ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Sunday, July 31, 2011

ಶ್ರೀ ದೇವೇಗೌಡರಿಗೊಂದು ಬಹಿರಂಗ ಪತ್ರ




ಪೂಜ್ಯ ಶ್ರೀ ದೇವೇಗೌಡರಿಗೆ ನಮಸ್ಕಾರಗಳು.



ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಕುಶಲವೇ?



ಮೂರು ವರ್ಷಗಳ ಹಿಂದೆ ಕಾವೇರಿ ಜಲವಿವಾದದ ಬಗ್ಗೆ ತಮಗೊಂದು ಬಹಿರಂಗ ಪತ್ರ ಬರೆದಿದ್ದೆ. ಈ ಪತ್ರ ಬರೆಯಲು ಬೇರೆಯದೇ ಆದ ಕಾರಣವಿದೆ. ಮುಖ್ಯವಿಷಯಕ್ಕೆ ಬರುವ ಮೊದಲು ಸ್ವಲ್ಪ ಪೀಠಿಕೆಯ ಅಗತ್ಯವಿದೆ.

ತಮ್ಮ ಪರಿಚಯ ನನಗೆ ಚಿಕ್ಕಂದಿನಿಂದಲೂ ಸಾಕಷ್ಟು ಉಂಟು. ನನ್ನ ಮನಸ್ಸಿನಲ್ಲಿ ತಮ್ಮ ಬಗ್ಗೆ ಬೇಸರ, ಇರಿಸುಮುರಿಸು, ಪ್ರೀತಿ, ಗೌರವ, ಹೆಮ್ಮೆ- ಎಲ್ಲವೂ ಇವೆ. ಎಲ್ಲಕ್ಕೂ ಕಾರಣಗಳೂ ಇವೆ.

ನನಗೆ ತಮ್ಮ ಹೆಸರಿನ ಪರಿಚಯ ದೊಡ್ಡರೀತಿಯಲ್ಲಿ ಆದದ್ದು ಸುಮಾರು ಮೂರು ದಶಕಗಳ ಹಿಂದೆ, ೧೯೭೭ರ ಐತಿಹಾಸಿಕ ಚುನಾವಣೆಗಳ ಸಂದರ್ಭದಲ್ಲಿ. ಆಗ ಉತ್ತರದಲ್ಲಿ ಜನತಾ ಪಕ್ಷ ಜಯಭೇರಿ ಬಾರಿಸಿದಾಗ ಕರ್ನಾಟಕದಲ್ಲಿ ಕಾಂಗ್ರೆಸ್ನ ಕೂದಲೂ ಕೊಂಕಲಿಲ್ಲ. ತಮ್ಮ ಪಕ್ಷಕ್ಕೆ ಸಿಕ್ಕಿದ್ದು ಕೇವಲ ಎರಡು ಸೀಟುಗಳು, ಎಡಗೈಗೊಂದು, ಬಲಗೈಗೊಂದು. ಈ ಬಗ್ಗೆ ತಮಗೆ ನಿರಾಶೆಯಾದದ್ದು ಸಹಜವೇ. ತಮ್ಮ ಮನಸ್ಸನ್ನು ಪ್ರಸನ್ನಗೊಳಿಸಲೆಂದೇ, ಅರಸು ಸರಕಾರವನ್ನು ಬರಖಾಸ್ತುಗೊಳಿಸಲು ರಾಜ್ಯಪಾಲ ಶ್ರೀ ಗೋವಿಂದ್ ನಾರಾಯಣ್ ಕೇಂದ್ರಕ್ಕೆ ಸುಳ್ಳುಸುಳ್ಳೇ ಪತ್ರ ಬರೆದು, ಕೇಂದ್ರ ಅದನ್ನು ಒಪ್ಪಿಕೊಂಡು ಅರಸರಿಗೆ ಗೇಟ್ಪಾಸ್ ಕೊಟ್ಟು ರಾಜ್ಯದಲ್ಲಿ ಚುನಾವಣೆಗಳನ್ನು ಘೋಷಿಸಿಬಿಟ್ಟಿತು. ಇದರ ಹಿಂದೆ ತಾವೇನೋ ಕಿತಾಪತಿ ನಡೆಸಿರಬಹುದೆಂದು ಅವರಿವರು ಮಾತಾಡುವುದನ್ನು ಕೇಳಿಸಿಕೊಂಡ ನೆನಪು ನನಗಿದೆ. ಅಂತೂ ತಾವು ಬಯಸಿದಂತೆ ಚುನಾವಣೆಗಳು ನಡೆದದ್ದು ಈಗ ಇತಿಹಾಸ. ಆಗ ಗೆದ್ದೇಬಿಡುತ್ತೇನೆ ಎಂದುಕೊಂಡು ತಾವು ಒಂದು ಹೊಸಾ ಕಾರನ್ನು ಕೊಂಡುಕೊಂಡು ರೆಡಿಯಾಗಿಟ್ಟುಕೊಂಡಿದ್ದಿರಂತೆ. ಹಾಗಂತ ಅವರಿವರು ಹೇಳುತ್ತಾರೆ. ನಾ ಕಂಡದ್ದಿಲ್ಲ. ಆದರೆ ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅರಸರು ಮತ್ತೆ ಮುಖ್ಯಮಂತ್ರಿಯಾದರು. ಅವರು ಪ್ರಮಾಣವಚನ ಸ್ವೀಕರಿಸುವಾಗ ವಿಜಯೀ ಕಾಂಗ್ರೆಸ್ ಸದಸ್ಯರು "ಗೋವಿಂದಾ ಗೋ..........ವಿಂದಾ........" ಎಂದು ಕೂಗಿಕೊಂಡು ರಾಜ್ಯಪಾಲರನ್ನು ಲೇವಡಿ ಮಾಡಿದ್ದು ತಮಗೆ ನೆನಪಿದೆಯೇ? ಬಹುಷಃ ಇರಲಿಕ್ಕಿಲ್ಲ. ನನಗೆಲ್ಲವೂ ನೆನಪಿದೆ.

ಅರಸು ಅವರಿಗೆ ಬೆನ್ನಲ್ಲಿ ಚೂರಿ ಹಾಕಿದ `ಕುಕೋಬ್ರಾ' ಗುಂಡೂರಾವ್, `ಟೇಪ್' ಮೊಯ್ಲಿ ಮತ್ತು ಸ್ಟೈಲ್ ಕಿಂಗ್ ಬಂಗಾರಪ್ಪನವರ ಕಿಡಿಗೇಡಿತನಗಳಿಂದ ಬೇಸತ್ತ ನಾಡಿನ ಜನತೆ ಎಂಬತ್ತಮೂರರಲ್ಲಿ ಕಾಂಗ್ರೆಸ್ಸಿಗೆ ಮಣ್ಣುಮುಕ್ಕಿಸಿದಾಗ ಮುಖ್ಯಮಂತ್ರಿಯಾಗುತ್ತೀರೆಂದು ತಾವು ಅಂದುಕೊಂಡಂತೆ ನಾವೂ ಅಂದುಕೊಂಡಿದ್ದೆವು. ಆದರೆ ದೆಹಲಿಯಿಂದ ಹೆಗಡೆ ಸಾಹೇಬರು ವಕ್ಕರಿಸಿ ತಮ್ಮ ಆಸೆಗೆ ತಣ್ಣಿರೆಚಿಬಿಟ್ಟದ್ದು ತುಂಬಾ ದುರದೃಷ್ಟಕರ. "ಮೌಲ್ಯಾಧಾರಿತ ಆಡಳಿತ" ಎಂದೇನೋ ಹೇಳಿಕೊಂಡು ಅವರು ಪಟ್ಟಾಗಿ ಕೂತುಬಿಟ್ಟರು.

ಕೊನೆಗೂ ಹೆಗಡೆ ಸಾಹೇಬರ ಮೌಲ್ಯದ ಬಂಡವಾಳ ಟೆಲಿಪೋನಿನ ತಂತಿಗಳಲ್ಲಿ ಹರಾಜಾಗಿ ಹೋಗಿ, "ಬೊಮ್ಮಾಯಿ ಎಫೆಕ್ಟ್" ರಾಷ್ಟ್ರದ ರಾಜಕೀಯ ಪರಿಭಾಷೆಗೆ ಸೇರಿಹೋಗಿ, ಮತ್ತೊಂದು ರೌಂಡ್ ಕಾಂಗ್ರೆಸ್ ರಾಜ್ಯಭಾರ ನಡೆದು ಮುಗಿಯುವ ಹೊತ್ತಿಗೆ ಹನ್ನೆರಡು ವರ್ಷಗಳೇ ಕಳೆದುಹೋದವು. ಅಲ್ಲಿಗೆ ತಮ್ಮ ವನವಾಸ ಮುಗಿದು ಕೊನೆಗೂ ತಾವು ಮುಖ್ಯಮಂತ್ರಿಯಾಗುವ ಘಳಿಗೆ ಬಂದೇಬಿಟ್ಟಿತು. ತಮ್ಮ ಪಟ್ಟಾಭಿಷೇಕದ ಆ ಸುಮೂರ್ತದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡುತ್ತಿರುವವರು ತಾನೇ ಎಂದು ಹೆಗಡೆಯವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ತಾವು ಪ್ರಮಾಣವಚನ ಸ್ವೀಕರಿಸುತ್ತಿದ್ದಾಗಲೇ ತಮ್ಮ ಹಿಂ`ಬಾಲಕ'ರು ಹೆಗಡೆಯವರ ಹಮ್ಮನ್ನೆಲ್ಲಾ ಒಂದೇ ಬಾರಿಗೆ ಇಳಿಸಿಬಿಟ್ಟರು. "ಕರೆದುತಂದು ಮುಖ್ಯಮಂತ್ರಿ ಮಾಡಿದ್ದಕ್ಕೆ ಚಪ್ಪಲಿ ಏಟು ತಿನ್ನಬೇಕಾಯಿತು" ಎಂದು ಹೆಗಡೆಯವರು ಮೂಲೆಯಲ್ಲಿ ನಿಂತು ಅಳುತ್ತಿದ್ದುದನ್ನು ಕಂಡಾಗ ಅಯ್ಯೋ ಪಾಪ ಅನಿಸಿದ್ದೇನೋ ನಿಜ. ನನ್ನ ಸುತ್ತಲಿದ್ದವರು `ಮೌಲ್ಯ ಮೌಲ್ಯ ಎಂದು ಸುಳ್ಳುಸುಳ್ಳೇ ಬಾಯಿಬಡಿದುಕೊಳ್ಳುತ್ತಿದ್ದ ಗುಳ್ಳೆನರಿಗೆ ತಕ್ಕ ಶಾಸ್ತಿ ಆಯಿತು' ಎಂದು ಜೋರಾಗಿಯೇ ಹೇಳಿಕೊಂಡು ನಕ್ಕಿದ್ದೂ ಅಷ್ಟೇ ನಿಜ. ಇರಲಿ, ಅದು ಬೇರೆಯೇ ಕತೆ.

ಅಂತೂ ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿಯೇಬಿಟ್ಟಿರಿ. ಆನಂತರದ್ದು ಮತ್ತೂ ರೋಚಕ. ಎಲ್ಲಾ ನಮ್ಮ ಬಾಲಿವುಡ್ ಸಿನಿಮಾಗಳಲ್ಲಿ ನಡೆಯುವಂತೆ. ಸಮಾರಂಭವೊಂದರಲ್ಲಿ ಪುಟ್ಟಪರ್ತಿ ಸಾಯಿಬಾಬಾ ಅವರು ತಮ್ಮನ್ನು "ಮುಖ್ಯಮಂತ್ರಿಗಳೇ" ಎನ್ನುವ ಬದಲು "ಪ್ರಧಾನಮಂತ್ರಿಗಳೇ" ಎಂದು ಒಂದಲ್ಲಾ ಮೂರು ಸಲ ಸಂಬೋಧಿಸಿ ಅನತಿ ಕಾಲದಲ್ಲೇ ಅದು ನಿಜವಾಗಿಬಿಟ್ಟು ತಾವು ದೆಹಲಿಯ ಗದ್ದುಗೆಯನ್ನೇರಿ ನಮ್ಮೂರ ರಾಗಿಮುದ್ದೆಯನ್ನು ದೇಶದಾದ್ಯಂತ ಫೇಮಸ್ ಮಾಡಿಬಿಟ್ಟಾಗ ನನಗೆ ನಿಜವಾಗಿಯೂ ತುಂಬಾ ಸಂತೋಷವಾಯಿತು. ತಮ್ಮ ಪಾರ್ಟಿಯ ಹಿರೀಕ ಮೊರಾರ್ಜಿ ದೇಸಾಯಿ ಮೂತ್ರವನ್ನು ಫೇಮಸ್ ಮಾಡಿದ್ದಕ್ಕೆ ಹೋಲಿಸಿದರೆ ತಾವು ಮಾಡಿದ್ದು ಕೋಟಿ ಕೋಟಿ ಪಾಲು ಉತ್ತಮ ಹಾಗೂ `ಸ್ವಚ್ಚ' ಕಾರ್ಯ. (ಸಧ್ಯ ಮೂತ್ರವನ್ನೂ, ಮುದ್ದೆಯನ್ನೂ ಒಟ್ಟಿಗೆ ಇಷ್ಟಪಡುವವವರೊಬ್ಬರು ಪ್ರಧಾನಿಯಾಗಿಬಿಟ್ಟು ಸಾರಿನ ಬದಲು ಮೂತ್ರದಲ್ಲೇ ಮುದ್ದೆಯನ್ನು ಉರುಳಾಡಿಸಿ ಗುಳುಂ ಮಾಡಿ ಎಂದು ಹೇಳದಿದ್ದರೆ ಸಾಕು!)

ಆಗದವರು ತಮ್ಮನ್ನು "ನಿದ್ದೆಗೌಡ" ಎಂದು ಕರೆಯತೊಡಗಿ, ನಮ್ಮೂರ ಬಾಂಧವರೆಲ್ಲಾ ಬಾಯಿ ತುಂಬಾ "ಮುದ್ದೇಗೌಡ" ಎಂದು ಮುದ್ದುಮುದ್ದಾಗಿ ಕರೆಯತೊಡಗಿ ನಾಕು ದಿನ ಕಳೆಯುವುದರಲ್ಲಿ ಎಷ್ಟು ಜನರ ಕಣ್ಣು ಕಿಸುರಾಗಿಬಿಟ್ಟಿತು! ಆ ಹಾಳು ಸೀತಾರಾಮ ಕೇಸರಿ ತಮ್ಮನ್ನು ಪೂರ್ತಿ ಒಂದು ವರ್ಷದವರೆಗಾದರೂ ಪ್ರಧಾನಮಂತ್ರಿಯಾಗಿರಲು ಬಿಡಲಿಲ್ಲ. ಅನ್ಯಾಯಕಾರ. ಅವನ ಮನೆ ಎಕ್ಕುಟ್ಟೋಗಾ. ಆವರು ತಮ್ಮ ಮೇಲೆ ಹೊರಿಸಿದ ಸುಳ್ಳು ಅಪವಾದ ಏನದು? ತಾವು ಅವರನ್ನು "ನಿಕಮ್ಮಾ", ಅಂದರೆ "ಮೂರು ಕಾಸಿಗೂ ಪ್ರಯೋಜನವಿಲ್ಲದವ, ರಿಪೇರಿಯಾಗದಷ್ಟು ಲಾಚಾರೆದ್ದುಹೋದವ" ಅಂತೇನೋ ಹೀಗಳೆದರಂತೆ. ಅದು ಅವರ ಮರ್ಮಕ್ಕೇ ಚುಚ್ಚಿಬಿಟ್ಟಿತಂತೆ. ತನ್ನ ಹಾಗೂ ತನ್ನ ಪಕ್ಷದ ಗೌರವದ ದೃಷ್ಟಿಯಿಂದ ತಮಗೆ ಬೆಂಬಲ ನೀಡುವುದನ್ನು ವಾಪಸ್ ಪಡೆಯದೇ ಆ ಕಾಂಗ್ರೆಸ್ ಮಹಾ ನೇತಾರನಿಗೆ ಬೇರೆ ದಾರಿಯೇ ಇರಲಿಲ್ಲವಂತೆ. ನೀವೂ ಅವರಿಗೆ ಸರಿಯಾಗೇ ಮಾಡಿದಿರಿ ಬಿಡಿ. ತಮ್ಮ ವಿಶ್ವಾಸಮತಯಾಚನೆಯ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಉಂಡು ಮಲಗುವ ಹೊತ್ತಾದರೂ ನಿಲ್ಲದೇ ಮುಂದುವರೆಯುತ್ತಿದ್ದಾಗ ತಾವು ಅಂದದ್ದೇನು? "ನಾನೇನೂ ಹಾಗೆ ಅನ್ನಲಿಲ್ಲ. ಆ ಪದವೇ ನಂಗೆ ಗೊತ್ತಿಲ್ಲ. ಅದೇನದು, ನಿಕಮ್ಮಾ, ಅಕ್ಕಮ್ಮಾ..." ತಾವು ನಗುತ್ತಾ ಹೇಳಿದಾಗ ಇಡೀ ಲೋಕಸಭೆಯೇ ನಗೆಗಡಲಲ್ಲಿ ಮುಳುಗಿಹೋಯಿತು. ತಮ್ಮ ಮಾತನ್ನು ಆಸಕ್ತಿಯಿಂದ ಕೇಳುತ್ತಿದ್ದ ನಾನೂ ನನ್ನ ಹೆಂಡತಿಯೂ ಎಬ್ಬಿಸಿದ ನಗೆಯ ಅಬ್ಬರಕ್ಕೆ ಮಲಗಿದ್ದ ಎರಡು ವರ್ಷದ ಪುಟಾಣಿ ಆದಿತ್ಯ ಎದ್ದು ಪಿಳಿಪಿಳಿ ಕಣ್ಣುಬಿಟ್ಟದ್ದನ್ನು ಮರೆಯುವಂತೆಯೇ ಇಲ್ಲ. ತಮ್ಮ ಮಾತನ್ನು ಕೇಳಿದ ಕೇಸರಿ ಸಾಹೇಬರು ತಲೆ ಮೇಲೆತ್ತಲೇ ಇಲ್ಲ. ಅದಾಗಿ ಅಮಾವಾಸ್ಯೆ ಕಳೆಯುವುದರೊಳಗೆ ಸೋನಿಯಾ ಮೇಡಂ ಕೇಸರಿಯವರನ್ನು ನಿಜವಾಗಿಯೇ "ನಿಕಮ್ಮಾ" ಮಾಡಿ ಮನೆಗೆ ಕಳಿಸಿಬಿಟ್ಟಾಗ ಆವಯ್ಯನಿಗೆ ತಕ್ಕ ಶಾಸ್ತಿಯಾಯಿತು ಅಂತ ನಾವೆಲ್ಲಾ ಅಂದುಕೊಂಡೆವು. (ಅಷ್ಟೆ ಅಲ್ಲ, ಆ ಗಂಡುಗಲಿ ಸೋನಿಯಾ ಕಾಂಗ್ರೆಸ್ನಲ್ಲಿರುವ ಮೀಸೆ ಹೊತ್ತ ಗಂಡಸರನ್ನೆಲ್ಲಾ "ನಿಕಮ್ಮಾ" ಮಾಡಿ ಕೂರಿಸಿಬಿಟ್ಟಿದ್ದಾರೆ ಬಿಡಿ.)

ಹೀಗೆ ತಮ್ಮ ಹಲವಾರು ಆಸಕ್ತಿದಾಯಕ ಚಿತ್ರಗಳು ನನ್ನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿವೆ. ತಮ್ಮ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸುವ ಒಂದು ಚಿತ್ರವೂ ಅದರಲ್ಲಿದೆ. ಈ ಬಗ್ಗೆ ಹಿಂದಿನ ಪತ್ರದಲ್ಲೂ ಬರೆದಿದ್ದೇನೆ. ಇಲ್ಲಿ ಮತ್ತೊಮ್ಮೆ ಹೇಳುವುದೇನೂ ಅನುಚಿತವೆನಿಸುವುದಿಲ್ಲ. ಹಳೆಯ ಸಂತಸದ ಘಟನೆಗಳನ್ನು ಮತ್ತೆ ಮತ್ತೆ ನೆನಸಿಕೊಳ್ಳುವುದು ಮನಸ್ಸನ್ನು ಹಗುರಾಗಿಸುತ್ತದೆ, ಉಲ್ಲಾಸಗೊಳಿಸುತ್ತದೆ.

ಕಾವೇರಿ ವಿವಾದದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸಿದ ಒಬ್ಬರೇ ಒಬ್ಬ ಮುಖ್ಯಮಂತ್ರಿ ನೀವು. ೧೯೯೧ರಲ್ಲಿ ಬಂಗಾರಪ್ಪ ಹಿಂದೆಮುಂದೆ ನೋಡದೇ ಸಂವಿಧಾನವನ್ನು ಧಿಕ್ಕರಿಸುವ ಬಗೆಯಲ್ಲಿ "ಕಾವೇರಿ ಕಣಿವೆ ಪ್ರಾಧಿಕಾರ" ಅಂತಲೋ ಎನನ್ನೋ ಹುಟ್ಟುಹಾಕಿ, ಸುಪ್ರೀಂ ಕೋರ್ಟ್ ಅದನ್ನು ಸಂವಿಧಾನಬಾಹಿರವೆಂದು ರದ್ದುಪಡಿಸಿ ಛೀಮಾರಿ ಹಾಕಿದ ಕಥೆ ತಮಗೆ ನೆನಪಿರಲೇಬೇಕು. ವಿವೇಕಿಗಳಾರೂ ಮಾಡದ ಕೆಲಸವನ್ನು ಬಂಗಾರಪ್ಪ ಮಾಡಿದರು. ಪರಿಣಾಮ- ರಾಜ್ಯಕ್ಕೆ ಅವಮಾನವಾಗಿ ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಯಿತು. ಆಮೇಲೆ ತೀರಾ ಇತ್ತೀಚೆಗೆ ಎಸ್ ಎಂ ಕೃಷ್ಣ ಅವರು ನೀರು ಬಿಡುವುದಿಲ್ಲ ಬಿಡುವುದಿಲ್ಲ ಬಿಡುವುದಿಲ್ಲಾ ಅನ್ನುತ್ತಲೇ ಒಳಗೊಳಗೇ ನೀರು ಬಿಟ್ಟರು. ಅದನ್ನು ವಿರೋಧಿಸಿ ರೈತ ಗುರುಸ್ವಾಮಿ ಕಬಿನಿ ಜಲಾಶಯಕ್ಕೆ ಬಿದ್ದು ಪ್ರಾಣತ್ಯಾಗ ಮಾಡಿದನ್ನು ನೆನಸಿಕೊಂಡರೆ ಮನ ಮರುಗುತ್ತದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವರ್ತನೆ ತೀರಾ ಭಿನ್ನ ಹಾಗೂ ವಿವೇಕಯುತ. ೧೯೯೫ರಲ್ಲಿ ತನ್ನ ಭತ್ತದ ಗದ್ದೆಗಳಿಗೆ ನೀರಿಲ್ಲಾ ಎಂದು ತಮಿಳುನಾಡು ಆಯೋಗದ ಮುಂದೆ ಸುಳ್ಳುಸುಳ್ಳೇ ಅತ್ತಾಗ ನಿಜವನ್ನು ಅರಿಯಲು ವೈ ಕೆ ಅಲಘ್ ಸಮಿತಿ ತಂಜಾವೂರಿಗೆ ಹೋಯಿತು. ಅಲ್ಲಲ್ಲಿ ಬಾಡಿದ್ದ ಬತ್ತದ ಗದ್ದೆಗಳನ್ನು ತೋರಿಸಿ ತಮಿಳುನಾಡು ಸಮಿತಿಯನ್ನು ಅಡ್ಡದಾರಿಗೆಳೆಯುವ ಕುತಂತ್ರ ತೋರಿತು. ಆಗ ತಾವು ಮಾಡಿದ್ದೇನು? ಹೆಚ್ಚಿನವರು ಮರೆತಿರಬಹುದು. ನಾನು ಮರೆತಿಲ್ಲ. ನೀರಾವರಿ ಇಲಾಖೆಯ ಇಂಜಿನೀಯರುಗಳನ್ನು ತಾವು ಗುಟ್ಟಾಗಿ ತಂಜಾವೂರಿಗೆ ಕಳಿಸಿದಿರಿ. ಅವರು ಅಯ್ಯಪ್ಪನ ಭಕ್ತರಂತೆ ವೇಷ ಧರಿಸಿ ತಮಿಳುನಾಡು ಎಲ್ಲೆಲ್ಲಿ ನೀರಿಲ್ಲ ಎಂದು ಗೋಳಿಡುತ್ತಿತ್ತೋ ಅಲ್ಲೆಲ್ಲಾ ಹೋಗಿ ಅಲ್ಲಿ ಸಾಕಷ್ಟು ನೀರಿರುವುದನ್ನು ಪತ್ತೆ ಹಚ್ಚಿದರು. ಅಷ್ಟೇ ಅಲ್ಲ, ಬತ್ತದ ಸಸಿಗಳು ಸೊಂಪಾಗಿ ನಳನಳಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ತಮಗೆ ತಂದೊಪ್ಪಿಸಿದರು. ತಾವು ಅವನ್ನು ಆಯೋಗದ ಮುಂದಿರಿಸಿದಾಗ ಇಡೀ ದೇಶ ಬೆರಗಾಯಿತು. ಮುಖ್ಯಮಂತ್ರಿ ಜಯಲಲಿತಮ್ಮನಿಂದ ಹಿಡಿದು ನನ್ನ ತಮಿಳು ಗೆಳೆಯರವರೆಗೆ ಎಲ್ಲರೂ ಗಪ್ಚಿಪ್! ಏನು ಮಾಡಿದರೂ ಕಾವೇರಿ ಸುದ್ದಿ ಎತ್ತಲೇ ಒಲ್ಲರು! ನನಗಾಗ ಅದೆಷ್ಟು ನೆಮ್ಮದಿಯೆನಿಸಿತ್ತು ಗೊತ್ತೇ ಗೌಡರೇ?

ಹೀಗೆ ತಮಿಳುನಾಡಿನ ಕಳ್ಳಾಟಗಳನ್ನು ಚಾಕಚಕ್ಯತೆಯಿಂದ ಬಯಲುಗೊಳಿಸಿದ ಕರ್ನಾಟಕದ ಏಕೈಕ ಮುಖ್ಯಮಂತ್ರಿ ತಾವು. ಬಂಗಾರಪ್ಪನವರು ಹೆಂಡ ಕುಡಿದಂತೆ ತಿಕ್ಕಲುತಿಕ್ಕಲಾಗಿ ವರ್ತಿಸಿ, ಕೃಷ್ಣ ಅವರು ಹೊರಗೇನೋ ಹೇಳಿಕೊಂಡು ಒಳಗೊಳಗೇ ನೀರು ಬಿಟ್ಟು ನನ್ನನ್ನು ನಗೆಪಾಟಲಿಗೀಡು ಮಾಡಿದರೆ ತಾವು ಸದ್ದಿಲ್ಲದೇ ಕೆಲಸ ಸಾಧಿಸಿಬಿಟ್ಟಿರಿ ಹಾಗೂ ತಮಿಳು ಗೆಳೆಯರ ನಡುವೆ ಎದೆಯೆತ್ತಿ ನಡೆಯುವ ಒಂದು ಅವಕಾಶವನ್ನು ನನಗೆ ಒದಗಿಸಿಕೊಟ್ಟಿರಿ. ಇದಕ್ಕಾಗಿ ನಾನು ತಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ಅಷ್ಟೇ ಅಲ್ಲ, ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿಯೇ ಇನ್ನಷ್ಟು ವರ್ಷ ಮುಂದುವರೆಯಬಾರದಿತ್ತಾ, ತಮ್ಮ ಅಧಿಕಾರಾವಧಿಯಲ್ಲೇ ಆಯೋಗದ ಅಂತಿಮ ತೀರ್ಪು ಬರಬಾರದಿತ್ತಾ ಎಂದು ನಾನು ಆಗಾಗ ಅಂದುಕೊಳ್ಳುತ್ತೇನೆ.

ಪೀಠಿಕೆ ಧೀರ್ಘವಾಯಿತು. ಇನ್ನು ವಿಷಯಕ್ಕೆ ಬರುತ್ತೇನೆ.

ಕಳೆದ ಎರಡು ವಾರಗಳಲ್ಲಿ ಕರ್ನಾಟಕದಲ್ಲಿನ ಬೆಳವಣಿಗೆಗಳ ಹಿನ್ನೆಯಲ್ಲಿ ನಾನೀಗ Poಟiಣiಛಿs ಮತ್ತು Poಟiಣiಛಿಚಿಟ ಎಂಬ ಎರಡೂ ಪದಗಳ ವ್ಯುತ್ಪತ್ತಿಯ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದೇನೆ. ಮೊದಲಿಗೆ ಪಾಲಿಟಿಕ್ಸ್ ಎಂಬ ಪದ "ಠಿoಟಥಿ" ಅಂದರೆ "ಹಲವು" ಮತ್ತು "ಣiಛಿಞs" ಅಂದರೆ "ಹೇನುಗಳು" ಎಂಬ ಎರಡು ಇಂಗ್ಲಿಷ್ ಪದಗಳ ಸಂಗಮದಿಂದಾಗಿದೆಯಂತೆ. ಇನ್ನು "ಪೊಲಿಟಿಕಲ್" ಎಂಬ ಪದವಂತೂ ಅಪ್ಪಟ ಕನ್ನಡದ್ದು. "ಪೋಲಿ" ಮತ್ತು "ತಿಕ್ಕಲು" ಎಂಬ ಎರಡು ಶುದ್ಧಾಂಗ ಶುದ್ಧ ಕನ್ನಡ ಪದರತ್ನಗಳ ಸಂಗಮದಿಂದ ಈ ಪೊಲಿಟಿಕಲ್ ಪದ ಜನ್ಮ ತಾಳಿದೆಯಂತೆ. ನಮ್ಮ ರಾಜಕೀಯ ನಾಯಕರ ಮನೋಧರ್ಮ, ಸ್ವಭಾವ, ವರ್ತನೆ, ನಡತೆ, ನಡವಳಿಕೆಗಳನ್ನು ಈ ಎರಡು ಪದಗಳು ಅದೆಷ್ಟು ಢಾಳಾಗಿ ತೋರಿಸುತ್ತಿವೆ ನೋಡಿ.

ಹಲವು ಹೇನುಗಳ ಈ ಪೋಲಿ ಮತ್ತು ತಿಕ್ಕಲು ನಡತೆಗಳನ್ನು ನೀವು ನೋಡುತ್ತಲೇ ಇದ್ದೀರಿ. ಅದರ ಬಗ್ಗೆ ಮತ್ತೆ ಇಲ್ಲಿ ಕೊರೆಯುವ ಅಗತ್ಯ ನನಗೆ ಕಾಣುತ್ತಿಲ್ಲ. ಆದರೆ, ಈ ಎಲ್ಲಾ ತಿಕ್ಕಲು ಬೆಳವಣಿಗೆಗಳಿಗೆ ಕಾರಣವಾಗಿ ಜನ "ಛೆ ಛೆ" ಎಂದು ಅಸಹ್ಯಪಟ್ಟುಕೊಳ್ಳುತ್ತಿರುವ ಹೇನುಗಳಲ್ಲೊಂದು ತಮ್ಮ ಸಂತಾನ ಎಂಬ ಬಗ್ಗೆ ಮಾತಾಡೋಣ. ಸದ್ಯಕ್ಕೆ ಅಷ್ಟು ಸಾಕು.

೨೦೦೬ರಲ್ಲಿ ಏನೇನೋ ಒಳಸಂಚು ಮಾಡಿ ತಾವು ತಮ್ಮ ಸುಪುತ್ರ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದಿರಿ ಎಂದು ಜನ ಹೇಳುತ್ತಾರೆ. ಅದರಲ್ಲಿ ತಮ್ಮ ಪಾತ್ರವೇನೂ ಇಲ್ಲ, ಇಡೀ ಬೆಳವಣಿಗೆ ತಮಗೆ ಅನಿರೀಕ್ಷಿತ, ಕುಮಾರಸ್ವಾಮಿಯವರು ಧರಂ ಸಿಂಗ್ರನ್ನು ಅಚಾನಕ್ಕಾಗಿ ಚಿತ್ ಮಾಡಿದ ಪರಿಗೆ ತಾವು ಬೆಚ್ಚಿಬಿದ್ದಿರಿ ಎಂದು ಮೊನ್ನೆ ಯಾರೋ ಬರೆದದ್ದು ಓದಿದೆ. ಆ ಬಗ್ಗೆ ನನಗೆ ಗೊಂದಲ. ಮೂರು ವರ್ಷಗಳ ಹಿಂದೆ ಬಿಜೆಪಿಯ ಬೆಂಬಲದೊಂದಿಗೆ ಇಪ್ಪತ್ತು ತಿಂಗಳು ರಾಜ್ಯಭಾರ ಮಾಡಿದ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ಯೆಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದೇ ಹೋದದ್ದರ ಹಿಂದೆ ತಾವಿದ್ದಿರಿ ಎಂಬ ಸುದ್ಧಿಯ ಬಗ್ಗೆ ನನಗೆ ಇನ್ನೂ ಅಧಿಕ ಗೊಂದಲ. ಕೊಟ್ಟ ಮಾತಿಗೆ ತಪ್ಪುವುದು ತಪ್ಪು ಎಂದು ನಂಬಿ `ಮೈತ್ರಿ'ಯ ನಿಯಮವನ್ನು ಪಾಲಿಸಲು ಮುಂದಾಗಿದ್ದ ಕುಮಾರಸ್ವಾಮಿಯವರನ್ನು ತಾವು "ಅತ್ತೂ ಕರೆದೂ" ಮಾತಿಗೆ ತಪ್ಪುವಂತೆ ಮಾಡಿಬಿಟ್ಟಿರಿ ಎಂದು ಕೇಳಿದ್ದೇನೆ.

ಈಗಿನ ಬೆಳವಣಿಗೆಗಳಲ್ಲಿ ತಮ್ಮ ಹೆಸರು "ಬಹಿರಂಗ"ವಾಗಿ ಕೇಳಿಸುತ್ತಿಲ್ಲ. ಆದರೆ ಬಿಜೆಪಿ ಬಗ್ಗಡದಲ್ಲಿ ಕುಮಾರಸ್ವಾಮಿಯವರು ಮೀನು ಹಿಡಿಯಹೊರಟಿದ್ದೇ ಎಲ್ಲ ಅವಾಂತರಕ್ಕೂ ಮೂಲ ಎಂದು ಸರಿಸುಮಾರು ಎಲ್ಲರೂ ಹೇಳುತ್ತಿದ್ದಾರೆ. ಅದು ತಮಗೂ ಗೊತ್ತೇ ಇದೆ ಅಂದುಕೊಳ್ಳುತ್ತೇನೆ. ಬಿಜೆಪಿ ಭಿನ್ನಮತೀಯರನ್ನು ಬುಟ್ಟಿಗೆ ಹಾಕಿಕೊಂಡು ಯೆಡಿಯೂರಪ್ಪನವರನ್ನು ಉರುಳಿಸಿಬಿಟ್ಟೆ ಎಂದು ಕುಮಾರಸ್ವಾಮಿಯವರು ಬೀಗುತ್ತಿದ್ದಂತೇ ಪರಿಸ್ಥಿತಿ ಅದೆಂತಹ ತಿರುವು ಪಡೆದುಬಿಟ್ಟಿತು! ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ಒಪ್ಪಿಕೊಂಡು ಯೆಡಿಯೂರಪ್ಪನವರನ್ನು "ನಡಿಯೂರಪ್ಪ" ಮಾಡಿಬಿಡಬಹುದೆಂದು ಅಂದುಕೊಳ್ಳುತ್ತಿದ್ದಂತೇ ಕಾಂಗ್ರೆಸ್ ಹೈಕಮ್ಯಾಂಡ್ ಬೇರೆಯೇ ದಿಕ್ಕಿನಲ್ಲಿ ಯೋಚಿಸಿತು.

ಒಂದು ವರದಿಯ ಪ್ರಕಾರ ದಕ್ಷಿಣದ ಮೊಟ್ಟಮೊದಲ ಬಿಜೆಪಿ ಸರಕಾರವನ್ನು ಚಿವುಟಿಹಾಕಲು ಒದಗಿದ ಸುವರ್ಣಾವಕಾಶವನ್ನು ಕಾಂಗ್ರೆಸ್ ಪಕ್ಕಕ್ಕಿಟ್ಟು ಸುಮ್ಮನೆ ಕುಳಿತುಕೊಳ್ಳುವುದರ ಹಿಂದೆ ಇದ್ದದ್ದು ತಮ್ಮ ಹಾಗೂ ತಮ್ಮ ಕುಟುಂಬದ ಟ್ರ್ಯಾಕ್ ರೆಕಾರ್ಡ್. ಕುಮಾರಸ್ವಾಮಿಯವರು ಧರಂ ಸಿಂಗ್ ಸರಕಾರಕ್ಕೆ ಕಾಣಿಸಿದ ಗತಿಯನ್ನು ನೆನಪಿಸಿಕೊಂಡು ಅದು "ದೇವೇಗೌಡ ಮತ್ತು ಅವರ ಪರಿವಾರದ ಜತೆ ಯಾವುದೇ ರಾಜಕೀಯ ಮೈತ್ರಿಗೆ ಮುಂದಾಗಕೂಡದು" ಎಂದು ತನ್ನ ರಾಜ್ಯಶಾಖೆಗೆ ಸೂಚನೆ ಕೊಟ್ಟಿದೆಯಂತೆ. ಕಾಂಗ್ರೆಸ್ ಹೈಕಮ್ಯಾಂಡ್ನ ಅಭಿಪ್ರಾಯದಲ್ಲಿ ತಾವು ಮತ್ತು ತಮ್ಮ ಪರಿವಾರ ನಂಬಿಕೆಗೆ ಅನರ್ಹ! ಸುಮಾರು ಐದು ದಶಕಗಳ ಸಕ್ರಿಯ ರಾಜಕಾರಣ, ಒಮ್ಮೆ ಕರ್ನಾಟಕದ ಮುಖ್ಯಮಂತ್ರಿಯ ಪದವಿ, ಒಮ್ಮೆ ರಾಷ್ಟ್ರದ ಪ್ರಧಾನಮಂತ್ರಿಯ ಪದವಿ- ಇದೆಲ್ಲವೂ ಆದನಂತರ ತಾವು ಗಳಿಸಿದ್ದು ಇಷ್ಟೇ.

ತೊಂಬತ್ತರ ದಶಕದ ಆದಿಯಲ್ಲಿ, ಕರ್ನಾಟಕದ ಮುಖ್ಯಮಂತ್ರಿಯಾಗುವುದಕ್ಕೆ ತುಸು ಮೊದಲು, ಹೆಗಡೆಯವರ ಜತೆಗಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ತಾವೊಂದು ಮಾತು ಹೇಳಿದ್ದಿರಿ- "ನಮ್ಮ ಬದುಕಿನ ಈ ಸಂಜೆಕಾಲದಲ್ಲಿ ನಾವು ಹೀಗೆ ಚಿಕ್ಕಮಕ್ಕಳಂತೆ ಆಡುವುದು ಬೇಡ." (ಚಿಕ್ಕಮಕ್ಕಳು ಅಬ್ಜೆಕ್ಟ್ ಮಾಡದಿದ್ದರೆ) ಇದು ಮುತ್ತಿನಂಥ ಮಾತು. ಆನಂತರ ತಾವು ಮುಖ್ಯಮಂತ್ರಿಯಾಗಿ ನಾನು ಮೇಲೆ ಉಲ್ಲೇಖಿರುವಂತೆ ಕಾವೇರಿಯ ವಿಷಯದಲ್ಲಿ ರಾಜ್ಯದ ಹಿತ ಕಾಪಾಡಲು ಶ್ರಮಿಸಿದಿರಿ, ಪ್ರಧಾನಮಂತ್ರಿಯಾಗಿ ಬಾಂಗ್ಲಾದೇಶದೊಡನೆ ಒಪ್ಪಂದ ಮಾಡಿಕೊಂಡು ಎರಡು ದಶಕಗಳ ಫರಕ್ಕಾ ವಿವಾದಕ್ಕೆ ಯಶಸ್ವಿಯಾಗಿ ಮಂಗಳ ಹಾಡಿ ರಾಷ್ಟ್ರದ ಹಿತ ಕಾಪಾಡಲು ಹೆಣಗಿದಿರಿ.

ಅದೆಲ್ಲವೂ ಆಗಿ ದಶಕವೇ ಕಳೆದು ತಾವು ಮತ್ತಷ್ಟು ಮಾಗಿದ ಮೇಲೆ ಹೀಗೆ ಚಿಕ್ಕಮಕ್ಕಳಿಗಿಂತಲೂ ಅತ್ತತ್ತಲೇ ಆಗಿಬಿಟ್ಟಿದ್ದೀರಲ್ಲ ಗೌಡರೇ?

ಪುರಿಗೆ ಸ್ವಲ್ಪ ಜಾಸ್ತಿ ಕಡಲೆ ಮತ್ತು ಇನ್ನೂ ಜಾಸ್ತಿ ಕಾರಾಸೇವೆಯನ್ನು ಬೆರೆಸಿಕೊಂಡು ತಿನ್ನುವುದು ನನಗೆ ತುಂಬಾ ಇಷ್ಟ. ಅದರಲ್ಲೂ ಈ ತಿಂಡಿಗಳು ಕೊಳ್ಳೇಗಾಲದವಾಗಿದ್ದರೆ ನನಗೆ ಸ್ವರ್ಗವೇ ಸಿಕ್ಕಿದಷ್ಟು ಖುಷಿ. ನನ್ನ ಈ ಚಪಲವನ್ನು ಅರಿತಿರುವ ನನ್ನ ಕೊಳ್ಳೇಗಾಲದ ನೆಂಟರಿಷ್ಟರು ನಾನು ಅವರ ಮನೆಗಳಿಗೆ ಹೊದಾಗಲೆಲ್ಲಾ "ಕಡಲೆಪುರಿ ಕಾರಾಸೇವೆ ಸತ್ಕಾರ"ವನ್ನು ಒಂದು ವ್ರತದಂತೆ ಪಾಲಿಸುತ್ತಾರೆ. ಒಮ್ಮೆ ಹೀಗಾಯಿತು. ಅಗಲದ ತಟ್ಟೆಯೊಂದರಲ್ಲಿ ಕಡಲೆಪುರಿ ಕಾರಾಸೇವೆಯ ಗುಡ್ಡವನ್ನು ನಿರ್ಮಿಸಿ ಮನೆಯಾಕೆ ನನ್ನ ಮುಂದಿಟ್ಟರು. ಗುಡ್ಡ ಕರಗಿಸುವ ನನ್ನ ಕಾಯಕಕ್ಕೆ ಅವರ ಇಬ್ಬರು ಪುಟ್ಟ ಮಕ್ಕಳೂ ಕೈಜೋಡಿಸಿದರು. ಹುಡುಗ ನನ್ನ ಜತೆ ಮಾತಾಡುತ್ತಾ ನಿಧಾನವಾಗಿ ತಿನ್ನುತ್ತಿದ್ದರೆ ಹುಡುಗಿ ಕಡಲೆಪುರಿಯನ್ನು ಅವೇಶದಿಂದ ಗೋರಿಗೋರಿ ಮುಕ್ಕುತ್ತಿತ್ತು. ಮಧ್ಯೆ ಮಧ್ಯೆ ನೆತ್ತಿ ಹತ್ತಿ ಜೋರಾಗಿ ಕೆಮ್ಮತೊಡಗುತ್ತಿತ್ತು. ಆಗ ಅವರಮ್ಮ ಹೇಳಿದ್ದು: "ನೀವಿಬ್ಬರೂ ತಟ್ಟೆ ಖಾಲಿ ಮಾಡುವ ಮೊದಲು ತಾನೇ ಸಾಕಷ್ಟು ತಿಂದುಬಿಡಬೇಕೆಂಬ ಆತುರ ಅವಳಿಗೆ."

ಕಳೆದ ನಾಲ್ಕು ವರ್ಷಗಳಿಗೂ ಕಡಿಮೆ ಆವಧಿಯಲ್ಲಿ ಅಧಿಕಾರದ ಆಸೆಯಿಂದ ಎರಡು ಸರಕಾರಗಳನ್ನು ಉರುಳಿಸಿ ಮೂರನೆಯದನ್ನು ಉರುಳಿಸಲು ಮುನ್ನುಗ್ಗುತ್ತಿರುವ ತಮ್ಮ ಪರಿವಾರವನ್ನು ನೋಡಿದಾಗ ನನಗೆ ಆ ಹುಡುಗಿ ಗಾಢವಾಗಿ ನೆನಪಾಗುತ್ತಾಳೆ.

ತಮ್ಮ ಸುಪುತ್ರರುಗಳನ್ನು ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಮಾಡುವುದು ತಮ್ಮ ಕುಟುಂಬದ ಯೋಜನೆ ಎಂದು ಮೊನ್ನೆ ಒಂದುಕಡೆ ಓದಿದೆ. ಕುಮಾರಸ್ವಾಮಿಯವರ ಪಾಳಿ ಒಂದು ಸಲ ಆಗಿಹೋಗಿರುವುದರಿಂದ ಮುಂದಿನ ಸರದಿ ರೇವಣ್ಣನವರದು ಎಂದೂ ಓದಿದೆ. ಸಧ್ಯ, ಧೃತರಾಷ್ಟ್ರನಂತೆ ತಮಗೆ ನೂರು ಗಂಡುಮಕ್ಕಳಿಲ್ಲವಲ್ಲ ಅನ್ನುವುದೇ ಸಮಾಧಾನದ ವಿಷಯ.

ಇರಲಿ, ತಮ್ಮ ಮಕ್ಕಳನ್ನು ಮುಖ್ಯಮಂತ್ರಿಯಾಗಿಸಲು ತಾವು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ತನ್ನ ಮಕ್ಕಳ ಅಭ್ಯುದಯಕ್ಕಾಗಿ, ಸುಖಸಂತೋಷಕ್ಕಾಗಿ ತಂದೆಯಾದವನು ಪ್ರಯತ್ನಿಸಲೇಬೇಕು. ನಮ್ಮ ಭಾರತೀಯ ಕುಟುಂಬ ವ್ಯವಸ್ಥೆಯ ಒಂದು ಬಹುಮುಖ್ಯ ಲಕ್ಷಣ ಅದು. ನೆಹರೂ, ಶೇಖ್ ಅಬ್ದುಲ್ಲಾ ಮಾಡಿದ್ದು, ಕರುಣಾನಿಧಿ, ಫರೂಕ್ ಅಬ್ದುಲ್ಲಾ ಮಾಡುತ್ತಿರುವುದೂ ಅದೇ. ಆದರೆ ಹಾಗೆ ಮಾಡುವುದರಲ್ಲಿ ಒಂದು ನೀತಿ ನಿಯಮ ಬೇಡವೇ? ಸ್ವಲ್ಪ ತಾಳ್ಮೆ ಬೇಡವೇ?

ಯೆಡಿಯೂರಪ್ಪ ಸರಕಾರವೇನೂ ಸ್ವರ್ಗದಿಂದ ಇಳಿದುಬಂದಿಲ್ಲ. ಅದೂ ನಶ್ವರವೇ. ಈಗಾಗಲೇ ಭ್ರಷ್ಟಾಚಾರದಲ್ಲಿ ಹೂತುಹೋಗಿರುವ ಅದು ತನ್ನ ಭಾರಕ್ಕೆ ತಾನೇ ಕುಸಿಯುವುದು ಖಂಡಿತ. ನಾಳೆಯೋ ಅಥವಾ ಇನ್ನೊಂದು ವರ್ಷವೋ, ಚುನಾವಣೆಗಳು ಯಾವಾಗ ನಡೆದರೂ ಬಿಜೆಪಿಗೆ ಅದು ವಾಟರ್ಲೂ ಆಗುವುದರಲ್ಲಿ ಸಂದೇಹವಿಲ್ಲ. ಗೋಹತ್ಯೆ ನಿಷೇಧದ ಬಗೆಗಿನ ಮಸೂದೆಯೊಂದೇ ಸಮಾಜದ ಒಂದು ಬಹುದೊಡ್ಡ ಭಾಗವನ್ನು ಬಿಜೆಪಿಯಿಂದ ವಿಮುಖಗೊಳಿಸಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಅದರ ಜತೆ ನೂರೊಂದು ಭ್ರಷ್ಟಾಚಾರ ಪ್ರಕರಣಗಳೂ ಸೇರಿಕೊಂಡು ಯೆಡಿಯೂರಪ್ಪ ಸರಕಾರವನ್ನು `ಸಹಸ್ರಾಕ್ಷ'ನನ್ನಾಗಿ ಮಾಡಿರುವುದು ಎಲ್ಲರಿಗೂ ಕಾಣುತ್ತಲೇ ಇದೆ. ಗಣಿಧಣಿಗಳ ನೋಟಿನ ಕಂತೆಗಳು ಅದೆಷ್ಟು ಗಾಯಗಳಿಗೆ ಮುಲಾಮು ಹಚ್ಚಲು ಸಾಧ್ಯ? ಅವರಾದರೂ ಎಷ್ಟು ದಿನದವರೆಗೆ ಹಚ್ಚುತ್ತಾ ಕೂರುತ್ತಾರೆ?

ಅಲ್ಲಿಯವರೆಗೆ ತಾಳ್ಮೆಯಿಂದ ಕಾದಿದ್ದರೆ ತಮಗೆ, ತಮ್ಮ ಸುಪುತ್ರರುಗಳಿಗೆ ಒಳ್ಳೆಯ ದಿನಗಳು ಬರುತ್ತಿದ್ದುವೇನೋ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಸುಪುತ್ರರುಗಳ ಚಟುವಟಿಕೆಗಳು ಮತ್ತು ಅದಕ್ಕೆ ತಮ್ಮ `ಪ್ರೋತ್ಸಾಹ'ಗಳಿಂದಾಗಿ ತಮ್ಮ ಪಕ್ಷದ ಗತಿ ಅಧೋಗತಿಯಾಗಿರುವುದಂತೂ ನಿಜ. ಬಿಜೆಪಿಯಿಂದ ದೂರವಾದ ಜನ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆಯೇ ಹೊರತು ಜೆಡಿಎಸ್ ಕಡೆಗಲ್ಲ.

ಅತಿಬುದ್ಧಿವಂತಿಕೆಯಿಂದಾಗಿ ತಮ್ಮ ಪರಿವಾರ ಸಾಧಿಸಿದ್ದು ಇಷ್ಟು, ಅದೂ "ನಮ್ಮ ಬದುಕಿನ ಈ ಸಂಜೆಕಾಲದಲ್ಲಿ..." ಎಂಬ ಜ್ಞಾನೋದಯವಾಗಿ ಒಂದೂವರೆ ದಶಕಗಳು ಸರಿದ ನಂತರ!

ಇದನ್ನು "ಬೆಳವಣಿಗೆ" ಎಂದು ಕರೆಯಲಾಗುತ್ತದೆಯೇ ಗೌಡರೇ?

ಸಧ್ಯಕ್ಕೆ ತಾವೂ ತಮ್ಮ ಪರಿವಾರ ಏನೂ ಮಾಡದೇ `ಒಳ್ಳೆಯ ಹುಡುಗ'ರಂತೆ ಕೈಕಟ್ಟಿಕೊಂಡು ಬಾಯಿ ಮೇಲೆ ಬೆರೆಳಿಟ್ಟುಕೊಂಡು ಕೂರುವುದೇ ಆಗಿರುವ ಅನಾಹುತವನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ. ಕುಮಾರಸ್ವಾಮಿಯವರು ಬಿಡದಿಯಲ್ಲಿನ ರೆಸಾರ್ಟ್ ಒಂದರಲ್ಲಿ ಕೂತುಕೊಂಡು ಏನೇನೋ ಮಾಡುತ್ತಿದ್ದಾರಂತೆ. ಅಲ್ಲಾ ಗೌಡರೇ, ಬಿಡದಿಯ ಸ್ಥಳಮಹಿಮೆ ಅಷ್ಟೇನೂ ಒಳ್ಳೆಯದಲ್ಲ ಎನ್ನುವುದು ತಮಗೆ ತಿಳಿಯದೇ? ಅದ್ಯಾರೋ ಸ್ವಾಮಿ ಇರುವುದೂ ಆ ಬಿಡದಿಯಲ್ಲೇ ಅಲ್ಲವಾ? ಅವರ ಜತೆ ಒಬ್ಬಳು ತಮಿಳು ನಟಿಯೂ ಇದ್ದಳೆಂದು ಸುದ್ದಿ ಕೇಳಿದ್ದು ಸುಳ್ಳೇ ಗೌಡರೇ? ಹೀಗಿರುವಾಗ ತಮ್ಮ ಸುಪುತ್ರರನ್ನು ಅಲ್ಲಿರಲು ಬಿಟ್ಟು ತಾವು ತಪ್ಪು ಮಾಡುತ್ತಿದ್ದೀರಿ ಎಂದು ನನಗನಿಸುತ್ತದೆ. ಕುಮಾರಸ್ವಾಮಿಯವರನ್ನು ಆದಷ್ಟು ಬೇಗನೆ ಅಲ್ಲಿಂದ ಕರೆಸಿಕೊಳ್ಳಿ. ಮನೆಯಲ್ಲಿ ಹರಿವಾಣದ ತುಂಬಾ ಮಟನ್ ಸಾರಿನ ಜತೆ ಗಡದ್ದಾಗಿ ನಾಕೈದು ರಾಗಿಮುದ್ದೆ ಬಾರಿಸಿ ಕಂಬಳಿ ಹೊದ್ದುಕೊಂಡು ನಾಕು ದಿನ ಪಟ್ಟಾಗಿ ನಿದ್ದೆ ಹೊಡೆ ಕುಮಾರ ಎಂದು ಹೇಳಿ. ನನ್ನ ಮಾತನ್ನು ನಿರ್ಲಕ್ಷಿಸಬೇಡಿ.



ಸಧ್ಯಕ್ಕೆ ಇಷ್ಟು ಸಾಕು. ಅಥವಾ, ತಿಳಿದವರಿಗೆ ಹೆಚ್ಚು ಹೇಳಲು ನಾನು ಶಕ್ತನಲ್ಲ.



ಇಂತಿ



ಪ್ರೇಮಶೇಖರ



೨೧ - ೧೦ - ೨೦೧೦

Sunday, July 24, 2011

ಲೇಖನ- ಲಾಡೆನ್ ಅಂತ್ಯ: ಅಂತ್ಯ ಕಾಣದ ಆತಂಕ





ಮೇ ಮೆಲ್ಲಮೆಲ್ಲಗೆ ಮೈತೆರೆದುಕೊಳ್ಳುತ್ತಿದ್ದಂತೇ ಉತ್ತರ ಪಾಕಿಸ್ತಾನದ ಅಬ್ಬೊಟಾಬಾದ್ ಪಟ್ಟಣದಲ್ಲಿ ವಿಶ್ವದ "most wanted terrorist" ಒಸಾಮಾ ಬಿನ್ ಲಾಡೆನ್ ಅಂತ್ಯವಾದದ್ದು ಈಗ ಹಳೆಯ ಕಥೆ.  ಕಥೆಯ ಹಿಂದಿದ್ದ ತಮ್ಮ ದಶಕದ ವ್ಯಥೆಯೂ ಅಂದು ಅಂತ್ಯವಾಯಿತು ಎಂಬ ಅಮೆರಿಕನ್ನರ ಸಂಭ್ರಮಕ್ಕೆ ಸಕಾರಣಗಳಿದ್ದವು.
ದಶಕದ ಹಿಂದೆ ಸೆಪ್ಟೆಂಬರ್ ೧೧ರ ಮಂಗಳವಾರದ ನಿರ್ಣಾಯಕ ಬೆಳಗಿನಲ್ಲಿ ಕೇವಲ ಪ್ರಯಾಣಿಕರ ವಿಮಾನಗಳನ್ನೇ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಯಾವುದೇ ಶತ್ರುಗಳಾದ ಜಪಾನ್, ಜರ್ಮನಿ, ಸೋವಿಯೆತ್ ಯೂನಿಯನ್ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಾಗೆ ಎಸಗಿ ಅದರ ಅಧ್ಯಕ್ಷ ಹಲವಾರು ಗಂಟೆಗಳ ಕಾಲ ಅಡಗಿಕೊಳ್ಳುವಂತೆ ಮಾಡಿದ ಅಲ್ ಖಯೀದಾ ಅಮೆರಿಕನ್ನರಲ್ಲಿ ಬಿತ್ತಿದ್ದು ಅತೀವ ಭೀತಿ.  ಭೀತಿ ಆಕ್ರೋಶವಾಗಿ ಬದಲಾಗಿ ಸೇಡಿಗಾಗಿ ಹಾತೊರೆದ ಅಮೆರಿಕಾ ಒಂಬತ್ತೂವರೆ ವರ್ಷಗಳ ಸತತ ಕಾರ್ಯಾಚರಣೆಯ ನಂತರ ತನ್ನ ಮೇಲಾದ ಧಾಳಿಯ ರೂವಾರಿಯನ್ನು, ರಿಪಬ್ಲಿಕನ್ ನಾಯಕರೊಬ್ಬರ ಮಾತಿನಲ್ಲಿ ಹೇಳುವುದಾದರೆ, "...ಆತನ ಸೃಷ್ಟಿಕರ್ತನ ಬಳಿಗೆ ಕಳುಹಿಸಿತು."
ಅಮೆರಿಕಾ ಸೇಡಿಗಾಗಿ ಹಾತೊರೆದದ್ದು ಅರ್ಥಹೀನ ಎಂದು ವಾದಿಸಿ ಅಲ್ ಖಯೀದಾ ವಿಶ್ವ ಹಿಂದೆಂದೂ ಕಂಡರಿಯದ ಮಟ್ಟದ ವಿಧ್ವಂಸಕ ಸಂಘಟನೆಯಾಗಿ ಬೆಳೆಯುವುದಕ್ಕೆ ಅಮೆರಿಕಾದ ಸಂಕುಚಿತ ನೀತಿಯನ್ನೇ ದೂಷಿಸಬೇಕಾಗುತ್ತದೆ.  ಕಾಬೂಲ್ನಲ್ಲಿನ ತನ್ನ ಕೈಗೊಂಬೆ ಬಬ್ರಾಕ್ ಕರ್ಮಾಲ್ ಸರಕಾರವನ್ನು ಕಾಪಾಡಲು ೧೯೭೯ರ ಡಿಸೆಂಬರ್ನಲ್ಲಿ ಅಫಘಾನಿಸ್ತಾನವನ್ನು ಪ್ರವೇಶಿಸಿದ ಸೋವಿಯೆತ್ ಸೇನೆಯನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಲು ಅಮೆರಿಕಾ ಬಳಸಿಕೊಂಡದ್ದು ಇಸ್ಲಾಮನ್ನು.  ಧರ್ಮವೇ ಇಲ್ಲದ ಕಮ್ಯೂನಿಸ್ಟರನ್ನು ಅಫಘಾನಿಸ್ತಾನದಲ್ಲಿ ಇರಗೊಟ್ಟರೆ ಅವರು ದೇಶದಲ್ಲಿ ಇಸ್ಲಾಮನ್ನೇ ನಾಶ ಮಾಡಿಬಿಡುತ್ತಾರೆ, ಇಸ್ಲಾಂ ಉಳಿಯಬೇಕಾದರೆ ರಶಿಯನ್ನರು ಅಫಘಾನಿಸ್ತಾನದಿಂದ ಕಾಲ್ತೆಗೆಯುವಂತೆ ಮಾಡಲೇಬೇಕು ಎಂದು ಅಮೆರಿಕಾ ವಾದಿಸಿದಾಗ ಅದನ್ನು ಒಪ್ಪಿ ಇಸ್ಲಾಮನ್ನು ಉಳಿಸುತ್ತಿದ್ದೇವೆ ಎಂಬ ನಂಬಿಕೆಯಲ್ಲಿ ದೂರದೂರದ ದೇಶಗಳಿಂದ ಅಫಘಾನಿಸ್ತಾನಕ್ಕೆ ಬಂದವರಲ್ಲಿ ಒಸಾಮಾ ಬಿನ್ ಲಾಡೆನ್ ಸಹಾ ಒಬ್ಬ.  ಒಂಬತ್ತು ವರ್ಷಗಳ ಯುದ್ಧದ ನಂತರ ೧೯೮೮ರಲ್ಲಿ ಸೋವಿಯೆತ್ ಸೇನೆ ಕೊನೆಗೂ ಅಫಘಾನಿಸ್ತಾನದಿಂದ ಕಾಲ್ತೆಗೆದಾಗ ಯುದ್ಧದಿಂದ ಜರ್ಝರಿತವಾಗಿದ್ದ ನತದೃಷ್ಟ ದೇಶವನ್ನು ಹೇಗಿತ್ತೋ ಹಾಗೇ ಬಿಟ್ಟು ಅಮೆರಿಕನ್ನರು ಓಡಿಹೋದರು.  ಅಮೆರಿಕನ್ನರಿಗೆ ಇಸ್ಲಾಮಿನ ಮೇಲೆ ಯಾವ ಪ್ರೀತಿಯೂ ಇಲ್ಲ, ಅವರು ಅಫಘಾನಿಸ್ತಾನದಲ್ಲಿ ಕಾರ್ಯನಿರತರಾಗಿದ್ದದ್ದು ಇಸ್ಲಾಮನ್ನು ಉಳಿಸಲೆಂದಲ್ಲ, ಬದಲಾಗಿ ರಶಿಯನ್ನರು ಹಿಂದೂ ಮಹಾಸಾಗರದತ್ತ ಮುನ್ನುಗ್ಗದಂತೆ ತಡೆದು ತನ್ಮೂಲಕ ವಲಯದಲ್ಲಿ ತಮ್ಮ ಸೈನಿಕ ಪ್ರಭಾವಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳುವ ಸ್ವಾರ್ಥಪರ ಹುನ್ನಾರದಿಂದ ಎಂಬುದು ಆಗ ಲಾಡೆನ್ಗೆ ಅರಿವಾಯಿತು.  ವಾಸ್ತವವಾಗಿ ಇಸ್ಲಾಮಿನ ಹೆಸರು ಹೇಳಿಕೊಂಡು ಅಮೆರಿಕಾ ತನ್ನ ಬೇಳೆ ಬೇಯಿಸಿಕೊಂಡಿತ್ತು, ಅದಕ್ಕೆ ಸಹಕರಿಸಿ ತಾನು ಮೂರ್ಖನಾದೆ ಎಂಬ ಜ್ಞಾನೋದಯವಾದದ್ದೇ ಆತ ಅಮೆರಿಕಾದ ವಿರುದ್ಧ ತಿರುಗಿಬಿದ್ದು ಅಲ್ ಖಯೀದಾ ಸಂಘಟನೆಯನ್ನು ಹುಟ್ಟುಹಾಕಿದ.  ಅವನ ಅಮೆರಿಕಾದ್ವೇಷ ಆರಂಭವಾದದ್ದು ಹೀಗೆ.  ೧೯೮೮ರ ನಂತರ ಅಫಘಾನಿಸ್ತಾನದ ಪುನರ್ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಆರ್ಥಿಕ ಸಹಕಾರವನ್ನು ನೀಡಿ ದೇಶ ಚೇತರಿಸಿಕೊಳ್ಳುವಂತೆ ಅಮೆರಿಕಾ ನೋಡಿಕೊಂಡಿದ್ದರೆ ಅಲ್ ಖಯೀದಾವಾಗಲೀ ತಾಲಿಬಾನ್ ಆಗಲಿ ತಲೆಯೆತ್ತಲು ಸಾಧ್ಯವಿರಲಿಲ್ಲ.  ಇದನ್ನು ಅರಿಯಲಾರದಷ್ಟು ಸಂಕುಚಿತ ಮನೋಭಾವದವರಾಗಿದ್ದರೇ ವೈಟ್ ಹೌಸ್ ಪ್ರಭೃತಿಗಳು ಎಂಬು ಅಚ್ಚರಿಯಾಗುತ್ತದೆ.  ಒಟ್ಟಿನಲ್ಲಿ, ಒಂಬತ್ತು ವರ್ಷಗಳ ಅಂತರ್ಯುದ್ಧ ಬಳುವಳಿಯಾಗಿತ್ತ ಹಸಿವು, ಬಡತನ, ರೋಗರುಜಿನ, ಅನಕ್ಷರತೆ, ನಿರುದ್ಯೋಗಗಳಲ್ಲಿ ನರಳಲು ಅಫ್ಘನ್ ಜನತೆಯನ್ನು ಬಿಟ್ಟು, ದೇಶ ಮೂಲಭೂತವಾದಕ್ಕೆ ಫಲವತ್ತಾದ ನೆಲವಾಗುವುದನ್ನು ಮನಗಾಣದೇ ಮುಖ ತಿರುಗಿಸಿಕೊಂಡು ಓಡಿಹೋದ ಅಮೆರಿಕಾ  "ಜಗತ್ತಿನ ದೊಡ್ಡಣ್ಣ" ಎಂಬ ಉಪಾಧಿಗೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.
ನಂತರವೂ ಸಹಾ ವಲಯದಲ್ಲಿನ ಬೆಳವಣಿಗೆಗಳ ಬಗ್ಗೆ, ಅವುಗಳಿಂದ ತನಗೂ, ವಿಶ್ವಕ್ಕೂ ತಗುಲಬಹುದಾದ ದುರಂತಗಳ ಬಗ್ಗೆ ಅಮೆರಿಕಾ ದಿವ್ಯ ನಿರ್ಲಕ್ಷ ತೋರಿತು.  ಕಮ್ಯೂನಿಸ್ಟೋತ್ತರ ಅಫಘಾನಿಸ್ತಾನದಲ್ಲಿ ಎರಡೇ ವರ್ಷಗಳಲ್ಲಿ ಪತನಗೊಂಡ ಶಿಬ್ಗತುಲ್ಲಾ ಮುಜಾದೀದಿ ಸರಕಾರ; ರಾಜಕೀಯ ಸ್ಥಿರತೆ ಸಾಧಿಸಲಾಗದ ಬಲಹೀನ ಬುರ್ಹಾನುದ್ದೀನ್ ರಬ್ಬಾನಿ ಸರಕಾರ; ಪಖ್ತೂನ್ ನಾಯಕ ಗುಲ್ಬುದ್ದೀನ್ ಹೆಕ್ಮತ್ಯಾರ್, ಉಝ್ಬೇಗ್ ನಾಯಕ ಜನರಲ್ ದೋಸ್ತುಂ ಮತ್ತು ತಾಜಿಕ್ ನಾಯಕ ಅಹ್ಮದ್ ಷಾ ಮಾಸೂದ್ ನಡುವೆ ಉಲ್ಬಣಗೊಂಡ ವೈಷಮ್ಯ; ಅದರಿಂದಾದ ಅರಾಜಕತೆ ಪಾಕಿಸ್ತಾನದ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಟ್ಟದ್ದು; ಅದು ಪ್ರತಿಗಾಮಿ ತಾಲಿಬಾನನ್ನು ಹುಟ್ಟುಹಾಕಿ ತನ್ನ ಕೈಗೊಂಬೆಯಾಗಿರಿಸಿಕೊಂಡದ್ದು; ಬೆಳವಣಿಗೆಗಳಿಂದ ವಲಯದ ರಾಜಕೀಯ ಕುದಿಯತೊಡಗಿದ್ದು- ಇದ್ಯಾವುದನ್ನೂ ಅಮೆರಿಕಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.  ಕೊನೇಪಕ್ಷ, ೧೯೯೩ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಬೇಸ್ಮೆಂಟ್ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಅಲ್ ಖಯೀದಾ ಕಾರಣವೆಂದು ಅರಿತಾಗಲಾದರೂ ಸಂಘಟನೆಗೆ ಸುಡಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಿಗುತ್ತಿರುವ ಬೆಂಬಲವನ್ನು ಗಮನಿಸಿ ಅದನ್ನು ಹತ್ತಿಕ್ಕಲು ಪರಿಣಾಮಕಾರೀ ಕ್ರಮಗಳನ್ನು ಬಿಲ್ ಕ್ಲಿಂಟನ್ ಸರಕಾರ ಕೈಗೊಳ್ಳಬೇಕಾಗಿತ್ತು.  ಅಧ್ಯಕ್ಷ ಕ್ಲಿಂಟನ್ ತನ್ನ ಮೊದಲ ಆವಧಿಯಲ್ಲಿ (೧೯೯೩-೯೬) ವಿದೇಶ ನೀತಿಯನ್ನು ನಿರ್ಲಕ್ಷಿಸಿ ಕೇವಲ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದರಲ್ಲೇ ಮಗ್ನರಾಗಿಬಿಟ್ಟರು.  ತನ್ನ ಎರಡನೇ ಆವಧಿಯಲ್ಲಿ ಆತ ಎಚ್ಚತ್ತುಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು.  ಅಲ್ ಖಯೀದಾ ಅಪಾಯಕಾರಿ ಮಟ್ಟಕ್ಕೆ ಬೆಳೆದಿತ್ತು ಮತ್ತು ಅದಕ್ಕೆ ತಾಲಿಬಾನಿ ಅಫಘಾನಿಸ್ತಾನದಲ್ಲಿ ಭದ್ರ ನೆಲೆ ಸಿಕ್ಕಿತ್ತು.  ೧೯೯೮ರ ಆಗಸ್ಟ್ನಲ್ಲಿ ಪೂರ್ವ ಆಫ್ರಿಕಾದ ದಾರ್ ಎಸ್ ಸಲಾಂ ಮತ್ತು ನೈರೋಬಿಗಳಲ್ಲಿನ ಅಮೆರಿಕನ್ ದೂತಾವಾಸಗಳ ಮೇಲೆ ಧಾಳಿಯೆಸಗಿದ ಅಲ್ Sಯೀದಾ ಎರಡು ವರ್ಷಗಳ ನಂತರ ಅಕ್ಟೋಬರ್ ೨೦೦೦ದಲ್ಲಿ ಯೆಮೆನ್ ಏಡನ್ ಬಂದರಿನಲ್ಲಿ ಲಂಗರು ಹಾಕಿದ್ದ ಅಮೆರಿಕನ್ ನೌಕೆ "ಯುಎಸ್ಎಸ್ ಕೋಲ್" ಮೇಲೆ ಧಾಳಿ ನಡೆಸಿ ಒಂದು ತಿಂಗಳಿಗೂ ಕಡಿಮೆ ದೂರದಲ್ಲಿದ್ದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯನ್ನು ಕುದಿಯುವ ಮಟ್ಟಕ್ಕೆ ಬಿಸಿಯೇರಿಸಿತು.  ಒಂದು ಅರ್ಥದಲ್ಲಿ ಧಾಳಿ ಚುನಾವಣೆಗಳಲ್ಲಿ ಜಯದ ನಿರೀಕ್ಷೆ ಇಲ್ಲದ, ಅಧಿಕಾರ ತ್ಯಜಿಸಲು ಸಿದ್ಧರಾಗುತ್ತಿದ್ದ ಬಿಲ್ ಕ್ಲಿಂಟನ್ಗೆ ಅಲ್ ಖಯೀದಾ ನೀಡಿದ ಫೇರ್ವೆಲ್ ಗಿಫ್ಘ್.
ಅಲ್ ಖಯೀದಾ ಬೆಳೆದ ಬಗೆ ಒಂದು ತಲೆಮಾರಿನ ಬೇಜವಾಬ್ದಾರಿ ವರ್ತನೆಗೆ ಮುಂದಿನ ತಲೆಮಾರು ತೆರಬೇಕಾದ ಭೀಕರ ಬೆಲೆಗೆ ಒಂದು ಉದಾಹರಣೆ.
/೧೧ರ ಧಾಳಿಯ ನಂತರ ಎಚ್ಚತ್ತುಕೊಂಡ ಅಮೆರಿಕಾ, ಅಫಘಾನಿಸ್ತಾನ ಮತ್ತು ಇರಾಕಿನಲ್ಲಿ ಕೈಗೊಂಡ ಮಿಲಿಟರಿ ಕಾರ್ಯಾಚರ್ಣೆಗಳು ತನ್ನ ಹಿಂದಿನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಾಷಿಂಗ್ಟನ್ ಗಡಿಬಿಡಿಯಲ್ಲಿ ಕೈಗೊಂಡ ಕ್ರಮಗಳಂತೆ ಕಂಡವು.  ಗಡಿಬಿಡಿಯಲ್ಲಿ ಮಾಡುವ ಯಾವುದೇ ಕೆಲಸವೂ ಪರಿಣಾಮಕಾರಿಯಾಗಿರುವುದಿಲ್ಲ ಎನ್ನುವುದಕ್ಕೆ ಉದಾಹರಣೆಯಂತೆ ಕಾರ್ಯಚರಣೆಗಳು ವಿಶ್ವದ ಕಣ್ಣಿಗೆ ಕಾಣತೊಡಗಿ ಅವುಗಳಿಗೆ ಎಲ್ಲೆಡೆ ವಿರೋಧ ಹೊಗೆಯಾಡತೊಡಗುತ್ತಿದ್ದಂತೇ ಅಮೆರಿಕನ್ನರು ಲಾಡೆನ್ನನ್ನು ಪತ್ತೆಹಚ್ಚಿ ಮುಗಿಸಿಬಿಟ್ಟು ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಪರಿಣಾಮದ ದೃಷ್ಟಿಯಿಂದ ನೋಡುವುದಾದರೆ ಹತ್ಯೆ ಅಮೆರಿಕಾ ಹಾಗೂ ಅಲ್ ಖಯೀದಾ ಎರಡಕ್ಕೂ ಸಾಂಕೇತಿಕವಷ್ಟೇ.  ತನ್ನ ಪರಮ ವೈರಿಯನ್ನು ಹತ್ಯೆಗೈಯುವುದರಿಂದ ಅಮೆರಿಕಾಗೆ ದೊಡ್ಡ ಲಾಭವೇನೂ ಆಗಿಲ್ಲ.  ತಾನು ಅಮೆರಿಕಾಗೆ ಎಸಗಬಹುದಾದ ಹಾನಿಯನ್ನು ಲಾಡೆನ್ ಸೆಪ್ಟೆಂಬರ್ ೧೧, ೨೦೦೧ರಂದೇ ಮಾಡಿ ಮುಗಿಸಿದ್ದಾನೆ.  ಬೃಹತ್ ಸೈನಿಕ ಶಕ್ತಿಯನ್ನು ಹೊಂದಿದ್ದ ಅಮೆರಿಕಾದ ಹಿಂದಿನ ಯಾವ ಶತೃಗಳೂ ಎಸಗಲಾಗದ ಹಾನಿಯನ್ನು ಅವನು ಮಾಡಿದ್ದಾನೆ.  ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಅಮೆರಿಕಾ ತನ್ನ ರಕ್ಷಣೆಗೆಗಾಗಿ ತೆಗೆದುಕೊಂಡ ಅಭೂತಪೂರ್ವ ಕ್ರಮಗಳು ಮತ್ತು ಅಲ್ ಖಯೀದಾ ಮತ್ತದರ ಸಹಯೋಗಿಗಳ ಮೇಲೆ ಹೇರಿದ ಒತ್ತಡಗಳಿಂದಾಗಿ ದೇಶದ ಮೇಲೆ ಮತ್ತೊಂದು ದೊಡ್ಡ ಧಾಳಿಯನ್ನೆಸಗುವುದು ಲಾಡೆನ್ಗೆ ಸಾಧ್ಯವೇ ಇರಲಿಲ್ಲ.  ಜತೆಗೇ ಮೂತ್ರಪಿಂಡದ ತೊಂದರೆಯಿಂದಾಗಿ ತೀವ್ರ ಅಸ್ವಸ್ತನಾಗಿದ್ದ ಅವನು ಇಂದೋ ನಾಳೆಯೋ ತಾನಾಗಿಯೇ ಇಹಲೋಕ ತ್ಯಜಿಸುವ ಸಿದ್ಧತೆಯಲ್ಲಿದ್ದ.  ಹೀಗಾಗಿ ಲಡಕಾಸಿ ಲಾಡೆನ್ನನ್ನು ಕೊಂದು ಅಮೆರಿಕಾ ಗಳಿಸಿದ್ದು ಪರಮಶತೃವನ್ನು ಭೌತಿಕವಾಗಿ ಇಲ್ಲವಾಗಿಸುವಲ್ಲಿ ಕೊನೆಗೂ ಯಶಸ್ವಿಯಾದ ಸಮಾಧಾನ ಅಷ್ಟೇ.
ಅಲ್ ಖಯೀದಾದ ಬಗ್ಗೆ ಹೇಳುವುದಾದರೆ, ತೀವ್ರ ಒತ್ತಡಕ್ಕೆ ಸಿಕ್ಕಿದ್ದ ಭಯೋತ್ಪಾದಕ ಗುಂಪಿನ ಮೇಲೆ ಲಾಡೆನ್ ಹತೋಟಿ ಎಷ್ಟು ಉಳಿದಿತ್ತು ಎಂದು ನಿಖರವಾಗಿ ಹೇಳಲಾಗದಿದ್ದರೂ ಅದು ಸಾಕಷ್ಟು ಕುಂದಿತ್ತು ಎಂಬುದು ನಿಜ.  ಅವನಿಲ್ಲದೆಯೂ ಸಂಘಟನೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸ್ಥಿತಿ ತಲುಪಿತ್ತು.  ಹೀಗಾಗಿ ಲಾಡೆನ್ ಹತ್ಯೆ ಅಲ್ ಖಯೀದಾಗೆತುಂಬಲಾಗದ ನಷ್ಟವೇನಲ್ಲ.  ಅಲ್ ಖಯೀದಾವನ್ನು ಭಾದಿಸುವುದು ವೈರಿಯ ಧಾಳಿಯಲ್ಲಿ ಸ್ಥಾಪಕ ನಾಯಕನನ್ನ್ನು ಕಳೆದುಕೊಂಡದ್ದರಿಂದಾದ ಸಾಂಕೇತಿಕ ಸೋಲಿನ ನೋವಷ್ಟೇ.
ಜೀವಂತ ಲಾಡೆನ್ಗಿಂತಲೂ ಮೃತ ಲಾಡೆನ್ ಹೆಚ್ಚು ಅಪಾಯಕಾರಿಯಾಗಬಹುದಾದ ಅಪಾಯವನ್ನು ಮನಗಂಡ ಅಮೆರಿಕಾ ಅವನ ಮೃತದೇಹದ ಅಂತ್ಯಸಂಸ್ಕಾರವನ್ನು ಸಾಗರದಲ್ಲಿ ಮಾಡಿ ಮುಗಿಸಿದೆ.  ಅವನ ಅಂತ್ಯಸಂಸ್ಕಾರಕ್ಕೆ ಯಾವ ದೇಶವೂ ನೆಲ ಕೊಡುವ ಸಾಧ್ಯತೆ ಇಲ್ಲದ್ದರಿಂದ ಹಾಗೆ ಮಾಡಬೇಕಾಯಿತೆಂದು ವಾಷಿಂಗ್ಟನ್ ವಕ್ತಾರರು ಹೇಳಿದರೂ ನೆಲದಲ್ಲಿ ಅವವ ದೇಹವನ್ನು ಹೂತರೆ ಮುಂದೊಂದು ದಿನ ಅಲ್ಲೊಂದು ಸ್ಮಾರಕ ತಲೆಯೆತ್ತಿ ಅದೊಂದು ಜನ ಸೇರುವ ಧಾರ್ಮಿಕ ಯಾತ್ರಾಸ್ಥಳವಾಗುವ, ಅಮೆರಿಕವಿರೋಧಿ ಚಟುವಟಿಕೆಗಳ ಕಾರಸ್ಥಾನವಾಗುವ ಅಪಾಯವನ್ನು ಒಬಾಮಾ ಸರಕಾರ ಮನಗಂಡಿತ್ತು.  ಯಾವ ಸಮುದ್ರದಲ್ಲಿ ಅವನ ದೇಹದ ಸಂಸ್ಕಾರ ನಡೆಯಿತೆನ್ನುವುದನ್ನೂ ಅಮೆರಿಕಾ ಗುಟ್ಟಾಗಿಟ್ಟಿದೆ.  ಸಮುದ್ರಕ್ಕೇ "ಒಸಾಮಾ ಸಮುದ್ರ" ಎಂಬ ಹೊಸ ಹೆಸರು ಬಂದುಬಿಡಬಹುದಾದ ಅಪಾಯವನ್ನು ಒಬಾಮಾ ಸರಕಾರಊಹಿಸಿ ಕ್ರಮ ಕೈಗೊಂಡಿರಬಹುದೆಂದುಊಹಿಸಲುನಮಗೆ ಸಾಕಷ್ಟು ಅವಕಾಶವಿದೆ.  ಮೃತ ಲಾಡೆನ್ ಅದೆಷ್ಟು ಅಪಾಯಕಾರಿಯಾಗಬಲ್ಲ ಎಂಬುದರ ಒಂದು ಪುಟ್ಟ ಸೂಚನೆ ಇದು.
ಲಾಡೆನ್ ಪಾಕಿಸ್ತಾನದಲ್ಲೇ, ಅದೂ ರಾಜಧಾನಿಗೆ ತೀರಾ ಹತ್ತಿರದಲ್ಲಿ ಪಾಕಿಸ್ತಾನ್ ಮಿಲಿಟರಿ ಅಕ್ಯಾಡೆಮಿಗೆ ಕೆಲವೇ ಗಜಗಳಷ್ಟು ಸನಿಹದಲ್ಲಿ ಅಡಗುದಾಣ ಹೊಂದಿದ್ದ ವಿಷಯದ ಬಗ್ಗೆ ನಾವೇನೂ ಆಶ್ಚರ್ಯ ಪಡಬೇಕಾಗಿಲ್ಲ.  ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ತನ್ನ ಇಬ್ಬಂದಿ ನೀತಿಯನ್ನು ಮುಚ್ಚಿಕೊಳ್ಳಲು ದೇಶ ಅದೆಷ್ಟು ಹೆಣಗಾಡಿದರೂ ಅದು ಆಡುತ್ತಿರುವುದು ನಾಟಕ ಎಂದು ಇಡೀ ವಿಶ್ವಕ್ಕೇ ತಿಳಿದಿತ್ತು.  ಹಿನ್ನೆಲೆಯಲ್ಲಿ ಈಗ ನಾವು ಗಮನಾರ್ಹವೆಂದು ಪರಿಗಣಿಸಬಹುದಾದ ಒಂದೇ ಒಂದು ಸಂಗತಿಯೆಂದರೆ- ಅಮೆರಿಕಾವೂ ಪಾಕಿಸ್ತಾನವನ್ನು ನಂಬುತ್ತಿಲ್ಲ!  ಒಂದುಕಾಲದಲ್ಲಿ ಸಿಐಏ ಮತ್ತು ಐಎಸ್ ಸಯಾಮಿ ಅವಳಿಗಳಂತೆ ಬಿಡಿಸಲಾಗದಷ್ಟು ಅಂಟಿಕೊಂಡಿದ್ದವು.  ಆದರೀಗ ಪರಿಸ್ಥಿತಿ ಬದಲಾಗಿದೆ.  ಲಾಡೆನ್ ಹತ್ಯೆಯ ಪೂರ್ವಯೋಚನೆ ಮತ್ತು ಕಾರ್ಯಾಚರಣೆಯ ಬಗ್ಗೆ ಅಮೆರಿಕಾ ಪಾಕಿಸ್ತಾನಕ್ಕೆ ಯಾವುದೇ ಮುನ್ಸೂಚನೆ ನೀಡಿಲ್ಲ ಎಂಬ ವಾಷಿಂಗ್ಟನ್ ಹೇಳಿಕೆಗಳಲ್ಲಿ ಸತ್ಯವಿರುವುದೇ ಆದರೆ ಈಗ ಪಾಕಿಸ್ತಾನದ ಮೇಲೆ ಅಮೆರಿಕಾಗೆ ವಿಶ್ವಾಸ ಹಿಂದೆಂದಿಗಿಂತಲೂ ಕೆಳಮಟ್ಟದಲ್ಲಿದೆ ಎಂದು ತಿಳಿಯಬಹುದು.  ಇದನ್ನೇ ಇನ್ನೊಂದು ಕೋನದಿಂದ ನೋಡುವುದಾದರೆ, ಒಂದುವೇಳೆ ಪಾಕಿಸ್ತಾನಕ್ಕೆ ಸೂಚನೆ ನೀಡಿಯೇ ಅಮೆರಿಕಾ ಕಾರ್ಯಾಚರಣೆ ಕೈಗೊಂಡಿದ್ದರೆ ಅದು ಪಾಕಿಸ್ತಾನಿ ಸರಕಾರವನ್ನು ಅತೀವ ಗಂಡಾಂತರಕ್ಕೆ ತಳ್ಳಿಬಿಡುತ್ತಿತ್ತು.  ಲಾಡೆನ್ ಹತ್ಯೆಯಲ್ಲಿ ತಮ್ಮ ದೇಶವೂ ಸಹಕರಿಸಿದೆ ಎಂದು ಅಲ್ಲಿನ ಉಗ್ರಗಾಮಿ ಸಂಘಟನೆಗಳಿಗೆ ತಿಳಿದುಹೋದರೆರಾಜಾಶ್ರಯದಿಂದಾಗಿ ಅತೀವವಾಗಿ ಕೊಬ್ಬಿರುವ ಅವು ಧಾಂದಲೆಯೆಬ್ಬಿಸಿ ಇಡೀ ದೇಶವನ್ನು ಅರಾಜಕತೆಗೆ ನೂಕಿಬಿಡುವ ಅಪಾಯವಿತ್ತು.  ಸಂದರ್ಭದಲ್ಲಿ "ದಕ್ಷಿಣ ಏಶಿಯಾದ ರೋಗಿಷ್ಟ" ಪಾಕಿಸ್ತಾನದಲ್ಲಿ ಅರಾಜಕತೆ ಭುಗಿಲೆದ್ದರೆ ಅದು ಹಿಂಸಾತ್ಮಕವಾಗಿ ವಲಯದಲ್ಲಿ ಶಾಂತಿ ಮತ್ತು ಸುರಕ್ಷೆಗೆ ಭಾರಿ ಧಕ್ಕೆ ತರುತ್ತಿತ್ತು.  ಒಟ್ಟಿನಲ್ಲಿ ಲಾಡೆನ್ ಹತ್ಯೆಯ ಹಿಂದೆ ಹಲವು ವಾರಗಳಿಂದಲೂ ಅತ್ಯಂತ ಜಾಗರೂಕತೆಯಿಂದ ರೂಪಿಸಿದ ತಂತ್ರವಿದೆ.
ಪರಮವಿರೋಧಿಯನ್ನು ಕೊಂದದ್ದರ ಬಗ್ಗೆ ಸಂಭ್ರಮದಲ್ಲಿರುವ ಅಮೆರಿಕಾ ಅಜಾಗರೂಕತೆ ವಹಿಸಿದರೆ ಮುಂದಿನ ದಿನಗಳು ಮತ್ತಷ್ಟು ಅಪಾಯಕಾರಿಯಾಗಬಹುದೆಂದು ನನಗನಿಸುತ್ತದೆ.  ಈಗ ತಾತ್ವಿಕವಾಗಿ ಲಾಡೆನ್ಗಿಂತಲೂ ಕಠಿಣವಾಗಿರುವ ಅಯ್ಮೆನ್ ಅಲ್ ಜವಾಹಿರಿ ಅಲ್ ಖಯೀದಾ ನಾಯಕತ್ವ ವಹಿಸಲಿರುವುದರಿಂದ ಅಮೆರಿಕಾ ಮತ್ತು ಒಟ್ಟಾರೆ ಜಗತ್ತಿನ ಬಗ್ಗೆ ಸಂಘಟನೆಯ ದೃಷ್ಟಿಕೋನ ಉದಾರವಾಗುವುದಿಲ್ಲ.  ಇದರರ್ಥ ಅಮೆರಿಕಾವಿರೋಧಿ ಭಯೊತ್ಪಾದನೆ ಸಧ್ಯಕ್ಕೆ ತಗ್ಗಿದರೂ ಅನತಿಕಾಲದಲ್ಲೇ ಅದು ಉಗ್ರವಾಗಿ ಮರುಕಳಿಸುವ ಅಪಾಯವಿದೆ.
ಅಪಾಯವನ್ನು ಒಬಾಮಾ ಸರಕಾರ ಮನಗಂಡಿರುವ ಸಾಧ್ಯತೆ ಇದೆ.  ಹೀಗಾಗಿಯೇ ದಿನಗಳಲ್ಲಿ ಪಶ್ಚಿಮ ಮತ್ತು ಮಧ್ಯ ಏಶಿಯಾ ಬಗ್ಗೆ ಅಮೆರಿಕಾದ ವರ್ತನೆ ಹಿಂದಿನಂತೆ ಬೇಜವಾಬ್ದಾರಿ ಮತ್ತು ಸಂಪೂರ್ಣ ಸ್ವಾರ್ಥಪರವಾಗಿ ಕಾಣುತ್ತಿಲ್ಲ.  ೧೯೮೮ರಲ್ಲಿ ವರ್ತಿಸಿದಂತೆ ಅಮೆರಿಕಾ ದಿನಗಳಲ್ಲಿ ವರ್ತಿಸುತ್ತಿಲ್ಲ.  ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿರುವ ಅದು ಕಳೆದ ಸೆಪ್ಟೆಂಬರಿನಲ್ಲಿ ಇರಾಕಿನಲ್ಲಿ ತನ್ನ ನೇರ ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಿದ್ದರೂ ದೇಶಕ್ಕೆ ಅಗತ್ಯವಾದ ಆರ್ಥಿಕ ಹಾಗೂ ರಾಜತಾಂತ್ರಿಕ ಸಹಕಾರವನ್ನು ನೀಡುತ್ತಲೇ ಇದೆ.  ಜತೆಗೇಇರಲಿ ಎಂದುಕೊಂಡು೫೦,೦೦೦ ಸೈನಿಕರನ್ನು ದೇಶದಲ್ಲಿಯೇ ಉಳಿಸಿದೆ.  ಇದೇ ಕೆಲಸವನ್ನು ಅದು ಅಫಘಾನಿಸ್ತಾನದಲ್ಲೂ ಮಾಡಬಹುದು.  ಹಾಗೆ ಮಾಡದೇಓಡಿಹೋದರೆ೧೯೮೮ರ ನಂತರ ಆದಂತೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೊಮ್ಮೆ ಸಶಕ್ತವಾಗುತ್ತದೆ ಮತ್ತು ಅದರ ಜತೆ ಅಲ್ ಖಯೀದಾದ ಅದೃಷ್ಟವೂ ಖುಲಾಯಿಸುತ್ತದೆ.
ಲಾಡೆನ್ ಹತ್ಯೆ, ತದನಂತರದ ಬೆಳವಣಿಗೆಗಳ ಬಗ್ಗೆ ಭಾರತ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ.  ಇತ್ತೀಚೆಗೆ ವಾಷಿಂಗ್ಟನ್ನಿಂದ ಹೊರಬಂದ ಒಂದು ಹೇಳಿಕೆಯ ಪ್ರಕಾರ ಭಯೋತ್ಪಾದನೆಯ ವಿಷಯದಲ್ಲಿ ಈಗ ಅಲ್ ಖಯೀದಾಗಿಂತಲೂ ಲಷ್ಕರ್ ತೋಯ್ಬಾ ಹೆಚ್ಚು ಅಪಾಯಕಾರಿ ಎಂದು ಒಬಾಮಾ ಸರಕಾರ ನಂಬುತ್ತದೆ.  ಭಾರತ ತೀವ್ರವಾಗಿ ಪರಿಗಣಿಸಬೇಕಾದ ವಿಷಯ ಇದು.  ಲಷ್ಕರ್ ಶತೃ ಅಮೆರಿಕಾ ಅಲ್ಲ.  ಅದು ಭಾರತ.  ಕಾರಣದಿಂದಾಗಿಯೇ ಪಾಕಿಸ್ತಾನ ಲಷ್ಕರ್ ಅನ್ನು ನಿರ್ಬಂಧಿಸುವ ಕೆಲಸವನ್ನು ಮಾಡುವುದಿಲ್ಲ.  ಬದಲಾಗಿ ಅದರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ ಮತ್ತು ಅದನ್ನು ಭಾರತದ ವಿರುದ್ಧ ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತದೆ.  ಅಫಘಾನಿಸ್ತಾನದಲ್ಲಿ ಅಮೆರಿಕಾದ ನೇರ ಸೈನಿಕ ಕಾರ್ಯಾಚರಣೆ ನಿಲುಗಡೆಗೆ ಬರುತ್ತಿದ್ದಂತೇ ಪಾಕಿಸ್ತಾನದ ಮೇಲಿನ ಒತ್ತಡ ಗಮನಾರ್ಹವಾಗಿ ಇಳಿದುಹೋಗುತ್ತದೆ.  ಪರಿಣಾಮವಾಗಿ ಪಾಕಿಸ್ತಾನ ತನ್ನೆಲ್ಲಾ ಗಮನವನ್ನೂ ಭಾರತದತ್ತ ತಿರುಗಿಸಲು ಅವಕಾಶವಾಗುತ್ತದೆ.
ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಒಂದು ಬಗೆಯ ಅಪಾಯಕಾರಿ ಉತ್ಸಾಹ ಭಾರತದಲ್ಲಿ ಕಾಣಬರುತ್ತಿದೆ.  ಅಮೆರಿಕನ್ ಮೇಲ್ಪಂಕ್ತಿಯನ್ನು ಅನುಸರಿಸಿ ನಾವೂ ಸಹಾ ಲಷ್ಕರ್ ಮತ್ತಿತರ ಭಾರತವಿರೋಧಿ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.  ಮಾತುಗಳನ್ನು ಆಡುತ್ತಿರುವವರಲ್ಲಿ ಭೂಸೇನಾ ದಂಡನಾಯಕ ಜನರಲ್ ಎಸ್. ಕೆ. ಸಿಂಗ್ರಿಂದ ಹಿಡಿದು ಮಾಜೀ ವಿದೇಶ ಸಚಿವ ಯಶ್ವಂತ್ ಸಿನ್ಹಾವರೆಗೆ ಹಲವು ಪ್ರಮುಖರಿದ್ದಾರೆ.  ಮಾಧ್ಯಮಗಳೂ ಇಂತಹ ಆಲೋಚನೆಗಳಿಗೆ ಕುಮ್ಮಕ್ಕು ನೀಡುತ್ತಿವೆ.  ಇದೊಂದು ತೀರಾ ಬೇಜವಾಬ್ದಾರಿಯ ಆಲೋಚನೆಯೆಂದು ಹೇಳದೇ ವಿಧಿಯಿಲ್ಲ.  ಇಂತಹ ಕಾರ್ಯಾಚರಣೆಗಳ ಪರಿಣಾಮಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು.  ಅಮೆರಿಕಾದಂತೆ ಭಾರತ ಅಲ್ಲ ಮತ್ತು ವಾಸ್ತವವನ್ನು ಪಾಕಿಸ್ತಾನ ಚೆನ್ನಾಗಿ ಅರಿತಿದೆ.  ಭಾರತದಿಂದ ಹೊರಟ ಹುಮ್ಮಸ್ಸಿನ ಹೇಳಿಕೆಗಳಿಗೆ ಪಾಕಿಸ್ತಾನ ಉಗ್ರವಾಗಿ ಪ್ರತಿಕ್ರಿಯಿಸಿದೆ.  ಭಾರತವೇನಾದರೂ ಧಾಳಿ ನಡೆಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ ಎಂದು ಅಲ್ಲಿನ ಸೇನಾ ನಾಯಕ ಜನರಲ್ ಆಷ್ಪಾಕ್ ಪರ್ವೆಜ್ ಕಯಾನಿ ಮತ್ತು ವಿದೇಶಸಚಿವ ಸಲ್ಮಾನ್ ಬಶೀರ್ ಹೇಳಿಕೆ ನೀಡಿದ್ದಾರೆ.  ಇತ್ತೀಚಿನ ಇತಿಹಾಸದಿಂದ ನಾವೇನಾದರೂ ಪಾಠ ಕಲಿತಿದ್ದರೆ ಹೇಳಿಕೆಗಳನ್ನು ನಾವು ನಿಕ್ಷಿಸಕೂಡದು.
ಡಿಸೆಂಬರ್ ೨೦೦೧ರಲ್ಲಿ ಸಂಸತ್ ಭವನದ ಮೇಲಾದ ಧಾಳಿಯ ನಂತರ ಹತ್ತು ತಿಂಗಳವರೆಗೆ ನಡೆದ "ಆಪರೇಷನ್ ಪರಾಕ್ರಮ್" ಎಂಬ ಸೇನಾಜಮಾವಣೆಯ ಸಂದರ್ಭದಲ್ಲಿ ಮೂರು ಬಾರಿ ಭಾರತೀಯ ರಕ್ಷಣಾಪಡೆಗಳು ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಧಾಳಿ ನಡೆಸಲು ಮುಂದಾಗಿದ್ದವು.  ಆದರೆ ಮೂರೂ ಸಲ ಪಾಕಿಸ್ತಾನ ಅಣ್ವಸ್ತ್ರಗಳನ್ನು ಝಳಪಿಸಿದ್ದರಿಂದ ಕೊನೇಗಳಿಗೆಗಳಲ್ಲಿ ಯೋಜನೆಗಳನ್ನು ಕೈಬಿಡಬೇಕಾಯಿತು.  ಇದನ್ನು ಮರೆಯುವುದು ಹೇಗೆ?
ನನಗನ್ನಿಸುವ ಪ್ರಕಾರ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಿದ್ದು ಭಾರತ ಎಸಗಿದ ತಪ್ಪಾಗಿದೆ.  ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಲ್ಲಿ ಹಾಗೂ ಸೇನಾ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಎಷ್ಟೋ ಪಟ್ಟು ಮುಂದಿದೆ.  ಯಾವುದೇ ಸಾಂಪ್ರದಾಯಿಕ ಯುದ್ಧವನ್ನು ಭಾರತ ಲೀಲಾಜಾಲವಾಗಿ ಗೆಲ್ಲಬಹುದು.  ತನ್ನ ಕೊರತೆಯನ್ನು ನೀಗಿಸಿಕೊಳ್ಳಲೆಂದೇ ಪಾಕಿಸ್ತಾನ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳುವ ಯೋಜನೆ ರೂಪಿಸಿತು.  ಮುಂದಾಗಬಹುದಾದ ಅನಾಹುತವನ್ನು ಮೊದಲೇ ಮನಗಂಡು ಭಾರತ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.  ಇರಾಕಿನ ಅಣುಸ್ಥಾವರಗಳನ್ನು ಇಸ್ರೇಲ್ ಧ್ವಂಸಗೊಳಿಸಿದಂತೆ ಪಾಕಿಸ್ತಾನದ ಅಣುಸ್ಥಾವರಗಳನ್ನು ನಾವು ಧ್ವಂಸಗೊಳಿಸಬೇಕಾಗಿತ್ತು.  ನಮ್ಮ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನ ಯುದ್ಧ ಸಾರಿದರೂ ಅದನ್ನು ರಣಾಂಗಣದಲ್ಲಿ ಬಗ್ಗುಬಡಿಯುವ ಸಾಮರ್ಥ್ಯ ನಮ್ಮ ರಕ್ಷಣಾಪಡೆಗಳಿಗಿತ್ತು.  ನಮ್ಮ ಸರಕಾರಗಳು ಯಾಕೋ ಹಿಂತೆಗೆದವು.  ಕೊನೇಪಕ್ಷ, ಕೆಲಸವನ್ನು ತಾನು ಮಾಡುವುದಾಗಿ ಇಸ್ರೇಲ್ ಮುಂದೆ ಬಂದಾಗಲಾದರೂ ನಾವು ಅವಕಾಶವನ್ನು ಉಪಯೋಗಿಸಿಕೊಂಡು ಇಸ್ರೇಲಿಗೆ ಅಗತ್ಯವಿದ್ದ ಸಹಕಾರವನ್ನು ನೀಡಬೇಕಾಗಿತ್ತು.  ಇಷ್ಟಕ್ಕೂ ಇಸ್ರೇಲ್ ಕೇಳಿದ್ದೇನು?  ಯಶಸ್ವಿಯಾಗಿ ಧಾಳಿ ನಡೆಸಿದ ನಂತರ ಅವರ ವಿಮಾನಗಳಿಗೆ ನಮ್ಮ ಜಾಮ್ ನಗರ್ನಲ್ಲಿನ ವಾಯುನೆಲೆಯಲ್ಲಿ ಇಂಧನ ಪೂರೈಕೆ ಮಾಡಬೇಕಾಗಿತ್ತು ಅಷ್ಟೇ.  ಆದರೆ ಇಂದಿರಾಗಾಂಧಿ ಸರಕಾರ ಯಾಕೋ ಇದಕ್ಕೆ ಮುಂದಾಗಲಿಲ್ಲ.  ಪರಿಣಾಮವಾಗಿ ೧೯೮೭ರಲ್ಲಿ ಪಾಕಿಸ್ತಾನ ತನ್ನ ಯೋಜನೆಯಲ್ಲಿ ಯಶಸ್ವಿಯಾಗಿ ಚೀನೀ ನೆಲದಲ್ಲಿ ರಹಸ್ಯವಾಗಿ ಅಣ್ವಸ್ತ್ರಪರೀಕ್ಷೆ ನಡೆಸಿ ಕಳ್ಳತನದಲ್ಲಿ ಅಣ್ವಸ್ತ್ರ ರಾಷ್ಟ್ರವಾಯಿತು.  ಅದಾದ ಎರಡೇ ವರ್ಷಗಳಲ್ಲಿ ಭಯೋತ್ಪಾದನೆಯನ್ನು ಉಗ್ರ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿತು.
೧೯೬೫ರಲ್ಲಿ ಕಾಶ್ಮೀರ ಕಣಿವೆಯೊಡನೆ ಭಾರತಕ್ಕಿದ್ದ ಒಂದೇ ಒಂದು ಮಾರ್ಗವಾದ ಜಮ್ಮು - ಅಖ್ನೂರ್ ರಸ್ತೆಯನ್ನು ನಾಶಪಡಿಸಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಹುನ್ನಾರವನ್ನು ಜನರಲ್ ಅಯೂಬ್ ಖಾನ್ ಹಾಕಿದಾಗ ನಮ್ಮ ಲಾಲ್ ಬಹಾದುರ್ ಶಾಸ್ತ್ರಿ ಸರಕಾರ ಲಾಹೋರ್ ಮೇಲೆ ಧಾಳಿಯೆಸಗುವ ನಿರ್ಧಾರ ತೆಗೆದುಕೊಂಡಿತು.  ಪಾಕಿಸ್ತಾನಕ್ಕೆನೋವಾಗುವ ಸ್ಥಳದಲ್ಲಿ ಪೆಟ್ಟುಕೊಟ್ಟು ಅದು ಕಾಶ್ಮೀರದ ಮೇಲಿನ ಹಿಡಿತವನ್ನು ಕಡಿಮೆ ಮಾಡುವಂತೆ ಮಾಡುವುದು ಲಾಹೋರ್ ಮೇಲಿನ ನಮ್ಮ ಧಾಳಿಯ ಹಿಂದಿನ ರಣತಂತ್ರ.  ಆನಂತರ ನಡೆದದ್ದು ಇತಿಹಾಸ.  ಸೆಪ್ಟೆಂಬರ್ ೬ರಂದು ಬೆಳಿಗ್ಗೆ ಆರುಗಂಟೆಗೆ ವಾಘಾ ಗಡಿಯನ್ನು ದಾಟಿದ ನಮ್ಮ ಸೇನೆ ಹತ್ತೂವರೆಯ ಹೊತ್ತಿಗೆ ಲಾಹೋರ್ ಹೊರವಲಯ ತಲುಪಿತು.  ಕಂಗೆಟ್ಟ ಪಾಕಿಸ್ತಾನೀಯರು ಉತ್ತರದ ಚಿಕನ್ಸ್ ನೆಕ್ - ಛಾಂಬ್ ಝಾರಿಯನ್ ರಣಾಂಗಣದಿಂದ ತಮ್ಮ ಸೇನೆಯನ್ನು ಕರೆಸಿಕೊಂಡು ಲಾಹೋರ್ ರಕ್ಷಣೆಗೆ ನಿಂತರು.  ಪರಿಣಾಮವಾಗಿ ನಮ್ಮ ಉದ್ದೇಶ ಸಾರ್ಥಕವಾಗಿ ಜಮ್ಮು - ಅಖ್ನೂರ್ ರಸ್ತೆ ಸುರಕ್ಷಿತವಾಗುಳಿಯಿತು.  ಹೀಗೆ ಹಿಂದೆ ಪಾಕಿಸ್ತಾನಿಯರು ಕಾಶ್ಮೀರದಲ್ಲಿ ಏನಾದರೂ ಹರಕತ್ ಶುರು ಮಾಡಿದರೆ ಅವರನ್ನು ಬೇರೆಡೆ (ಅವರ ಶಕ್ತಿ ಕಡಿಮೆಯಿರುವಲ್ಲಿ) ಯುದ್ಧಕ್ಕೆಳೆದು ಅವರು ಕಾಶ್ಮೀರದಿಂದ ಕಾಲ್ತೆಗೆಯುವಂತೆ ಮಾಡುವುದು ನಮಗೆ ಸಾಧ್ಯವಾಗಿತ್ತು.  ಆದರೆ ಯಾವಾಗ ಪಾಕಿಸ್ತಾನ ಅಣ್ವಸ್ತ್ರಗಳನ್ನು ಗಳಿಸಿಕೊಂಡಿತೋ ಆವಾಗಿನಿಂದ ಕಾಶ್ಮೀರ ಮತ್ತು ದೇಶದ ಇತರೆಡೆಗಳಲ್ಲಿ ಅವರ ಭಯೋತ್ಪಾದಕ ಕೃತ್ಯಗಳನ್ನೆಲ್ಲಾ ನಾವು ಸಹಿಸಿಕೊಳ್ಳಬೇಕಾಗಿದೆ.  ಅವರ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳಲು ನಾವು ಯಾವಾಗ ಯೋಜಿಸಿದರೂ ಅವರು ತಮ್ಮ ಅಣ್ವಸ್ತ್ರಗಳನ್ನು ಝಳಪಿಸಿ ನಮ್ಮನ್ನು ಹಿಮ್ಮೆಟ್ಟಿಸುತ್ತಿದ್ದಾರೆ.  ಅವರ ಅಣ್ವಸ್ತ್ರ ಬೆದರಿಕೆ ಅದೆಷ್ಟು ಉಗ್ರವಾಗಿದೆಯೆಂದರೆ ೧೯೯೯ರ ಬೇಸಗೆಯಲ್ಲಿ ನಡೆದ ಯುದ್ಧವನ್ನು ನಾವು ಕಾರ್ಗಿಲ್ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸಬೇಕಾಯಿತು.  ಇಸ್ಲಾಮಾಬಾದ್ "ನ್ಯೂಕ್ಲಿಯರ್ ಬ್ಲ್ಯಾಕ್ಮೇಲ್" ನಮ್ಮನ್ನು ಅದೆಷ್ಟು ಕಂಗೆಡಿಸಿತೆಂದರೆ ಯುದ್ದವನ್ನು ಭಾರತ - ಪಾಕಿಸ್ತಾನ್ ಗಡಿಗಿರಲಿ, ಕಾಶ್ಮೀರದಲ್ಲಿನ ನಿಯಂತ್ರಣ ರೇಖೆಯ ಬೇರೇ ಭಾಗಗಳಿಗಾದರೂ ವಿಸ್ತರಿಸಲಾಗದಷ್ಟು ನಾವು ಅಶಕ್ತರಾಗಿದೆವು.  ಹೀಗಾಗಿ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ಕೊಟ್ಟು ನಾವು ನಮ್ಮ ಕೈಗಳನ್ನೇ ಕಟ್ಟಿಸಿಕೊಂಡು ಕೂತಿದ್ದೇವೆ.  ೧೯೯೦ರ ಜುಲೈನಿಂದ ಇಂದಿನವರೆಗೆ ಹೀಗೇ ನಡೆದುಕೊಂಡು ಬಂದಿದೆ.  ಇದು ಈಗಿನ ಸಂದರ್ಭದಲ್ಲೂ ನಿಜ.
ಪಾಕಿಸ್ತಾನ ಅಣ್ವಸ್ತ್ರ ಧಾಳಿ ನಡೆಸಿದರೆ ಪ್ರತಿಧಾಳಿ ನಡೆಸುವ ಸಾಮರ್ಥ್ಯ ನಮಗಿದೆ ಎಂದು ಕೆಲವರು ಉತ್ಸಾಹಿಗಳು ವಾದಿಸುತ್ತಾರೆ.  ನಿಜ, ಪಾಕಿಸ್ತಾನವನ್ನು ಇಡಿಯಾಗಿ ಧ್ವಂಸಗೊಳಿಸುವ ಸಾಮರ್ಥ್ಯ ನಮಗಿದೆ.  ಆದರೆ ಅದಕ್ಕಾಗಿ ನಾವು ತೆರಬೇಕಾದ ಬೆಲೆಯೇನು?  ಅಣುಯುದ್ಧದಲ್ಲಿ ಯಾರೂ ಜಯಶಾಲಿಗಳಿರುವುದಿಲ್ಲ ಎಂಬ ಸತ್ಯವನ್ನು ಯುದ್ಧೋತ್ಸಾಹಿಗಳು ಅರಿಯಬೇಕು.