಸಬೇಕೆಂದು ಸ್ಟ್ಯಾಲಿನ್ ನೀಡಿದ ಸೂಚನೆಯನ್ನು ಒಪ್ಪಿಕೊಂಡು ಭಾರತೀಯರ ಹಿತಾಸಕ್ತಿಗಿಂತಲೂ ಸೋವಿಯೆತ್ ಯೂನಿಯನ್‌‍ನ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ನೀಡಿದ ಭಾರತದ ಕಮ್ಯೂನಿಸ್ಟರ ವರ್ತನೆ ಕ್ಷಮಾರ್ಹವಲ್ಲ.  ಜತೆಗೇ, ಇನ್ನೇನು ಸ್ವಾತಂತ್ತ್ಯ ಹತ್ತಿರಾಗುತ್ತಿದೆಯೆನ್ನುವಾಗ ದೇಶವನ್ನು ಹದಿನೇಳು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಬೇಕೆಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಬ್ರಿಟಿಷ್ ಆಳರಸರ ಮುಂದೆ ಬೇಡಿಕೆಯಿತ್ತದ್ದು ಈ ದೇಶದ ಬಗ್ಗೆ ಕಮ್ಯೂನಿಸ್ಟರ ಅಸಂವೇದನಾಶೀಲತೆಗೆ ದ್ಯೋತಕ.  ಕಮ್ಯೂನಿಸ್ಟರ ಈ ಭಾರತ-ವಿರೋಧಿ ನೀತಿಗಳು ದೇಶದ ವಿದ್ಯಾವಂತ ಸಮುದಾಯದ ಒಂದು ದೊಡ್ಡ ವರ್ಗ ಕಮ್ಯೂನಿಸಂನಿಂದ ದೂರ ಸರಿಯುವಂತೆ ಮಾಡಿದವು.  ಇಷ್ಟಾಗಿಯೂ, ಈ ಕಮ್ಯೂನಿಸ್ಟರ ಪ್ರತಿಗಾಮಿ ಪಿತೂರಿಗಳು ಹಳ್ಳಿಗಾಡಿನ ಅರೆವಿದ್ಯಾವಂತ ಜನಸಾಮಾನ್ಯರಿಗೆ ತಿಳಿಯದ ಕಾರಣ ನಲವತ್ತರ ದಶಕವಲ್ಲದೇ ಐವತ್ತರ ದಶಕದ ಆದಿಯಲ್ಲೂ ಅವರು ಎಡಪಂಥಕ್ಕೆ ತಮ್ಮ ಬೆಂಬಲವನ್ನು ಮುಂದುವರೆಸಿದರು.  ತೆಲಂಗಾಣ, ಛೋಟಾನಾಗಪುರ, ಬಸ್ತರ್‍‍ಗಳಲ್ಲಿ ಕಮ್ಯೂನಿಸ್ಟ್ ಅಂದೋಲನಗಳು ತಲೆಯೆತ್ತಲು ಮತ್ತು ಕಮ್ಯೂನಿಸ್ಟ್ ಅಭ್ಯರ್ಥಿಗಳು ಅಲ್ಲಲ್ಲಿ ಚುನಾವಣೆಗಳಲ್ಲಿ ಜಯಶಾಲಿಯಾದದ್ದಕ್ಕೆ ಇದು ಕಾರಣ.  ಆದರೆ ನಂತರದ ವರ್ಷಗಳಲ್ಲಿ ಜನಸಾಮಾನ್ಯರೂ ಎಚ್ಚತ್ತುಕೊಳ್ಳತೊಡಗಿದರು.  ತನ್ನದೇ ಆರ್ಥಿಕ ಗೊಂದಲದಲ್ಲಿ ಮುಳುಗಿದ್ದ ಸೋವಿಯೆತ್ ಯೂನಿಯನ್ ನಮಗೆ ಅಗತ್ಯ ಆರ್ಥಿಕ ನೆರವು ನೀಡುವ ಸ್ಥಿತಿಯಲ್ಲಿರಲಿಲ್ಲ.  ಹೀಗಾಗಿ ಸಾಮಾನ್ಯ ಭಾರತೀಯರ ಗಮನ ಸೆಳೆಯುವುದರಲ್ಲಿ ಆ ಕಮ್ಯೂನಿಸ್ಟ್ ದೈತ್ಯ ಸೋತುಹೋಯಿತು.  ಜತೆಗೆ, ಶಿಕ್ಷಣ ಸಾರ್ವತ್ರಿಕವಾಗತೊಡಗಿದಂತೇ ಭಾರತದ ವೈಜ್ಞಾನಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಅಮೆರಿಕಾ ಮತ್ತು ಪಶ್ಚಿಮ ಯೂರೋಪಿನ ಪಾತ್ರವನ್ನು ಗುರುತಿಸಿದ ಶಿಕ್ಷಿತ ಭಾರತೀಯರಿಗೆ ಆ ದೇಶಗಳು ಮಾದರಿಯಾಗಿ ಕಾಣತೊಡಗಿದವು.  ಹೀಗಾಗಿ ನೆಹರು ವಿರಚಿತ ಸರ್ಕಾರೀ ನೀತಿ ಸೋವಿಯೆತ್ ಪರವಾದರೂ ಸಾಮಾನ್ಯ ಭಾರತೀಯರು ಅಮೆರಿಕಾದ ಕಡೆ ಆಕರ್ಷಿತರಾಗತೊಡಗಿದರು.  ಕಮ್ಯೂನಿಸ್ಟರ ಮಕ್ಕಳೂ ಅಮೆರಿಕಾದಲ್ಲಿ ಶಿಕ್ಷಣ, ಅವಕಾಶವಿದ್ದರೆ ಅಲ್ಲೇ ಉದ್ಯೋಗಗಳನ್ನೂ ಬಯಸುವ ಸ್ಥಿತಿ ನಿರ್ಮಾಣವಾಯಿತು.

ಇದರ ಜತೆಗೇ ವಿಶ್ವದ ವಿವಿಧೆಡೆ ಕಮ್ಯೂನಿಸ್ಟ್ ಸರ್ಕಾರಗಳು ಹಮ್ಮಿಕೊಂಡ ದಮನಕಾರಿ ನೀತಿಗಳು ಆಗಷ್ಟೇ ರೆಕ್ಕೆ ಬಿಚ್ಚತೊಡಗಿದ್ದ ಭಾರತೀಯ ಮುದ್ರಣಮಾಧ್ಯಮಗಳ ಮೂಲಕ ನವಸಾಕ್ಷರರಿಗೆ ತಲುಪತೊಡಗಿದ್ದು ಕಮ್ಯೂನಿಸಂ ಬಗ್ಗೆ ಜನತೆಯ ಭ್ರಮನಿರಸನ ವೃದ್ಧಿಗೊಳ್ಳಲು ಕಾರಣವಾದವು.  ಸ್ಟ್ಯಾಲಿನ್‌‍ನ ವಿರೋಧಿ ಟ್ರಾಟ್ಸ್‌‍ಕಿ ೧೯೨೪ರಲ್ಲಿ ರಶಿಯಾವನ್ನೇ ತೊರೆದು ಓಡಿಹೋದದ್ದು, ಹದಿನಾರು ವರ್ಷಗಳವರೆಗೆ ಅವನಿಗಾಗಿ ಪ್ರಪಂಚವನ್ನೇ ಜಾಲಾಡಿದ ಸ್ಟ್ಯಾಲಿನ್‌‍ನ ಹಸ್ತಕರು ಅಂತಿಮವಾಗಿ ೧೯೪೦ರಲ್ಲಿ ಅವನನ್ನು ಮೆಕ್ಸಿಕೋದಲ್ಲಿ ಕೊಂದದ್ದು ಕಮ್ಯೂನಿಸ್ಟರು ಅಭಿಪ್ರಾಯಭೇದವನ್ನು ಸಹಿಸಲಾರರು ಎಂಬುದನ್ನು ಜಗತ್ತಿಗೇ ಸಾರಿತ್ತು.  (ಈ ಬಗ್ಗೆ ಜಾರ್ಜ್ ಆರ್ವೆಲ್ ಬರೆದ “Animal Farm” ಕೃತಿ ಇಂದಿಗೂ ಜನಪ್ರಿಯ).  ಮಹಾಯುದ್ಧಾನಂತರ ಪೂರ್ವ ಯೂರೋಪಿಯನ್ ದೇಶಗಳಲ್ಲಿ ಮತ್ತು ಚೀನಾದಲ್ಲಿ ಅಸ್ತಿತ್ವಕ್ಕೆ ಬಂದ ಕಮ್ಯೂನಿಸ್ಟ್ ಸರ್ಕಾರಗಳು ಎಸಗತೊಡಗಿದ ಮಾನವಹಕ್ಕುಗಳ ಸಾರಾಸಗಟು ಉಲ್ಲಂಘನೆ, ಮುಖ್ಯವಾಗಿ ಟಿಬೆಟ್‌‍ನಲ್ಲಿ ಘಟಿಸತೊಡಗಿದ ಭಯಾನಕ ಘಟನೆಗಳು ಶಿಕ್ಷಿತ ಭಾರತೀಯರ ಅಂತಃಸಾಕ್ಷಿಯನ್ನೇ ಕಲಕತೊಡಗಿದವು.  ಇದರ ಜತೆಗೆ ೧೯೬೪ರಲ್ಲಿ ಜಾಗತಿಕ ಕಮ್ಯೂನಿಸ್ಟ್ ಆಂದೋಲನ ವಿಭಜನೆಗೊಂಡು ಸೋವಿಯೆತ್ ನೇತೃತ್ವದಲ್ಲೊಂದು, ಅದಕ್ಕೆ ವಿರುದ್ಧವಾಗಿ ಚೀನಾ ನೇತೃತ್ವದಲ್ಲೊಂದು ಪರಸ್ಪರ ವಿರೋಧಿ ಕಮ್ಯೂನಿಸ್ಟ್ ಬಣಗಳು ಹುಟ್ಟಿಕೊಂಡಾಗ ಭಾರತೀಯ ಕಮ್ಯೂನಿಸ್ಟ್ ಪಕ್ಷವೂ ಸೀಳಾಯಿತು.  ಸೋವಿಯೆತ್ ಬೆಂಬಲಿಗರು ಮೂಲಪಕ್ಷದಲ್ಲೇ (ಸಿಪಿಐ) ಉಳಿದರೆ ಚೀನೀ ಸಮರ್ಥಕರು ಸಿಪಿಐ-ಎಂ ಎಂಬ ಹೊಸ ಪಕ್ಷ ಕಟ್ಟಿಕೊಂಡರು.   ಇದು ಎತ್ತಿತೋರಿದ್ದು ಭಾರತೀಯ ಕಮ್ಯೂನಿಸ್ಟರ ಸ್ವತಂತ್ರ ಚಿಂತನೆಯ ದಿವಾಳಿತನವನ್ನು.  ರಶಿಯನ್ ಕಮ್ಯೂನಿಸ್ಟರು ರಶಿಯಾ ಪರವಾಗಿಯೂ, ಚೀನೀ ಕಮ್ಯೂನಿಸ್ಟರು ಚೀನಾ ಪರವಾಗಿಯೂ, ವಿಯೆಟ್ನಾಮೀ ಕಮ್ಯೂನಿಸ್ಟರು ವಿಯೆಟ್ನಾಂ ಪರವಾಗಿಯೂ, ಕ್ಯೂಬನ್ ಕಮೂನಿಸ್ಟರು ಕ್ಯೂಬಾ ಪರವಾಗಿಯೂ ಇದ್ದರೆ ಭಾರತೀಯ ಕಮ್ಯೂನಿಸ್ಟರು ಮಾತ್ರ ರಶಿಯಾ ಪರವಾಗಿ ಅಥವಾ ಚೀನಾ ಪರವಾಗಿ!  ಭಾರತದ ಪರವಾಗಿ ಅಲ್ಲ!!  ಅವರ ಈ ವೈಚಾರಿಕ ದಾಸ್ಯವನ್ನು ಚಿತ್ರಿಸಲು ಸೃಷ್ಟಿಯಾದ ಜೋಕ್ ಒಂದು ಹೀಗಿತ್ತು: “ಮಾಸ್ಕೋ ಅಥವಾ ಬೀಜಿಂಗ್‌‍ನಲ್ಲಿ ಮಳೆಯಾದರೆ ಭಾರತೀಯ ಕಮ್ಯೂನಿಸ್ಟರು ದೆಹಲಿಯಲ್ಲಿ ಕೊಡೆ ಬಿಡಿಸುತ್ತಾರೆ.”

ನಂತರ ಎಪ್ಪತ್ತರ ದಶಕದ ಮಧ್ಯದಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಸೋವಿಯೆತ್ ಸರದಾರರ ಸಲಹೆಗನುಗುಣವಾಗಿ ಸಿಪಿಐ ಇಂದಿರಾರ ಪರವಾಗಿ ನಿಂತಿತು.  ಆದರೆ ಅದನ್ನು ವಿರೋಧಿಸಿದ ಸಿಪಿಐ-ಎಂ ಪಕ್ಷ ೧೯೭೭ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ವಿಜಯಿಯಾಯಿತು.  ಇದಕ್ಕೆ ಕಾರಣ ಕಮ್ಯೂನಿಸ್ಟರು ಏಕಾಏಕಿ ಜನಪ್ರಿಯರಾದರು ಎನ್ನುವುದಕ್ಕಿಂತಲೂ ಆ ರಾಜ್ಯದಲ್ಲಿ ಇಂದಿರಾರ ಕಾಂಗ್ರೆಸ್‌ಗೆ ವಿರುದ್ಧವಾಗಿ ಜನತಾ ಪಕ್ಷಕ್ಕೆ ಸಮರ್ಥ ನಾಯಕತ್ವವಿರಲಿಲ್ಲ ಎನ್ನುವುದು ವಾಸ್ತವಕ್ಕೆ ಹೆಚ್ಚು ಹತ್ತಿರ.   ಆದರೆ ಒಮ್ಮೆ ಅಧಿಕಾರವನ್ನು ಕೈಗೆ ತೆಗೆದುಕೊಂಡ ಮೇಲೆ ಅದನ್ನು ತಮ್ಮ ಕೈಯಲ್ಲೇ ಇರಿಸಿಕೊಳ್ಳಲು ವಿಶ್ವದ ಬೇರೆಲ್ಲಾ ಕಮ್ಯೂನಿಸ್ಟ್ ಸರ್ಕಾರಗಳು ಅನುಸರಿಸಿದ ನೀತಿಯನ್ನೇ ಸಿಪಿಐ-ಎಂ ಸಹಾ ಅನುಸರಿಸಿತು.  ಹಳ್ಳಿಹಳ್ಳಿಗಳಲ್ಲಿ ಹುಟ್ಟಿಕೊಂಡ ಪಕ್ಷದ ಶಾಖೆಗಳು ಜನಸಾಮಾನ್ಯರ ಮೇಲೆ ನಿರಂಕುಶಾಧಿಕಾರ ಚಲಾಯಿಸತೊಡಗಿದವು.  ಅದು ಯಾವ ಮಟ್ಟಕ್ಕಿತ್ತೆನ್ನುವುದರ ಬಗ್ಗೆ ಒಂದು ಉದಾಹರಣೆಯೆಂದರೆ ಜನರ ರೇಶನ್ ಕಾರ್ಡ್‌‍ಗಳು ಇರುತ್ತಿದ್ದುದು ಹಳ್ಳಿಯ ಸಿಪಿಐ-ಎಂ ಕಾರ್ಯದರ್ಶಿಯ ಕೈಯಲ್ಲಿ!  ಮುಂದಿನ ಮೂರು ದಶಕಗಳವರೆಗೆ ಪ್ರತಿ ಚುನಾವಣೆಯಲ್ಲೂ ಜನ ಸಿಪಿಐ-ಎಂಗೆ ಮತ ಚಲಾಯಿಸುವ ಒತ್ತಡಕ್ಕೊಳಗಾದದ್ದರ ಹಿಂದಿನ ಮರ್ಮ ಇದು.  ಪಶ್ಚಿಮ ಬಂಗಾಳದ ಜನತೆ ಕೊನೆಗೂ ಸಿಡಿದೆದ್ದದ್ದು ತಮ್ಮ ಬೆಂಬಲಕ್ಕೆ ದೃಢಸಂಕಲ್ಪದ ನಾಯಕಿಯೊಬ್ಬಳಿದ್ದಾಳೆ ಎಂದರಿತಾಗ.  ಈ ಕಾರಣಕ್ಕಾಗಿ ಮಮತಾ ಬ್ಯಾನರ್ಜಿ ಅಭಿನಂದನಾರ್ಹರಾಗುತ್ತಾರೆ.

ಭಾರತೀಯ ಕಮ್ಯೂನಿಸ್ಟರ ಬಣ್ಣವನ್ನು ದೇಶಕ್ಕೆ ಢಾಳಾಗಿ ತೋರಿದ್ದು ನಂದಿಗ್ರಾಮ ಘಟನೆಗಳು.  ಚೀನಾ ಮಾದರಿಯ ಸ್ಪೆಷಲ್ ಎಕನಾಮಿಕ್ ಜ಼ೋನ್ ಯೋಜನೆಗಳಿಗಾಗಿ ತಮ್ಮ ವ್ಯವಸಾಯದ ಜಮೀನುಗಳನ್ನು ಬಿಟ್ಟುಕೊಡಲು ತಯಾರಿಲ್ಲದ ರೈತರ ವಿರೋಧದಿಂದಾಗಿ ಅನೇಕ ರಾಜ್ಯಗಳಲ್ಲಿ ಆ ಯೋಜನೆ ನೆನೆಗುದಿಗೆ ಬಿತ್ತು.  ಇತರ ರಾಜ್ಯಗಳಲ್ಲಿ ರೈತರ ಮನವೊಲಿಸುವ ಪ್ರಯತ್ನ ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದಂತೇ ಪಶ್ಚಿಮ ಬಂಗಾಳದ ಎಡಪಂಥೀಯ ಸರಕಾರ ಶಕ್ತಿಪ್ರಯೋಗ ಹಾಗೂ ಹಿಂಸೆಯ ಮೂಲಕ ವಿರೋಧವನ್ನು ಹತ್ತಿಕ್ಕುವ ಹಾದಿ ಹಿಡಿಯಿತು.  ಇದರ ಪರಿಣಾಮವೇ ಮಾರ್ಚ್ ೧೪, ೨೦೦೭ರಂದು ನಂದಿಗ್ರಾಮದಲ್ಲಿ ನಡೆದ ಬರ್ಬರ ನರಮೇಧ.  ಅಂದು ಇಂಡೋನೇಶಿಯಾದ ಸಂಸ್ಥೆಯೊಂದರಿಂದ ರಾಸಾಯನಿಕ ಸ್ಥಾವರದ ಸ್ಥಾಪನೆಗಾಗಿ ತಮ್ಮ ವ್ಯವಸಾಯದ ಜಮೀನನ್ನು ಬಿಟ್ಟುಕೊಡಲು ತಯಾರಿಲ್ಲದ ರೈತರ ಮೇಲೆ ಗುಂಡಿನ ಮಳೆಗರೆದು ಮುಗ್ಧ ಹೆಂಗಸರು ಮಕ್ಕಳು ಸೇರಿದಂತೆ ಹದಿನಾಲ್ಕು ಜನರ ಕಗ್ಗೂಲೆ ನಡೆಸಿ, ಎಪ್ಪತ್ತು ಜನರನ್ನು ಗಾಯಗೊಳಿಸಿದ್ದು ಕೇವಲ ಪೋಲೀಸರಲ್ಲ, ಇದರಲ್ಲಿ ಸಿಪಿಐ-ಎಂನ ಕಾರ್ಯಕರ್ತರದ್ದೇ ಸಿಂಹಪಾಲಿತ್ತು ಎಂಬ ವಿಷಯ ಇಡೀ ದೇಶವನ್ನೇ ತಲ್ಲಣಿಸಿಬಿಟ್ಟಿತು.  ಈ ಕಾರ್ಯಕರ್ತರ ಕುಕೃತ್ಯದ ಹಿಂದೆ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ವಾಮವಾದೀ ಸರಕಾರದ ಕೈ ಇರುವ ಕಹಿಸತ್ಯ ರಾಷ್ಟ್ರದ ಅಂತಃಸಾಕ್ಷಿಯನ್ನೇ ಕಲಕಿತು.  ಜತೆಗೇ, ಪತ್ರಕರ್ತರನ್ನು ದೂರವಿರಿಸಿ ಇಡೀ ಪ್ರಕರಣವನ್ನು ದೇಶದ ಕಣ್ಣಿನಿಂದ ಮರೆಯಾಗಿಸುವ ಪ್ರಯತ್ನವನ್ನೂ ಪಶ್ಚಿಮ ಬಂಗಾಳ ಸರಕಾರ ಕೈಗೊಂಡಿತ್ತು ಎಂಬ ಸುದ್ಧಿ ತೀರಾ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತು.  ರಶಿಯಾ ಆಗಲಿ, ಚೀನಾ ಆಗಲಿ, ಉತ್ತರ ಕೊರಿಯಾ ಆಗಲೀ, ಕಂಪೂಚಿಯಾ ಆಗಲಿ, ಅಥವಾ ಭಾರತವೇ ಆಗಲಿ, ಕಮ್ಯೂನಿಸ್ಟರು ಕಮ್ಯೂನಿಸ್ಟರೇ; ಯಾವುದೇ ವಿರೋಧಕ್ಕೆ ಅವರ ಪ್ರತಿಕ್ರಿಯೆ ಬಲಪ್ರದರ್ಶನ ಮತ್ತು ಹಿಂಸೆ ಎಂಬ ಕಹಿಸತ್ಯವನ್ನು ನಂದಿಗ್ರಾಮ ಬಿಂಬಿಸಿತು.

ಈ ನಡುವೆ ವಿಶ್ವರಂಗದಲ್ಲಿ ಕಮ್ಯೂನಿಸ್ಟ್ ಸರ್ಕಾರಗಳು ಕುಸಿದುಬಿದ್ದು ಎಲ್ಲೆಡೆ ಪ್ರಜಾಪ್ರಭುತ್ವದ ಗಾಳಿ ಬೀಸತೊಡಗಿತ್ತು.  ತಮ್ಮ ದೇಶದಲ್ಲೂ ಪ್ರಜಾಪ್ರಭುತ್ವವನ್ನು ಬಯಸಿದ ವಿದ್ಯಾರ್ಥಿಗಳ ಮೇಲೆ ಚೀನೀ ಕಮ್ಯೂನಿಸ್ಟ್ ಸರ್ಕಾರ ಜೂನ್ ೪, ೧೯೮೯ರಂದು ತೋರಿದ ಕ್ರೌರ್ಯ ಈಗ ತಿಯೆನಾನ್‌‍ಮೆನ್ ಹತ್ಯಾಕಾಂಡ ಎಂದು ಚರಿತ್ರೆಯಲ್ಲಿ ದಾಖಲಾಗಿದೆ.  ಕಮ್ಯೂನಿಸ್ಟರ ಮನುಷ್ಯವಿರೋಧಿ ನೀತಿಗಳಿಗೊಂದು ಹೊಸ ರಕ್ತಸಿಕ್ತ ಉದಾಹರಣೆಯಾದ ಇದು ಭಾರತೀಯರನ್ನು, ಮುಖ್ಯವಾಗಿ ಯುವಜನತೆಯನ್ನು ಕಮ್ಯೂನಿಸಂನಿಂದ ಮತ್ತಷ್ಟು ದೂರ ಒಯ್ದಿತು.  ಈ ನಡುವೆ ಕಮ್ಯೂನಿಸ್ಟರ ಧನದಾಹದ ಬಗೆಗಿನ ವಿವರಗಳೂ ಹೊರಬೀಳತೊಡಗಿದವು.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಎಂಬತ್ತರ ದಶಕದಲ್ಲೇ ತಮ್ಮ ಸ್ಥಿರ ಆಸ್ತಿಗಳ ಬಾಡಿಗೆಗಳಿಂದಲೇ ತಿಂಗಳಿಗೆ ಎಂಬತ್ತು ಸಾವಿರ ರೂಪಾಯಿ ಗಳಿಸುತ್ತಿದ್ದುದರಿಂದ ಹಿಡಿದು ೨೦೦೮ರಲ್ಲಿ ಭಾರತ-ಅಮೆರಿಕಾ ಅಣು ಒಪ್ಪಂದವನ್ನು ಸಂಸತ್ತಿನಲ್ಲಿ ವಿರೋಧಿಸಿ ಬೀಳಿಸಲು ಕಮ್ಯೂನಿಸ್ಟ್ ಧುರೀಣರು ಚೀನಾದಿಂದ ಲಕ್ಷಾಂತರ ಡಾಲರ್‌ಗಳನ್ನು ಪಡೆದುಕೊಂಡದ್ದರ ನಡುವಿನ ಮೂರು ದಶಕಗಳಲ್ಲಿ ಸಮತಾವಾದಿಗಳ ಹಣಕಾಸೀಯ ಆಷಾಡಭೂತಿತನಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ.  ನಮ್ಮಲ್ಲೇ ಎಡಪಂಥೀಯ ವೈಚಾರಿಕತೆಯನ್ನೆತ್ತಿಕೊಂಡು ಬಹಳವಾಗಿ ಸದ್ದುಮಾಡುತ್ತಿದ್ದ ಅಧ್ಯಾಪಕ-ಸಾಹಿತಿ-ಪತ್ರಕರ್ತರೊಬ್ಬರು ಸ್ವಂತ ಆಸ್ತಿ, ಹಣ ಮಾಡಿಕೊಂಡದ್ದು, ‘ನನ್ನದೇ ಫಾರ್ಮ್ ಒಂದನ್ನು ಹೊಂದಲು ನನಗೆ ಬಹಳ ಆಸೆಯಿತ್ತು’ ಎಂದು 'ಪ್ರಾಮಾಣಿಕ'ವಾಗಿ ಹೇಳಿಕೊಂಡದ್ದು ಅವರ ಕೆಲವರಾದರೂ ಅನುಯಾಯಿಗಳ ಕಣ್ಣು ತೆರೆಸಿರಲಿಕ್ಕೆ ಸಾಕು.  ತೆರೆಯದೇ ಮುಚ್ಚಿಕೊಂಡೇ ಇರುವವರನ್ನು ಪಕ್ಕಕ್ಕಿಡೋಣ.  ಅವರ ನೋಟಗಳು ನಮ್ಮ ಸಮಾಜದ ಒಳಿತಿಗೆ ಯಾವ ಒಳನೋಟವನ್ನೂ ನೀಡಲಾರವು.  ಹೀಗಾಗಿಯೇ ಅವರ ಹುಯಿಲುಗಳಿಗೆ ಜನತೆ ಗಮನ ನೀಡುತ್ತಿಲ್ಲ.

ಹೀಗೆ, ಕಳೆದೊಂದು ಶತಮಾನದಲ್ಲಿ ಭಾರತದ ಹೊರಗೆ, ಒಳಗೆ ಘಟಿಸಿದ ಎಡಪಂಥೀಯರ ವೈಚಾರಿಕ, ರಾಜಕೀಯ, ಆರ್ಥಿಕ ಕರ್ಮಕಾಂಡಗಳು ಕಮ್ಯೂನಿಸಂ ಎಂಬ ಸುಂದರ ಕನಸನ್ನು ಹಳವಂಡವಾಗಿಸಿಬಿಟ್ಟವು.  ಹೀಗಾಗಬಾರದಿತ್ತು.

***     ***     ***

ಜುಲೈ ೨೧-೨೮, ೨೦೧೫

Tuesday, July 5, 2016

ಸುದ್ಧಿಮಾಧ್ಯಮ: ದೇಶ ಸೆರಗಿಗೆ ಕಟ್ಟಿಕೊಂಡ ಕೆಂಡ



೨೬/೧೧ರ ಮುಂಬೈ ಧಾಳಿಗಳ ರೂವಾರಿಯೊಬ್ಬ ಕರಾಚಿಯಿಂದ ಹೊರಡುತ್ತಿದ್ದ ಅಜ್ಮಲ್ ಕಸಾಬ್ ಸೇರಿದಂತೆ ಹತ್ತು ಭಯೋತ್ಪಾದಕರಿಗೆ ನೀಡಿದನೆನ್ನಲಾದ 'ಉಪದೇಶ' ಹೀಗಿತ್ತು: “ತಾಜ್ ಹೋಟೆಲ್ ಆಕ್ರಮಿಸಿಕೊಂಡ ನಂತರ ಯಾವುದಾದರೊಂದು ಕೋಣೆ ಸೇರಿ ಅಲ್ಲಿರುವ ಟೀವಿ ಚಾಲೂ ಮಾಡಿ ಭಾರತೀಯ ನ್ಯೂಸ್ ಚಾನಲ್ ಒಂದನ್ನು ನೋಡಿ.  ಭಾರತೀಯ ಭದ್ರತಾ ಪಡೆಗಳು ನಿಮ್ಮ ವಿರುದ್ಧ ಕೈಗೊಳ್ಳುತ್ತಿರುವ ತಂತ್ರಗಳ ಇಡೀ ವಿವರ ಅದರಲ್ಲಿ ನಿಮಗೆ ದೊರೆಯತೊಡಗುತ್ತದೆ.  ಅದಕ್ಕನುಗುಣವಾಗಿ ನಿಮ್ಮ ಪ್ರತಿತಂತ್ರಗಳನ್ನು ನೀವು ರೂಪಿಸಿಕೊಳ್ಳಬಹುದು.”  ನಮ್ಮ ಮಾಧ್ಯಮಗಳು ಅತ್ಯುತ್ಸಾಹದಿಂದ ಪ್ರಸಾರ ಮಾಡುತ್ತಿದ್ದ ವಿವರಗಳೇ ತಾಜ್ ಹೋಟೆಲ್ ಮೇಲೆ ಪಾಕ್ ಉಗ್ರರ ಹಿಡಿತ ದೀರ್ಘವಾಗಲು ಕಾರಣವಾಯಿತು ಎಂಬ ಕಟುವಾಸ್ತವದ ಹಿನ್ನೆಲೆಯಲ್ಲಿ ಪಾಕ್ ಭಯೋತ್ಪಾದಕ ನಮ್ಮ ಮಾಧ್ಯಮಗಳ ನಾಡಿಮಿಡಿತವನ್ನು ಅದೆಷ್ಟು ಚೆನ್ನಾಗಿ ಅರಿತಿದ್ದ ಎಂಬ ಕಹಿಸತ್ಯ ಎದೆಗೆ ನಾಟುತ್ತದೆ.  ಪೀಠಿಕೆಯೊಂದಿಗೆ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ಮಾಧ್ಯಮಗಳು ಅನುಸರಿಸುವ ಕುನೀತಿಯ ಪರಿಚಯ ಮಾಧ್ಯಮಗಳ ಬಗೆಗಿನ ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನ ವಸ್ತುವಿಷಯ.  ನನ್ನ ಅವಲೋಕನವನ್ನು ಕಾಲು ಶತಮಾನದಷ್ಟು ದೀರ್ಘವಾದ ಕಾಶ್ಮೀರದಲ್ಲಿನ ಭಯೋತ್ಪಾದನೆಯೊಂದಿಗೆ ಪ್ರಾರಂಭಿಸುತ್ತೇನೆ.

ಭಾರತದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುವ ಭೂಪಟಗಳಲ್ಲಿ ದೇಶದ ಶಿರೋಭಾಗದಂತಿರುವ ಜಮ್ಮು ಮತ್ತು ಕಾಶ್ಮೀರ ವಾಸ್ತವವಾಗಿ ಮೂರು ದೇಶಗಳ ಹತೊಟಿಯಲ್ಲಿದೆ.  ಈಶಾನ್ಯದ ಅಕ್ಸಾಯ್ ಚಿನ್ ಚೈನಾದ ವಶದಲ್ಲಿದ್ದರೆ ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳ ಮೇಲೆ ಪಾಕಿಸ್ತಾನದ ಹತೋಟಿ ಇದೆ.  ಎರಡರ ನಡುವಿನ ಪ್ರದೇಶ ಭಾರತದ ಆಡಳಿತದಲ್ಲಿದೆ.  ಚೈನಾದ ವಶದಲ್ಲಿರುವ ಪ್ರದೇಶದ ಬಗ್ಗೆ ನಮ್ಮ ಸುದ್ಧಿಮಾಧ್ಯಮಗಳಲ್ಲಿ ಯಾವ ಚರ್ಚೆಯೂ ಆಗದಿರುವುದಕ್ಕೆ ನನ್ನ ಅಕ್ಷೇಪವೇನೂ ಇಲ್ಲ.  ಯಾಕೆಂದರೆ ನಾಗರಿಕ ವಸತಿಯಿಲ್ಲದ ಅಲ್ಲಿ ಸುದ್ಧಿಯಾಗುವಂತಹದೇನೂ ಘಟಿಸುವುದಿಲ್ಲ.  ಆದರೆ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ್ದು ಹಾಗಲ್ಲ.  ಅಲ್ಲಿ ಎರಡು ಪ್ರತ್ಯೇಕ ರಾಜಕೀಯ ವಿಭಾಗಗಳಿವೆ.  ಭೂಭಾಗದ ದೃಷ್ಟಿಯಿಂದ ಪುಟ್ಟದಾದದ್ದು ಪಶ್ಚಿಮದಲ್ಲಿ ಒಂದು ಬಾಗಿಸಿದ ಬೆರಳಿನಾಕಾರದಲ್ಲಿರುವ ಪ್ರದೇಶ.  ಇದನ್ನು ತಾನು ಭಾರತದಿಂದ ವಿಮೋಚನೆಗೊಳಿಸಿರುವುದಾಗಿ ಹೇಳಿಕೊಳ್ಳುವ ಪಾಕಿಸ್ತಾನ ಅದಕ್ಕೆಅಜ಼ಾದ್ ಕಶ್ಮೀರ್” (ಸ್ವತಂತ್ರ ಕಾಶ್ಮೀರ) ಎಂದು ಹೆಸರಿಟ್ಟು ಅಲ್ಲೊಂದು ಕೈಗೊಂಬೆ ಸರ್ಕಾರವನ್ನು ಹುಟ್ಟುಹಾಕಿ ಅದನ್ನು ಸಾಕುನಾಯಿಯಂತೆ ಆರ್ಗನೈಜ಼ೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಮುಂತಾದ ಅಂತರರಾಷ್ಟ್ರೀಯ ಮುಸ್ಲಿಂ ವೇದಿಕೆಗಳಿಗೆ ಕರೆದುಕೊಂಡುಹೋಗುತ್ತದೆ.  ಇಲ್ಲಿನವರು ಸುನ್ನಿ ಮುಸ್ಲಿಮರು ಮತ್ತವರು ಪಾಕ್ ಆಡಳಿತವನ್ನು ಒಪ್ಪಿಕೊಂಡಿದ್ದಾರೆ.  ಇಷ್ಟಾಗಿಯೂ, ಭಾರತದ ಕಾಶ್ಮೀರಕ್ಕೆ ಹೋಲಿಸಿದರೆ ಇಲ್ಲಿ ಶಿಕ್ಷಣ ತೀರಾ ಕೆಳಮಟ್ಟದಲ್ಲಿರುವ ಬಗ್ಗೆ ಯುವಜನತೆಯಲ್ಲಿ ಅಸಂತೋಷವಿದೆ.  ೨೦೦೭ರಲ್ಲಿ ಭಾರತಕ್ಕೆ ಭೇಟಿಯಿತ್ತ ಅಲ್ಲಿನ ವಿದ್ಯಾರ್ಥಿತಂಡದ ನಾಯಕ ಬಯಲುಮಾಡಿದ್ದು ಹೀಗೆ: “ಅಜ಼ಾದ್ ಕಶ್ಮೀರ್ ತನ್ನ ಅವಿಭಾಜ್ಯ ಅಂಗವೆಂದು ಭಾರತ ಸಾಂವಿಧಾನಿಕವಾಗಿ ಘೋಷಿಸಿರುವುದರಿಂದ ಅಲ್ಲಿನ ಜನರೂ ಭಾರತದ ಪ್ರಜೆಗಳು ಎನ್ನುವುದನ್ನು ಭಾರತ ಒಪ್ಪಿಕೊಳ್ಳಬೇಕು ಮತ್ತು ಭಾರತೀಯರಿಗೆ ಇರುವ ಸವಲತ್ತುಗಳನ್ನೆಲ್ಲಾ ನಮಗೂ ವಿಸ್ತರಿಸಬೇಕು.  ಅದರ ಪ್ರಕಾರ ಐಐಟಿ, ಎನ್‌‍ಐಟಿ ಮುಂತಾದ ವಿವಿಧ ಶಿಕ್ಷಣಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ನಮಗೆ ಅವಕಾಶ ಕಲ್ಪಿಸಬೇಕು.”  ಪಾಕಿಸ್ತಾನದ ಮೂಗಿಗೇ ಗುದ್ದಿದಂತಹ ಮಾತಿದು.  ಇದನ್ನು ಭಾರತೀಯ ಮಾಧ್ಯಮದಲ್ಲಿ ಕೇಳಿದ/ನೋಡಿದ ನೆನಪು ನಿಮಗಿದೆಯೇ?

ಅಜ಼ಾದ್ ಕಶ್ಮೀರ್‍‍ಗಿಂತಲೂ ಐದಾರು ಪಟ್ಟು ದೊಡ್ಡದಾದ ಪ್ರದೇಶ ಉತ್ತರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್.  ಇದನ್ನು ಪಾಕಿಸ್ತಾನ ತನ್ನ ಅಧಿಕೃತ ಪ್ರದೇಶವೆಂದು ಕರೆದುಕೊಳ್ಳುತ್ತದೆ.  ಅಂದರೆ ಅದರ ಪ್ರಕಾರ ಇದು ಜಮ್ಮು ಮತ್ತು ಕಾಶ್ಮೀರದ ಭಾಗವಲ್ಲ!  ಇಸ್ಲಾಮಾಬಾದ್‌‍ ನಿಲುವನ್ನು ಪಾಕಿಸ್ತಾನದ ಸುಪ್ರೀಮ್ ಕೋರ್ಟ್ ತಿರಸ್ಕರಿಸಿ, ಸರ್ಕಾರಕ್ಕೆ ಛೀಮಾರಿ ಹಾಕಿ, ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಅವಿಭಾಜ್ಯ ಅಂಗವೆಂದು ಘೋಷಿಸಿದೆ.  ಇದನ್ನಾದರೂ ಭಾರತೀಯ ಮಾಧ್ಯಮಗಳು ನಿಮಗೆ ತಿಳಿಸಿದ್ದುಂಟೇ?  ಅದೂ ಹೋಗಲಿ ಬಿಡಿ, ಪ್ರದೇಶಗಳಲ್ಲಿ ೧೯೪೭ರಿಂದಲೂ ಚಾಲ್ತಿಯಲ್ಲಿರುವುದು ಅಘೋಷಿತ ಮಿಲಿಟರಿ ಆಡಳಿತ.  ಅಲ್ಲಿನ ಜನ ಶಿಯಾ ಮುಸ್ಲಿಮರು.  ಪಾಕಿಸ್ತಾನದ ಸುನ್ನಿ ಮುಸ್ಲಿಮರ ಆಡಳಿತವನ್ನು ಕಳೆದ ಆರವತ್ತೆಂಟು ವರ್ಷಗಳಿಂದಲೂ ಒಪ್ಪಿಕೊಳ್ಳದ ಇವರ ವಿರುದ್ಧ ಪಾಕಿಸ್ತಾನೀ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.  ಜನರಲ್ ಜಿಯಾ ಕಾಲದಲ್ಲಿ ಪಾಕ್-ವಿರೋಧೀ ದಂಗೆಗಳು ಅತ್ಯುಗ್ರ ಮಟ್ಟ ತಲುಪಿದಾಗ ಅದನ್ನು ಕ್ರೂರವಾಗಿ ದಮನಗೈದದ್ದು ಪರ್ವೆಜ್ ಮುಷರ್ರಫ್.  ಆತ ಪ್ರಸಿದ್ಧಿಗೆ ಬಂದದ್ದೇ ಘಟನೆಗಳಿಂದ.  ನಂತರ ಅಲ್ಲಿ ಇಸ್ಲಾಮಾಬಾದಿನ ಹಿಡಿತ ಮತ್ತಷ್ಟು ಬಿಗಿಯಾಯಿತು.  ಅಲ್ಲಿ ಪಾಕಿಸ್ತಾನೀ ಸೇನೆಯ ಕರ್ಮಕಾಂಡಗಳ ಬಗ್ಗೆ ನಮ್ಮ ಸುದ್ಧಿ ಮಾಧ್ಯಮಗಳು ಚಕಾರವೆತ್ತುವುದಿಲ್ಲ.  ಆದರೆ ಭಾರತದ ವಶದಲ್ಲಿರುವ ಕಾಶ್ಮೀರದಲ್ಲಾಗುವ ಘಟನೆಗಳ ಬಗ್ಗೆ ಮಾತ್ರ ಮಾಧ್ಯಮಗದು ಅತ್ಯುತ್ಸಾಹ!

ಕಾಶ್ಮೀರದ ಬಗ್ಗೆ ನಮ್ಮ ಸುದ್ಧಿಮಾಧ್ಯಮಗಳ ವರ್ತನೆಯನ್ನು ನೇರವಾಗಿದೇಶದ್ರೋಹ” ಎಂದೇ ಕರೆಯಬಹುದು.  ಕುರಿತಂತೆ ನನಗೆ ಮೊಟ್ಟಮೊದಲಿಗೆ ನೆನಪಾಗುವುದು ಇಪ್ಪತ್ತೈದು ವರ್ಷಗಳ ಹಿಂದೆ ೧೯೯೦ರ ಆದಿಯಲ್ಲಿ ಮುಂಬೈನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಅಂದಿನ ಗವರ್ನರ್ ಜಗ್‌‍ಮೋಹನ್‌‍ ಸಂದರ್ಶನ.  ಮುಸ್ಲಿಮರ ಬಗ್ಗೆ, ಕಾಶ್ಮೀರಿಗಳ ಬಗ್ಗೆ ಜಗ್‌‍ಮೋಹನ್‌‍ ಲಘು ಹಾಗೂ ಆಕ್ಷೇಪಾರ್ಹ ಹೇಳಿಕೆಗಳು ಸಂದರ್ಶನದಲ್ಲಿದ್ದವು.  ಕಣಿವೆಯಲ್ಲಿ ಆಗಷ್ಟೇ ತಲೆಯೆತ್ತಿದ್ದ ಭಯೋತ್ಪಾದನೆಯ ನಿಗ್ರಹದ ಬಗ್ಗೆ ವಿ. ಪಿ. ಸಿಂಗ್ ಸರಕಾರ ಮತ್ತು ಸೇನೆ ಕೈಗೊಂಡಿದ್ದ ಕಾರ್ಯಕ್ರಮಗಳ ಬಗ್ಗೆ ಹಲವಾರು ಅನುಮಾನಗಳನ್ನು ಸಂದರ್ಶನ ಸೃಷ್ಟಿಸಿತು.  ಭಯೋತ್ಪಾದಕರಿಗೆ ಮತ್ತು ಪಾಕಿಸ್ತಾನಕ್ಕೆ ಇದೊಂದು ಪ್ರಬಲ ಅಸ್ತ್ರವಾಯಿತು.  ಜಗ್ ಜಗ್ ಮೋಹನ್ ಕೊ ಭಾಗ್ ಭಾಗ್ ಮೋಹನ್ ಕರ್ ದೇಂಗೆ” ಎಂದು ಪಾಕ್ ಪ್ರಧಾನಿ ಬೆನಜೀರ್ ಭುಟ್ಟೋ ಅಬ್ಬರಿಸಿದರು.  ಜಗ್‌‍ಮೋಹನ್‌‍ ವಿರುದ್ಧ ದೇಶದಲ್ಲೇ ಅಸಮಾಧಾನ ಭುಗಿಲೆದ್ದಿತು.  ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರ ಅವರನ್ನು ಗವರ್ನರ್ ಸ್ಥಾನದಿಂದ ತೆಗೆದುಹಾಕಿತು.

ಆದರೆ ಕೆಲವೇ ದಿನಗಳಲ್ಲಿ ಹೊರಬಿದ್ದ ಸತ್ಯವೆಂದರೆ ಜಗ್‌‍ಮೋಹನ್ ಪತ್ರಿಕೆಗೆ ಅಥವಾ ಇನ್ನಾವುದೇ ಪತ್ರಿಕೆಗೆ ಯಾವ ಸಂದರ್ಶನವನ್ನೂ ನೀಡಿರಲಿಲ್ಲ.  ಪತ್ರಿಕೆ ಪ್ರಕಟಿಸಿದ್ದ ಇಡೀ ಸಂದರ್ಶನ ಕಪೋಲಕಲ್ಪಿತ.  ಸತ್ಯ ಹೊರಬರುವ ಹೊತ್ತಿಗೆ ಅನಾಹುತ ಘಟಿಸಿಹೋಗಿತ್ತು.  ಸರಕಾರ ಮತ್ತು ಭದ್ರತಾ ಪಡೆಗಳು ವಿನಾಕಾರಣ ಕಳಂಕ ಹೊತ್ತಿದ್ದವು, ಆಗಷ್ಟೇ ಮೊಳಕೆಯೊಡೆದಿದ್ದ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ದೇಶಕ್ಕೆ ನಿರ್ಣಾಯಕ ಹಿನ್ನಡೆಯಾಗಿತ್ತು.

                ನಂತರ ೧೯೯೫ರ ಬೇಸಗೆಯಲ್ಲಿ, ಚರಾರ್--ಶರೀಫ್ ಮಸೀದಿಗೆ ಬೆಂಕಿ ಬಿದ್ದ ವಿಷಯಕ್ಕೆ ಬರೋಣ.   ಘಟನೆಯ ಬಗ್ಗೆ ನಾನು ಮೊಟ್ಟಮೊದಲು ಕೇಳಿದ್ದು ರೇಡಿಯೋ ಪಾಕಿಸ್ತಾನ್ ವಾರ್ತೆಗಳಲ್ಲಿ.  ಭಾರತೀಯ ಸೇನೆ ಪವಿತ್ರ ಸ್ಥಳಕ್ಕೆ ಬೆಂಕಿಹಚ್ಚಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆಯೆಂದು ವಾರ್ತೆಗಳಲ್ಲಿ ಬಿತ್ತರಿಸಲಾಯಿತು.  ನಮ್ಮ ಇಂಗ್ಲಿಷ್ ಸುದ್ಧಿ ಮಾಧ್ಯಮಗಳು ಇದನ್ನೇ ಮತ್ತಷ್ಟು ದೊಡ್ಡದಾಗಿ ಹೇಳಿದವು.  ಆನಂತರ ಹೊರಬಂದ ಸತ್ಯವೆಂದರೆ ಕಳೆಗುಂದುತ್ತಿದ್ದ ಭಯೋತ್ಪಾದನೆಯನ್ನು ಕೆರಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಲ್ಲೆಬ್ಬಿಸಲೆಂದು ಪಾಕ್ ಪ್ರಚೋದಿತ ಉಗ್ರಗಾಮಿಗಳು ಮಸೀದಿಗೆ ಬೆಂಕಿಹಚ್ಚಿ ಅದನ್ನು ಸೇನೆಯ ತಲೆಗೆ ಕಟ್ಟಿದ್ದರು!  ಒಳಸಂಚಿನಂತೆ ಪಾಕಿಸ್ತಾನೀ ಸುದ್ಧಿಮಾಧ್ಯಮಗಳು ಭಾರತೀಯ ಸೇನೆಯ ವಿರುದ್ದ ಅಪಪ್ರಚಾರ ಆರಂಭಿಸಿದವು.  ಇಡೀ ಘಟನೆಯಲ್ಲಿ ಪಾಕಿಸ್ತಾನೀ ಸರಕಾರ, ಸೇನೆ, ಐಎಸ್‌‍, ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕಿಸ್ತಾನದ ಸರಕಾರೀ ಸುದ್ಧಿ ಮಾಧ್ಯಮಗಳು ಶಾಮೀಲಾಗಿದ್ದವು.  ಒಳಸಂಚಿಗೆ ನಮ್ಮ ಸುದ್ಧಿಮಾಧ್ಯಮಗಳೂ ಸೇರಿಕೊಂಡದ್ದು ಹೇಗೆ? ಯಾಕೆ?

                ತೀರಾ ಇತ್ತೀಚಿನ ಘಟನೆಗಳನ್ನೇ ಗಮನಿಸುವುದಾದರೆ ಎರಡು ವರ್ಷಗಳ ಹಿಂದೆ ಅಮರನಾಥ್ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಭುಗಿಲೆದ್ದ ಆಂದೋಲನವನ್ನು ಪರಿಶೀಲಿಸಬಹುದು.  ಆಗ ಪ್ರತ್ಯೇಕತಾವಾದೀ ನಾಯಕನೊಬ್ಬ ಸೇನೆಯ ಗುಂಡಿಗೆ ಬಲಿಯಾದ ಎಂಬ ಸುದ್ಧಿ ಮಾಧ್ಯಮಗಳಲ್ಲಿ ಕಾಳ್ಗಿಚಿನಂತೆ ಹಬ್ಬಿ ಮತ್ತಷ್ಟು ದೊಂಬಿ, ಬಂದ್‌‍ಗಳಿಗೆ ಕಾರಣವಾಯಿತು.  ಆನಂತರ ಹೊರಬಂದ ವಿಷಯವೆಂದರೆ ಆತ ಸತ್ತದ್ದು ಸೇನೆಯ ಗುಂಡಿನಿಂದಲ್ಲ, ಬದಲಾಗಿ ಅವನದೇ ಸಹಚರರು ಹಿಂದಿನಿಂದ ಹಾರಿಸಿದ ಗುಂಡಿನಿಂದ!  ಆಮೇಲೆ ಎಲ್ಲರೂ ಗಪ್‌‍ಚಿಪ್!  ಶೋಪಿಂಯಾದಲ್ಲಿ ಭದ್ರತಾ ಪಡೆಗಳು ಇಬ್ಬರು ಅತ್ತಿಗೆ-ನಾದಿನಿಯರನ್ನು ಮಾನಭಂಗಗೊಳಿಸಿ ಕೊಂದ ಆಪಾದನೆ ೨೦೦೯ರಲ್ಲಿ ಬಂದಾಗ ದೌರ್ಜನ್ಯವನ್ನು ಖಂಡಿಸಿ ಇಡೀ ಕಾಶ್ಮೀರ ಕಣಿವೆ ಭುಗಿಲೆದ್ದದ್ದೂ, ನಮ್ಮ ಸುದ್ಧಿಮಾಧ್ಯಮಗಳು ಇದನ್ನು ಚಪ್ಪರಿಸಿ ಚಪ್ಪರಿಸಿ ಸವಿದದ್ದೂ ನಿಮಗೆ ನೆನಪಿರಬಹುದು.  ಇಡೀ ಘಟನೆ ಕಟ್ಟುಕತೆ ಎಂಬ ಸುದ್ದಿ ಆನಂತರ ಹೊರಬಂತು.  ಮಹಿಳೆಯರು ಜೀವ ಕಳೆದುಕೊಂಡದ್ದು ಅಕಸ್ಮಾತ್ ನೀರಿಗೆ ಬಿದ್ದುದರಿಂದ, ಅದನ್ನು ಮಾನಭಂಗ ಮತ್ತು ಕೊಲೆ ಎಂದು ಹೇಳಿ `ಅಪರಾಧ'ವನ್ನು ಭದ್ರತಾಪಡೆಗಳ ತಲೆಗೆ ಕಟ್ಟಿ, ಇಡೀ ಪ್ರಕರಣವನ್ನು ಭಾರತ-ವಿರೋಧೀ ದಂಗೆಯಾಗಿ ಪರಿವರ್ತಿಸಲು ಶೋಪಿಂಯಾದ ವೈದ್ಯಾಧಿಕಾರಿಗಳು ಮತ್ತು ವಕೀಲರುಗಳು ಸಾಕ್ಷಾಧಾರಗಳನ್ನು ತಿರುಚಿದ್ದಾರೆ ಎಂದು ತನಿಖಾ ಆಯೋಗ ಹೇಳಿತು.  ಇಬ್ಬರಿಗೂ ಸಂಬಂಧಿಸಿದ ಪುರುಷ ಏಕಾಏಕಿ ಶ್ರೀಮಂತಿಕೆ ಪ್ರದರ್ಶಿಸತೊಡಗಿದ ಸೋಜಿಗದ ಕಾರಣವೂ ಹೊರಬಂತು.

                ಭದ್ರತಾಪಡೆಗಳ ಬಗ್ಗೆ ಸುಳ್ಳುಸುದ್ಧಿ ಹಬ್ಬಿಸಿ ಅಶಾಂತಿ ಉಂಟುಮಾಡುವುದರಿಂದ ಪ್ರತ್ಯೇಕತಾವಾದಿಗಳಿಗೆ, ಪಾಕಿಸ್ತಾನಕ್ಕೆ ಲಾಭವಿದೆ, ನಿಜ.  ಆದರೆ ಇದರಲ್ಲಿ ನಮ್ಮ ಸುದ್ಧಿಮಾಧ್ಯಮಗಳಿಗೆ ಯಾವ ಲಾಭವಿದೆ?  ಅವುಗಳ ಹಿಂದೆ ನಿಜವಾಗಿ ಇರುವವರು ಯಾರು?  ಹಿನ್ನೆಲೆಯಲ್ಲಿ, ೨೦೦೨ರ ಗುಜರಾತ್ ದಂಗೆಗಳ ಒಂದು ಮುಖವನ್ನು ಮಾತ್ರ ವರದಿ ಮಾಡುವಂತೆ ಪಶ್ಚಿಮ ಏಶಿಯಾದ ತೈಲಸಂಪನ್ನ ಶ್ರೀಮಂತ ದೇಶವೊಂದು ಭಾರತದ ಪತ್ರಕರ್ತೆಯೊಬ್ಬರಿಗೆ ಅರ್ಧ ಮಿಲಿಯನ್ ಡಾಲರ್ ನೀಡಿತೆನ್ನಲಾದ 'ಸುದ್ಧಿ' ಸತ್ಯಾಸತ್ಯತೆಯ ಪರಿಶೀಲನೆಯಿಂದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಕೋಮುಗಲಭೆಗಳ ಸಂಪೂರ್ಣ ಜವಾಬ್ದಾರಿಯನ್ನು ನರೇಂದ್ರ ಮೋದಿಯವರ ತಲೆಗೆ ಕಟ್ಟಿ ಅವರನ್ನು ಕೋಮುವಾದಿ, ನರಹಂತಕ ಎಂದು ವಿಶ್ವಾದ್ಯಂತ ಬಿಂಬಿಸಿದ್ದು ಕಾಂಗ್ರೆಸ್ ರಾಜಕಾರಣಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಒಂದಷ್ಟು ಭಾರತೀಯ ವಿಚಾರವಾದಿಗಳು.  ಇವರಿಗೆ ಅಳತೆಮೀರಿ ಪ್ರಚಾರ ಕೊಟ್ಟದ್ದು ಸುದ್ಧಿಮಾಧ್ಯಮ, ಮುಖ್ಯವಾಗಿ ಆಂಗ್ಲ ಸುದ್ಧಿಮಾಧ್ಯಮ.  ವಾಸ್ತವ ಇವರು ಬಿಂಬಿಸಿದ್ದಕ್ಕಿಂತ ಸಂಪೂರ್ಣ ವಿರುದ್ಧವಾಗಿತ್ತು ಎನ್ನುವುದನ್ನು ನಂತರ ತನಿಖಾ ಆಯೋಗಗಳು ಬಯಲು ಮಾಡಿದವು.  ಮಾಧ್ಯಮಗಳಲ್ಲಿ ಇದಕ್ಕೆಷ್ಟು ಪ್ರಚಾರ ಸಿಕ್ಕಿತು?

ಡಿಸೆಂಬರ್ ೧೩, ೨೦೦೧ರ ಸಂಸತ್ ಧಾಳಿಯ ನಂತರ ಎನ್‌‍ಡಿಏ ಸರಕಾರ ಜಾರಿಗೆ ತಂದ "ಪೋಟಾ" ಮುಸ್ಲಿಂ-ವಿರೋಧಿ ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳೂ, ಬುದ್ಧಿಜೀವಿಗಳೂ ಹುಯಿಲೆಬ್ಬಿಸಿದರು.  ತಮ್ಮ ಆಪಾದನೆಯ ಸಮರ್ಥನೆಗಾಗಿ ಪೋಟಾ ಕಾಯಿದೆಯಡಿಯಲ್ಲಿ ಬಂಧಿತರಾದವರಲ್ಲಿ ಬೇರೆಲ್ಲಾ ಧರ್ಮದವರಿಗಿಂತಲೂ ಮುಸ್ಲಿಮರು ಅಧಿಕವಾಗಿದ್ದಾರೆ ಎಂಬ ಅಂಕಿಅಂಶವನ್ನು ಎತ್ತಿಹಿಡಿದರು.  ಇದನ್ನೆಲ್ಲಾ ಹೇಳಲು ಇವರಿಗೆ ಮತ್ತೆಮತ್ತೆ ಅವಕಾಶ ಕೊಟ್ಟದ್ದು ಆಂಗ್ಲ ಸುದ್ಧಿಮಾಧ್ಯಮಗಳು.  ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.  ಹೀಗಿರುವಾಗ ಬಂಧಿತರಾದವರಲ್ಲೂ ಅವರೇ ಅಧಿಕವಾಗಿರುವುದು ಸಹಜವೇ ಆಗಿದೆ.  ವಿಷಯದಲ್ಲಿ ವಿವಿಧ ಧರ್ಮಗಳ ಜನಸಂಖ್ಯೆಗನುಗುಣವಾಗಿ ಶೇಕಡಾವಾರು ಮೀಸಲಾತಿಯನ್ನು ಅನುಸರಿಸಲಾಗುವುದಿಲ್ಲ.  ವಾಸ್ತವವನ್ನು ಮಾಧ್ಯಮ ಜನತೆಗೆ ತಿಳಿಸಲೇ ಇಲ್ಲ.  ತಾನು ಅಧಿಕಾರಕ್ಕೇರಿದಾಗ ಯುಪಿಏ ಸರಕಾರ ಫೋಟಾ ಇಲ್ಲದೆಯೂ ನಾವು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದು ಘೋಷಿಸಿತು.  ನಿಲುವು ಅದೆಷ್ಟು ಟೊಳ್ಳಿನದು ಎನ್ನುವುದನ್ನು ದೇಶ ನಂತರ ಮತ್ತೆಮತ್ತೆ ಕಂಡಿತು.  ಮಾಧ್ಯಮಗಳು ಇದರ ಬಗ್ಗೆ ಮಾತಾಡುತ್ತವೆಯೇ?

ನವೆಂಬರ್ 3, 2015