ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, February 21, 2013

ಹೀಗೊಂದು 'ಪ್ರೇಮ್‌'ವರ್ಕ್


  - ಜಯದೇವ ಪ್ರಸಾದ ಮೊಳೆಯಾರ



ಜನಪ್ರಿಯ ಹಾಗೂ ಸಮರ್ಥ ಕತೆಗಾರ ಪ್ರೇಮಶೇಖರ ಅವರ ಇನ್ನೊಂದು ಕಥಾ ಸಂಕಲನ "ಗೋಧ್ರಾ ಇನ್ನೆಷ್ಟು ದೂರ?" ಈಗಷ್ಟೇ ಉಡುಪಿಯಲ್ಲಿ ಬಿಡುಗಡೆ ಗೊಂಡಿದೆ. ೧೦ ಕತೆಗಳನ್ನೊಳಗೊಂಡ ಈ ಪುಸ್ತಕ ಪ್ರೇಮಶೇಖರ ಅವರ ಎಂಟನೆಯ ಕಥಾ ಸಂಕಲನ. ಉಳಿದಂತೆ ೨ ಕಾದಂಬರಿ, ೨ ಲೇಖನಗಳ ಸಂಗ್ರಹ ಹಾಗೂ ೧ ಸಂಶೋಧನಾ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿರುವ ಅವರು ಆಂಗ್ಲ ಭಾಷೆಯಲ್ಲಿ ತಮ್ಮ ಕಾರ್ಯ ಕ್ಷೇತ್ರವಾದ ರಾಜಕೀಯ ಶಾಸ್ತ್ರದಲ್ಲಿ ಹಲವಾರು ಸಂಶೋಧನೆಗಳನ್ನು ದೇಶ ವಿದೇಶಿ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದಾರೆ. ವೃತ್ತಿಯಲ್ಲಿ ಪಾಂಡಿಚೆರಿ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದ ಇವರು ಕನ್ನಡದಲ್ಲಿ ಕಥೆ ಕಾದಂಬರಿಗಳನ್ನು ಬರೆಯಲು ಆರಂಭಿಸಿದ್ದು ಯಾಕಿಷ್ಟು ಲೇಟ್ ಅನ್ನುವುದು ಯಾರೂ ಅರಿಯಲಾರದ ಒಂದು ರಹಸ್ಯವಾಗಿಯೇ ಉಳಿದಿದೆ. ಇಂತಹ ಸೃಜನಶೀಲ ಒರತೆಯನ್ನು ಅದು ಹೇಗೆ ಇಷ್ಟರವರೆಗೆ ಭದ್ರವಾಗಿ ತಡೆಗಟ್ಟಿ ಕುಳಿತರು ಅನ್ನುವುದೇ ಒಂದು ಅಚ್ಚರಿ.

ಸುಮಾರು ೨೦೦೪ ರಿಂದ ಇತ್ತೀಚೆಗೆ ಮಾತ್ರವೇ ಪ್ರೇಮಶೇಖರ ಎಂಬ ಹೆಸರು ಪತ್ರಿಕೆಗಳಲ್ಲಿ ಕಾಣಬರುತ್ತಿದ್ದು ನಮ್ಮೆಲ್ಲರ ಗಮನ ಸೆಳೆದ ಓರ್ವ ವಿಶಿಷ್ಟ ಪ್ರತಿಭೆ. ಇವರು ವಿಶಿಷ್ಟ ಯಾಕೆ ಆಗುತ್ತಾರೆ ಎಂದರೆ ಇವರನ್ನು ಒಂದು ಫ್ರೇಮ್‌ವರ್ಕಿನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. ಇವರ ಪ್ರೇಮ್‌ವರ್ಕೇ ಒಂದು ರೀತಿ ಬೇರೆ. ಆರಂಭದ ಕೆಲವು ಕತೆಗಳನ್ನು ಅಲ್ಲಿ ಇಲ್ಲಿ ಓದಿಕೊಂಡ ನಾನು ಇವರೊಬ್ಬ ಪತ್ತೇದಾರಿ ಲೇಖಕ ಅಂದುಕೊಂಡರೆ ಕ್ಷಣದಲ್ಲಿಯೇ ಒಂದು ಅತ್ಯಂತ ಹೃದಯಸ್ಪರ್ಶಿ ಕತೆಯೊಂದಿಗೆ ಬಂದು ನಿಮ್ಮನ್ನು ಅಳಿಸಿಯೇ ಹಾಕುತ್ತಾರೆ. ಆ ಮಧ್ಯೆ ಅಲ್ಲಿಲ್ಲಿ ಒಂದೊಂದು ಲೇಖನಗಳು ಕಾಣ ಸಿಗುತ್ತವೆ. ಭಾರತ್-ಚೀನಾ, ಇಂಡೋ-ಪಾಕ್ ಇತ್ಯಾದಿ ಗಂಭೀರ ವಿಚಾರಗಳನ್ನು ಎತ್ತಿಕೊಂಡು ನೂರಾರು ವರ್ಷಗಳ ಚರಿತ್ರೆಯನ್ನು ಕೆದಕಿ "ಯಾಕೆ, ಏನು ಆಯಿತು ಮತ್ತು ಮುಂದಿನ ಹೆಜ್ಜೆ ಏನು" ಎಂಬುದನ್ನು ಎಳೆ ಎಳೆಯಾಗಿ ಹಿಂಜಿ ಇಡುತ್ತಾರೆ. ಮತ್ತೊಂದು ನೀಳ್ಗತೆ "ಬೊಳ್ಳೋಣಕಯ್ಯ" ಎಂಬ ವಿಚಿತ್ರ ವ್ಯಕ್ತಿಯನ್ನು ಸೃಷ್ಟಿಸಿ ಮನೆ ಮಾತಾಗುತ್ತಾರೆ. ಮತ್ತೊಂದು ಪತ್ತೇದಾರಿ ಆದರೆ ಮತ್ತೊಂದು ಮ್ಯಾಜಿಕ್ ರಿಯಾಲಿಸಮ್ ಅಥವ ಮಾಂತ್ರಿಕ ವಾಸ್ತವ ಶೈಲಿಯಲ್ಲಿ ವಿಭಿನ್ನ ಪ್ರಯೋಗದ ಕತೆಗಳು. ಸರಿ ಬಿಡಿ ಇವರು ಪತ್ತೇದಾರಿ, ಗಟ್ಟಿ ಕತೆಗಳು ಮತ್ತು ಲೇಖನಗಳನ್ನು ಬಹಳ ಚೆನ್ನಾಗಿ ಆಪ್ತವಾಗಿ ಬರೆಯುತ್ತಾರೆ, ಅಂದುಕೊಂಡು ಅವರನ್ನು ಆ ಫ್ರೇಮ್‌ನಲ್ಲಿ ಕೂರಿಸಿದರೆ ಇವೆಲ್ಲ ಪ್ರಕಾರಗಳನ್ನು ಅರೆದು ಹಾಕಿ ಚಟ್ನಿ ಮಾಡಿ ತಮ್ಮದೇ ಆದ ಒಂದು ಇನ್ನೂ ಹೆಸರಿಡದ ಒಂದು ಹೈಬ್ರಿಡ್ ಪ್ರಕಾರವನ್ನು ಸೃಷ್ಟಿಸಿ ಧುತ್ ಎಂದು ನಿಮ್ಮ ಮುಂದಿಡುತ್ತಾರೆ. ಅವುಗಳು ಜಾಗತಿಕ ರಾಜಕೀಯದ ವಾಸ್ತವ ಮತ್ತು ಅದರ ಬಗ್ಗೆಯ ಚಿಂತನೆಗಳೂ ಹೌದು, ಮನ ಮಿಡಿಯುವ ಕತೆಗಳೂ ಹೌದು. ನೆಂಜಿಕೊಳ್ಳಲು ಬೇಕಾದರೆ ಸ್ವಲ್ಪ ಮಾಂತ್ರಿಕತೆ ಈ ಮೋಡಿಗಾರನ ವತಿಯಿಂದ. ಆ ಮೇಲೆ ತಿಳಿಯುತ್ತದೆ ಅವರು ಕವನಗಳನ್ನೂ ಕಟ್ಟುತ್ತಾರೆ, ಚಿತ್ರಗಳನ್ನೂ ಬಿಡಿಸುತ್ತಾರೆ ಎಂದು! ಒಟ್ಟಿನಲ್ಲಿ ಇವರ ಪ್ರೇಮ್‌ವರ್ಕೇ ಹೀಗೆ. ಅವರೇ ಹೇಳಿಕೊಳ್ಳುವಂತೆ ಒಂದು ರೀತಿಯ ಸಾಹಿತ್ಯಕ ಅಲೆಮಾರಿ, ಒಂದೇ ಪ್ರಕಾರ ಒಂದೇ ಜಾಗದಲ್ಲಿ ಕುಳಿತಿರಲಾರದ ಒಬ್ಬ ಸಾಹಿತ್ಯಕ ಸಂಶೋಧಕ.

ಪ್ರೇಮಶೇಖರರ ಹೆಸರು ನೋಡಿ ಇವತ್ತಿನ ಸ್ಪೆಶಲ್ ಏನು? ಎಂಬಂತೆ ಕಾತರದಿಂದ ಓದುವವರಲ್ಲಿ ನಾನೂ ಒಬ್ಬ. ಏನಾದರೊಂದು ಹೊಸತನ - ವಸ್ತುವಿನಲ್ಲಾಗಲಿ ನಿರೂಪಣೆಯಲ್ಲಾಗಲಿ - ಇದ್ದೇ ಇರುತ್ತದೆ ಎಂಬ ನಂಬಿಕೆ.  ಈ ನಿರೀಕ್ಷೆ ಸುಮಾರಾಗಿ ಯಾವತ್ತೂ ಸುಳ್ಳಾಗಿಲ್ಲ. ಹಾಗಾಗಿ ನಾನು ಪ್ರೇಮ್ ಅವರನ್ನು ಒಬ್ಬ ಆಸಕ್ತಿದಾಯಕ ಮತ್ತು ನಂಬಿಗಸ್ಥ ಬರಹಗಾರರೆಂದು ಭಾವಿಸಿದ್ದೇನೆ. ಈ ಮಾಲಿಕೆಯಲ್ಲೂ ಸಹ ಹತ್ತು ಕತೆಗಳು ಹತ್ತು ತರಹ. ಪ್ರೇಮ್ ಎಂದಿನಂತೆ ನನ್ನ ನಂಬಿಕೆಯನ್ನು ಹುಸಿಯಾಗಿಸಲಿಲ್ಲ.

ಇದರಲ್ಲಿ ಗೋಧ್ರಾ ಇನ್ನೆಷ್ಟು ದೂರ? ಎಂಬ ಕತೆಯಲ್ಲಿ ಮಾಂತ್ರಿಕ ವಾಸ್ತವ ಘಟನಾವಳಿಗಳ ಮೂಲಕ ವಿಷಯದ ಮೇಲೆ ಲೇಖಕರ  ಟಿಪ್ಪಣಿ ಇದೆ. ದೆಹಲಿಯ ಒಂದು ಓವರ್ ಬ್ರಿಜ್ಜಿನ ಅಡಿಯಲ್ಲಿ ಬದುಕುವ ನಿರ್ಗತಿಕರ ಬದುಕಿನ ದಟ್ಟವಾದ ಹಾಗೂ ಸಮರ್ಥವಾದ ಚಿತ್ರಣ ಬಾಳಿಗೊಂದಿಷ್ಟು ಗಾಳಿ ಕತೆಯಲ್ಲಿದೆ. ಒಂದು ಕತೆ ತನ್ನನ್ನು ತಾನೆ ಮುಂದಕ್ಕೆ ತಳ್ಳಿಕೊಳ್ಳುತ್ತಾ ಹೋಗುವ ವಿಶಿಷ್ಟ ತಂತ್ರಗಾರಿಕೆಯ ಗುಡ್‌ಬೈ ಹೌರಾ ಎಕ್ಸ್ಪ್ರೆಸ್ ಎಂಬ ಪ್ರೇಮಗಾಥೆಯಿದೆ. ಕತೆಯ ಅಂತ್ಯ ಎಂಬ ಕತೆಯಲ್ಲಿ ಕಥಾ ನಾಯಕಿಯ ಬದುಕಿನ ಪ್ರತಿಮಾತ್ಮಕ ಚಿತ್ರಣವಿದೆ. ಪ್ರೊಫೆಸರ್ ನಾಥಮುನಿ ಅವರನ್ನು ಇಂದು ಬೆಳಗ್ಗೆ ಶಿಲುಬೆಗೆ ಏರಿಸಲಾಯಿತು ಎಂಬ ಕತೆಯಲ್ಲಿ ಮನಮುಟ್ಟುವಂತಹ ಶಿಲುಬೆಗೆ ಏರಿಸುವ ನೈಜ ಚಿತ್ರಣವಿದೆ. ಚಿನ್ನಿದಾಂಡು ಕತೆಯಲ್ಲಿ ಒಂದು ಹಳೆಯ ಕತೆಯನ್ನು ಕೆದಕಿ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಶೋಧಿಸುವ ಧೈರ್ಯ ಇದೆ. ಬದುಕೊಂದು ಕೋತಿಯಾಟದಲ್ಲಿ ಬದುಕಿನ ವಿಚಿತ್ರತೆಯ ವಿಶಿಷ್ಟ ಚಿತ್ರಣವಿದೆ. ಕನಸಿನ ತೀರ ದಲ್ಲಿ ಶಾಂತಿ ಪ್ರೇಮ ಇತ್ಯಾದಿಗಳ ಬಗ್ಗೆ ಸುಂದರ ವ್ಯಾಖ್ಯಾನವಿದೆ. ಅವಲ್ಲದೆ ರೇಖಾ ಗಣಿತ ಎಂಬ ತೀರಾ ವಿಭಿನ್ನವಾದ ಹೊಸ ಶೈಲಿಯ ಒಂದು ರೋಚಕ ಕತೆಯಿದೆ.

ಯಾವುದೇ ಕತೆಯ ಸಾರಾಂಶ ಹೇಳಿ ಅದರ ಸ್ವಾದ ಕೆಡಿಸುವ ಕಿಡಿಗೇಡಿತನಕ್ಕೆ ನಾನು ಖಂಡಿತಾ ಕೈ ಹಾಕಲಾರೆ. ಕತೆಗಳ ಸುಪ್ತ ಶಕ್ತಿ ಇರುವುದೇ ಅದನ್ನು ಏಕಾಂತದಲ್ಲಿ ಓದಿದಾಗ ಅದು ನಮ್ಮ ಮನದಾಳಕ್ಕೆ ಇಳಿದು ಅಲ್ಲಿಯ ಒಂದು ಭಾಗವಾಗಿ ನಮಗೆ ದಕ್ಕುವ ಪ್ರಕ್ರಿಯೆಯಲ್ಲಿ. ಅದಕ್ಕಾಗಿ ಕತೆಗಳನ್ನು ಕುಳಿತು ಇಡಿಯಾಗಿ ಹಾಗೆಯೇ ಓದಬೇಕು. ಓದಿ ಹೇಳಲೂ ಬಾರದು, ಸಾರಾಂಶ ಹೇಳಲೂ ಬಾರದು.

ಪ್ರೇಮ್ ಅವರ ಕತೆಗಳ ವಿಜಯ ಇರುವುದೇ ಅವರ ಗಟ್ಟಿಯಾದ ಕಥಾವಸ್ಥು ಮತ್ತು ಸಮರ್ಥ ವಿಭಿನ್ನ ನಿರೂಪಣೆಯಲ್ಲಿ. ಹೊಸ ಹೊಸ ತಂತ್ರಗಳು. ಹೊಸ ಹೊಸ ಪ್ಲಾಟ್, ಸರಳ ಸುಂದರ ಪಾತ್ರೋಚಿತ ಭಾಷೆ ಆಪ್ಯಾಯಮಾನವಾದ ವಾತಾವರಣ, ಸದೃಢ ಪಾತ್ರಗಳ ಚಿತ್ರಣ - ಇವೆಲ್ಲ ಅವರ ಕತೆಗಳನ್ನು ಜೀವಂತವಾಗಿಸಿವೆ.

ಗೋಧ್ರಾ ಇನ್ನೆಷ್ಟು ದೂರ? ಪುಸ್ತಕದ ಮೂಲಕ ಇನ್ನೂ ಹತ್ತು ಕತೆಗಳಿಗೆ ನಮ್ಮೆದುರು ಜೀವಕೊಟ್ಟಿದ್ದಾರೆ.

ಅವುಗಳನ್ನು ಓದಿ ಸ್ವೀಕರಿಸೋಣ.

ಅಕ್ಷರಮೋಹ: ಹೊಸ ತಲೆಮಾರಿನ ಹೊಸ ತಲ್ಲಣಗಳು ಮತ್ತು ಗೊಂದಲಗಳು


            ಇಂಟರ್‌ನೆಟ್ ಮತ್ತು ಹ್ಯಾಂಬರ್ಗರ್‌ಗಳ ನಡುವಿನ ಏನಾದರೂ ಆಗಿರಬಹುದು ಎಂದು ಸೂಸಾನ್ ಸ್ಟ್ರೇಂಜ್ ವರ್ಣಿಸುವ, ಒಂದು ನಿರ್ದಿಷ್ಟ ಹಾಗೂ ನಿರ್ಣಾಯಕ ವ್ಯಾಖ್ಯಾನಕ್ಕೆ ಸಿಗದ ಜಾಗತೀಕರಣ ಕಳೆದೆರಡು ದಶಕಗಳಲ್ಲಿ ಬದುಕಿನ ಬಹುತೇಕ ಎಲ್ಲ ಅಯಾಮಗಳನ್ನೂ ಬದಲಿಸಿಬಿಟ್ಟಿರುವುದಂತೂ ನಿಜ.  ಉದ್ಯೋಗಾವಕಾಶದಲ್ಲಿನ ವಿಪುಲತೆ, ವೈವಿಧ್ಯತೆ ಹಾಗೂ ಅನಿಶ್ಚಿತತೆ ಯುವಜನಾಂಗದ ಆರ್ಥಿಕ ಬದುಕನ್ನು ರೋಲರ್ ಕೋಸ್ಟರ್‌ನಲ್ಲಿ ಕೂರಿಸಿರುವ ಕಾರಣದಿಂದಾಗಿ ಅವರ ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳು ತೀವ್ರತರದಲ್ಲಿ ಪಲ್ಲಟಗೊಳ್ಳುತ್ತಿವೆ.

ತಂದೆಯ ವೃತ್ತಿಯನ್ನು ಮಗ ಜೀವಮಾನವಿಡೀ ಸಾಗಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸುತ್ತಿದ್ದ ಕಾಲದಲ್ಲಿ ತಲೆಮಾರುಗಳ ನಡುವೆ ಅಭಿಪ್ರಾಯಭೇದಗಳು ಕನಿಷ್ಟವಾಗಿದ್ದು ಪರಸ್ಪರ ಅವಲಂಬನೆ, ಅರಿವಿನ ವರ್ಗಾವಣೆ ಹೆಚ್ಚಿನ ಪ್ರಮಾಣದಲ್ಲಿತ್ತು.  ಬದುಕಿನ ಪ್ರಶ್ನೆಗಳಿಗೆ ಒಂದು ತಲೆಮಾರು ಕಂಡುಕೊಂಡ ಉತ್ತರಗಳು ಮುಂದಿನ ಹಲವಾರು ತಲೆಮಾರುಗಳಿಗೆ ದೀವಿಗೆಯಾಗುತ್ತಿದ್ದವು.  ಆದೆಲ್ಲವೂ ಈಗ ಬದಲಾಗುತ್ತಿದೆ.  ಜಾಗತೀಕರಣ ಮುಂದಿಟ್ಟಿರುವ ಹೊಸಹೊಸ ಅವಕಾಶಗಳ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಇಂದಿನ ಯುವಜನಾಂಗ ತನಗೆದುರಾಗುತ್ತಿರುವ ಹೊಚ್ಚಹೊಸ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಮುಂದೆ ಸಾಗಬೇಕಾಗಿದೆ..  ಇದರಿಂದಾಗಿ ಇಂದಿನ ತಲೆಮಾರಿನ ಇಷ್ಟಾನಿಷ್ಟಗಳು, ಭಾವನೆಬವಣೆಗಳು ಬದಲಾಗಿ, ಅದು ಬದುಕನ್ನು ನೋಡುವ ಬಗೆಯೂ ಬದಲಾಗುತ್ತಿದೆ.  ಇದನ್ನು ಎರಡು ಉದಾಹರಣೆಗಳ ಮೂಲಕ ಸಾಂಕೇತಿಕವಾಗಿ ಚಿತ್ರಿಸಬಹುದು.  ಒಂದು- ಎರಡುಮೂರು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಸರ್ವೇ ಒಂದರಲ್ಲಿ ಗಂಡ ಮತ್ತು ಉದ್ಯೋಗದ ನಡುವೆ ಆಯ್ಕೆ ಇರುವುದಾದರೆ ಉದ್ಯೋಗವನ್ನೇ ಆಯ್ದುಕೊಳ್ಳುವುದಾಗಿ ಹೆಚ್ಚಿನ ಹೆಂಗೆಳೆಯರು ಬಯಸುವುದು ಕಂಡುಬಂದಿತ್ತು.  ಎರಡು- ಮೈಸೂರು ಮಲ್ಲಿಗೆಯ ರಾಯರು ರಾತ್ರಿಯಲ್ಲಿ ಮಾವನ ಮನೆಗೆ ಬಂದಾಗ ಪದುಮಳು ಒಳಗಿಲ್ಲ ಎಂದು ತಿಳಿದು ನಿರಾಶೆಗೊಂಡಂತೆ ಇಂದಿನ ರಾಯರುಗಳು ನಿರಾಶೆಗೊಳ್ಳುವ ಪ್ರಮೇಯವಿರುವುದಿಲ್ಲ.  ಯಾಕೆಂದರೆ ಇಂದಿನ ಪದುಮ ಒಳಹೊರಗಿನ ನಡುವಿನ ಗೆರೆಯನ್ನು ಅಳಿಸಿಹಾಕಿದ್ದಾಳೆ ಮತ್ತು ಲೇಖಕ ಜೋಗಿಯವರ ಮಾತಿನಲ್ಲಿ ಹೇಳುವುದಾದರೆ, ಯಾವಾಗಲೂ ಜತೆಯಲ್ಲೇ ಇರುತ್ತಾಳೆ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್ ತಂದುಕೊಂಡುವಂತೆ ರಾಯರನ್ನೇ ಕೇಳುತ್ತಾಳೆ.

ಇಂದಿನ ಬದುಕಿನಲ್ಲಿ ಗೋಚರವಾಗುತ್ತಿರುವ ಈ ಬಗೆಯ ಸ್ಥಿತ್ಯಂತರಗಳಿಂದಾಗಿಯೇ ಈ ಹೊಸ ಕಾಲದ ಹೊಸ ಸಾಹಿತ್ಯಕ ಅಭಿವ್ಯಕ್ತಿ ಮಹತ್ವ ಪಡೆದುಕೊಳ್ಳುತ್ತದೆ.  ಹಿಂದೆಂದೂ ಕಂಡಿರದ ಹೊಚ್ಚಹೊಸ ಬದುಕೊಂದರ ಅನಾವರಣವನ್ನು ಇಂದಿನ ತಲೆಮಾರಿನ ಸಾಹಿತ್ಯದಲ್ಲಿ ನಿರೀಕ್ಷಿಸಬಹುದಾಗಿದೆ.  ಈ ನಿರೀಕ್ಷೆ ಹುಸಿಯಾಗದಂತೆ, ಬದಲಾಗುತ್ತಿರುವ ಬದುಕು, ಬದುಕಿನ ಮೌಲ್ಯಗಳು ಬಿಂಬಿತವಾಗುವಂತಹ ಸಾಹಿತ್ಯ ನಾಡಿನ ಒಳಹೊರಗಿನ ಬರಹಗಾರರಿಂದ ರಚಿತವಾಗುತ್ತಿದೆ.

ಆದರಿದು ಹಳಿತಪ್ಪಿದೆಯೋ ಎಂಬ ಆತಂಕವೂ ಉಂಟಾಗುತ್ತದೆ.  ಓದುಗನತ್ತ ಉಡಾಫೆ ತೋರುವ, ಹೊಸ ಬದುಕಿನ ಚಿತ್ರಣದ ಬದಲು ಜಾಗತೀಕರಣ ಜಗತ್ತಿನ ಮೂಲೆಮೂಲೆಗಳಿಂದ ಎತ್ತಿ ತಂದು ಸುರಿಯುತ್ತಿರುವ ಹೊಸ ಪದಗಳ ದೊಂಬರಾಟವೇ ಸಾಹಿತ್ಯವಾಗುತ್ತಿರುವ ಅಪಾಯವೂ ಕಾಣುತ್ತಿದೆ.  ಜತೆಗೇ, ಕಥೆಗಳಿಗೆ ಪತ್ರಿಕೆಯ ಮೂರನೇ ಪುಟದ ಸುದ್ದಿಯ ಗಾತ್ರ ಹಾಗೂ ಸ್ವರೂಪವನ್ನು ನೀಡುವ ಪ್ರಯತ್ನವೂ ನಡೆಯುತ್ತಿದೆ.  ಇದಕ್ಕೆ ಓದುಗನ ಸಮಯಾಭಾವವನ್ನು ಕಾರಣವೆಂದು ಮುಂದೆ ಮಾಡುತ್ತಿದ್ದರೂ ನಿಜವಾಗಿ ಇದರ ಹಿಂದಿರುವುದು ಲೇಖಕನ ಸಮಯಾಭಾವ ಮತ್ತು ಸೋಮಾರಿತನ, ಏನನ್ನಾದರೂ ಸಾಹಿತ್ಯದ ಹೆಸರಿನಲ್ಲಿ ತೇಲಿಬಿಡಬಹುದು ಎಂಬ ಉಡಾಫೆ.   ಇದು ಸಾಲದು ಎಂಬಂತೆ ಸಾಹಿತ್ಯದ ವಿವಿಧ ಪ್ರಕಾರಗಳ ಬಗೆಗಿನ, ಅವುಗಳ ನಡುವಿನ ಹೋಲಿಕೆವ್ಯತ್ಯಾಸಗಳ ಬಗೆಗಿನ ಇದುವರೆಗಿನ ಪರಿಕಲ್ಪನೆಗಳನ್ನೇ ಅಸಡ್ಡೆಯಿಂದ ದೂರ ತಳ್ಳಿ ಹೈಬ್ರಿಡ್ ಪ್ರಕಾರಗಳನ್ನು ಸೃಷ್ಟಿಸುವ ಕ್ರಿಯೆಯೂ ಜಾರಿಯಲ್ಲಿದೆ.  ಹಿಂದಿನ ನಗೆಬರಹಗಳು ಇಂದು ಲಲಿತಪ್ರಬಂಧಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡು ಚಲಾವಣೆಗಿಳಿಯುತ್ತಿರುವ ಪ್ರಕ್ರಿಯೆ, ಅವುಗಳಿಗೆ ದೊರೆಯುತ್ತಿರುವ ಪ್ರಚಾರ ನಾಳಿನ ಸಾಹಿತ್ಯದ ಬಗ್ಗೆ ಆತಂಕವನ್ನುಂಟುಮಾಡುತ್ತದೆ.  ಸಮುದ್ರಮಥನ ಈಗಷ್ಟೇ ಅರಂಭವಾಗಿದೆ, ಅಮೃತಕ್ಕಾಗಿ ಕಾಯಬೇಕು ಎಂದು ನಮ್ಮನ್ನು ನಾವು ಸಮಾಧಾನಿಸಿಕೊಳ್ಳಬೇಕಷ್ಟೇ.

ಪತ್ರಿಕೆಗಳು ಹೆಚ್ಚಿದಂತೆ ಇ-ಜರ್ನಲ್‌ಗಳೂ ಹೆಚ್ಚುತ್ತಿರುವುದು ಹೆಚ್ಚುಹೆಚ್ಚು ಬರಹಗಳನ್ನು ಹೆಚ್ಚುಹೆಚ್ಚು ಓದುಗರಿಗೆ ತಲುಪಿಸಲು ಸಹಕಾರಿಯಾಗುತ್ತಿರುವುದು ಈ ದಿನದ ಮತ್ತೊಂದು ಸಕಾರಾತ್ಮಕ ಬೆಳವಣಿಗೆ.  ಇವುಗಳ ಜತೆ ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳೂ ಸಹಾ ಅಭಿವ್ಯಕ್ತಿಗೆ, ಹೊಸ ಬರಹಗಾರರ ಉದಯಕ್ಕೆ ವೇದಿಕೆಯಾಗುತ್ತಿವೆ.  ಹಿಂದಿನಂತೆ ಬರಹಗಳನ್ನು ಪತ್ರಿಕೆಗಳಿಗೆ ರವಾನಿಸಿ ವಾರಗಟ್ಟಲೆ, ತಿಂಗಳುಗಟ್ಟಲೆ ಅಂಚೆಯಣ್ಣನ ಬೈಸಿಕಲ್‌ನ ಟ್ರಿಣ್ ಟ್ರಿಣ್‌ಗಾಗಿ ಕಿವಿಗೊಟ್ಟು ಕಾದುನಿಲ್ಲುವಂತಹ ಪರಿಸ್ಥಿತಿ ಈಗಿಲ್ಲ.  ಥಟಕ್ಕನೆ ಸ್ಫುರಿಸಿದ ಭಾವವೊಂದನ್ನು ಥಟ್ಟನೆ ಅಕ್ಷರಕ್ಕಿಳಿಸಿ ಕಣ್ಣುಮುಚ್ಚಿ ಕಣ್ಣುತೆರೆಯುವಷ್ಟರಲ್ಲಿ ಓದುಗರಿಗೆ ತಲುಪಿಸುವ ಅವಕಾಶವನ್ನು ಅಂತರ್ಜಾಲ ಒದಗಿಸಿಕೊಟ್ಟಿದೆ.  ಇಲ್ಲಿ ಸಂತೋಷದ ಜತೆಗೇ ಆತಂಕವನ್ನೂ ಉಂಟುಮಾಡುವ ಅಂಶಗಳಿವೆ.  ಒಂದುಕ್ಷಣದ ಸೃಜನಶೀಲ ಒರತೆಯಿಂದ ಒಂದು ಚಂದದ ವಾಕ್ಯ, ಹೆಚ್ಚೆಂದರೆ ಒಂದು ಸುಂದರ ಅರ್ಥಪೂರ್ಣ ಪ್ಯಾರಾಗ್ರಾಫ್ ಸೃಷ್ಟಿಯಾಗಬಹುದಷ್ಟೇ.  ಅದನ್ನೊಂದು ಕಥೆಯಾಗಿಸಲು ತುಸು ಧೀರ್ಘ ಧ್ಯಾನಸ್ಥ ಮನಸ್ಥಿತಿಯ ಅಗತ್ಯವಿರುತ್ತದೆ.  ಈ ಮನಸ್ಥಿತಿಗೆ ಇಂದು ಹೆಚ್ಚಿನ ಬರಹಗಾರರು ತಯಾರಾಗಿಲ್ಲ.

ಎಷ್ಟಾದರೂ, ಈಗಲೂ ಸಾಹಿತ್ಯದ ಅಭಿವ್ಯಕ್ತಿಗೆ ಮುದ್ರಣ ಮಾಧ್ಯಮವೇ ಅತ್ಯುತ್ತಮ ವೇದಿಕೆಯಾಗಿ ಉಳಿದಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.  ಆದರೆ ಮುದ್ರಣ ಮಾಧ್ಯಮದಲ್ಲಿ ಇತ್ತೀಚೆಗೆ ಒಂದು ಕ್ಯಾನ್ಸರ್‌ನಂತೆ ಹರಡಿಕೊಳ್ಳುತ್ತಿರುವ ಸ್ವಜನಪಕ್ಷಪಾತ ಹೆಚ್ಚಿನ ಹೊಸಬರಹಗಾರರನ್ನು ದಿಕ್ಕೆಡಿಸುತ್ತಿದೆ.  ಆಯಕಟ್ಟಿನಲ್ಲಿರುವವರ ಸಂಪರ್ಕದ ಅಗತ್ಯ ಸರಕಾರೀ ಕಚೇರಿಗಳಂತೆ ಪತ್ರಿಕಾ ಕಚೇರಿಗಳಲ್ಲೂ ಮುಖ್ಯವಾಗುತ್ತಿದೆ.  ಇಷ್ಟಾಗಿಯೂ, ಹೊಸಬರಹಗಾರರು ನಿರಾಶಾವಾದಿಗಳಾಗದೇ ತಾಳ್ಮೆವಹಿಸಿದರೆ ಅವರಿಗೆ ಅಗತ್ಯವಾದ ವೇದಿಕೆ ಮುದ್ರಣ ಮಾಧ್ಯಮದಲ್ಲಿ ಸಿಕ್ಕೇ ಸಿಗುತ್ತದೆ.  ಈ ನಿಟ್ಟಿನಲ್ಲಿ ಹೊಸಬರು ಗಮನಿಸಬೇಕಾದ ಅಂಶವೊಂದಿದೆ:

ಸಂಪಾದಕರು ಬದಲಾದಂತೆ ಪತ್ರಿಕೆಯ ಧೋರಣೆಗಳೂ ಬದಲಾಗುತ್ತವೆ.  ಪತ್ರಿಕೆಗಳು ಮನೆಗಳ ಹಾಗೆ, ಸಂಪಾದಕರು ಅಲ್ಲಿ ಬಾಡಿಗೆಗಿರುವ ಜನರ ಹಾಗೆ.  ಒಂದು ಮನೆಯಲ್ಲಿ ವಾಸಿಸುವ ಜನರಿಗೆ ಹೇಗೋ ನಿಮ್ಮ ಬಗ್ಗೆ ಆದರ ಮೂಡಿರುತ್ತದೆ.  ನೀವು ಹೋದಾಗಲೆಲ್ಲಾ ಅವರು ನಗುಮೊಗದಿಂದ ಆದರಿಸುತ್ತಾರೆ.  ಕೆಲಕಾಲಾನಂತರ ಅವರು ಆ ಮನೆ ಬಿಟ್ಟು ಬೇರೆತ್ತಲೋ ಹೊರಟುಹೋಗುತ್ತಾರೆ.  ಆ ಮನೆಗೆ ಬೇರೊಬ್ಬರು ವಾಸಕ್ಕೆ ಬರುತ್ತಾರೆ.  ಮನೆ ಹಾಗೇ ಇದೆಯಲ್ಲ, ಅದೇ ಗೋಡೆಗಳು, ಅದೇ ಬಾಗಿಲು ಕಿಟಕಿಗಳು, ನಮಗೆ ಈಗಲೂ ಅಲ್ಲಿ ಅದೇ ಹಿಂದಿನ ಸ್ವಾಗತ ಸಿಗುತ್ತದೆ ಎಂದುಕೊಂಡು ನೀವು ಆ ಮನೆಗೆ ಹೋಗುತ್ತೀರಿ.  ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ಆ ಮನೆಯಲ್ಲಿ ಈಗಿರುವ ಜನ ನಿಮ್ಮನ್ನು ಆದರಿಸುವುದಿಲ್ಲ.  ಕಾರಣ ಇಷ್ಟೇ- ಆದರಿಸಲು ಅವರಿಗೆ ಅವರದೇ ಆದ ಸ್ನೇಹಿತರಿರುತ್ತಾರೆ.  ನಿಮ್ಮನ್ನು ಆದರಿಸುವ ಆಗತ್ಯ ಅವರಿಗಿರುವುದಿಲ್ಲ.  ಇನ್ನೊಂದು ಮನೆ.  ಅಲ್ಲಿನ ನಿವಾಸಿಗಳಿಗೆ ನಿಮ್ಮ ಬಗ್ಗೆ ಮಮತೆ.  ಅದು ಅವರದ್ದೇ ಸ್ವಂತ ಮನೆಯಾದ್ದರಿಂದ ಅವರು ಆ ಮನೆ ಬಿಟ್ಟು ಬೇರೆಡೆ ಹೋಗುವ ಮಾತೇ ಇಲ್ಲ.  ಹೀಗಾಗಿ ನಿಮಗೆ ಆ ಮನೆಯಲ್ಲಿ ನಿರಂತರ ಸ್ವಾಗತ!  ಆ ಸ್ವಾಗತದಲ್ಲಿ ಏರುಪೇರಾಗುವುದು ನಿಮ್ಮಿಂದ ಅಪಚಾರವೇನಾದರೂ ಘಟಿಸಿದರೆ ಮಾತ್ರ.  ಹಾಗಾಗದಂತೆ ನೀವು ಎಚ್ಚರಿಕೆ ವಹಿಸಿದರಾಯಿತು.  ಬರಹಗಾರರಾಗಿ ಗುರುತಿಸಿಕೊಳ್ಳುವ ಬಯಕೆ ನಿಮಗಿದ್ದರೆ, ಅದಕ್ಕಾಗಿ ನೀವು ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ ಆದರೆ, ಆರು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಸಂಪಾದಕರು/ಉಪಸಂಪಾದಕರು ಬದಲಾಗುವ ಪತ್ರಿಕೆಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೋಗಬೇಡಿ.  ಒಂದೇ ಒಡೆತನದಲ್ಲಿ ಅಥವಾ ಒಂದೇ ಸಂಪಾದಕವರ್ಗದ ಕೈಯಲ್ಲಿರುವ ಪತ್ರಿಕೆಗಳಲ್ಲಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸಿ.  ಗಳಿಸಿದ ಮೇಲೆ ಅದನ್ನು ಉಳಿಸಿಕೊಳ್ಳಲು ನಿರಂತರ ಶ್ರಮಿಸಿ.

 

***     ***     ***