ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, September 11, 2014

ಟೋಕಿಯೋದಲ್ಲಿ ಮುಗ್ಗರಿಸಿದ ಮೋದಿ ಮ್ಯಾಜಿಕ್




  ತಮ್ಮ ಇತ್ತೀಚೆಗಿನ ಜಪಾನ್ ಭೇಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಡಿದ ಕೆಲವು ಮಾತುಗಳು, ಆ ಭೇಟಿಗೆ ಮೊದಲು ಮತ್ತು ನಂತರ ನವದೆಹಲಿಯಿಂದ ಹೊರಟ ಕೆಲವು ಹೇಳಿಕೆಗಳು ನೆರೆಯ ಚೀನಾ ಬಗ್ಗೆ ಪ್ರಸಕ್ತ ಕೇಂದ್ರ ಸರಕಾರಕ್ಕೆ ಸ್ಪಷ್ಟ ನಿಲುವಿಲ್ಲದಿರುವ ಚಿತ್ರಣ ನೀಡುತ್ತವೆ.  ಆಗಸ್ಟ್ 29ರಂದು ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಚೀನೀ ವಿದೇಶ ಮಂತ್ರಿ ವ್ಯಾಂಗ್ ಯಿ ಜತೆ ದೂರವಾಣಿಯಲ್ಲಿ ಮಾತಾಡಿ ಅಧ್ಯಕ್ಷ ಝೀ ಜಿನ್‍ಪಿಂಗ್ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ನೀಡಲಿರುವ ಭೇಟಿ ಅತ್ಯಂತ ಫಲಪ್ರದವಾಗುವಂತೆ ಮಾಡಲು ಅಗತ್ಯವಾದ ತಯಾರಿಗಳಲ್ಲಿ ಭಾರತ ತೊಡಗಿದೆ ಎಂದು ಆಶ್ವಾಸನೆ ನೀಡಿದರು.  ಮುಂದುವರೆದು ಅವರು ಅಧ್ಯಕ್ಷ ಝಿ ಅವರ ಭಾರತಪ್ರವಾಸಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಿರುವುದಾಗಿಯೂ, ಅವರು ಅಧ್ಯಕ್ಷರ ಜತೆಗೆ ಫಲಪ್ರದ ಮಾತುಕತೆಗಳನ್ನು ಎದುರು ಡುತ್ತಿರುವುದಾಗಿಯೂ ತಿಳಿಸಿದರು.  ಈ ಮಾತುಗಳ, ಆಶ್ವಾಸನೆಗಳ ಹಿಂದಿದ್ದದ್ದು ಮರುದಿನವಷ್ಟೇ ಆರಂಭವಾಗಲಿದ್ದ ಮೋದಿಯವರ ಜಪಾನ್ ಭೇಟಿ ಚೀನಾದಲ್ಲಿ ಉಂಟುಮಾಡಿದ್ದ ಊಹಾಪೋಹಗಳನ್ನು, ಅನುಮಾನಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿತ್ತೆನ್ನುವುದು ಮೇಲ್ನೋಟಕ್ಕೇ ಎದ್ದುಕಾಣುವ ಅಂಶ.  ಅದರಲ್ಲೂ, ಚೀನಾಗೆ ಹಿತವೆನಿಸುವ ಈ ಮಾತುಗಳನ್ನು ಸುಷ್ಮಾ ಸ್ವರಾಜ್ ಆಡಿದ್ದು  ರಶಿಯಾ-ಇಂಡಿಯಾ-ಚೀನಾ ತ್ರಿಪಕ್ಷೀಯ ಮಾತುಕತೆಗಳಿಗಾಗಿ ಚೀನಾದ ತಿಯಾನ್‍ಜಿನ್ ನಗರಕ್ಕೆ ತಾವು ನೀಡಬೇಕಾಗಿದ್ದ ಬೇಟಿಯನ್ನು ರದ್ದುಪಡಿಸಿದ ಕೆಲವೇ ದಿನಗಳಲ್ಲಿ.  ಈ ನಿಟ್ಟಿನಲ್ಲಿ, ಶ್ರೀಮತಿ ಸ್ವರಾಜ್ ಚೀನೀ ವಿದೇಶ ಮಂತ್ರಿಯವರ ಜತೆ ನಡೆಸಿದ ದೂರವಾಣಿ ಮಾತುಕತೆಯನ್ನು ತಪ್ಪನ್ನು ಸರಿಪಡಿಸುವ ಹೆಜ್ಜೆಯಂತೆ ಬೀಜಿಂಗ್ ಭಾವಿಸಿದರೆ ಅದು ಅಸಹಜವೇನೂ ಅಲ್ಲ. 


          ನಂತರದ ಮೋದಿಯವರ ಜಪಾನ್ ಭೇಟಿ ಹಲವು ವಿಷಯಗಳಲ್ಲಿ ಮಹತ್ವಪೂರ್ಣ.   “ಭಾರತದಲ್ಲಿ ನಿಮಗೆ  ಕಾದಿರುವುದು ರೆಡ್ ಕಾರ್ಪೆಟ್, ರೆಡ್ ಟೇಪ್ ಅಲ್ಲ” ಎಂದು ಜಪಾನೀ ಉದ್ಯಮಿಗಳನ್ನು ಉತ್ತೇಜಿಸಿದ ಮೋದಿ ತಮ್ಮ ಅಕರ್ಷಕ ಮಾತುಗಳಿಂದ ಮಕ್ಕಳೂ ಸೇರಿದಂತೆ ಜಪಾನೀಯರ ಮನ ಗೆದ್ದುಕೊಂಡರು.  ಜಪಾನೀ ಬುಲೆಟ್ ಟ್ರೇನ್, ಯುದ್ಧವಿಮಾನಗಳು ಭಾರತಕ್ಕೆ ಸರಬರಾಜಾಗುವ ಬಗ್ಗೆ, ಜಪಾನೀ ಸಹಕಾರದಿಂದ ನೂರು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಬಗ್ಗೆ, ಪವಿತ್ರ ಕ್ಷೇತ್ರ ವಾರಣಾನಿಯನ್ನು ಸಾವಿರ ಆಯಲಗಳ ನಗರ ಕ್ಯೋಟೊ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ- ಹೀಗೆ ಹಲವು ಒಪ್ಪಂದಗಳಿಗೆ ಈ ಭೇಟಿಯಲ್ಲಿ ಸಹಿ ಬಿತ್ತು.  ಬಹುಶಃ ಇದು ಇಲ್ಲಿಯವರೆಗೆ ಭಾರತೀಯ ಪ್ರಧಾನಿಯೊಬ್ಬರ ಅತ್ಯಂತ ಯಶಸ್ವಿ ಹಾಗೂ ಮಹತ್ವಪೂರ್ಣ ಜಪಾನ್ ಭೇಟಿ.
ಆದರೆ ಎಡವಟ್ಟಾದದ್ದು ಜಪಾನೀ ನೆಲದಲ್ಲಿ “ಚೀನಾ-ವಿರೋಧಿ”ಯೆಂದು ಅರ್ಥೈಸಬಹುದಾದ ಹೇಳಿಕೆಯೊಂದನ್ನು ಪ್ರಧಾನಿ ಮೋದಿ ನೀಡಿದಾಗ.  ಅಂತರರಾಷ್ಟ್ರೀಯ ರಂಗದಲ್ಲಿ ಧನಾತ್ಮಕವಾದ “ವಿಕಾಸವಾದ” ಮತ್ತು ಋಣಾತ್ಮಕವಾದ “ವಿಸ್ತಾರವಾದ”ಗಳ ಬಗ್ಗೆ ಅರ್ಥಪೂರ್ಣ ಮಾತುಗಳನ್ನಾಡಿದ ಪ್ರಧಾನಿಯವರು ಅಲ್ಲಿಗೇ ನಿಲ್ಲಿಸದೇ ಮುಂದುವರೆದು “...ಹದಿನೆಂಟನೆಯ ಶತಮಾನದ ವಿಚಾರಗಳನ್ನು ಹೊಂದಿದ, ಒತ್ತುವರಿಯಲ್ಲಿ ನಿರತರಾಗಿ ಇತರರ ಜಲಪ್ರದೇಶವನ್ನು ಅತಿಕ್ರಮಿಸುವವರನ್ನು ನಾವು ಕಾಣುತ್ತಿದ್ದೇವೆ” ಎಂದರು.  ಆನಂತರ ನವದೆಹಲಿಯಲ್ಲಿ ನಮ್ಮ ವಿದೇಶ ಮಂತ್ರಿಯವರಿಂದ ಅದೆಷ್ಟೇ ನಿರಾಕರಣೆಯ, ಸಮಜಾಯಿಷಿಯ ಮಾತುಗಳು ಬಂದರೂ ಮೋದಿಯವರ ಹೇಳಿಕೆ ನಿಶ್ಶಂಶಯವಾಗಿಯೂ ಚೀನಾವನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದು ಸರ್ವವಿದಿತ.
ಚೀನಾ ವಿಸ್ತಾರವಾದವನ್ನು ಅನುಸರಿಸುತ್ತಿದೆಯೆನ್ನುವುದು ನಿಜ.  ಪ್ರಶ್ನೆ ಅದಲ್ಲ.  ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ಜತೆಗಿನ ಚೀನಾದ ತಕರಾರಿನಲ್ಲಿ ಮೂರನೆಯ ದೇಶವಾದ, ಅದರಲ್ಲೂ ಜಪಾನ್ ಜತೆ ಯಾವುದೇ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರದ ಭಾರತ ಮೂಗು ತೂರಿಸುವುದು ಎಷ್ಟು ವ್ಯಾವಹಾರಿಕ ಎನ್ನುವುದು ನಾವು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆ.
ಮೋದಿ ಉತ್ಸಾಹೀ ಮಾತುಗಾರರು ನಿಜ. ಅವರ ಉತ್ಸಾಹ ಕೆಲವೊಮ್ಮೆ ಅನುಚಿತವೆನಿಸುವ ಹಂತಕ್ಕೂ ತಲುಪಿದ್ದನ್ನೂ ನೋಡಿದ್ದೇವೆ.  ದಶಕಕ್ಕೂ ಹಿಂದೆ ಚುನಾವಣೆಗಳ ಸಮಯದಲ್ಲೊಮ್ಮೆ ಅವರು ರಾಹುಲ್ ಗಾಂಧಿಯವರನ್ನುದ್ದೇಶಿಸಿ “ಹೈಬ್ರಿಡ್ ಕರು ಓಟು ಕೇಳಿಕೊಂಡು ಬಂದಿದೆ” ಎಂದು ನಗೆಯಾಡಿದ್ದರು.  ಅದರ ಅನುಚಿತತೆಯನ್ನು ತಕ್ಷಣ ಗುರುತಿಸಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಹ ಹೇಳಿಕೆಗಳಿಂದ ದೂರವಿರಬೇಕೆಂದು ಮೋದಿಯವರಿಗೆ ಎಚ್ಚರಿಸಿದ್ದರು.  ಈಗ ವಾಜಪೇಯಿ ಅಸ್ವಸ್ತತೆಯಿಂದಾಗಿ ಮೌನಿ.  ಗೆದ್ದೆತ್ತಿನ ಬಾಲ ಹಿಡಿಯುವ ನಮ್ಮ ಬಹುತೇಕ ಮಾತಿನ ಮಲ್ಲರೂ ತಂತಮ್ಮ ಲೆಕ್ಕಾಚಾರಗಳಿಂದಾಗಿ ಮೌನಿಗಳು.  ಹೀಗಾಗಿ ನಾವು ಸಾಮಾನ್ಯ ಜನತೆ ಮಾತಾಡಬೇಕಾಗಿದೆ.
ಪೂರ್ವ ಚೀನಾ ಸಮುದ್ರದಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್, ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಂ, ಮಲೇಶಿಯಾ, ಬ್ರುನೈ ಮತ್ತು ಪಿಲಿಫೀನ್ಸ್ ಜತೆ ಚೀನಾದ ಸಂಬಂಧಗಳನ್ನು ಏಕಾಏಕಿ ಕಳೆದೆರಡು ವರ್ಷಗಳಲ್ಲಿ ಸೂಕ್ಷ್ಮವಾಗಿಬಿಟ್ಟಿದೆ.  ಅದರಲ್ಲೂ ಸೆಂಕಾಕು ನಡುಗಡ್ಡೆಗಳ ಬಗ್ಗೆ ಅಕ್ಟೋಬರ್ 2012ರಿಂದೀಚೆಗೆ ಜಪಾನ್ ಮತ್ತು ಚೀನಾಗಳ ನಡುವೆ ಮಾತಿನ ಚಕಮಕಿ ಉಗ್ರವಾಗಿದೆ.  ಒಂದೆರಡು ಸಂದರ್ಭಗಳಲ್ಲಂತೂ ಇದು ಘರ್ಷಣೆಯ ವಾತಾವರಣವನ್ನು ಸೃಷ್ಟಿಸಿತ್ತು.  ದಕ್ಷಿಣ ಚೀನಾ ಸಮುದ್ರದಲ್ಲಿ ಪರಾಸೆಲ್ ಮತ್ತು ಸ್ಪ್ರಾಟ್ಲಿ ದ್ವೀಪಸ್ತೋಮಗಳ ಒಡೆತನ ಹಾಗೂ ಅಲ್ಲಿ ಸಮುದ್ರ ಗಡಿ ಬಗೆಗಿನ ಭಿನ್ನಮತಗಳಿಂದಾಗಿ ಆ ವಲಯದ ಬಹುತೇಕ ಎಲ್ಲ ದೇಶಗಳು ಚೀನಾವನ್ನು ಅನುಮಾನದಿಂದ, ಆತಂಕದಿಂದ ನೋಡುತ್ತಿವೆ.
ಇವೆಲ್ಲವೂ ವಾಸ್ತವ.  ಇದಾವುದನ್ನೂ ನಾವು ನಿರಾಕರಿಸಲಾಗುವುದಿಲ್ಲ.  ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಭಾರತವನ್ನು ದಕ್ಷಿಣ ಏಶಿಯಾದೊಳಗೇ ಕಟ್ಟಿಹಾಕುವ ಹಾಗೂ ನಮ್ಮ ಸುತ್ತಮುತ್ತ ನೆಲೆಗಳನ್ನು ಸ್ಥಾಪಿಸಿಕೊಂಡು ನಮ್ಮ ರಕ್ಷಣೆಗೆ ಕಂಟಕಪ್ರಾಯವಾಗುವ ಅದರ ಹುನ್ನಾರಗಳೂ ಕಟುವಾಸ್ತವ.  ಚೀನಾದ ಈ ನಿಲುವು ನಡೆಗಳು ನಮಗೆ ವಿನಾಶಕಾರಿಯಾಗದಂತೆ ನೋಡಿಕೊಳ್ಳುವ ಹಕ್ಕು ನಮಗಿದೆ, ನಮ್ಮ ಸುರಕ್ಷೆಗಾಗಿ ಎಲ್ಲ ಬಗೆಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಪೂರ್ಣ ಹಕ್ಕು ನಮ್ಮ ಸರಕಾರಕ್ಕಿದೆ.  ಆದರೆ ಜಪಾನೀ ನೆಲದಲ್ಲಿ ಚೀನಾದ ವಿರುದ್ಧ ಹೇಳಿಕೆ ನೀಡುವುದು ನಮ್ಮ ಸರಕಾರ ತನ್ನೀ ಹಕ್ಕನ್ನು ನಿರ್ವಹಿಸುವ ಸೂಕ್ತ ವಿಧಾನವಲ್ಲ ಎಂದು ವಿಷಾದದಿಂದ ಹೇಳಬೇಕಾಗಿದೆ.
ಮೊದಲಿಗೆ ಮೋದಿಯವರ ಆಯ್ಕೆಯನ್ನು ವಿಶ್ಲೇಷಿಸೋಣ.  ಏಳು ದಶಕಗಳ ಹಿಂದಿನ ಜಪಾನ್‍ಗೂ ಇಂದಿನ ಜಪಾನ್‍ಗೂ ಅಜಗಜಾಂತರ ವ್ಯತ್ಯಾಸವಿದೆ.   ಹಿಂದೊಮ್ಮೆ ಪ್ರಬಲ ಸೇನಾಶಕ್ತಿಯಾಗಿ ಚೀನಾವನ್ನು ನುಂಗಿ ನೀರು ಕುಡಿದಿದ್ದ, ಬಲಿಷ್ಟ ಅಮೆರಿಕಾ ಮತ್ತು ಬ್ರಿಟನ್‍ಗಳನ್ನೇ ನಡುಗಿಸಿದ್ದ, ನಮ್ಮ ಪೂರ್ವದ ಬಾಗಿಲನ್ನು ಮುರಿದು ನಾಗಾಲ್ಯಾಂಡ್‍ನ ದಿಮಾಪುರ ಪ್ರವೇಶಿಸಿದ್ದ ಜಪಾನ್ ಈಗ ಒಂದು ಆರ್ಥಿಕ ಹಾಗೂ ವೈಜ್ಞಾನಿಕ ಶಕ್ತಿ ಮಾತ್ರ.   ಅದರ ಸೇನಾಶಕ್ತಿ ಸೀಮಿತ.  ಎರಡನೆಯ ಮಹಾಯುದ್ಧದಿಂದೀಚೆಗೆ ಅದರ ರಕ್ಷಣೆ ನಿಂತಿರುವುದು ಅಮೆರಿಕಾದ ಬೆಂಬಲದ ಮೇಲೆ.  ಈಗೊಮ್ಮೆ ಅಮೆರಿಕಾ ಕೈಬಿಟ್ಟರೆ ಚೀನಾ ಮುಂದೆ ಜಪಾನ್ ದಮ್ಮಯ್ಯಗುಡ್ಡೆ ಹಾಕಬೇಕಾಗುವುದು ನಿಶ್ಚಿತ.  ಹೀಗಾಗಿ, ಜಪಾನ್‍ನಿಂದ ನಮಗೇನು ಸಿಗಬಹುದೋ ಅದನ್ನಷ್ಟೇ ಗಮನಿಸಿ ಉಳಿದ ವಿಚಾರಗಳನ್ನು ಬದಿಗಿಡುವುದರಲ್ಲಿ ವಿವೇಕವಿದೆ.  ವೈಜ್ಞಾನಿಕ, ತಾಂತ್ರಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಜಪಾನ್ ಮಹತ್ವಪೂರ್ಣ ಸಹಯೋಗಿಯಾಗಬಲ್ಲುದು.  ರಕ್ಷಣಾ ಕ್ಷೇತ್ರದಲ್ಲಲ್ಲ.
ಈಗಿನ ಭೌಗೋಳಿಕ ಮತ್ತು ಸಾಮರಿಕ ವಾಸ್ತವಗಳು ಹೇಗಿವೆಯೆಂದರೆ ಚೀನಾ ಮತ್ತು ಜಪಾನ್‍ಗಳ ನಡುವೆ ಪೂರ್ವ ಚೀನಾ ಸಮುದ್ರದಲ್ಲಿ ಘರ್ಷಣೆ ಆರಂಭವಾದರೆ ಜಪಾನ್‍ಗೆ ಯಾವ ಬಗೆಯಲ್ಲೂ ಸಹಕಾರ ನೀಡಲು ಭಾರತಕ್ಕೆ ಸಾಧ್ಯವಾಗುವುದಿಲ್ಲ.  ಹಾಗೆಯೇ ಹಿಮಾಲಯದಲ್ಲಿ ನಮ್ಮ ವಿರುದ್ಧ ಚೀನಾ ಯುದ್ಧಕ್ಕೆ ಮುಂದಾದರೆ ನಮ್ಮ ಸಹಕಾರಕ್ಕೆಂದೂ ಜಪಾನ್ ಬರಲಾಗದು.  ಒಂದುವೇಳೆ ಏಕಕಾದಲ್ಲಿ ಜಪಾನ್ ಮತ್ತು ಭಾರತಗಳೆರಡೂ ಚೀನಾ ವಿರುದ್ಧ ಆಕ್ರಮಣವೆಸಗಿದರೆ ಎರಡನ್ನೂ ಸಮರ್ಥವಾಗಿ ಎದುರಿಸುವ ಸೇನಾಸಾಮರ್ಥ್ಯ ಚೀನಾಕ್ಕಿದೆಯೆಂಬ ವಾಸ್ತವವನ್ನು ನಾವೆಂದೂ ಕಡೆಗಣಿಸಬಾರದು.  ಈ ವಾಸ್ತವದ ಅರಿವು ಜಪಾನಿಗಿದೆ.  ಹೀಗಾಗಿಯೇ ಮೋದಿಯವರ ಚೀನಾ ವಿರುದ್ಧದ ಹೇಳಿಕೆಗೆ ಪ್ರಧಾನಿ ಶಿಂಝೋ ಅಬೆ ಬಹಿರಂಗವಾಗಿ ದನಿಗೂಡಿಸಲಿಲ್ಲ.   ರಾಜತಂತ್ರ (Diplomacy) ಅಂದರೆ ಅದು.
ಜಪಾನೀ ನೆಲದಲ್ಲಿ ನಿಂತು ಚೀನಾ-ಜಪಾನ್ ವ್ಯವಹಾರದಲ್ಲಿ ಜಪಾನ್ ಪರ ಹೇಳಿಕೆ ನೀಡಿದುದರಿಂದಾಗಿ ತೆರೆಯ ಹಿಂದೆ ಭಾರತ ಮತ್ತು ಜಪಾನ್‍ಗಳ ನಡುವೆ ಚೀನಾ ವಿರುದ್ಧ ಸಾಮರಿಕ ಸಹಯೋಗ ಅಸ್ತಿತ್ವದಲ್ಲಿರಬಹುದೆಂಬ ಅನುಮಾನ ಚೀನೀ ನಾಯಕರಲ್ಲಿ ಮೂಡಲು ಅವಕಾಶವಾಗಿದೆ.  ಹಿಂದೆ ಇಂಥದೇ ತಪ್ಪನ್ನು ಜಾರ್ಜ್ ಫರ್ನಾಡೀಸ್ ಮಾಡಿದ್ದರು.  ಮೇ 1998ರ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗಳ ನಂತರ ಆಗ ರಕ್ಷಣಾಮಂತ್ರಿಯಾಗಿದ್ದ ಫರ್ನಾಡೀಸ್ ನಮ್ಮ ಅಣ್ವಸ್ತ್ರಗಳು ಚೀನಾ ವಿರುದ್ಧ ಎಂದು ಬಹಿರಂಗವಾಗಿ ಘೋಷಿಸಿದರು.  ಸರಕಾರದ ರಹಸ್ಯ ನೀತಿಯಾಗಬೇಕಾಗಿದ್ದ ಇದು ಹೀಗೆ ಢಾಣಾಢಂಗುರವಾಯಿತು.  ಪರಿಣಾಮ?  ನಮ್ಮ ವಿರುದ್ಧ ಚೀನಾ ತನ್ನ ಅಣುಸಿಡಿತಲೆಗಳನ್ನೊಳಗೊಂಡ ಕ್ಷಿಪಣಿಗಳನ್ನು ಹೆಚ್ಚುಹೆಚ್ಚಾಗಿ ಟಿಬೆಟ್‍ನಲ್ಲಿ ಸಜ್ಜುಗೊಳಿಸತೊಡಗಿತು.  ಹಿಮಾಲಯ ವಿಭಾಗದಲ್ಲಿ ತನ್ನ ಸೇನಾ ಸ್ಥಿತಿಯನ್ನು ಗಣನೀಯವಾಗಿ ವೃದ್ಧಿಸಿಕೊಳ್ಳುವುದರ ಜತೆಗೆ ಹಿಂದೂಮಹಾಸಾಗರದಲ್ಲಿ ನೆಲೆಗಳ ಹುಡುಕಾಟವನ್ನು ತೀವ್ರಗೊಳಿಸಿತು.
ಈಗಲೂ ಚೀನಾದಿಂದ ಅಂತಹದೇ ಕ್ರಮವನ್ನು ನಿರೀಕ್ಷಿಸಬಹುದು.  ಏಕಕಾಲದಲ್ಲಿ ಅದು ತನ್ನ ಸೇನಾಸಾಮರ್ಥ್ಯವನ್ನು ಹಿಮಾಲಯ ಹಾಗೂ ಪೂರ್ವ ಚೀನಾ ಸಮುದ್ರಗಳೆರಡರಲ್ಲೂ ಗಣನೀಯವಾಗಿ ವೃದ್ಧಿಸಿಕೊಳ್ಳಬಹುದು.  ಅಗತ್ಯವಾದಷ್ಟು ವೃದ್ಧಿಯಾದ ನಂತರ ಅದರ ಹುಮ್ಮಸ್ಸೂ ಏರಬಹುದು.  ಭಾರತ ಮತ್ತು ಜಪಾನ್ ನಡುವೆ ಸಾಮರಿಕ ಸಹಯೋಗ ಅಸಾಧ್ಯ ಎಂದರಿತ ಅದು ತಾನೇ ಉತ್ಸಾಹದಿಂದ ಏಕಪಕ್ಷೀಯ ನಿರ್ಧಾರಗಳಿಗೆ ಮುಂದಾಗಬಹುದು.  ಅಗ ಹಾನಿಯಾಗುವುದು ಭಾರತ ಮತ್ತು ಜಪಾನ್‍ಗಳಿಗೆ.  ಇದು ಬೇಕಿತ್ತೇ?
ಮೋದಿಯವರು ಚೀನಾವನ್ನು ಸಂದೇಹಿಸುವುದು ತಪ್ಪು ಎಂದು ನನ್ನ ಮಾತಿನ ಅರ್ಥವಲ್ಲ.  ಪ್ರತಿಯೊಬ್ಬ ಭಾರತೀಯ ನಾಯಕನೂ ಚೀನಾ ಬಗ್ಗೆ ಎಚ್ಚರಿಕೆಯಿಂದಿರಲೇಬೇಕು.  ಆದರೆ ಅದನ್ನು ಬಹಿರಂಗಗೊಳಿಸಬೇಕೇ ಬೇಡವೇ, ಬಹಿರಂಗಗೊಳಿಸುವುದಾದರೆ ಹೇಗೆ, ಎಲ್ಲಿ, ಯಾರ ಮುಂದೆ ಎಂಬ ಅರಿವನ್ನು ಹೊಂದಿರಬೇಕು.  ಮತ್ತು, “ಆಡದೇ ಮಾಡುವವನು ರೂಢಿಯೊಳಗುತ್ತಮನು” ಎಂಬ ಮುತ್ತಿನಂತಹ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
ಹಾಗಿದ್ದರೆ ಚೀನಾ ವಿರುದ್ಧ “ಮೌನವಾಗಿ” ನಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮಾರ್ಗಗಳೇನು?
ಇಲ್ಲಿಯವರೆಗೂ ಭಾರತವನ್ನು ಕಾಡಿದ ಭಯೋತ್ಪಾದನೆ ಈಗ ಭಾರತಕ್ಕೆ ಅನುಕೂಲವಾಗಿ ಬದಲಾಗುತ್ತಿದೆ ಮತ್ತು ಅದೀಗ ಪಾಕಿಸ್ತಾನವನ್ನು ಕಾಡುತ್ತಿದೆ.  ಪಾಕಿಸ್ತಾನ ಅಶಾಂತಿಯಲ್ಲಿ ಬೆಂದಷ್ಟೂ ಅದು ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರ ತಲುಪುವ  ಚೀನಿ ಯೋಜನೆಗಳಿಗೆ ಹೊಡೆತ ನೀಡುತ್ತದೆ.  ಪಾಕಿಸ್ತಾನಕ್ಕೆ ಚೀನೀಯರ ಬೆಂಬಲ ಹೆಚ್ಚಿದಷ್ಟೂ ತಾಲಿಬಾನಿಗಳ ಹತಾಷ ಆಕ್ರೋಷ ಚೀನಾದತ್ತ ತಿರುಗಿ ಪಶ್ಚಿಮ ಚೀನಾದ ಮುಸ್ಲಿಂ ಉಯ್ಘರ್ ಝಿನ್‍ಝಿಯಾಂಗ್ ಪ್ರಾಂತ್ಯ ಹೊತ್ತಿ ಉರಿಯತೊಡಗುತ್ತದೆ.  ಪರಿಣಾಮವಾಗಿ ಚೀನೀಯರು ಅರಬ್ಬೀ ಸಮುದ್ರವನ್ನೂ, ಪಾಕಿಸ್ತಾನವನ್ನೂ ಮರೆತು ಉಯ್ಘರ್ ಪ್ರಾಂತ್ಯವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೆಣಗಬೇಕಾಗುತ್ತದೆ.
ತಾಲಿಬಾನ್ ಭಯೋತ್ಪಾದನೆ ತನಗೆ ಮತ್ತಷ್ಟು ಅನುಕೂಲವಾಗಲು ಭಾರತ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಬೇಕು.  ಸಧ್ಯಕ್ಕೆ ಅಲ್ಲಿ ಶಾಂತಿ ಮರಳಿದೆ.  ಅದು ಕದಡಿದಷ್ಟೂ ತಾಲಿಬಾನ್‍ನ ಭಯೋತ್ಪಾದಕ ರೆಡಾರ್‍ ಸ್ಕ್ರೀನ್‍ನಲ್ಲಿ ಭಾರತವೂ ಮತ್ತೆ ಸ್ಥಾನ ಪಡೆಯುತ್ತದೆ.
ಇದೆಲ್ಲದರ ಜತೆ, ಸಾಮರಿಕವಾಗಿ ನಮಗೆ ಅನುಕೂಲವಾಗಬಲ್ಲ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಜತೆ ರಕ್ಷಣಾ ಮತ್ತು ಸಾಮರಿಕ ಸಹಯೋಗಕ್ಕೆ ನಮ್ಮ ಸರಕಾರ ಮುಂದಾಗಬೇಕು.
ಮೋದಿಯವರ ಟೋಕಿಯೋ ಹೇಳಿಕೆ ಮತ್ತು “ಸ್ಕಾಟ್‍ಲೆಂಡ್‍ನ ಸ್ವಾತಂತ್ರಕ್ಕೆ ನಮ್ಮ ಬೆಂಬಲವಿದೆ” ಎಂದು ಸೋಮವಾರ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ನೀಡಿದ ಹೇಳಿಕೆ ಎತ್ತಿ ತೋರುವುದೇನೆಂದರೆ ಮೋದಿ ಸರಕಾರಕ್ಕೆ ವಿದೇಶವ್ಯವಹಾರಗಳಿಗೆ ಸಂಬಂಧಿಸಿದಂತೆ ಪರಿಣಿತ ಸಲಹೆಗಾರರಿಲ್ಲ ಎನ್ನುವುದನ್ನು.  ಆಯಾ ದಿನದ ಹೆಡ್‍ಲೈನ್‍ಗಳ ಮೇಲೆ ಕಣ್ಣಾಡಿಸಿ ಸಮರ್ಥ ಸಲಹೆಗಾರರಾಗಲು ಸಾಧ್ಯವಿಲ್ಲ.  ಅದಕ್ಕೆ ಇತಿಹಾಸದ, ವರ್ತಮಾನದ, ಭೂಗೋಳದ ಅಳ ಅರಿವಿನ ಅಗತ್ಯವಿದೆ.

Tuesday, September 2, 2014

ಅನಂತ ವಿಚಾರ: ‘ಸಂಸ್ಕಾರ’ದಿಂದ ಅಂತ್ಯಸಂಸ್ಕಾರದವರೆಗೆ


          ಕಾರ್ಲ್ ಮಾರ್ಕ್ಸ್ ಬಗ್ಗೆ ಒಂದು ಮಾತಿದೆ: “ಪ್ರಪಂಚದ ಅರ್ಧದಷ್ಟು ಜನ ಮಾರ್ಕ್ಸ್‍ನನ್ನು ಇಷ್ಟಪಟ್ಟರೆ ಇನ್ನರ್ಧದಷ್ಟು ಜನ ಇಷ್ಟಪಡುವುದಿಲ್ಲ.”  ಇದೇ ಮಾತನ್ನು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಯು. ಆರ್. ಅನಂತಮೂರ್ತಿಯವರ ಬಗ್ಗೆಯೂ ಹೇಳಬಹುದು.  “ಅರ್ಧದಷ್ಟು ಕನ್ನಡಿಗರು ಅನಂತಮೂರ್ತಿಯವರನ್ನು ಇಷ್ಟಪಟ್ಟರೆ ಇನ್ನರ್ಧ ಇಷ್ಟಪಡುವುದಿಲ್ಲ.”
          ಸರಿಸುಮಾರು ಆರು ದಶಕಗಳವರೆಗೆ ಕನ್ನಡ ಸಾಂಸ್ಕೃತಿಕ ಲೋಕದ ಜತೆ ಆಸ್ಥೆಯಿಂದ, ಉತ್ಸಾಹದಿಂದ ಸಂವಾದಿಸಿದ, ಕನ್ನಡ ಮನಸ್ಸುಗಳನ್ನು ತಮ್ಮ ಮಾತಿನಿಂದ ಮಂತ್ರಮುಗ್ಧಗೊಳಿಸಿದ, ಚಿಂತನೆಗಳಿಂದ ಜಾಗೃತಗೊಳಿಸಿದ, ಕೆಲವೊಂದು ನಡೆನುಡಿಗಳಿಂದ ವಿಚಲಿತಗೊಳಿಸಿದ ಅನಂತಮೂರ್ತಿಯವರು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಷ್ಟೇ ಸಂಖ್ಯೆಯಲ್ಲಿ ವಿರೋಧಿಗಳನ್ನೂ ಸೃಷ್ಟಿಸಿಕೊಂಡರು.  ಇಷ್ಟಾಗಿಯೂ, ಅವರನ್ನು ಇಷ್ಟಪಡದಿದ್ದರೂ ನಿರ್ಲಕ್ಷಿಸಲಂತೂ ಸಾಧ್ಯವಿಲ್ಲ ಎನ್ನುವ ಮಾತು ಕ್ಲೀಷೆಯಾದರೂ ಇಲ್ಲಿ ಉಲ್ಲೇಖನೀಯ.  ಅಂತಹ ಅನಂತಮೂರ್ತಿಯವರು ಭೌತಿಕವಾಗಿ ಈಗ ನಮ್ಮ ನಡುವೆ ಇಲ್ಲ ಎನ್ನುವುದು ಒಪ್ಪಿಕೊಳ್ಳಲೇಬೇಕಾದ ಕಹಿಸತ್ಯ.
          ಅನಂತಮೂರ್ತಿಯವರ ಬಗೆಗಿನ ಚರ್ಚೆಯನ್ನು ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದೊಂದಿಗೇ ಪ್ರಾರಂಭಿಸೋಣ.  ಮಾಧ್ವ ಬ್ರಾಹ್ಮಣ ಸಂಪ್ರದಾಯಕ್ಕನುಗುಣವಾಗಿ ಜರುಗಿದ ಅಂತ್ಯಕ್ರಿಯೆ ಹೆಚ್ಚಿನವರಲ್ಲಿ ಅಚ್ಚರಿ ಹಾಗೂ ಬೇಸರವನ್ನುಂಟುಮಾಡಿದ್ದು ನಿಜ.  ಈ ಬಗೆಯ ಅಂತ್ಯಸಂಸ್ಕಾರವನ್ನು (ಕನ್ನಡ ದೈನಿಕವೊಂದರಲ್ಲಿ ವರದಿಯಾದಂತೆ) ಅವರೇ ಬಯಸಿದ್ದರೆಂಬ ಮಾತಂತೂ ಅವರ ಕಟ್ಟಾ ಅಭಿಮಾನಿಗಳನೇಕರಲ್ಲಿ ನಿರಾಸೆಯನ್ನುಂಟುಮಾಡಿದ್ದೂ ನಿಜ.
          ಆದರೆ ಯಾವ ಪೂರ್ವಾಗ್ರಹವೂ ಇಲ್ಲದೇ ಅನಂತಮೂರ್ತಿಯವರ ಬದುಕಿನ ಅವಲೋಕನ ಮಾಡಿದವರಿಗೆ ಈ ಅಂತ್ಯಕ್ರಿಯಾವಿಧಾನ ಅಚ್ಚರಿಯನ್ನಾಗಲೀ, ಬೇಸರವನ್ನಾಗಲೀ ಉಂಟುಮಾಡುವುದಿಲ್ಲ.  ನಿರಾಸೆಯ ಕಾರಣವಂತೂ ಇಲ್ಲವೇ ಇಲ್ಲ.  ಗೃಹಪ್ರವೇಶವೇ ಇರಲಿ, ಪುತ್ರನ ಉಪನಯನವೇ ಇರಲಿ, ತಂದೆಯವರ ಶ್ರಾದ್ಧವೇ ಇರಲಿ, ಪುತ್ರಿಯ ತುಲಾಭಾರವೇ ಇರಲಿ ಮೂರ್ತಿಯವರು ಸಂಪ್ರದಾಯಕ್ಕನುಗುಣವಾಗಿಯೇ ಮಾಡಿದ್ದಾರೆ.  ಅದನ್ನವರು ಯಾರಿದಂದಲೂ ಮುಚ್ಚಿಟ್ಟಿಲ್ಲ.  ಅದರ ಮುಂದುವರಿಕೆಯಾಗಿಯೇ ಅವರ ಅಂತ್ಯಸಂಸ್ಕಾರವೂ ಸಂಪ್ರದಾಯಕ್ಕನುಗುಣವಾಗಿಯೇ ನಡೆದಿದೆ.  ಆದರೂ ಅವರ ಅಭಿಮಾನಿಗಳ ನಿರಾಸೆಗೆ ಕಾರಣವೇನು ಎಂದರೆ ಸಿಗುವ ಉತ್ತರ- ಅನಂತಮೂರ್ತಿಯವರನ್ನು ಅವರ ವಿರೋಧಿಗಳಷ್ಟೇ ಅಭಿಮಾನಿಗಳೂ ಅಪಾರ್ಥ ಮಾಡಿಕೊಂಡಿದ್ದಾರೆ ಎನ್ನುವ ದುರಂತ ಸತ್ಯ.
          ಅನಂತಮೂರ್ತಿಯವರ ಅಭಿಮಾನಿವರ್ಗ ಸೃಷ್ಟಿಯಾದದ್ದು ಮೂಲತಃ ಅವರ ತರಗತಿಗಳಲ್ಲಿ ಮತ್ತು ಇಂಗ್ಲಿಷ್ ಬೋಧಕವರ್ಗದಲ್ಲಿ.  ಅರವತ್ತರ ದಶಕದಲ್ಲಿ ಸಮಾನತೆಯ, ಸಮಾಜವಾದದ ಗಾಳಿ ಬಲವಾಗಿ ಬೀಸುತ್ತಿದ್ದ ದಿನಗಳಲ್ಲಿ ಹಾಗೂ ಎಪ್ಪತ್ತರ ದಶಕದಲ್ಲಿ ಜಾತಿ ವಿನಾಶ, ಬಂಡಾಯ ಮುಂತಾದ ಚಳುವಳಿಗಳು ಯುವಜನತೆಯನ್ನು ಉದ್ರೇಕಿಸುತ್ತಿದ್ದ ದಿನಗಳಲ್ಲಿ ಈ ಎಲ್ಲಾ ‘ಇಸಂ’ಗಳಿಗೆ ಚಳುವಳಿಗಳಿಗೆ ಸ್ಪೂರ್ತಿದಾಯವಾಗಿದ್ದ ಪಶ್ಚಿಮದ ಚಿಂತನೆಗಳನ್ನು ಅಕರ್ಷಕ ಶೈಲಿಯಲ್ಲಿ ಬೋಧಿಸುತ್ತಿದ್ದ ಅನಂತಮೂರ್ತಿಯವರು ಏಕಾಏಕಿ ಐಕಾನ್ ಆಗಿಬಿಟ್ಟರು.  ಅಂತರ್ಧರ್ಮೀಯ ವಿವಾಹದ ಹಾಗೂ ಬ್ರಾಹ್ಮಣ ಸಂಪ್ರದಾಯ ವಿರೋಧಿ ಸಾಹಿತ್ಯ ರಚನೆಯ ಹಿನ್ನೆಲೆಯಿದ್ದ ಮೂರ್ತಿಯವರನ್ನು “ಬ್ರಾಹ್ಮಣ ವಿರೋಧಿ” ಎಂದು ಹೆಚ್ಚಿನವರು ಹಣೆಪಟ್ಟಿ ಹಚ್ಚಿಬಿಟ್ಟರು.  ಮೂರ್ತಿಯವರ ಬದುಕಿನ ವಾಸ್ತವ ಬೇರೆಯೇ ಆಗಿತ್ತು ಎನ್ನುವುದನ್ನು ಗಮನಿಸುವ ತಾಳ್ಮೆ ಆತುರಗಾರ ಶಿಷ್ಯಾಭಿಮಾನಿಗಳಲ್ಲಿರಲಿಲ್ಲ.
          ಆರ್ದ್ರ ಹೃದಯದ ಸ್ನೇಹಜೀವಿ ಅನಂತಮೂರ್ತಿ ತಮ್ಮನ್ನು ಪ್ರೀತಿಸುವ ಯಾರನ್ನೇ ಆಗಲಿ ಪ್ರೀತಿಸಬಲ್ಲವರಾಗಿದ್ದರು.  ಶ್ರೀಮತಿ ಎಸ್ತರ್ ಅನಂತಮೂರ್ತಿಯವರು ಕ್ರಿಶ್ಚಿಯನ್ ಆಗಿದ್ದದ್ದೊಂದು ಅಕಸ್ಮಿಕ ಅಷ್ಟೇ.  ಅವರು ಸಂಪ್ರದಾಯಸ್ಥ ಬ್ರಾಹ್ಮಣ ಕನ್ಯೆಯಾಗಿದ್ದರೂ ಮೂರ್ತಿಯವರು ಅವರಿಗೆ ನಿಷ್ಟರಾಗಿರುತ್ತಿದ್ದರು.  ಆದರೆ ಎಸ್ತರ್ ಅವರ ಜತೆಗಿನ ವಿವಾಹವನ್ನು ಕ್ರಾಂತಿಕಾರಕ ಎಂದು ಅವರ ಅಭಿಮಾನಿಗಳು ತಿಳಿದು ಕ್ರಾಂತಿನಾಯಕನ ಪೀಠದಲ್ಲಿ ಮೂರ್ತಿಯವರನ್ನು ಪ್ರತಿಷ್ಟಾಪಿಸಿಬಿಟ್ಟರು.  ನಂತರದ ವರ್ಷಗಳಲ್ಲಿ ಹಲವಾರು ಬ್ರಾಹ್ಮಣ ಸಂಪ್ರದಾಯದ ಕಾರ್ಯಕ್ರಮಗಳನ್ನು ಮೂರ್ತಿಯವರು ತಮ್ಮ ಮನೆಯಲ್ಲೇ ಹಮ್ಮಿಕೊಂಡು ತಮ್ಮ ಆಸ್ತಿಕತೆಯ ಪರಿಚಯ ಮಾಡಿಕೊಟ್ಟರೂ ಅವರ ಅಭಿಮಾನಿಗಳು ಸಂಪ್ರದಾಯವಿರೋಧಿ ಕ್ರಾಂತಿನಾಯಕನ ಪಟ್ಟದಿಂದ ಮೂರ್ತಿಯವರನ್ನು ಕೆಳಗಿಳಿಸಲು ಸಿದ್ಧರಾಗಿರಲಿಲ್ಲ.
          ಇತ್ತೀಚಿನ ವರ್ಷಗಳಲ್ಲಿ ಮೂರ್ತಿಯವರ ಆಸ್ತಿಕತೆ ಹಲವು ಬಗೆಯಲ್ಲಿ ಪ್ರಕಟವಾಗುತ್ತಲೇ ಇತ್ತು.  ಎರಡು ವರ್ಷಗಳ ಹಿಂದೆ ಉಡುಪಿಗೆ ಭೇಟಿ ನೀಡಿದ್ದಾಗ ತಮ್ಮ ಹಿರಿಯರು ಪೂಜಿಸುತ್ತಿದ್ದ ದೇವಾಲಯಕ್ಕೆ ಹೋಗಿಬಂದಿದ್ದರು.  ಅಲ್ಲಿ ತಮಗೆ ಶಾಂತಿ ದೊರೆಯಿತೆಂದು ಸಾರ್ವಜನಿಕವಾಗಿ ಹೇಳಿದ್ದರು.  ಅದೇ ಪ್ರಸಂಗದಲ್ಲಿ, ತಾವು ಧಾರ್ಮಿಕತೆಯ ವಿರೋಧಿ ಅಲ್ಲವೆಂದು ಘಂಟಾಘೋಷವಾಗಿ ಸಾರಿದ್ದರು.
          ಹಾಗಿದ್ದರೆ ಬ್ರಾಹ್ಮಣ ಸಂಪ್ರದಾಯಗಳನ್ನು ಪಾಲಿಸಿದ ಮೂರ್ತಿಯವರು ವಿರೋಧಿಸಿದ್ದಾದರೂ ಏನನ್ನು?  ಉತ್ತರ ಸ್ಪಷ್ಟ.  ಅವರು ವಿರೋಧಿಸಿದ್ದು ಜನವಿರೋಧಿ ಸಂಪ್ರದಾಯಗಳನ್ನು, ಮಾನವತಾವಿರೋಧಿ ನೇಮನಿಷ್ಟೆಗಳನ್ನು, ಮೇಲುಕೀಳೆಂಬ ತಾರತಮ್ಯವನ್ನು, ಅಸ್ಪೃಶ್ಯತೆಯನ್ನು, ಜಾತಿ ವರ್ಗಗಳನ್ನು.  ಈ ಮನೋಭಾವ ಬಾಲ್ಯದಲ್ಲಿಯೇ ಅವರಲ್ಲಿ ಮೊಳಕೆಯೊಡೆದಿತ್ತು.  ಶಾಲಾವಿದ್ಯಾರ್ಥಿಯಾಗಿದ್ದಾಗಲೇ ಗೆಳೆಯರ ಜತೆಗೂಡಿ ಅವರು “ತರಂಗಿಣಿ” ಎಂಬ ಕೈಬರಹದ ಪತ್ರಿಕೆಯನ್ನು ಹೊರತರುತ್ತಿದ್ದರು.  ಅಲ್ಲಿ ಪ್ರಕಟವಾದ ಅವರ ಮೊಟ್ಟಮೊದಲ ಕಥೆಯ ವಸ್ತುವೇ ಜಾತಿವಿನಾಶ.  ಈ ಧ್ಯೇಯವನ್ನೇ ಅವರ ಬದುಕಿನುದ್ದಕ್ಕೂ ಕಾಣಬಹುದು.  ಅವರು ಬಯಸಿದ್ದು, ಪ್ರತಿಪಾದಿಸಿದ್ದು ಸಮಾನತೆಯ ತಳಹದಿಯ ಮೇಲೆ ನಿರ್ಮಿತವಾದ ಸಮಾಜವನ್ನು.  ವ್ಯಕ್ತಿಯೊಬ್ಬನನ್ನು ಅವರು ಕಾಣಬಯಸಿದ್ದು ಆತ್ಮಗೌರವವುಳ್ಳವನಾಗಿ.  ಇಷ್ಟೆಲ್ಲವನ್ನೂ ಅವರು ಮಾಡಿದ್ದು ಒಬ್ಬ ಹಿಂದೂ ಆಗಿಯೇ, ಒಬ್ಬ ಬ್ರಾಹ್ಮಣನಾಗಿಯೇ.  ಹೀಗೇ ಮಾಡುತ್ತಲೇ ತಮ್ಮ ನಡೆನುಡಿಯ ಮೂಲಕ ಅವರು ತೋರಿಸಿದ್ದು ಸಮಾನತೆಯ ಪ್ರತಿಪಾದನೆಗಾಗಿ ಬ್ರಾಹ್ಮಣ್ಯವನ್ನು ತ್ಯಜಿಸಬೇಕಾದ ಅಗತ್ಯವಿಲ್ಲವೆಂದು.  ಇದು ಅನಂತಮೂರ್ತಿಯವರ ಹೆಗ್ಗಳಿಕೆ.  ಅವರನ್ನು ನಾವು ಗುರುತಿಸಬೇಕಾದದ್ದು ಈ ನೆಲೆಗಟ್ಟಿನಲ್ಲಿ.
          ಇನ್ನು ಅವರ ಸಾಹಿತ್ಯಕ ಪ್ರಯತ್ನಗಳು ಅಪಾರ್ಥವಾದ ಬಗೆಗೆ ಎರಡು ಮಾತು.  ಐವತ್ತು ಅರವತ್ತರ ದಶಕಗಳಲ್ಲಿ ಯೂರೋಪಿಗೆ, ಮುಖ್ಯವಾಗಿ ಲಂಡನ್ ಮತ್ತು ಪ್ಯಾರಿಸ್‍ಗೆ ವಿದ್ಯಾಭ್ಯಾಸಕ್ಕೆಂದು ಹೋದ ಯಾವುದೇ ಪೌರ್ವಾತ್ಯ ನಾಡಿನ ವಿದ್ಯಾರ್ಥಿ ಅಲ್ಲಿ ಪ್ರಖರವಾಗಿ ಬೀಸುತ್ತಿದ್ದ ಹೊಸ ಚಿಂತನೆಗಳ ಅಲೆಗಳಲ್ಲಿ ಸಿಕ್ಕಿಬೀಳದಿರಲು ಸಾಧ್ಯವೇ ಇರಲಿಲ್ಲ.  ಇದರ ಹಿಂದೆ ಹೊಸ ಚಿಂತನೆಯ ಸೆಳೆತವಷ್ಟೇ ಅಲ್ಲ, ತನ್ನದೇ ಸಂಸ್ಕೃತಿ ಮೂಡಿಸಿರಬಹುದಾದ ಕೀಳರಿಮೆ ಸಹಾ ಕೆಲಸ ಮಾಡುತ್ತಿತ್ತು.  ಅನಂತಮೂರ್ತಿಯವರ ವಿಷಯದಲ್ಲಿಯೂ ಹೀಗಾಗಿರಬೇಕು.  ಶಿವಮೊಗ್ಗೆಯಲ್ಲಿನ ವಿದ್ಯಾರ್ಥಿ ದಿನಗಳಿಂದಲೂ ಸಮಾಜಮುಖಿಯಾಗಿದ್ದ, ಜನಪರ ಚಳುವಳಿಗಳಲ್ಲಿ ಕ್ರಿಯಾಶೀಲರಾಗಿದ್ದ ಮೂರ್ತಿಯವರಂತೂ ಬ್ರೆಕ್ಟ್‍ನ ಸಮತಾವಾದ, ಸಾರ್ತ್ರೆ ಮತ್ತು ಕಮೂರ ಅಸ್ತಿತ್ವವಾದದ ಸೆಳೆತದಿಂದ ಹೊರಗುಳಿಯುವುದು ಸಾಧ್ಯವೇ ಇರಲಿಲ್ಲ.  ಈ ಬೆಳವಣಿಗೆ ಮೊದಲೇ ಬರಹಗಾರರಾಗಿದ್ದ ಮೂರ್ತಿಯವರ ಮುಂದೆ ಹೊಸಹೊಸ ಸಾಹಿತ್ಯಕ ಸಾಧ್ಯತೆಗಳನ್ನು ತೆರೆದಿಟ್ಟಿತು.  ಅನಂತರ ಅವರ ಬರಹಗಳು ಬೇರೆಯೇ ಸ್ವರೂಪವನ್ನು ಪಡೆದುಕೊಂಡವು.  ಇದನ್ನು “ಮೌನಿ” ಹಾಗೂ “ಕ್ಲಿಪ್ ಜಾಯಿಂಟ್” ಕಥೆಗಳಲ್ಲೂ “ಸಂಸ್ಕಾರ” ಕಾದಂಬರಿಯಲ್ಲೂ ಗುರುತಿಸಬಹುದು.  ಸಾರ್ತ್ರೆಯ ಒಂದು ಲೇಖನ ಸಂಕಲನದ ಶಿರ್ಷಿಕೆ “Situations” ಎಂದು.  ಈ ಪದದ ಕನ್ನಡ (ಏಕವಚನ) ರೂಪವಾದ “ಸನ್ನಿವೇಶ” ಎನ್ನುವುದನ್ನು ಅನಂತಮೂರ್ತಿಯವರು ತಮ್ಮದೊಂದು ಲೇಖನ ಸಂಕಲನಕ್ಕೆ ಇಟ್ಟಿದ್ದಾರೆ.  ಇದನ್ನು ಸಾರ್ತ್ರೆ ಮೇಲಿದ್ದ ಮೂರ್ತಿಯವರ ಅಭಿಮಾನಕ್ಕೊಂದು ಕುರುಹು ಎಂದು ತಿಳಿಯಬಹುದು.
ಒಂದು ಸಾಹಿತ್ಯಕೃತಿಯಾಗಿ “ಸಂಸ್ಕಾರ”ದ ಮಹತ್ವದ ಬಗ್ಗೆ ಇಲ್ಲಿ ಹೊಸದಾಗಿ ಹೇಳುವ ಅಗತ್ಯವಿಲ್ಲ.  ಆದರೂ ಈ ಚರ್ಚೆಯ ಭಾಗವಾಗಿ ಒಂದು ಮಾತು:  ಸ್ವದೇಶದಲ್ಲಿ ಮುಖಾಮುಖಿಯಾಗಿದ್ದ ಸಂಪ್ರದಾಯನಿಷ್ಟ ಸಮಾಜದ ಪ್ರಶ್ನೆಯೊಂದಕ್ಕೆ ವಿದೇಶದಲ್ಲಿ ಕೈಗೆ ಹತ್ತಿದ ಅಸ್ತಿತ್ವವಾದದ ನೆಲೆಗಟ್ಟಿನಲ್ಲಿ ಉತ್ತರ ಹುಡುಕುವ ಪ್ರಯತ್ನ ಈ ಕಾದಂಬರಿಯನ್ನು ಕನ್ನಡ ಸಾಹಿತ್ಯ ಚರಿತೆಯಲ್ಲೊಂದು ಮೈಲುಗಲ್ಲಾಗಿಸಿತು.  ಅದೇ ಪ್ರಯತ್ನ ಮೂರ್ತಿಯವರ ಲೇಖನಿಯಲ್ಲಿ ಮತ್ತೆಮತ್ತೆ ಕಾಣಿಸಿಕೊಂಡರೂ ಮೊದಲ ಪ್ರಯತ್ನದಲ್ಲಿ ಕಂಡಷ್ಟು ಪ್ರಖರತೆ, ಪರಿಣಾಮಕತೆ ಮತ್ತೆ ಕಾಣಲಿಲ್ಲ.  “ಭಾರತೀಪುರ”ವಂತೂ ಮೂರ್ತಿಯವರ ಸೃಜನಶೀಲತೆಯ ಮೇಲೇ ಪ್ರಶ್ನಾರ್ಥಕ ಚಿನ್ಹೆಯನ್ನಿಟ್ಟಿತು.  1973ರಲ್ಲಿ ಪ್ರಕಟವಾದ ಈ ಕಾದಂಬರಿ ಅದಕ್ಕೆ ಎರಡು ವರ್ಷಗಳ ಹಿಂದೆ “ಸಾಕ್ಷಿ”ಯಲ್ಲಿ ಪ್ರಕಟವಾಗಿದ್ದ ರಾಮಚಂದ್ರದೇವ ಅವರ “ದಂಗೆಯ ಪ್ರಕರಣ” ಕಥೆಯ ವಿಸ್ತೃತ ರೂಪ ಎಂಬ ಮಾತಿದೆ.  (ಈ ಬಗ್ಗೆ ದೇವ ಮತ್ತು ಮೂರ್ತಿಯರ ನಡುವೆ ಮನಸ್ತಾಪವೂ ಉಂಟಾಗಿತ್ತಂತೆ).  1978ರಲ್ಲಿ ಹೊರಬಂದ “ಅವಸ್ಥೆ” ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಜೀವನವನ್ನಾಧರಿಸಿದ್ದು ಎಂಬ ಆಪಾದನೆ ಬಂತು.  ನಂತರದ “ಭವ” ಮತ್ತು “ದಿವ್ಯ”ಗಳ  ಬಗ್ಗೆ ಮೂರ್ತಿಯವರಿಗೇ ತೃಪ್ತಿಯಿರಲಿಲ್ಲ.  “ಸಂಸ್ಕಾರ”ಕ್ಕೂ ಹಿಂದೆಯೇ ಬರೆದಿದ್ದೆನ್ನಲಾದ “ಪ್ರೀತಿ ಮೃತ್ಯು ಮತ್ತು ಭಯ” ಎರಡು ವರ್ಷಗಳ ಹಿಂದೆಯಷ್ಟೇ ಪ್ರಕಟವಾಯಿತು.  ಅದಕ್ಕೆ ಸಿಕ್ಕಿದ ಅಬ್ಬರದ ಪ್ರಚಾರದ ಬಿಡುಗಡೆ ಅದರ ಹಿಂದೆ ಉದ್ಡೇಶವೊಂದಿರಬಹುದಾದ ಸಾಧ್ಯತೆಯತ್ತ ಬೆರಳು ಮಾಡಿತು.  ಅಗಷ್ಟೆ ಬಿಡುಗಡೆಯಾಗಿದ್ದ ಕವಯಿತ್ರಿಯೊಬ್ಬರ ಆತ್ಮಕಥೆಯಲ್ಲಿನ ಕೆಲ ವಿವರಗಳು ಅನಂತಮೂರ್ತಿಯವರಿಗೆ ಸಂಬಂಧಿಸಿರಬಹುದೆಂಬ ಅನುಮಾನವನ್ನು ಓದುಗರಲ್ಲಿ ಉಂಟುಮಾಡುವ ಸಾಧ್ಯತೆ ಇತ್ತು.  ಅದರಿಂದಾಗಿ ಮೂರ್ತಿಯವರ ಹೆಸರು ಮುಕ್ಕಾಗುವುದನ್ನು ತಪ್ಪಿಸಲು, ಓದುಗರ ಗಮನವನ್ನು ಬೇರೆಡೆ ಸೆಳೆಯಲು ನಡೆಸಿದ ಒಂದು ಕಸರತ್ತಿನಂತೆ “ಪ್ರೀತಿ ಭಯ...” ಪ್ರಕಟಣೆ ಕಂಡಿತು.
ಹೀಗೆ “ಸಂಸ್ಕಾರ”ದ ನಂತರ “ಘಟಶ್ರಾದ್ಧ”, “ಸೂರ್ಯನ ಕುದುರೆ”ಯಂತಹ ಕೆಲವೇ ಕೆಲವು ಯಶಸ್ವಿ ಕಥೆಗಳ ಹೊರತಾಗಿ ಅನಂತಮೂರ್ತಿಯವರು ಸಾಹಿತ್ಯಕವಾಗಿ ಮಹತ್ತರ ಸಾಧನೆಯೇನನ್ನೂ ಸಾಧಿಸಲಿಲ್ಲ.  ಆದಾಗ್ಯೂ ಅವರ ಕೃತಿಗಳಲ್ಲಿ ಕಾಣಿಸಿಕೊಂಡ ಮಾನವತಾವಾದಿ ಪಾತ್ರಗಳು, ಅವುಗಳು ಬಿಂಬಿಸಿದ ಸಮಾಜಪರ ಕಾಳಜಿಯನ್ನು ಮೂರ್ತಿಯವರಲ್ಲಿರುವ “ಬ್ರಾಹ್ಮಣ ವಿರೋಧಿ” ಮನೋಭಾವದ ಕುರುಹು ಎಂದು ಅವರ ಅಭಿಮಾನಿವರ್ಗ ತಪ್ಪಾಗಿ ಅರ್ಥೈಸಿತು.  ತಾನು ಕೂರಿಸಿದ್ದ ಪೀಠದಿಂದ ಇಳಿಸಿ ಅವರನ್ನು ಮನುಷ್ಯರೆಂಬಂತೆ ಕಾಣಲು ಅದು ಮನಸ್ಸು ಮಾಡಲೇ ಇಲ್ಲ.  ಬೇರೆಯವರು ಮಾಡಿದಾಗ ಸುಮ್ಮನಿರಲೂ ಇಲ್ಲ.  ಡಾ. ಎಸ್. ಎಲ್. ಭೈರಪ್ಪನವರ “ಆವರಣ” ದಲ್ಲಿನ ಪ್ರೊ. ಶಾಸ್ತ್ರಿ ಪಾತ್ರವನ್ನು ಕಂಡು ಅನಂತಮೂರ್ತಿಯವರ ಅಭಿಮಾನಿಗಳು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳುವಂತೆ ವರ್ತಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ನೆಮ್ಮದಿಯ ವಿಷಯವೆಂದರೆ ತಮ್ಮ ವಿರೋಧಿಗಳಾಗಲೀ, ಅಭಿಮಾನಿಗಳಾಗಲೀ ತಮ್ಮ ಮೇಲೆ ಆರೋಪಿಸಿದ ಗುಣವಿಶೇಷಣಗಳ ಒತ್ತಡಕ್ಕೆ ಅನಂತಮೂರ್ತಿಯವರು ಸಿಕ್ಕಿಬೀಳಲೇ ಇಲ್ಲ.  ಅವರು ತಮಗೆ ಸರಿಯೆನಿಸಿದ ದಾರಿಯಲ್ಲಿ ತಮ್ಮ ಪಾಡಿಗೆ ತಾವು ನಡೆಯುತ್ತಾ ಸಾಗಿದರು.  ಹೀಗಾಗಿಯೆ ಅವರು ಕೊನೆಯವರೆಗೂ ಬಹಿರ್ಮುಖಿಯಾಗಿ, ಸಮಾಜಮುಖಿಯಾಗಿ, ಕ್ರಿಯಾಶೀಲರಾಗಿ, ಅಕರ್ಷಕ ವ್ಯಕ್ತಿತ್ವವುಳ್ಳವರಾಗಿ ಇರಲು ಸಾಧ್ಯವಾಯಿತು.  ಅವರ ಬದುಕಿನಲ್ಲಿ ಸಾಮಾಜಿಕ ವ್ಯಕ್ತಿಯಾಗಹೊರಟ ಪ್ರತಿಯೊಬ್ಬರಿಗೂ ಪಾಠವಿದೆ.
ಇಷ್ಟಾಗಿಯೂ, ಅವರ ಈ ಬಹಿರ್ಮುಖಿ ಸ್ವಭಾವವೇ ಅವರು ಪ್ರತಿ ಗಾಳಕ್ಕೂ ಬಾಯಿ ತೆರೆಯುವಂತೆ ಮಾಡಿತೆಂದರೆ, ಅವರನ್ನು ವಿರೋಧದ ಸುಳಿಗಳಲ್ಲಿ ಸಿಲುಕಿಸಿತೆಂದರೆ ಅತಿಶಯೋಕ್ತಿಯಾಗಲಾರದು.  ಅವರ ಆಸಕ್ತಿಯ ವಿಷಯಗಳು ವೈವಿಧ್ಯಮಯ.  ಹೀಗಾಗಿಯೇ ಅವರು ಸಾಹಿತ್ಯ, ರಾಜಕೀಯ, ಸಾಹಿತ್ಯಕ ರಾಜಕೀಯ, ಸಾಮಾಜಿಕ ಚಳುವಳಿ ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುತ್ತಿದ್ದರು.  ಆವರ ಮಾನಸಿಕ ಹಾಗೂ ದೈಹಿಕ ಶ್ರಮ ಹೀಗೆ ಹಲವಾರು ಕವಲುಗಳಲ್ಲಿ ಹರಿದುಹೋದದ್ದರಿಂದಲೇ ಸಾಹಿತ್ಯ ಕ್ಷೇತ್ರವೊಂದನ್ನುಳಿದು ಬೇರಾವ ಕ್ಷೇತ್ರದಲ್ಲೂ ಅವರಿಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ.  ಇದಕ್ಕೆ ಬದಲು ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಅಥವಾ ತಮಗೆ ಬಾಲ್ಯದಿಂದಲೇ ಒಗ್ಗಿದ್ದ ಸಾಹಿತ್ಯ ಕ್ಷೇತ್ರಕ್ಕಷ್ಟೇ ತಮ್ಮೆಲ್ಲಾ ಸಮಯವನ್ನೂ, ಶ್ರಮವನ್ನೂ ಮೀಸಲಾಗಿಟ್ಟಿದ್ದರೆ ಅವರ ಸಾಧನೆ ಇನ್ನೂ ಅದ್ಭುತವಾಗಿರುತ್ತಿತ್ತು.  ಬರವಣಿಗೆಯಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ತಮ್ಮ ಸೃಜನಶೀಲತೆಯ ಮೇಲೆ ಬಂದ ಆಪಾದನೆಳನ್ನೂ ತಪ್ಪಿಸಬಹುದಾಗಿತ್ತು.  ಈಗೇನಾಗಿದೆಯೆಂದರೆ, ತಮ್ಮ ಕೃತಿಗಳ ಪರವಾಗಿ ನಿಲ್ಲಲು ಅವರಿಲ್ಲ.  ಅವರ ಚೀರ್ ಲೀಡರ್‍‍ಗಳಂತೆ ವರ್ತಿಸಿ ಅವರು ಮಾಡಿದ್ದೆಲ್ಲವೂ ಸರಿ ಎಂದು ಭೋಪರಾಕ್ ಹಾಕುತ್ತಾ, ಬದಲಾಗುವ, ಬೆಳೆಯುವ ಅಗತ್ಯವನ್ನೇ ಅವರಿಗೆ ಮನಗಾಣಿಸದೇ ಹೋದ ಅವರ ಅಭಿಮಾನಿ ವರ್ಗ ವೇಗವಾಗಿ ಸೊರಗುತ್ತಿದೆ.  ಹೀಗಾಗಿ ಅವರ ಕೃತಿಗಳು ನಿರ್ದಯಿ ಕಾಲದ ಕಟಕಟೆಯಲ್ಲಿ ತಾವಷ್ಟೇ ನಿಂತು ತಮ್ಮ ವಿಚಾರಣೆಯನ್ನೆದುರಿಸಬೇಕಾಗುತ್ತದೆ.
ಭೂತದಲ್ಲಿ “ರೆ”ಗೆ ಸ್ಥಾನವಿಲ್ಲ. ಆದರೂ ಅನಿಸುವುದೆಂದರೆ ಉಡುಪಿ ರಾಜಗೋಪಲಾಚಾರ್ಯ ಅನಂತಮೂರ್ತಿ ಎಂಬ ಪ್ರತಿಭಾವಂತ ತನ್ನೆಲ್ಲಾ ಆಸಕ್ತಿಯನ್ನು ಸಾಹಿತ್ಯಕ್ಕಷ್ಟೇ ಮೀಸಲಾಗಿಟ್ಟಿದ್ದಿದ್ದರೆ ಕನ್ನಡಕ್ಕೆ ಏನೆಲ್ಲಾ ಸಿಗಬಹುದಿತ್ತು!  ವಿಶ್ವಮಾನ್ಯತೆ?  ಒಂದು ವಿವಾದಾತೀತ ಅಂತರರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ?