ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, December 29, 2011

ಲೇಖನ: ಮಿಥ್ಯ, ಸತ್ಯಗಳ ನಡುವೆ...



ಕಥೆ - ಒಂದು
ಮನುಷ್ಯನನ್ನು social animal, political animal ಹೀಗೆ ಎಂತೆಂಥದೋ animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ.   ಈ ಬಗ್ಗೆ ಒಂದು ಕಥೆ ಇದೆ.  ಹದಿನೆಂಟು - ಇಪ್ಪತ್ತು ವರ್ಷಗಳ ಹಿಂದೆ ನಾನೊಂದು ಕಾರ್ಯಕಮ್ಮಟದಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ವಿದ್ವಾಂಸರೊಬ್ಬರು ಹೇಳಿದ್ದು.
ಮನುಷ್ಯನನ್ನು ಏನೆಂದು ಹೆಸರಿಸುವುದು? ಎಂಬ ಬಗ್ಗೆ ಒಂದು ದಿನ ಅರಿಸ್ಟಾಟಲ್ ತನ್ನ ಲಿಸಿಯಂನಲ್ಲಿ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿದ್ದನಂತೆ.  ಮನುಷ್ಯನನ್ನು ಮಿಗ ಎನ್ನುವುದಾಗಲೀ ಖಗ ಎನ್ನುವುದಾಗಲೀ ಸಾಧ್ಯವಿಲ್ಲ.  ಮೃಗಗಳು ನಾಲ್ಕು ಕಾಲಿನಲ್ಲಿ ನಡೆಯುತ್ತವೆಯಾದರೆ ಮನುಷ್ಯ ಎರಡೇ ಕಾಲಿನಲ್ಲಿ ನಡೆಯುತ್ತಾನೆ.  ಹೀಗಾಗಿ ಮನುಷ್ಯನನ್ನು ಮೃಗ ಎನ್ನಲಾಗದು.  ಹಾಗೆಯೇ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದಷ್ಟೇ ಮನುಷ್ಯನನ್ನು ಪಕ್ಷಿ ಎನ್ನಲಾದೀತೇಇಲ್ಲ, ಅದೂ ಸಾಧ್ಯವಿಲ್ಲ.  ಯಾಕೆಂದರೆ ಮನುಷ್ಯನಿಗೆ ಪಕ್ಷಿಗಳಿಗಿರುವಂತೆ ರೆಕ್ಕೆ ಪುಕ್ಕಗಳಿಲ್ಲ.  ಹಾಗಿದ್ದರೆ ಮನುಷ್ಯನನ್ನು ಏನೆಂದು ಕರೆಯುವುದುದಿನಪೂರ್ತಿ ಚರ್ಚೆ ನಡೆಯಿತು.  ಸಂಜೆಯ ಹೊತ್ತಿಗೆ ಗುರು ಶಿಷ್ಯರುಗಳು ಒಂದು ತೀರ್ಮಾನಕ್ಕೆ ಬಂದರು.  ಮನುಷ್ಯ ಪಕ್ಷಿಗಳಂತೆ ಎರಡೇ ಕಾಲುಗಳಲ್ಲಿ ನಡೆಯುವುದರಿಂದ ಹಾಗೂ ಮೃಗಗಳಂತೆ ರೆಕ್ಕೆಪುಕ್ಕಗಳನ್ನು ಹೊಂದಿಲ್ಲದ ಕಾರಣ ಅವನನ್ನು "featherless biped" ಅಂದರೆ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆಯುವುದು ಸೂಕ್ತ!  ಮನುಷ್ಯಜಾತಿಗೆ ಕೊನೆಗೂ ಒಂದು ಹಣೆಪಟ್ಟಿಯನ್ನು ಹಚ್ಚಿದ ಯಶಸ್ಸಿನಲ್ಲಿ ಗುರುಶಿಷ್ಯರು ಬೀಗಿದರು.
ನಮ್ಮ ಗಾಂಪರೊಡೆಯರು ಮತ್ತವರ ಶಿಷ್ಯರ ಕಥೆಯಂತಿದೆಯಲ್ಲವೇಇರಲಿ, ಮುಂದೆ ಕೇಳಿ.  ಕಥೆ ಬೇರೆಯೇ ದಾರಿ ಹಿಡಿಯುತ್ತದೆ.
ಮನುಷ್ಯನನ್ನು ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿ ಎಂದು ಕರೆದು ತಿಪ್ಪೆ ಸಾರಿಸಿ ಕೈ ತೊಳೆದುಕೊಂಡುಬಿಡುವುದು ಒಬ್ಬ ಶಿಷ್ಯನಿಗೆ ಸರಿಕಾಣಲಿಲ್ಲ.  ಆದರೆ ಗುರುವಿಗೆ ಹೇಳುವುದು ಹೇಗೆನಿಮ್ಮ ನಿರ್ಣಯ ತಪ್ಪು ಎಂದು ಗುರುವಿಗೆ (ಬೇಸರವಾಗದಂತೆ) ಅರಿವು ಮಾಡಿಸುವುದು ಹೇಗೆ?
ರಾತ್ರಿಯೆಲ್ಲಾ ಯೋಚಿಸಿದ ಅವನು ಬೆಳಗಿನ ಹೊತ್ತಿಗೆ ಒಂದು ಯೋಜನೆ ರೂಪಿಸಿದ.  ಒಂದು (ಬಡಪಾಯಿ) ಕೋಳಿಹುಂಜವನ್ನು ಹಿಡಿದು ಅದರ ರೆಕ್ಕೆಪುಕ್ಕವನ್ನೆಲ್ಲಾ ಕಿತ್ತುಹಾಕಿದ.  ಅದನ್ನು ಕಂಕುಳಲ್ಲಿ ಇರುಕಿಕೊಂಡು ಗುರುವಿನ ಕೋಣೆಗೆ ಹೋಗಿ ಮೇಜಿನ ಮೇಲಿಟ್ಟ.  ಗುರುವಿಗೆ ಗಾಬರಿ.  ಬೋಳುಬೋಳು ಕೋಳಿಹುಂಜವನ್ನೇ ನೋಡುತ್ತ "ಇದೇನಯ್ಯ ಇದೂ?" ಎಂದು ಒದರಿದ.
"ನಿಮ್ಮ ಮನುಷ್ಯ."  ಶಿಷ್ಯ ತಣ್ಣಗೆ ಹೇಳಿದ.  ಗುರು ಕಣ್ಣುಕಣ್ಣು ಬಿಟ್ಟ.
"ಇದಕ್ಕೆ ರೆಕ್ಕೆಪುಕ್ಕಗಳಿಲ್ಲ.  ಎರಡು ಕಾಲುಗಳಲ್ಲಿ ನಡೆದಾಡುತ್ತದೆ.  This is a featherless biped, YOUR MAN". ಶಿಷ್ಯ ವಿವರಿಸಿದ.
ಗುರುವಿಗೆ ಜ್ಞಾನೋದಯವಾಯಿತು.
ಆನಂತರ ಯೋಚನೆಗೆ ಬಿದ್ದ ಅರಿಸ್ಟಾಟಿಲ್ ಕೊನೆಗೆ Man is a Thinking Animal ಎಂಬ ತೀರ್ಮಾನಕ್ಕೆ ಬಂದ(ನಂತೆ).

ವಾಸ್ತವ - ಒಂದು
ಅರಿಸ್ಟಾಟಿಲ್‌ನ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡಿದ್ದಾಗಿದೆ, ಕೆಲವು ಪ್ರಭುತ್ವಗಳ ಹೊರತಾಗಿ.  ಅವು ತಮ್ಮ ಪ್ರಜೆಗಳಷ್ಟೇ ಅಲ್ಲ, ವಿಶ್ವದ ಮನುಷ್ಯರೆಲ್ಲರೂ ಕೇವಲ ರೆಕ್ಕೆಪುಕ್ಕಗಳಿಲ್ಲದ ದ್ವಿಪಾದಿಗಳು ಎಂದು ಭಾವಿಸಿ ಕೋಳಿಗಳಿಗೆ ಹಾಕುವಂತೇ ಹುಳುಹುಪ್ಪಟೆಯಂತಹ ಕೊಳಕುಗಳನ್ನು ಹೊಟ್ಟೆತುಂಬಾ ತಿನ್ನಿಸುತ್ತವೆ.  ತಲೆಗೂ ತುಂಬುತ್ತವೆ.
ಶೀತಲ ಸಮರ ಜಗತ್ತನ್ನು ಬಿಸಿಯಾಗಿಟ್ಟಿದ್ದ ಕಾಲದಲ್ಲಿ ನಾನು ವಿದ್ಯಾರ್ಥಿ.  ಎಪ್ಪತ್ತರ ದಶಕದ ಉತ್ತರಾರ್ಧ ಅದು.  ನಾನು ಪಿಯುಸಿಯಲ್ಲಿದ್ದೆ.  ಬಾಲ್ಯದಿಂದಲೂ ರೇಡಿಯೋವನ್ನು ಕಿವಿಗೆ ಹಚ್ಚಿ ಕೂರುವ ಹವ್ಯಾಸವಿದ್ದ ನನಗೆ ಶಾರ್ಟ್ ವೇವ್‌ನಲ್ಲಿ ಅಡಿಗಡಿಗೆ ಎದುರಾಗುತ್ತಿದ್ದ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಮಾಸ್ಕೋ, ರೇಡಿಯೋ ನೆದರ್ಲ್ಯಾಂಡ್‌ಗಳ ಸೆಳೆತ ಅಪರಿಮಿತ.  ಬಿಡುವಿನ ದಿನಗಳಲ್ಲಿ ಬೆಳಿಗ್ಗೆ ಆರು ಇಪ್ಪತ್ತಕ್ಕೆ ಬಿಬಿಸಿಯ ಹಿಂದಿ ಕಾರ್ಯಕ್ರಮ, ಅದರಲ್ಲಿನ ವಾರ್ತೆಗಳು, ವಾರ್ತಾ ವಿಶ್ಲೇಷಣೆಯ "ವಿಶ್ವಭಾರತಿ" ಅಂಕಣದೊಂದಿಗೆ ನನ್ನ ರೇಡಿಯೋ ಸಾಂಗತ್ಯ ಆರಂಭವಾದರೆ ಅದು ಮುಕ್ತಾಯವಾಗುತ್ತಿದ್ದುದು ರೇಡಿಯೋ ಪಾಕಿಸ್ತಾನ್‌ನ ರಾತ್ರಿ ಹತ್ತೂವರೆಯ "ಆಲಮಿ ಸ್ಪೋರ್ಟ್ಸ್ ರೌಂಡ್ ಅಪ್" ಉರ್ದು ಕಾರ್ಯಕ್ರಮದೊಂದಿಗೆ.  ರೇಡಿಯೋ ಮಾಸ್ಕೋದ ಕನ್ನಡ ಕಾರ್ಯಕ್ರಮಗಳ ಬಗ್ಗೆ ಅರಿತೊಡನೆ ಅದಕ್ಕೂ ಅಂಟಿಕೊಂಡೆ.  ಅವಕಾಶ ಸಿಕ್ಕಿದಾಗೆಲ್ಲಾ ಸಂಜೆ ನಾಲ್ಕೂವರೆಯಿಂದ ಐದು ಅಥವಾ ಆರೂವರೆಯಿಂದ ಏಳುಗಂಟೆಯವರೆಗೆ ದೂರದ ಮಾಸ್ಕೋದಿಂದ ತೇಲಿಬರುತ್ತಿದ್ದ ಇರೀನಾ ತ್ಯೂರಿನಾಳ ಮುದ್ದುಮುದ್ದಾದ ಕನ್ನಡ ಮಾತುಗಳು ಮತ್ತು ನಮ್ಮ ಕೊಳ್ಳೇಗಾಲದ ಹತ್ತಿರದ ಮುಳ್ಳೂರಿನವರೇ ಅದ ಶ್ರೀ ಮಹದೇವಯ್ಯನವರ ಆಕರ್ಷಕ ದನಿಯನ್ನು ಕೇಳುತ್ತಿದ್ದೆ.  ಅವರು ಬಿಂಬಿಸುತ್ತಿದ್ದ ಭೂಲೋಕದ ಸ್ವರ್ಗ ಸೋವಿಯೆತ್ ಯೂನಿಯನ್‌ನ ಚಿತ್ರಗಳನ್ನು ಮನದಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದೆ.  ನಮ್ಮ ದೇಶದ ಬಗ್ಗೆ ಸೋವಿಯೆತ್ ಆಳರಸರಿಗಿದ್ದ ಅಪರಿಮಿತ ಪ್ರೀತಿಗೆ ನನ್ನ ಕಣ್ಣುಗಳು ತೇವವಾಗುತ್ತಿದ್ದವು.  ಆ ಮಹಾನ್ ಸಮತಾವಾದಿ ನಾಡಿನ ಅದ್ಭುತ ಆರ್ಥಿಕ ಪ್ರಗತಿ, ನಿರುದ್ಯೋಗವೇ ಇಲ್ಲದ, ಎಲ್ಲರಿಗೂ ಎಲ್ಲವೂ ಸಿಗುತ್ತಿದ್ದ ಕನಸಿನ ರಾಜ್ಯದ ಬಗ್ಗೆ ದಿನವೂ ಕೇಳುತ್ತಾ ನಮ್ಮ ದೇಶದಲ್ಲಿ ಅಂತಹ ದಿನಗಳು ಯಾವಾಗ ಬರುತ್ತವೆ ಎಂದು ಕನಸು ಕಾಣುತ್ತಾ... ಕಾಣುತ್ತಾ... ಕಮ್ಯೂನಿಸ್ಟನೇ ಆಗಿಬಿಟ್ಟೆ...
ರೇಡಿಯೋ ಮಾಸ್ಕೋಗೆ ಪತ್ರ ಬರೆದೆ.  ಅಲ್ಲಿಂದ ಅತ್ಯಾಕರ್ಷಕ ಅಂಚೆಚೀಟಿ ಅಂಟಿಸಿದ್ದ ಲಕೋಟೆಯಲ್ಲಿ ಉತ್ತರ ಬಂದಾಗ ನಾನು ಅಕ್ಷರಶಃ ಕುಣಿದಾಡಿಬಿಟ್ಟೆ.  ಪತ್ರಸರಣಿ ಆರಂಭವಾಯಿತು.  ಸುಂದರ ವ್ಯೂ ಕಾರ್ಡ್‌ಗಳು, ಪುಸ್ತಕಗಳು, ಕ್ಯಾಲೆಂಡರ್‌ಗಳು, ಹೊಚ್ಚಹೊಸ ಅಂಚೆಚೀಟಿಗಳು ಒಂದಾದ ಮೇಲೊಂದು ಬರತೊಡಗಿ ನನ್ನನ್ನು ಸಮೃದ್ದಗೊಳಿಸತೊಡಗಿದವು.
ಎಲ್ಲ ಕನಸುಗಳೂ ಕೊನೆಯಾಗುವಂತೆ ನನ್ನೀ ಯುಟೋಪಿಯಾವೂ ಒಂದು ದಿನ ಕೊನೆಯಾಯಿತು.
೧೯೭೯ರ ಉತ್ತರಾರ್ಧದ ಒಂದು ಸಂಜೆ.  ಆಗ ನಾನು ದ್ವಿತೀಯ ಕಲಾಸ್ನಾತಕ.  ಆ ದಿನಗಳಲ್ಲಿ ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟ್‌ನಿಂದ ಪ್ರಕಟವಾಗುತ್ತಿದ್ದ "ಪ್ರಜಾಪ್ರಭುತ್ವ" ವಾರಪತ್ರಿಕೆಯಲ್ಲಿ ಒಂದು ಲೇಖನ ನನ್ನನ್ನು ಕಂಗೆಡಿಸಿಬಿಟ್ಟಿತು.  ಮಾಸ್ಕೋದಲ್ಲಿ ವಿದ್ಯಾರ್ಥಿಯಾಗಿದ್ದ ಬಾಬು ಕೊಪ್ಲೆ ಎಂಬ ಭಾರತೀಯ ಯುವಕನನ್ನು ಸೋವಿಯೆತ್ ಗುಪ್ತಚರ ಸಂಸ್ಥೆ ಕೆಜಿಬಿ ಅಪಹರಿಸಿ ಕೊಂದ ಸುದ್ದಿ ಅದಾಗಿತ್ತು.  ನನ್ನ ಭಾರತವನ್ನು ಅಪರಿಮಿತವಾಗಿ ಪ್ರೀತಿಸುವ ರಶಿಯನ್ನರು ಹೀಗೇಕೆ ಮಾಡಿದರು ಎಂದು ಚಿಂತಿಸಿದೆ.  ಈ ಸುದ್ದಿ ನಿಜವೇ ಎಂದು ನನ್ನ ರೇಡಿಯೋ ಮಾಸ್ಕೋದ ಗೆಳೆಯರಿಗೆ ಪತ್ರ ಬರೆದೆ.  ದಿನಗಳು, ವಾರಗಳು, ತಿಂಗಳುಗಳು ಗತಿಸಿದವು.  ಉತ್ತರ ಬರಲಿಲ್ಲ.  ಹಿಂದೆಲ್ಲಾ ಸೋವಿಯೆತ್ ಸ್ವರ್ಗದ ಬಗ್ಗೆ ನನ್ನೆಲ್ಲಾ ಪ್ರಶ್ನೆಗಳಿಗೆ ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಗಳಲ್ಲಿ ತಪ್ಪದೇ ಉತ್ತರಿಸುತ್ತಿದ್ದ ನನ್ನ ರೇಡಿಯೋ ಮಾಸ್ಕೋ ಗೆಳೆಯರು ಈಗ ಮೌನವಾಗಿದ್ದರು.  ಅದೇ ಸಮಯದಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಕೆಜಿಬಿಯ ತರಬೇತಿ ಸಂಸ್ಥೆ ಗೈಜಾಯಿನಾ ಬಗ್ಗೆ ಓದಿ ಅದರ ಬಗ್ಗೆ ನನ್ನ ಮಾಸ್ಕೋ ಗೆಳೆಯರಿಗೆ ಮತ್ತೊಂದು ಪತ್ರ ಬರೆದೆ.  ಉತ್ತರ ಬರಲಿಲ್ಲ.
ಅದೆಷ್ಟೋ ಕಾಲದ ನಂತರ ಪತ್ರ ಬಂದಾಗ ಅದರಲ್ಲಿದ್ದದ್ದು ಯಾವ ವಿಶೇಷವೂ ಇಲ್ಲದ ಮೂರುನಾಲ್ಕು ಸಾಲುಗಳು, ಜತೆಗೆ ನನಗೆ ಇಷ್ಟವಾದ ಅಂಚೆಚೀಟಿಗಳು ಮತ್ತು ವ್ಯೂ ಕಾರ್ಡ್‌ಗಳು.  ನನ್ನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ...
ನನಗೆ ಬೇಕಾದ ಉತ್ತರಗಳಿಗಾಗಿ ನಾನು ಬೇರೆಡೆ ಹುಡುಕಾಡತೊಡಗಿದೆ.  ಆಗ ಸಿಕ್ಕಿದ ಉತ್ತರಗಳು ನನ್ನನ್ನು ದಿಗ್ಘ್ರಮೆಗೊಳಿಸಿದವು...
ಅದಾದ ಕೆಲವೇ ವರ್ಷಗಳಲ್ಲಿ, ತನ್ನ ಮಾಧ್ಯಮಗಳ ಮೂಲಕ ಮಾಸ್ಕೋ ಹೊರಜಗತ್ತಿಗೆ ನೀಡುತ್ತಿರುವ ಸುದ್ದಿಗಳೆಲ್ಲಾ ಬೊಗಳೆ, ತನ್ನ ಆರ್ಥಿಕ ಪ್ರಗತಿಯ ಬಗ್ಗೆ ನೀಡುತ್ತಿರುವ ಅಂಕಿಅಂಶಗಳೆಲ್ಲಾ ಸುಳ್ಳಿನ ಕಂತೆ, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಆಹಾರದ ಕೊರತೆ ದಿಕ್ಕೆಡಿಸುವ ಮಟ್ಟದಲ್ಲಿದೆ ಎಂದು ರಶಿಯನ್ನನೇ ಅದ ಅರ್ಥಶಾಸ್ತ್ರಜ್ಞ ಅನತೋಲಿ ಶತಾಲಿನ್ ಆಧಾರಸಮೇತ ಸಾರಿದ.  ಅವನ ಲೇಖನಗಳನ್ನು ಗೋರ್ಬಚೆವ್‌ರ ಕ್ರೆಮ್ಲಿನ್ ನಿರಾಕರಿಸಲಿಲ್ಲ.  ಆಗ ನನ್ನ ಅರಿವು ವಿಸ್ತಾರವಾದಂತೆನಿಸಿತು...  "ಹೊರಜಗತ್ತಿಗೆ ಸುಳ್ಳು ಹೇಳುವುದರಿಂದ ನಮ್ಮ ನೋವುಗಳೇನೂ ನಿವಾರಣೆಯಾಗುವುದಿಲ್ಲ.  ನಮ್ಮ ಬದುಕು ಸುಧಾರಿಸಬೇಕಾದರೆ ನಾವು ವಾಸ್ತವಗಳನ್ನು ಒಪ್ಪಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದೊಂದೇ ಮಾರ್ಗ" ಎಂದು ಆ ಮಹಾನ್ ನಾಯಕ ಘೋಷಿಸಿದಾಗ ನನ್ನ ಜಗತ್ತು ವಿಶಾಲವಾಯಿತು.
ನನ್ನ ಟ್ರ್ಯಾನ್ಸಿಸ್ಟರ್‌ನ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಕಿವಿ ಕಿತ್ತುಹೋಗುವಂತೆ ಅರಚುತ್ತಿದ್ದ ರೇಡಿಯೋ ಮಾಸ್ಕೋ, ರೇಡಿಯೋ ತಾಷ್ಕೆಂಟ್‌ಗಳು ನಂತರದ ದಿನಗಳಲ್ಲಿ ಗಪ್ಪನೆ ಬಾಯಿ ಮುಚ್ಚಿಕೊಂಡವು.  ಕನ್ನಡ ಕಾರ್ಯಕ್ರಮಗಳು ಇತಿಹಾಸವಾದವು.  ಮಹದೇವಯ್ಯ ಭಾರತಕ್ಕೆ ಹಿಂತಿರುಗಿದರು ಅನಿಸುತ್ತದೆ.  ಇರೀನಾ ತ್ಯೂರಿನಾಳ ಮುದ್ದುಕೊರಳು ಮತ್ತೆ ನನ್ನ ಕಿವಿಗೆ ಬೀಳಲಿಲ್ಲ...
ಸುಳ್ಳಿನ ಮೇಲೆ ಕಟ್ಟಿದ್ದ ಸೋವಿಯೆತ್ ಗೋಪುರ ಕೆಲವೇ ವರ್ಷಗಳಲ್ಲಿ ಕುಸಿದು ಬಿತ್ತು.

ವಾಸ್ತವ - ಎರಡು
ಶೀತಲ ಸಮರ ಮುಕ್ತಾಯವಾದ ಮೇಲೆ propaganda ಅರ್ಥಹೀನಗೊಂಡು ಮಹತ್ವ ಕಳೆದುಕೊಳ್ಳುತ್ತಿದ್ದಂತೇ ವಾಯ್ಸ್ ಆಫ್ ಅಮೆರಿಕಾ ಸಹಾ ತನ್ನ ದನಿಯನ್ನು ಗಣನೀಯವಾಗಿ ತಗ್ಗಿಸಿಬಿಟ್ಟಿತು.  ಈ ದಿನಗಳಲ್ಲಿ ಬಿಬಿಸಿ ಸಹಾ ಮೊದಲಿನಷ್ಟು ಜೋರಾಗಿ' ಕೇಳಿಸುವುದಿಲ್ಲ.  ರೇಡಿಯೋ ಮಾಸ್ಕೋ ಅಡ್ರೆಸ್ಸೇ ಇಲ್ಲ.
          ಇವೆಲ್ಲವುಗಳಿಗೆ ಬದಲಾಗಿ ಶಾರ್ಟ್ ವೇವ್‌ನ ಎಲ್ಲ ಮೀಟರ್ ಬ್ಯಾಂಡ್‌ಗಳಲ್ಲೂ ಬೇರೊಂದು ದನಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕರ್ಕಶವಾಗಿ ಮೊಳಗತೊಡಗಿದೆ.  ಇಂಗ್ಲಿಷ್ ಜತೆ ಹಿಂದಿ ತಮಿಳು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅದು ಬಾಯಿ ಬಡಿದುಕೊಳ್ಳುತ್ತಿದೆ.  ಅದು ಚೈನಾ ರೇಡಿಯೋ ಇಂಟರ್‌ನ್ಯಾಷನಲ್.
          ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ರೇಡಿಯೋ ಮಾಸ್ಕೋಗಿದ್ದ ಬಾಯಿಗಿಂತಲೂ ಈ ಚೈನಾ ರೇಡಿಯೋದ ಬಾಯಿ ಅಗಲವಾಗಿದೆ, ದನಿ ಜೋರಾಗಿದೆ.  ಚೈನಾದ ಸಮತಾವಾದಿ ಸ್ವರ್ಗದ ಸುಂದರ ಚಿತ್ರಣಗಳು ಅಲ್ಲಿ ಮಣಗಟ್ಟಲೆ ದೊರೆಯುತ್ತವೆ.  ಚೀನೀಯರು ಟಿಬೆಟ್‌ನಲ್ಲಿ ಮಾಡುತ್ತಿರುವ ಒಳ್ಳೆಯ ಕಾರ್ಯಗಳು, ಅದನ್ನು ವಿರೋಧಿಸಿ ಕೆಲವು ದೇಶದ್ರೋಹಿ ಟಿಬೆಟಿಯನ್ ಪುಂಡರು ಚೀನೀ ಪೋಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಕೊಂದದ್ದು, ಶಾಂತ ಟಿಬೆಟ್‌ನಲ್ಲಿ ಅಶಾಂತಿ ಉಂಟುಮಾಡಿದ್ದು- ಇವೆಲ್ಲವನ್ನೂ ಅಲ್ಲಿ ಕೇಳಿ ತಿಳಿದುಕೊಳ್ಳಬಹುದು.  ನಮ್ಮ ಇಂಗ್ಲಿಷ್ ದೈನಿಕವೊಂದು ಈ ಸುದ್ದಿಗಳಿಗೆ ತುಂಬಾ ಗೌರವ ಕೊಟ್ಟು ಪ್ರಕಟಿಸುತ್ತದೆ.  ಅದರ ಸಂಪಾದಕರು ಆಗಾಗ ಚೈನಾಗೆ ಹೋಗಿ ಬರುತ್ತಾರೆ.  ಅಲ್ಲಿಂದ ಬಂದ ಮೇಲೆ ಅಲ್ಲಿ ತಾವು ಕಂಡ ಸತ್ಯಗಳನ್ನು ತಮ್ಮ ಪತ್ರಿಕೆಯಲ್ಲಿ ಮರೆಯದೇ ಬರೆಯುತ್ತಾರೆ.  ತಮ್ಮ ಚೀನೀ ಭೇಟಿಗಳಿಗೆ ಅವರು ತಮ್ಮ ಸ್ವಂತ ಹಣವನ್ನೇನೂ ಖರ್ಚು ಮಾಡುವುದಿಲ್ಲ ಎಂಬ ಗುಸುಗುಸು, ಪಿಸುಪಿಸು.  ಏನೋಪ್ಪ, ನನಗೆ ಅದೇನೂ ಅರ್ಥವಾಗುವುದಿಲ್ಲ.
ಆದರೆ ಈ ಚೈನೀಸ್ ರೇಡಿಯೋ ಕೇಳಲು ಯಾಕೋ ನನಗೆ ಉತ್ಸಾಹವೆನಿಸುತ್ತಿಲ್ಲ.  ಹಿಂದೆ ಬಾಲ್ಯದಲ್ಲಿ ರಾತ್ರಿಯ ನೀರವತೆಯಲ್ಲಿ ನಾನು ಮೈಮರೆತು ಆಲಿಸುತ್ತಿದ್ದ ಇದೇ ಚೀನೀ ರೇಡಿಯೋ ಕೇಂದ್ರಗಳಿಂದ ತೇಲಿಬರುತ್ತಿದ್ದ ಸುಶ್ರಾವ್ಯ ವಾದ್ಯಸಂಗೀತಗಳಷ್ಟು ಈ ವಾರ್ತೆಗಳು ಆಕರ್ಷಕವೆನಿಸುತ್ತಿಲ್ಲ...  ನನ್ನ ಟ್ರ್ಯಾನ್ಸಿಸ್ಟರ್‌ನಲ್ಲಿ ಬೇಕಾದ ಕೇಂದ್ರಕ್ಕೆ ಟ್ಯೂನ್ ಮಾಡುವಾಗ ಮತ್ತೆಮತ್ತೆ ಅಡ್ಡ ಬರುವ ಈ ಚೀನೀ ರೇಡಿಯೋ ಬೇಡಬೇಡವೆಂದರೂ ನನಗೆ ರೇಡಿಯೋ ಮಾಸ್ಕೋವನ್ನು ನೆನಪಿಸಿಬಿಡುತ್ತದೆ...

ಕಥೆ - ಎರಡು
ಮೂರು-ನಾಲ್ಕು ವರ್ಷಗಳ ಹಿಂದೆ ರಾಮಕೃಷ್ಣ ಮಠದ ಸಂನ್ಯಾಸಿಯೊಬ್ಬರು ಹೇಳಿದ ಕಥೆ ಇದು.  ಈ ಕಥೆಯಲ್ಲೂ ಒಂದು ಕೋಳಿ ಇದೆ.  ಹುಂಜವೋ ಹೇಂಟೆಯೋ ನೆನಪಾಗುತ್ತಿಲ್ಲ.  ಸಧ್ಯಕ್ಕೆ ಕೋಳಿ ಎಂದು ನ್ಯೂಟ್ರಲ್ ಜೆಂಡರ್‌ನಲ್ಲೇ ಕರೆಯೋಣ ಬಿಡಿ.  ತೊಂದರೆಯೇನಿಲ್ಲ.  ಆ ಮೆಲುಮಾತಿನ ಸಂನ್ಯಾಸಿ ಚಂದದ ಇಂಗ್ಲಿಷ್‌ನಲ್ಲಿ ಕಥೆ ಹೇಳಿ ಮುಗಿಸುತ್ತಿದ್ದಂತೇ ನನಗೆ ತಡೆಯಲಾರದಷ್ಟು ನಗು ಬಂದುಬಿಟ್ಟಿತ್ತು.
ಕೋಳಿಗೆ ಹಾರುವ ಇಚ್ಚೆ.  ಒಂದು ದಿನ ನವಿಲೊಂದು ಹಾರಿದ್ದನ್ನು ಕಂಡ ಮೇಲಂತೋ ಅದಕ್ಕೆ ತಡೇಯಲಾಗಲಿಲ್ಲ.  "ನೀನು ನನಗಿಂತಲೂ ದಢೂತಿ.  ಅದು ಹೇಗೆ ಹಾರಾಡುತ್ತಿ?" ಎಂದು ಕೇಳಿಯೇ ಬಿಟ್ಟಿತು.  "ಒಂಚೂರು ದನದ ಸಗಣಿ ತಿಂದೆ ಅಷ್ಟೇ.  ಹಾರುವ ಸಾಮರ್ಥ್ಯ ಬಂದುಬಿಟ್ಟಿತು."  ನವಿಲು ನಗುತ್ತಾ ಉತ್ತರಿಸಿ ವೈಯಾರದಿಂದ ಹಾರಿಹೋಯಿತು.
ಹಾರುವ ಮರ್ಮ ತಿಳಿದದ್ದೇ ಕೋಳಿ ಹತ್ತಿರದಲ್ಲೇ ಕಂಡ ಸಗಣಿ ಗುಪ್ಪೆಯತ್ತ ಓಡಿತುಆತುರಾತುರವಾಗಿ ಹಿಡಿ ಸಗಣಿ ಮುಕ್ಕಿತು, ರೆಕ್ಕೆ ಬಿಚ್ಚಿತು.  ಆಶ್ಚರ್ಯ!  ನವಿಲು ಹೇಳಿದ್ದು ನಿಜ.  ಕೋಳಿಗೆ ಹಾರುವ ಸಾಮರ್ಥ್ಯ ಬಂದುಬಿಟ್ಟಿತ್ತು.  ಖುಷಿಯಾಗಿ ಹಾರಿದ ಕೋಳಿ ಮರದ ರೆಂಬೆಯೊಂದರ ಮೇಲೆ ಕೂತು ದಿಕ್ಕುದಿಕ್ಕಿಗೆ ಕೇಳುವಂತೆ ವಿಜಯದ ಕೇಕೆ ಹಾಕಿತು.
ಬಂದೂಕು ಹಿಡಿದು ಹೋಗುತ್ತಿದ್ದ ಬೇಟೆಗಾರನೊಬ್ಬನಿಗೆ ನಮ್ಮ ಈ ಕೋಳಿಯ ವಿಜಯದ ಅಟ್ಟಹಾಸ ಕಿವಿಗೆ ಬಿದ್ದು ಅವನ ಕಣ್ಣು ಮರದ ಮೇಲೆ ಕುಳಿತಿದ್ದ ಅದರ ಮೇಲೆ ಬಿತ್ತು.  ಅರೆ!  ಗುಂಡುಗುಂಡು ಪೊಗದಸ್ತು ರೋಲಿ-ಪೋಲಿ ಕೋಳಿ!  ಬಾಯಲ್ಲಿ ನೀರೂರಿತು.  ಬಂದೂಕನ್ನೆತ್ತಿ ಗುರಿಯಿಟ್ಟ.  ಕೋಳಿಗೆ ಗಾಬರಿ.  ಏನು ಮಾಡಲೂ ತೋಚಲಿಲ್ಲ.  ಅಭ್ಯಾಸವಿಲ್ಲದ್ದರಿಂದ ಹಾರಬೇಕೆಂದೂ ಹೊಳೆಯಲಿಲ್ಲ...
ಬಂದೂಕಿನಿಂದ ಗುಂಡು ಹಾರಿತು.  ಕೋಳಿ ಧೊಪ್ಪನೆ ಕೆಳಗೆ ಬಿತ್ತು.  ಸಗಣಿಯನ್ನು ನಂಬಿದ್ದಕ್ಕೆ...
Moral of the story: You can not stay on top for long by just bullshitting!

Friday, December 23, 2011

ಅತ್ಯಂತ ಪುಟ್ಟ ಕಥೆ: ಚರ


ಬೆಳಗಾಯಿತು.

Monday, December 12, 2011

ದೆಹಲಿ: ರಾಜಧಾನಿಗೆ ಇಂದಿಗೆ ನೂರು ವರ್ಷ


"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು, ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ..."
ನನ್ನ ಕಥೆ "ಕನ್ನಡಿ"ಯ ಭಾಗವಾಗಿ ಈ ಮಾತುಗಳನ್ನು ನಾನು ಬರೆಯುವ ಹೊತ್ತಿಗೆ ನನ್ನ - ದೆಹಲಿಯ ನಂಟು ಕಾಲು ಶತಮಾನವನ್ನು ದಾಟಿತ್ತು.
ದೆಹಲಿ ಭಾರತದ ರಾಜಧಾನಿಯಾಗಿ ನೂರು ವರ್ಷ ತುಂಬುತ್ತಿರುವ ಈ ದಿನ ಎಲ್ಲವೂ ನೆನಪಾಗುತ್ತಿದೆ...
ನಾನು ಅಕ್ಷರಗಳನ್ನು ಕಲಿಯುವ ಹೊತ್ತಿಗೆ ಸೋದರಮಾವನನ್ನು ಮದುವೆಯಾಗಿ ಪುಟ್ಟಕ್ಕ ದೆಹಲಿಯಲ್ಲಿ ಸಂಸಾರ ಹೂಡಿ ವರ್ಷ ಕಳೆದಿತ್ತು.  ಅಕ್ಷರಗಳನ್ನು ಗುರುತಿಸುವ ಸಾಮರ್ಥ್ಯ ಕೈಗೆಟುಕಿದ್ದೇ ಮನೆಯಲ್ಲಿದ್ದ ಆಕ್ಸ್‌ಫರ್ಡ್ ಸ್ಕೂಲ್ ಅಟ್ಲಾಸ್‌ನಿಂದ ಹಿಡಿದು ಸಿಕ್ಕಿದ ಎಲ್ಲ ಭೂಪಟಗಳಲ್ಲೂ DELHI ಎಂಬ ಹೆಸರನ್ನು ನನ್ನ ಪೆನ್ಸಿಲ್‌ನ ಮೊನೆಯ ವೃತ್ತಗಳಲ್ಲಿ ಬಂಧಿಸಿ ನನ್ನದಾಗಿಸಿಕೊಂಡುಬಿಟ್ಟೆ.  ದೆಹಲಿ ಅಂದರೆ ನನಗೆ ಅಕ್ಕನ ಊರು.  ನನ್ನ ಪುಟ್ಟಕ್ಕ ಇದ್ದ ಪುಟ್ಟ ಹೆಸರಿನ ದೊಡ್ಡ ಊರು.
ಅದಾದ ಎರಡು ವರ್ಷಗಳಿಗೆ ಪುಟ್ಟಕ್ಕ ಊರಿಗೆ ಬಂದಾಗ ತಂದದ್ದು ಅಗಲದ ತೆಳು ಲೋಹದ ಪೆಟ್ಟಿಗೆ.  ಅದರೊಳಗೆ ಅಲಂಕಾರಿಕವಾಗಿ ಜೋಡಿಸಿದ್ದ ಅದೆಷ್ಟೋ ಬಗೆಯ, ಆಕಾರದ, ಸುವಾಸನೆಯ, ರುಚಿಯ ಬಿಸ್ಕೆಟ್‌ಗಳ ಸಾಲುಸಾಲು.  ಪೆಟ್ಟಿಗೆ ಮುಚ್ಚಳದ ಉದ್ದಗಲಕ್ಕೂ ನೂರೊಂದು ಬಣ್ಣಗಳ ಕಣ್ಸೆಳೆಯುವ ಚಿತ್ತಾರ.  ಅಂಚಿನಿಂದ ಅಂಚಿನವರೆಗೆ ಹರಡಿಕೊಂಡ ನೀಲಿನೀಲಿ ನೀರು, ನೀರಲ್ಲಿ ದೋಣಿಗಳು, ದೋಣಿಗಳಲ್ಲಿ ಮನೆಗಳು, ಮನೆಗಳಲ್ಲಿ ಜನಗಳು, ಹಿನ್ನೆಲೆಯಲ್ಲಿ ಹಸಿರು ಗಿಡಮರಗಳು, ಅವುಗಳಾಚೆ ಹಿಮಾಚ್ಛಾದಿತ ಪರ್ವತಸಾಲು...  ನಾನು ನಡೆದಾಡುವ ನೆಲದ ಮತ್ತೊಂದೆಡೆಯಲ್ಲಿ ಅಷ್ಟೆಲ್ಲಾ ಬಣ್ಣಗಳಿವೆಯೆಂದು ನನಗೆ ಗೊತ್ತಾದದ್ದೇ ಅಂದು.  ಕಣ್ಣರಳಿಸಿ ನೋಡುತ್ತಾ ಕೂತುಬಿಟ್ಟೆ.  "ಅದು ಕಾಶ್ಮೀರ" ಅಂದಳು ಪುಟ್ಟಕ್ಕ.
ನನ್ನ ಜಗತ್ತಿನೊಳಗೆ ಮೊದಲೇ ಇದ್ದ ದೆಹಲಿಯ ಜತೆ ಅಂದು ಕಾಶ್ಮೀರವೂ ಸೇರಿಕೊಂಡಿತು.  ದಿನಗಳೆದಂತೆ ಅವೆರಡೂ ನನ್ನೊಳಗೆ ಅಗಾಧವಾಗಿ ಬೆಳೆಯತೊಡಗಿದವು.  ಆ ಬೆಳವಣಿಗೆ ಇಂದಿಗೂ ಅವಿಚ್ಛಿನ್ನವಾಗಿ ಸಾಗಿದೆ...
ವರ್ಷಗಳ ನಂತರ ಪುಟ್ಟಕ್ಕನೇ ಕಳುಹಿಸಿದ ಹಣದಲ್ಲಿ ಟಿಕೆಟ್ ಕೊಂಡು ಜಿ.ಟಿ. ಎಕ್ಸ್‌ಪ್ರೆಸ್ ಹತ್ತಿ ಇಡೀ ಎರಡು ದಿನ ಚುಗುಚುಗು ಸಾಗಿ ನ್ಯೂಡೆಲ್ಲಿ ರೈಲ್ವೇ ಸ್ಟೇಶನ್‌ನಲ್ಲಿಳಿದು ಆ ಜನಸಾಗರದಲ್ಲಿ ಕಾಡುಪಾಪದಂತೆ ಕಣ್ಣುಕಣ್ಣು ಬಿಡುತ್ತಾ ನಿಂತಾಗ ಕಣ್ಣೆದುರು ಕಾಣಿಸಿ ನೆಮ್ಮದಿ ಮೂಡಿಸಿದ್ದು ಸೋದರಮಾವ.  ಸ್ಟೇಶನ್‌ನಿಂದ ಹೊರ ಕರೆತಂದು ಇಲ್ಲೇ ನಿಂತುಕೋ, ಸ್ಕೂಟರ್ ತರುತ್ತೇನೆ ಎಂದು ಹೇಳಿ ಅತ್ತ ಹೋದರು.  ಎರಡು ಚಕ್ರಗಳ ಸ್ಕೂಟರ್ ನಿರೀಕ್ಷಿಸಿದ್ದ ನನ್ನ ಮುಂದೆ ಅವರು ತಂದು ನಿಲ್ಲಿಸಿದ್ದು ಮೂರು ಚಕ್ರಗಳ ಆಟೋರಿಕ್ಷಾ!  ದಟ್ಟ ಗಡ್ಡಮೀಸೆಗಳ ನಡುವೆ ಹಲ್ಲು ಕಿರಿದ ಪಗಡಿತಲೆಯ ಆಟೋ ಡ್ರೈವರ್.  ದೆಹಲಿಗರು ಆಟೋರಿಕ್ಷಾವನ್ನು ಸ್ಕೂಟರ್ ಎಂದು ಕರೆಯುತ್ತಾರೆಂದು ಅರಿತಾಗ ನಗು ಬಂತು.  ದೆಹಲಿಯಲ್ಲಿ ಕಾಲಿರಿಸಿದ ಅರೆಗಳಿಗೆಯಲ್ಲಿ ಕಲಿತ ಮೊದಲ ಭಾಷಾಪಾಠ.  ಆಮೇಲೆ ಸ್ಕೂಟರ್ ಅನ್ನು ಸಕೂಟರ್ ಎನ್ನುತ್ತಾರೆಂದು ತಿಳಿದಾಗ...!  ಆಮೇಲಾಮೇಲೆ ಸಟೂಲ್, ಸಪೂನ್, ಸಕೂಲ್, ಸಟೇಟ್ ಬ್ಯಾಂಕ್...
ನನ್ನ ಕಲಿಕೆ ಇನ್ನೂ ನಿಂತಿಲ್ಲ.

***

ದೆಹಲಿಯದು ಧೀರ್ಘ ಇತಿಹಾಸವಾದರೂ ಅದರ ಪ್ರಾಚೀನ ಚಿತ್ರ ಅಥೆನ್ಸ್, ರೋಮ್, ದಮಾಸ್ಕಸ್, ಜೆರುಸಲೇಂ ಮುಂತಾದ ವಿಶ್ವದ ಪ್ರಾಚೀನ ರಾಜಧಾನಿಗಳಷ್ಟು ರೋಚಕವಾಗಿಲ್ಲ.  ಆ ನಗರಗಳ ಇತಿಹಾಸದಂತೆ ದೆಹಲಿಯ ಇತಿಹಾಸ ನಿರಂತರವಾಗಿಲ್ಲ ಮತ್ತು ಲಿಖಿತವಾಗಿ ದಾಖಲಾಗಿಲ್ಲ.  ಹಾಗಿದ್ದರೂ ದೆಹಲಿ ವಿಶ್ವಾದ್ಯಂತ ಎಲ್ಲರ ಕುತೂಹಲವನ್ನು ನಿರಂತರವಾಗಿ ಕೆರಳಿಸುತ್ತಲೇ ಇದೆ.  ಇದಕ್ಕೆ ಕಾರಣ ಈ ನಗರ ಇತಿಹಾಸದಲ್ಲಿ ವಹಿಸಿದ ಪಾತ್ರ.  ಕನಿಷ್ಟ ಒಂದುಸಾವಿರ ವರ್ಷಗಳಲ್ಲಿ ಅದು ರಾಜಧಾನಿಯಾಗಿ ಮೆರೆದ ಮಹಾನ್ ಸಾಮ್ರಾಜ್ಯಗಳು, ಅವುಗಳ ವೈಭವ, ಉಚ್ಪ್ರಾಯ, ಪತನ, ಐಹಿಕವಾದದ್ದೆಲ್ಲವೂ ಒಂದಲ್ಲಾ ಒಂದು ದಿನ ಕುಸಿದು ನೆಲಸಮವಾಗುತ್ತದೆಂಬ ಐತಿಹಾಸಿಕ ಸತ್ಯವನ್ನು ಸಾರುತ್ತಿರುವ ಇಲ್ಲಿನ ಕೋಟೆಕೊತ್ತಲಗಳು, ಗೋಪುರ ಗುಂಬಜ್‌ಗಳು, ಸಮಾಧಿಗಳು...
ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಇದೇ ದೆಹಲಿಯಾಗಿದ್ದಿರಬಹುದೆಂದು ಹೇಳಲು ನೇರ ಅಧಾರಗಳಿಲ್ಲವಾದರೂ ಸಾಂಧರ್ಭಿಕ ಸಾಕ್ಷ್ಯಗಳ ಮೂಲಕ ಹಾಗೆ ಹೇಳಬಹುದೆಂದು ಇತಿಹಾಸಕಾರ ಪರ್ಸೀವಲ್ ಸ್ಪಿಯರ್ ಹೇಳುತ್ತಾರೆ.  ಅವರ ಪ್ರಕಾರ ಕುರುಕ್ಷೇತ್ರ ಯುದ್ದ ನಡೆದದ್ದು ಐದು ಪತ್ ಅಥವಾ ವಿಸ್ತರಣ ನಗರಗಳಿಗಾಗಿ.  ಸೋನೆಪತ್, ಪಾನಿಪತ್, ಬಾಗ್‌ಪತ್ ಮತ್ತು ತಿಲ್‌ಪತ್ ಆ ಐದರಲ್ಲಿ ನಾಲ್ಕು ಎಂದು ಗುರುತಿಸಲ್ಪಟ್ಟಿವೆ.  ದೆಹಲಿ ಐದನೆಯದು ಎಂದು ಸಹಜವಾಗಿಯೆ ಭಾವಿಸಬಹುದಾಗಿದೆ ಎಂದು ಸ್ಪಿಯರ್ ಹೇಳುತ್ತಾರೆ.  ಪುರಾಣಕಾಲವನ್ನು ಕಡೆಗಣಿಸಿದರೂ ಇತಿಹಾಸದ ಆರಂಭದಿಂದಲೂ ಇಲ್ಲಿ ಜನವಸತಿ ಇತ್ತೆಂದು ಅಧಾರಸಹಿತವಾಗಿ ಹೇಳಬಹುದು.  ದೆಹಲಿ ಮತ್ತು ಸುತ್ತಮತ್ತಲ ಪ್ರದೇಶಗಳು ಸಿಂಧೂಕಣಿವೆಯ ನಾಗರೀಕತೆ ಬೆಳೆದು ಬೆಳಗಿದ ಭೌಗೋಳಿಕ ವಲಯದ ವ್ಯಾಪ್ತಿಯಲ್ಲಿ ಸೇರಿವೆ.  ದೆಹಲಿಯ ಪುರಾನಾ ಕಿಲಾ ಪ್ರದೇಶದಲ್ಲಿ ಅದರ ಕುರುಹುಗಳು ದೊರೆತಿವೆ.  ಆ ನಂತರ ಸಾವಿರ ವರ್ಷಗಳವರೆಗೆ ದೆಹಲಿಯ ಬಗ್ಗೆ ವಿವರಗಳು ದೊರೆಯುವುದಿಲ್ಲ.  ಮೌರ್ಯರ ಕಾಲದಲ್ಲಿ ದೆಹಲಿ ಮತ್ತೆ ಇತಿಹಾಸದ ನಕ್ಷೆಯಲ್ಲಿ ಕಾಣಿಸಿಕೊಂಡರೂ ಆಗ ಅದೊಂದು ನಿಕೃಷ್ಟ ಪ್ರಾಂತೀಯ ಪಟ್ಟಣವಾಗಿತ್ತಷ್ಟೇ.  ಅದೇ ಸ್ಥಿತಿ ಮುಂದಿನ ಒಂದು ಸಾವಿರ ವರ್ಷಗಳಷ್ಟು ಧೀರ್ಘ ಕಾಲದವರೆಗೆ ಅಂದರೆ ಕುಶಾನರು, ಗುಪ್ತರು ಮತ್ತು ವರ್ಧನರ ಆಳ್ವಿಕೆಯಲ್ಲೂ ಮುಂದುವರೆಯಿತು.
            ಇತಿಹಾಸದಲ್ಲಿ ತನ್ನದೇ ನಿರ್ದಿಷ್ಟ ಹಾಗೂ ವಿಶಿಷ್ಟ ಸ್ಥಾನವನ್ನು ದೆಹಲಿ ಪಡೆದುಕೊಂಡದ್ದು ಹನ್ನೊಂದನೇ ಶತಮಾನದಲ್ಲಿ, ೧೦೨೦ರ ಸುಮಾರಿಗೆ ತೋಮರ್ ರಜಪೂತ್ ಅರಸ ಅನಂಗಪಾಲ ಈಗಿನ ಸೂರಜ್ ಕುಂಡ್ ಪ್ರದೇಶದಲ್ಲಿ ತನ್ನ ರಾಜಧಾನಿ ಅನಂಗ್‌ಪುರವನ್ನು ಸ್ಥಾಪಿಸಿದಾಗ.  ಉಳಿದೆಲ್ಲಾ ಸ್ಥಳಗಳನ್ನು ಬಿಟ್ಟು ಈ ಬರಡು ಕಲ್ಲುಗುಡ್ಡಗಳ ನೆಲದಲ್ಲಿ ಆತ ತನ್ನ ರಾಜಧಾನಿಯನ್ನು ಕಟ್ಟಿಕೊಂಡದ್ದಕ್ಕೆ ಇದ್ದ ಒಂದೇ ಕಾರರಣ- ಸುರಕ್ಷತೆ.  ಇದು ಅಂದಿನ ವಿವಿಧ ರಜಪೂತ್ ರಾಜವಂಶಗಳ ನಡುವಿನ ದಿನನಿತ್ಯದ ಕದನಗಳ ಪರಿಣಾಮ.  ನಂತರ ೧೦೫೦ರಲ್ಲಿ ಆನಂಗಪಾಲ ತನ್ನ ರಾಜಧಾನಿಯನ್ನು ಈಗಿನ ಕುತುತ್ ಪ್ರದೇಶದ ಕಿಲಾ ರಾಯ್ ಪಿಥೋರಾಗೆ ವರ್ಗಾಯಿಸಿದ.  ಅಲ್ಲಿ ಆತ ಕಟ್ಟಿಸಿದ ಕೋಟೆಯ ಕುರುಹುಗಳು ಕುತುಬ್ ಮಿನಾರ್‌ನ ಸುತ್ತಮುತ್ತ ಹರಡಿಕೊಂಡಿವೆ.  ಇತಿಹಾಸಕಾರರು ಗುರುತಿಸುವ ದೆಹಲಿಯ ಏಳು ನಗರಗಳಲ್ಲಿ ಮೊದಲನೆಯದು ಈ ಕಿಲಾ ರಾಯ್ ಪಿಥೋರಾ.  ೧೧೫೦ರಲ್ಲಿ ಅಜ್ಮೀರದ ಚೌಹಾನರು ದೆಹಲಿ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  ನಾಲ್ಕು ದಶಕಗಳ ನಂತರ ೧೧೯೨ನಲ್ಲಿ ದೆಹಲಿ ಅಫ್ಘಾನಿಸ್ತಾನದಿಂದ ಬಂದ ತುರ್ಕಿ ದಾಳಿಕಾರ ಮಹಮದ್ ಘೋರಿಯ ವಶವಾಯಿತು.  ಆತ ಕಿಲಾ ರಾಯ್ ಪಿಥೋರಾವನ್ನು ತನ್ನ ಭಾರತ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿ ತನ್ನ ನಂಬಿಕಸ್ಥ ಗುಲಾಮ ಮತ್ತು ನೆಚ್ಚಿನ ಅಳಿಯನಾದ ಕುತ್ಬುದ್ದೀನ್ ಐಬಕ್‌ಗೆ ಅದರ ಜವಾಬ್ಧಾರಿಯನ್ನು ವಹಿಸುವುದರೊಂದಿಗೆ ದೆಹಲಿ ಒಂದಾದ ಮೇಲೊಂದರಂತೆ ಬೃಹತ್ ಸಾಮ್ರಾಜ್ಯಗಳ ರಾಜಧಾನಿಯಾಗುವ ಯುಗ ಆರಂಭವಾಯಿತು.
            ೧೦೫೦ರಿಂದ ಮುಂದಿನ ಆರುನೂರು ವರ್ಷಗಳಲ್ಲಿ ದೆಹಲಿಯನ್ನಾಳಿದ ವಿವಿಧ ಅರಸರು ಏಳು ನಗರಗಳನ್ನು ಕಟ್ಟಿದರು.  ಅವು ಕಿಲಾ ರಾಯ್ ಪಿಥೋರಾ (೧೦೫೦), ಸಿರಿ (೧೩೦೩), ತುಘಲಖಾಬಾದ್ (೧೩೨೧), ಜಹಾಂಪನಾ (೧೩೩೪), ಫಿರೋಜಾಬಾದ್ (೧೩೫೪), ದಿನ್ ಪನಾ ಅಥವಾ ಶೇರ್‌ಶಹಾಬಾದ್ (೧೫೪೦), ಶಹಜಹಾನಾಬಾದ್ (೧೬೪೮).  ನಂತರ ೧೯೧೧ರಿಂದೀಚೆಗೆ ಬ್ರಿಟಿಷರು ಕಟ್ಟಿದ ನವದೆಹಲಿ ದೆಹಲಿಯಲ್ಲಿ ನಿರ್ಮಾಣವಾದ ಎಂಟನೆಯ ನಗರವಾಗಿ ಇಂದು ವಿಶ್ವದ ಸುಂದರ ರಾಜಧಾನಿಗಳಲ್ಲೊಂದಾಗಿ ಕಣ್ಮನ ಸೆಳೆಯುತ್ತಿದೆ.  (ಇವೆಲ್ಲವುಗಳ ಹಿಂದೆ ಪಾಂಡವರ ಇಂದ್ರಪ್ರಸ್ಥವೂ ಸೇರಿದಂತೆ ಆರು ನಗರಗಳಿದ್ದವು, ಅಂದರೆ ದೆಹಲಿಯಲ್ಲಿ ಇದುವರೆಗೆ ಹದಿನಾಲ್ಕು ನಗರಗಳ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.  ಇದು ಉತ್ಪ್ರೇಕ್ಷೆ ಇರಬಹುದು.  ಭಾರತೀಯ ಪುರಾಣಗಳು ಮತ್ತು ಸಂಸ್ಕೃತಿಯಲ್ಲಿ ಸಂಖ್ಯೆ ಹದಿನಾಲ್ಕು ಪಡೆದುಕೊಂಡಿರುವ ಮಹತ್ವದಿಂದಾಗಿ ಆ ಸಂಖ್ಯೆಯನ್ನು ದೆಹಲಿಗೂ ಅನ್ವಯಿಸುವ ಉತ್ಸಾಹೀ ಪ್ರಯತ್ನ ಇದು ಎಂದು ನನಗನಿಸುತ್ತದೆ.)
            ೧೦೫೦ರಿಂದೀಚಿಗಿನ ನಗರಗಳ ಅದ್ಭುತ ವಾಸ್ತುಶಿಲ್ಪದ ಕುರುಹುಗಳಲ್ಲಿ ಹಲವು ಇಂದಿಗೂ ದೆಹಲಿಯ ಹೆಗ್ಗುರುತುಗಳಾಗಿ ನಿಂತಿವೆ.  ವಯೊವೃಧ್ದ ಲೇಖಕ ಖುಶ್ವಂತ್ ಸಿಂಗ್ ಪ್ರಕಾರ ಜನ ದೆಹಲಿಯನ್ನು ನೋಡಲು ಬರುವುದು ಮೂರು ಹಳೆಯ ಅದ್ಭುತಗಳನ್ನು.  ಮೊದಲನೆಯದು ಕುತುಬ್ ಮಿನಾರ್, ಎರಡನೆಯದು ಲಾಲ್ ಕಿಲಾ, ಮೂರನೆಯದು ಸ್ವತಃ ಖುಶ್ವಂತ್ ಸಿಂಗ್!  ಈ ಮೂರರ ಜತೆ ಹುಮಾಯೂನ್ ಸಮಾಧಿ, ಜಾಮಾ ಮಸೀದಿ, ಜಂತರ್ ಮಂತರ್, ಜತೆಗೆ ಇತ್ತೀಚಿಗಿನ ಬಿರ್ಲಾ ಮಂದಿರ್, ಬಹಾಯಿಗಳ ಲೋಟಸ್ ಟೆಂಪಲ್, ವಿಶ್ವದ ಅತಿ ದೊಡ್ಡ ದೇವಾಲಯ ಅಕ್ಷರ್ ಧಾಮ್... ದೆಹಲಿಯಲ್ಲಿ ಏನುಂಟು ಏನಿಲ್ಲ?  ಇವುಗಳ ಜತೆಗೇ ಕುಸಿದು ಬಿದ್ದಿರುವ, ಅರೆಬರೆ ನಿಂತಿರುವ ಅದೆಷ್ಟೋ ಕಟ್ಟಡಗಳು ದೆಹಲಿಯ ಗತವೈಭವವಕ್ಕೆ, ಈ ಶ್ರೀಮಂತ ನಗರದ ಮೇಲಿನ ಪೈಶಾಚಿಕ ದಾಳಿಗಳಿಗೆ, ಈ ದುರ್ದೈವೀ ನಗರ ಅನುಭವಿಸಿದ ದುರಂತಗಳಿಗೆ ಸಾಕ್ಷಿಯಾಗಿ ನಿಂತಿವೆ.
ಈ ನಗರದ ಮೇಲೆ ಅದೇಕೆ ಇಷ್ಟೋಂದು ದಾಳಿಗಳಾದವು?  ಉತ್ತರಕ್ಕೆ ಈ ನಗರದ ಭೌಗೋಳಿಕ ನೆಲೆ ಕಾರಣ.  ಮೂರು ಕಡೆ ಸಾಗರ, ಉತ್ತರ ಮತ್ತು ಪೂರ್ವದಲ್ಲಿ ಹಿಮಾಲಯ, ಪಶ್ಚಿಮೋತ್ತರದಲ್ಲಿ ಹಿಂದೂಕುಶ್ ಪರ್ವತಗಳಿಂದ ಸುತ್ತುವರೆದಿರುವ ಭರತವರ್ಷಕ್ಕೆ ಅರಬ್ಬರು ಮತ್ತು ಯೂರೋಪಿಯನ್ ಸಾಮ್ರಾಜ್ಯಶಾಹಿಗಳ ಹೊರತಾಗಿ ಇತಿಹಾಸದ ಆದಿಕಾಲದಿಂದಲೂ ವಲಸೆಗಾರರಾಗಲೀ,  ಧಾಳಿಕಾರರಾಗಲೀ ಪ್ರವೇಶಿಸಿದ್ದು ವಾಯುವ್ಯದ ಖೈಬರ್ ಕಣಿವೆಯ ಮೂಲಕ.  ಯಶಸ್ವಿಯಾಗಿ ಖೈಬರ್ ಕಣಿವೆಯನ್ನು ಪ್ರವೇಶಿಸಿದ ಸೇನೆಗೆ ಯಾವುದೇ ನೈಸರ್ಗಿಕ ತಡೆಗಳಿಲ್ಲದ ಪಂಜಾಬಿನ ಬಯಲು ಪ್ರದೇಶವನ್ನು ವಶಪಡಿಸಿಕೊಳ್ಳುವುದು ಸುಲಭ.  ಪಂಜಾಬ್ ಕೈಗೆ ಸಿಕ್ಕಿದ ಮೇಲೆ ಸಹಜವಾಗಿಯೇ ಎಲ್ಲರ ಕಣ್ಣು ಬೀಳುವುದು ವಿಶಾಲ ಗಂಗಾಬಯಲಿಗೆ ಹೆಬ್ಬಾಲಿನಂತಿರುವ ದೆಹಲಿಯ ಮೇಲೆ.  ಇದೇ ದೆಹಲಿಯ ದುರದೃಷ್ಟಕ್ಕೆ ಮೂಲ.
ಖೈಬರ್ ಕಣಿವೆಯನ್ನು ವಶಪಡಿಸಿಕೊಂಡವರು ಅನತೀ ಕಾಲದಲ್ಲೇ ಇಡೀ ಪಂಜಾಬನ್ನು ವಶಕ್ಕೆ ತೆಗೆದುಕೊಳ್ಳುವುದು, ನಂತರ ನೇರವಾಗಿ ದೆಹಲಿಯತ್ತ ಮುನ್ನುಗ್ಗಿ ಬರುವುದು, ಗಂಗಾ ಬಯಲಿಗೆ ನುಗ್ಗಲು ದೆಹಲಿಯನ್ನು ನೆಲೆಯನ್ನಾಗಿ ಬಳಸಿಕೊಳ್ಳುವುದು ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿದೆ.  ಹೀಗಾಗಿಯೇ ೧೯೬೫ರ ಯುದ್ದಕ್ಕೆ ಒಂದೆರಡು ದಿನಗಳ ಮುಂಚೆ ಪಾಕಿಸ್ತಾನೀ ನಾಯಕ ಜನರಲ್ ಅಯೂಬ್ ಖಾನ್ "ಇತಿಹಾಸ ನಮ್ಮ ಕಡೆ ಇದೆ.  ಪಂಜಾಬ್ (ಲಾಹೋರ್) ಯಾರ ಕೈಯಲ್ಲಿದೆಯೋ ಅವರು ಅನತಿ ಕಾಲದಲ್ಲೇ ದೆಹಲಿಯ ಅಧಿನಾಯಕರಾಗುತ್ತಾರೆ.  ಈಗ ಲಾಹೋರ್ ನಮ್ಮ ಕೈಯಲ್ಲಿದ.  ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ" ಎಂದು ಘೋಷಿಸಿದ್ದು.  ಇತಿಹಾಸ ಅವರ ಕಡೆಗಿದ್ದರೂ ವರ್ತಮಾನ ಅವರ ಕಡೆಗಿರಲಿಲ್ಲ.  ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರ ಬುದ್ಧಿವಂತಿಕೆಯಿಂದಾಗಿ ಅಯೂಬ್ ಖಾನರ ಆಸೆ ನೆರವೇರಲಿಲ್ಲ ಮತ್ತು ಇತಿಹಾಸದಲ್ಲಿ ಮೊತ್ತಮೊದಲಿಗೆ ಲಾಹೋರ್‌ನ ಅಧಿಪತಿಗಳು ದೆಹಲಿಯನ್ನು ಪದಾಕ್ರಾಂತಗೊಳಿಸಿಕೊಳ್ಳುವುದರಲ್ಲಿ ವಿಫಲರಾದರು.  ಪರಿಣಾಮವಾಗಿ ಪುಟ್ಟಕ್ಕ ದೆಹಲಿಯಲ್ಲಿ ನೆಮ್ಮದಿಯಾಗಿ ನೆಲೆನಿಂತು ನನ್ನನ್ನೂ ಇಲ್ಲಿಗೆ ಕರೆಸಿಕೊಳ್ಳುವಂತಾಯಿತು, ನಾನು ಈ ಮಹಾನ್ ನಗರವನ್ನು ನನ್ನೊಳಗೆ ತುಂಬಿಕೊಳ್ಳುವಂತಾಯಿತು.
ಪುಟ್ಟಕ್ಕನ ಮಾತಿನಲ್ಲಿ ಒಬ್ಬ ಮಾಸೂಮ್ ಲಡ್ಕಾ ಆಗಿ ದೆಹಲಿಗೆ ಕಾಲಿಟ್ಟ ನಾನು ಈ ನಗರದಲ್ಲಿ ಏನೆಲ್ಲಾ ಕಂಡೆ!  ಎಷ್ಟೆಲ್ಲಾ ಕಲಿತೆ?  ಬೇಸಗೆಯಲ್ಲಿ ಬನಿಯನ್ ಅನ್ನೂ ಕಿತ್ತೆಸೆದು, ಛಳಿಗಾಲದಲ್ಲಿ ಅಕ್ಕ ಹೆಣೆದ ಸ್ವೆಟರನ್ನು ಅಹಹ ಅಹಹ ಎನ್ನುತ್ತಾ ಮೈಗೇರಿಸಿಕೊಂಡು, ಗಳಿಗೆಗೊಮ್ಮೆ ಗರಂ ಚಾಯ್ ಗುಟುಕರಿಸುತ್ತಾ, ರಜಾಯ್‌ನೊಳಗೆ ಹುದುಗುವ ಮಜವನ್ನು ಅನುಭವಿಸುತ್ತಾ... ತ್ತಾ... ತ್ತಾ... ನಾನು ನಾನಾಗಿ ಬೆಳೆದದ್ದು ದೆಹಲಿಯಲ್ಲಿ, ಈ ನಗರದ ಲೈಬ್ರರಿಗಳಲ್ಲಿ, ಅರ್ಟ್ ಗ್ಯಾಲರಿಗಳಲ್ಲಿ.
ಬಂದ ಮಾರನೇ ದಿನಕ್ಕೆ ಸಾಮಾನು ತರಲು ಅಕ್ಕನ ಜತೆ ಹೊರಗೆ ಹೋದಾಗ ಎಲ್ಲೆಲ್ಲೂ ಕಂಡದ್ದು ಸಲ್ವಾರ್ ಕಮೀಜ್ ತೊಟ್ಟ ಹುಡುಗಿಯರು, ಹೆಂಗಸರು.  ಸೀರೆಗಳು ಅಲ್ಲೊಂದು ಇಲ್ಲೊಂದು.  ಕರ್ನಾಟಕದಲ್ಲಿ ಕಾಣುತ್ತಿದ್ದ ನೋಟಕ್ಕೆ ತದ್ವಿರುದ್ಧ.  ಇಲ್ಲಿ ಮುಸ್ಲಿಮರು ಜಾಸ್ತಿ ಅಲ್ಲವಾ? ಅಂದೆ ಮೆಲ್ಲಗೆ.  ಹಾಗೇನಿಲ್ಲ, ಈ ಕಡೆಯ ಹೆಂಗಸರ ಉಡುಪೇ ಇದು.  ಈ ಉಡುಪಿಗೆ ಧರ್ಮದ ಸೋಂಕಿಲ್ಲ ಎಂದು ಹೇಳಿ ಅಕ್ಕ ಭಾರತದ ಒಂದು ಚಂದದ ಮುಖವನ್ನು ನನಗೆ ತೋರಿಸಿದಳು.  ಅದೇ ದಿನಗಳಲ್ಲಿ ನೆರೆಯ ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್ ಸೀರೆಯನ್ನು ಇಸ್ಲಾಮಿಗೆ ವಿರುದ್ಧ ಎಂದು ಘೋಷಿಸಿ ಬಹಿಷ್ಕರಿಸಿದ್ದರ ಹಿನ್ನೆಲೆಯಲ್ಲಿ ಅಕ್ಕನ ಮಾತುಗಳು ವಿಶೇಷ ಅರ್ಥ ಪಡೆದುಕೊಂಡವು.  ಅಂದು ನಾನು ದೆಹಲಿಯಲ್ಲಿ ಎಲ್ಲೆಲ್ಲೂ ಕಂಡ 'ಜಾತ್ಯಾತೀತ' ಉಡುಪು ಈಗ ಭಾರತದ ಉದ್ದಗಲಕ್ಕೂ ಹರಡಿಹೋಗಿದೆ.
ಕೆಲವೇ ದಿನಗಳಲ್ಲಿ ಗೆಳೆಯ ರಾಜೇಶ್ವರನ ತಂದೆ ಮತ್ತೊಂದು ಮುಖವನ್ನು ನನಗೆ ತೋರಿಸಿದರು.  ದೆಹಲಿಗೆ ಅನತೀ ದೂರದ ಹರಿಯಾನಾದ ಪಲ್‌ವಲ್ ಪಟ್ಟಣದಲ್ಲಿನ ತನ್ನ ಮನೆಗೆ ನನ್ನನ್ನಾತ ಕರೆದೊಯ್ದ.  ಜವಾಹರ್ ನಗರ್ ಎಂಬ ಹೆಸರಿನ ಆ ವಿಸ್ತರಣದ ಎಲ್ಲ ನಾಲ್ಕು ಸಾವಿರ ಕುಟುಂಬಗಳೂ ನಲವತ್ತೇಳರಲ್ಲಿ ಎಲ್ಲವನ್ನೂ ಕಳೆದುಕೊಂಡು ಪಾಕಿಸ್ತಾನದ ಮುಲ್ತಾನ್ ಪಟ್ಟಣದಿಂದ ನಿರಾಶ್ರಿತರಾಗಿ ಓಡಿಬಂದಂಥವು.  ರಾಜೇಶ್ವರನ ತಂದೆ ಅಲ್ಲಿನ ಆರ್‌ಎಸ್‌ಎಸ್ ಶಾಖೆಯ ಕಾರ್ಯದರ್ಶಿ.  ದೇಶವಿಭಜನೆಯ ದುರಂತವನ್ನು ನೆನಪಿಸಿಕೊಳ್ಳುತ್ತಾ "ಮತ್ತೆ ಅವಕಾಶ ಸಿಕ್ಕಿದರೆ ಕಳೆಹೋದದ್ದೆಲ್ಲವನ್ನೂ ಮರಳಿಪಡೆಯುವ ಬಯಕೆ ನಮಗೆಲ್ಲರಿಗೂ ಇದೆ" ಎಂದವರು ಹೇಳಿದರು.  ಕಾಲು ಶತಮಾನದ ಹಿಂದೆ ಜನವರಿಯ ಒಂದು ಛಳಿರಾತ್ರಿಯಲ್ಲಿ ಅವರಿಂದ ಕೇಳಿದ ಆ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.  ನನ್ನಲ್ಲಿ ನೂರೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.  ತೀನ್ ಮೂರ್ತಿ ಲೈಬ್ರರಿಯಲ್ಲಿ ಬೈಂಡ್ ಮಾಡಿಸಿಟ್ಟಿರುವ ಉದ್ದೋಉದ್ದದ ಹಳೆಯ `ನಮ್ಮ' ಹಾಗೂ `ಅವರ' ವರ್ತಮಾನ ಪತ್ರಿಕೆಗಳಲ್ಲಿ ೬೫ರ, ೭೧ರ ಯುದ್ಧಗಳ ದಿನಗಳ ಸಂಚಿಕೆಗಳನ್ನು ಹುಡುಕಿ ತೆಗೆದು ಮೇಜಿನ ಮೇಲೆ ಅಗಲಕ್ಕೆ ಹರಡಿ ನಡುಬಾಗಿಸಿ ನಿಂತು ತಿಂಗಳುಗಟ್ಟಲೆ ಓದಿ, ಜೆಎನ್‌ಯು, ICWA ಮತ್ತು IDSA ಲೈಬ್ರರಿಗಳಲ್ಲಿ ಸಿಕ್ಕಿದ ಪಾಕಿಸ್ತಾನೀ ಪುಸ್ತಕಗಳನ್ನು ವರ್ಷಗಟ್ಟಲೆ ಗಮನವಿಟ್ಟು ಓದಿ ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೆಣಗುತ್ತಿದ್ದೇನೆ.  ೧೯೪೭ನ್ನು ಸ್ವಾತಂತ್ರದ ವರ್ಷ ಎನ್ನುವುದಕ್ಕಿಂತಲೂ "ದೇಶವಿಭಜನೆಯ ವರ್ಷ" ಎಂದು ಕರೆದು ಅದರಾಚೆಯ ಕಾಲವನ್ನು "ವಿಭಜನಾಪೂರ್ವ ಕಾಲ", ಅದರೀಚೆಯ ಕಾಲವನ್ನು "ವಿಭಜನೋತ್ತರ ಕಾಲ" ಎಂದು ಪರಿಗಣಿಸಿದರೆ ದಕ್ಷಿಣ ಏಶಿಯಾವನ್ನು ಈ ದಿನಗಳಲ್ಲಿ ಕಾಡುತ್ತಿರುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಗಬಹುದೇನೋ ಅನಿಸುತ್ತದೆ.
ದೆಹಲಿಶೋಧದ ಹುಚ್ಚು ಹತ್ತಿ ಮೊತ್ತಮೊದಲು ಕುತುಬ್ ಮಿನಾರ್ ಸುತ್ತಲೂ ಹೆಜ್ಜೆ ಸರಿಸಿದಾಗ ಕಿವಿಗೆ ಕೇಳಿದ್ದು ಮಹಮದ್ ಘೋರಿಯ ಸೇನೆಯ ಕುದುರೆಗಳ ಖುರಪುಟಗಳು, ರಜಿಯಾ ಸುಲ್ತಾನಾಳಾ ಸಂಪ್ರದಾಯವಿರೋಧೀ ರಣಕಹಳೆ, ದಖನ್ ಅನ್ನು ಪದಾಕ್ರಾಂತಗೊಳಿಸಿಕೊಂಡ ಅಲ್ಲಾವುದ್ದೀನ್ ಖಾಲ್ಜಿಯ ಹೆಮ್ಮೆಯ ಠೇಂಕಾರ.  ಕೆಂಪುಕೋಟೆಯ ದಿವಾನ್ ಎ ಆಮ್‌ನಲ್ಲಿ ಕೇಳಿಬಂದದ್ದು ಅಕ್ಬರನ ದಿನ್ ಎ ಇಲಾಹೀ ಧರ್ಮೋಪದೇಶದ ಹಿಂದೆಯೇ ಅನಾರ್ಕಲಿಯ ಕರುಳುಹಿಂಡುವ ರೋಧನ, ದಿವಾನ್ ಎ ಖಾಸ್‌ನಲ್ಲಿ ಮುಮ್ತಾಜಳ ಮೆಲುಮಾತು, ಜಹನಾರಾಳಾ ಬರಡು ಬದುಕಿನ ಕಥೆ ವ್ಯಥೆ...  ದೆಹಲಿ ಬಲಿಷ್ಟರ ಕೇಕೆಗಳ, ಬಲಿಗಳ ಆಕ್ರಂದನಗಳ, ಅವೆರಡೂ ಅಲ್ಲದವರ ಗೊಣಗೊಣಗಳ ನಗರ...
ಕೆಲವು ಪ್ರಶ್ನೆಗಳಿಗೆ ಉತ್ತರಗಳು ದೆಹಲಿಯ ಮಾರುಕಟ್ಟೆಗಳಲ್ಲಿ ಸಿಕ್ಕಿವೆ.  ಬಟ್ಟೆಗಳ ಸಾಗರ ಸರೋಜಿನಿ ನಗರ್ ಮಾರ್ಕೆಟ್ ಮತ್ತು ಶಂಕರ್ ಮಾರ್ಕೆಟ್, ಸೂರ್ಯನ ಕೆಳಗಿಗಿರುವ ಎಲ್ಲವೂ ಸಿಗುವ ಚಾಂದನೀ ಚೌಕ್, ಕನಾಟ್ ಪ್ಲೇಸ್, ಜನಪಥ್, ಲಜ್‌ಪತ್ ನಗರ್ ಮಾರ್ಕೆಟ್- ಎಲ್ಲೆಲ್ಲಿಯೂ ಕಾಣಸಿಗುವ ಮುಗುಳುನಗೆಯ ಸಿಂಧಿ, ಪಂಜಾಬೀ ವ್ಯಾಪಾರಿಗಳು.  ಇದ್ದುದೆಲ್ಲವನ್ನೂ, ಕುಟುಂಬದಲ್ಲಿ ಕನಿಷ್ಟ ಒಂದು ಆತ್ಮೀಯ ಜೀವವನ್ನಾದರೂ ಕಳೆದುಕೊಂಡು ನಿರಾಶ್ರಿತರಾಗಿ ದೆಹಲಿಗೆ ಓಡಿಬಂದು ಎಲ್ಲರನ್ನೂ ಎದೆಗವಚಿಕೊಳ್ಳುವ ಈ ಮಹಾ(ನ್) ನಗರದಲ್ಲಿ ಫೀನಿಕ್ಸ್‌ನಂತೆ ಮತ್ತೆ ಬದುಕು ಕಟ್ಟಿಕೊಂಡು ಎದೆಯೆತ್ತಿ ನಿಂತಿರುವ ಈ ಜನರ ಸ್ನೇಹಪರ ನಡೆನುಡಿ, ತಾಳ್ಮೆ ಅಸಾದೃಶ.  ಡಜನ್‌ಗಟ್ಟಲೆ ಸಾಮಾನು ಹೊರತೆಗೆಸಿ ಏನೂ ಇಷ್ಟವಾಗದೇ ಹಿಂದೆ ತಿರುಗಿದರೆ ಇನಿತೂ ಬೇಸರಗೊಳ್ಳದೇ ನಿಮಗಿಷ್ಟವಾದದ್ದು ಬೇರೆಲ್ಲೂ ಸಿಗದಿದ್ದರೆ ಇಲ್ಲಿಗೇ ಬನ್ನಿ, ನಿಮಗೆಂದೇ ತೆಗೆದಿಟ್ಟಿರುತ್ತೇನೆ ಎನ್ನುವ ಬಗೆ.  ಇಂತಹ ತಾಳ್ಮೆಯನ್ನು ಆ ಕ್ರೂರ ಬದುಕೇ ಕಲಿಸಿರಬೇಕು.  ದೆಹಲಿ ನೊಂದ, ನೋವನ್ನು ಅರ್ಥ ಮಾಡಿಕೊಂಡು ಸಂತೈಸುವ ನಗರ.
ಈ ಪ್ರಶ್ನೆಗಳ ಸಹವಾಸವೇ ಸಾಕು ಎಂದುಕೊಂಡು ಲಗಾಮಿಲ್ಲದ ಕುದುರೆಯಂತೆ ಈ ನಗರದ ಬೀದಿಬೀದಿಗಳಲ್ಲಿ ಅಲೆದಾಗ...  ಮಾಂಸ ಮೊಟ್ಟೆ ಇರಲಿ, ಹಾಲಿನ ವಾಸನೆಗೂ ಮುಖ ಕಿವಿಚುವ ಅಕ್ಕನ ಜತೆ ಮುನಿರ್ಕಾದ ಉಡುಪಿ ಹೋಟೆಲ್, ಯೂಸುಫ್ ಸರಾಯ್‌ನ ಕರ್ನಾಟಕ ರೆಸ್ಟೋರೆಂಟ್, ಮೋತಿಬಾಗ್‌ನ ಕರ್ನಾಟಕ ಸಂಘದ ಹೋಟೆಲ್, ಕರೋಲ್ ಬಾಗ್, ಕನಾಟ್ ಪ್ಲೇಸ್‌ಗಳ ಮದ್ರಾಸ್ ಹೋಟೆಲ್‌ಗಳಲ್ಲಿ ಅಪ್ಪಟ ಸಸ್ಯಾಹಾರಿ ಮೇವು ಮೇಯ್ದು ಸಾಕೆನಿಸಿ ಕೈಬೀಸಿ ಕರೆದ ಗೆಳೆಯರ ಜತೆಗೂಡಿ ಯೂಸುಫ್ ಸರಾಯ್‌ನ ಸೋನಾ, ಕನಾಟ್ ಪ್ಲೇಸ್‌ನ ಹ್ಯಾರುವೊ (ಈವು ಮಾಯವಾಗಿವೆ), ಕರೀಮ್ಸ್ ಮುಂತಾದೆಡೆ ಬಿರಿಯಾನಿ, ತಂದೂರಿ ಚಿಕನ್‌ಗೆ ಕೈ ಹಾಕಿದೆ.  ಜತೆಗೇ ಎಲ್ಲೆಲ್ಲೂ ಸಿಗುವ ಧಾಬಾಗಳಲ್ಲಿ ಬ್ರೆಡ್ ಪಕೋಡ, ಸಮೋಸಾ, ಮಟರಿ ತಿಂದು ಚಾಯ್ ಕುಡಿಯುವುದರಲ್ಲಿನ ಮಜಾ...  ಪ್ರಪಂಚದ ಅತ್ಯಂತ ರುಚಿಯಾದ ಊಟ ಲಾಹೋರ್ ನಗರದ ರಸ್ತೆ ಬದಿಯಲ್ಲಿ ಸಿಗುತ್ತದೆ ಎಂದು ಇಮ್ರಾನ್ ಖಾನ್ ಹೇಳುತ್ತಾನೆ.  ಅದು ದೆಹಲಿಯಲ್ಲೂ ಸಿಗುತ್ತದೆ ಎಂದು ನಾನು ಹೇಳುತ್ತೇನೆ.  (ಕರೀಮ್ಸ್ ಬಂದದ್ದು ಲಾಹೋರ್‌ನಿಂದ ಎಂದು ನೆನಪಿಸಿಕೊಳ್ಳುತ್ತೇನೆ.)  ಏನೇ ಆಗಲಿ ದೆಹಲಿ ನಾಲಿಗೆ ಚಪಲದವರ ನಗರ.
ಕಮಾನಿ ಆಡಿಟೋರಿಯಂನಲ್ಲಿ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿಯಿಂದ ಹಿಡಿದು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಕನ್ನಡತಿ ಭಾಗೀರಥಿ ಬಾಯಿ ನಾಯಕಿಯಾಗಿದ್ದ ಶೇಕ್ಸ್‌ಪಿಯರನ ಟ್ವೆಲ್ಫ್ತ್ ನೈಟ್ನ ಹಿಂದಿ ರೂಪಾಂತರದವರೆಗೆ ನೂರೊಂದು ಹಿಂದಿ, ಕನ್ನಡ, ಇಂಗ್ಲಿಷ್ ನಾಟಕಗಳನ್ನು ನೋಡಿ ಆನಂದಿಸಿದ್ದು ಇಲ್ಲಿನ ಮಾವಲಂಕಾರ್ ಹಾಲ್, AIFACS ಗ್ಯಾಲರಿ ಮುಂತಾದ ಹಲವು ಹತ್ತು ರಂಗಮಂದಿರಗಳಲ್ಲಿ.  ದೆಹಲಿ ನಾಟಕ ಪ್ರಿಯರ ನಗರ.
ಯಾತಕ್ಕೂ ಮನಸ್ಸಿಲ್ಲದೇ ಸುಮ್ಮನೇ ಮನೆಯಲ್ಲೇ ಕುಳಿತಾಗಲೂ ದೆಹಲಿ ಚೇತೋಹಾರಿ.  ಅಂತಹ ಒಂದು ಮಧ್ಯಾಹ್ನ ಅಕ್ಕನ ಹೊಸ ಗೆಳತಿಯೊಬ್ಬಳು ಮನೆಗೆ ಬಂದು ಮಾತಿನ ಮಧ್ಯೆ ಕೇಳಿದಳು: "ನನ್ನನ್ನ ಏನಂತ ಕರೀತೀಯ?"  ಅಕ್ಕನ ಗೆಳತಿಯರೆಲ್ಲಾ ನನಗೆ ಅಕ್ಕಂದಿರೇ.  ಈ ಹೊಸಬಿಗೆ ಯಾವ ವಿನಾಯಿತಿಯೂ ಇಲ್ಲ.  ಈಕೆಯೂ ನನಗೆ ದೀದಿಯೇ.  ಅದೇ ಹೇಳಿದೆ.  "ಇಲ್ಲ", ಆಕೆ ತಲೆ ಅಲುಗಿಸಿದಳು: "ನಾವು ಗೆಳೆಯರು.  ನಾನು ನಿನ್ನ ಗೆಳತಿ, ದೀದಿ ಅಲ್ಲ..."
ಸ್ನೇಹಪರ ದೆಹಲಿ!
ಇಂಥಾ ದೆಹಲಿ ಸುಮಾರು ಒಂದೂವರೆ ಶತಮಾನಗಳವರೆಗೆ ಬ್ರಿಟಿಷ್ ಭಾರತ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ ಕಲ್ಕತ್ತಾವನ್ನು ಹಿಂದಕ್ಕೆ ಹಾಕಿ ದೇಶದ ರಾಜಧಾನಿಯಾಗಿ ಘೋಷಿಸಲ್ಪಟ್ಟು ಇಂದಿಗೆ, ಅಂದರೆ ಡಿಸೆಂಬರ್ ೧೨, ೨೦೧೧ಕ್ಕೆ, ಸರಿಯಾಗಿ ನೂರುವರ್ಷ.

Sunday, December 4, 2011

ಕವನ: ಪಳೆಯುಳಿಕೆ


(ಅದೆಷ್ಟೋ ವರ್ಷಗಳ ಹಿಂದೆ ಬರೆದ ಕವನ ಇದು.  ಈಗ ಇಂಥವನ್ನು ಬರೆಯಲಾಗುವುದಿಲ್ಲ)

ನಿನ್ನೆ ಮೊನ್ನೆಯವರೆಗೆ
ನಿನ್ನಿರವಿನರಿವಿರಲೇ ಇಲ್ಲ ನನಗೆ

ಅಂದು
ಸಹ್ಯಾದ್ರಿಯ ಸೆರಗಿನಿಂದ
ನೀ ಹನಿ
ಹನಿಯಾಗಿ ತೇಲಿ
ಬಂದು ನಿಂತಾಗ ನನಗೆ ಕನಸು
ಹರಿಯುವ ಹೊತ್ತು
ಶತಶತಮಾನಗಳ ಕಾಯುವಿಕೆ
ಗೆ ತೆರೆಬಿತ್ತು

ಪಟಪಟ ತೆರೆದ ದಿನಗಳೊಂದೊಂದರಲಿ
ಸರಸರ ಹರಿದ ಮಾಸಮಾಸಗಳಲಿ
ನಿನ್ನ ನಗೆಯ ಕುಲುಕುಲು ಹನಿಗಳು
ಹಗಲಲ್ಲಿ ಹೂವಾಗಿ ಅರಳಿದವು
ರಾತ್ರಿ ನಕ್ಷತ್ರಗಳಾಗಿ ಮಿನುಗಿದವು

ಬದುಕೊಂದು ಮಗ್ಗಲು ಬದಲಿಸಿದ
ಸಂಕ್ರಮಣ
ಕನಸಿನಿಂದ ನನಸಿಗೋ
ಮತ್ತೊಂದು ಕನಸಿಗೋ ಜಾರಿ
ದಂಥ ಸುಷುಪ್ತಿಯಲಿ ಮಿನುಗಿ
ದ ಅಗ್ನಿಯ ಸುತ್ತ ನನ್ನ ಬೆನ್ನ ಹಿಂದೆ
ಸಪ್ತಪದಿ ತುಳಿದದ್ದು ನೀನೋ
ಅಥವಾ ಬರೀ ನಿನ್ನ ನೆರಳೋ?
ಅರಿವಾಗದೇ ಬೆರಗಾದೆ ಒಂದು ಕ್ಷಣ

ಮೈಮನಗಳ ಮಿಲನದ
ನನಸಿನಂಥಾ ಕನಸು
ನಿಶಾಗೀತ
ಭೋರ್ಗರೆದುಕ್ಕಿದ ನೆರೆಗಂಗೆಯಾಳಕ್ಕೆ
ನನ್ನನ್ನು ಸೆಳೆದದ್ದು ನೀನೋ
ಅಥವಾ ಬರೀ ನಿನ್ನ ನೆನಪೋ?
ತಿಳಿಯದೇ ತೊಳಲಿದೆ ಒಂದು ಕ್ಷಣ

ಬೆಳಗಾಗುವ ಹೊತ್ತಿಗೆ ಎಲ್ಲ
ಮಳೆಯ ಹಾಗೆ ನಿನ್ನ ಜೇನಹನಿ
ಮಳೆ ನಿಂತೇಹೋಗಿತ್ತು

ನೀ ನಾನಾಗಿ ನಾ ನೀನಾಗಿ
ಮತ್ತೆ
ನೀ ನೀನೇ ನಾ ನಾನೇ ಆಗಿ
ಹೋದದ್ದು ಕಣ್ಣಂಚಿನಲ್ಲೇ ಕರಗಿದ
ಕನಸೆನಿಸಿತ್ತು
ಎದೆಯಲ್ಲಿ ಆಸೆಯೊಂದು
ಅನಾಥವಾಗಿ ಅತ್ತಿತ್ತು
ಈ ಬದುಕಿಗೆ ನೀನಲ್ಲದಿದ್ದರೂ
ನಿನ್ನಂಥವಳೊಬ್ಬಳು ಬೇಕಿತ್ತು

-ಪ್ರೇಮಶೇಖರ